ಲೇಖನ.
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಮನದ ಮನ್ಮಥನಿಗೆ
ಇಬ್ಬರೂ ಕೂಡಿ ಕಳೆದ ಆ ಕ್ಷಣಗಳು ನನ್ನ ಪಾಲಿನ ಅಮೂಲ್ಯ ಆಸ್ತಿ. ಸವಿ ನೆನಪುಗಳ ಸುಳಿಯಲ್ಲಿ ಸಿಲುಕಿ ಮನಸ್ಸು ಇಂದು ಅಕ್ಷರಗಳ ರೂಪದಲ್ಲಿ ನಿನಗೆ ಸನಿಹವಾಗಲು ಬಯಸುತ್ತಿದೆ. ಈ ಪತ್ರದ ಪ್ರತಿಯೊಂದು ಸಾಲು ನನ್ನ ಹೃದಯ ಬಡಿತವ ಮಿಡಿತವ ಹೇಳುತಿವೆ. ಇದು ನಿನಗಾಗಿ ಮಿಡಿಯುವ ಎದೆಯ ಪಿಸುಮಾತು
ತುಂಟಾಟದಲ್ಲಿ ನಿನ್ನ ತುಂಟ ನಗುವಿನ ಅಲೆಗಳು ನನ್ನ ಹೃದಯದ ವೀಣೆಯನ್ನು ಮೇಲಿಂದ ಮೇಲೆ ಮೀಟದೇ ಇರುತ್ತಿರಲಿಲ್ಲ. ನೀನಾಡುತ್ತಿದ್ದ ಕವಿ ಮಾತುಗಳು ಹೃದಯದ ದಡಕ್ಕೆ ಅಲೆಗಳಂತೆ ಅಪ್ಪಳಿಸುವುದನ್ನು ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ಈರ್ವರೂ ಹುಡುಗಾಟದಿಂದ ಒಬ್ಬರಿಗೊಬ್ಬರು ಕಾಲೆಳೆಯುತ್ತ ಕಳೆದ ಸಂತೋಷ ವಿವರಿಸಲು ಪದಗಳೇ ಸಿಗುತ್ತಿಲ್ಲ. ಹಗಲಿನ ಪ್ರತಿ ಕ್ಷಣದಲ್ಲೂ ನೀನೇ ಆವರಿಸಿರುವೆ. ರಾತ್ರಿ ಹಾಸಿಗೆಗೆ ಹೋಗಿ ಕಣ್ಮುಚ್ಚುವುದೇ ತಡ ನಿನ್ನ ಕುಡಿ ನೋಟದ ನೋಟ ಮತ್ತೆ ಮತ್ತೆ ಕಣ್ತೆರಸುತ್ತದೆ. ಕಣ್ರೆಪ್ಪೆಗಳನ್ನು ಅಂಟಿಸದAತೆ ಕಾಡುತ್ತದೆ.

ಆ ನಿನ್ನ ಕಾಂತಿ ತುಂಬಿದ ಕಂಗಳಲ್ಲಿ ನನ್ನ ಪ್ರಪಂಚವನ್ನು ಕಂಡುಕೊಂಡಿರುವೆ. ಟ್ರಿಮ್ ಮಾಡಿದ ಮೀಸೆ ಗಡ್ಡ ಪುರುಷತ್ವದ ಸಂಕೇತ ಮಾತ್ರವಲ್ಲ. ಮೀಸೆ ಕೆಳಗಿನ ತುಂಟ ಕಿರುನಗು ನನ್ನ ಹೃದಯ ಕದಿಯಲು ಸಾಕು. ಹುರಿಗಟ್ಟಿಸಿದ ಮೀಸೆಯನ್ನು ತಿರುವಿದಾಗ ರಾಜನಂತೆ ಕಾಣುವೆ. ಕಟ್ಟು ಮಸ್ತಾದ ದೇಹ, ರೇಷ್ಮೆಯಂತಿರುವ ಸೋಂಪಾದ ತಲೆಗೂದಲು, ವಿಶಾಲವಾದ ಭುಜಗಳು, ಆಜಾನುಬಾಹು ಹೊಂದಿದ ವ್ಯಕ್ತಿತ್ವ ಎಂಥ ಹುಡುಗಿಯರನ್ನೂ ನಿನ್ನತ್ತ ಸೆಳೆಯುತ್ತದೆ. ವಿಶಿಷ್ಟ ಲಯ ಹೊಂದಿದ ನಿನ್ನ ನಡಿಗೆ ಕಂಡಾಗ ಶಿಲ್ಪಿ ಕೆತ್ತಿದಂತಿರುವ ಬಲಿಷ್ಟವಾದ ಜೀವಂತ ಮೂರ್ತಿಯು ನನ್ನನ್ನು ಕೈ ಹಿಡಿದು ಜೀವನದುದ್ದಕ್ಕೂ ನಡೆಸುತ್ತದೆಂಬ ನಂಬಿಕೆ ಮೂಡುತ್ತದೆ. ನಿನ್ನ ಸೌಂದರ್ಯಕ್ಕಿಂತಲೂ ಮಿಗಿಲಾದ ಅಂತಃಕರಣ ಹೊಂದಿದ ನಿನ್ನ ವ್ಯಕ್ತಿತ್ವ ನನಗೆ ಸುರಕ್ಷಿತ ಭಾವ ಮೂಡಿಸುತ್ತದೆ. ಹರವಾದ ನಿನ್ನೆದೆಯಲ್ಲಿ ನನ್ನ ಮುಖ ಹುದುಗಿಸಿದಾಗ ನಿನ್ನ ಬಾಹುಗಳು ನನಗೆ ಅತ್ಯಂತ ಸುರಕ್ಷಿತ ತಾಣದಂತೆ ಭಾಸವಾಗುತ್ತದೆ.
ಇನ್ನು ಕಾಲೇಜಿನ ಬಂಗಾರದ ದಿನಗಳನ್ನು ನೆನೆದರೆ ಸಾಕು ಸಮಯ ಸರಿದಿದ್ದೇ ಗೊತ್ತಾಗುವುದಿಲ್ಲ. ನನ್ನ ಪಾಲಿಗಂತೂ ಆ ಎಲ್ಲ ದಿನಗಳು ಸುವರ್ಣಾಕ್ಷರದಿಂದ ಬರೆಯಲ್ಪಟ್ಟಂತೆ ಅನಿಸುತ್ತವೆ. ಕಾಲೇಜಿನ ಅವಧಿಗಳು ಯಾವಾಗ ಮುಗಿಯುತ್ತವೆಯೋ ಎಂದು ಕಾಯುತ್ತಿದ್ದೆ. ಅವಧಿಗಳ ನಂತರ ಪಾರ್ಕಿನಲ್ಲಿ ನಮ್ಮಿಬ್ಬರ ಭೇಟಿ. ಪ್ರತಿಯೊಂದು ಭೇಟಿಯು ಹೊಸ ಹೊಸ ಅನುಭವವನ್ನು ತರುತ್ತಿತ್ತು. ಪ್ರತಿಬಾರಿಯೂ ಎದೆಯೊಳಗೆ ಯಾವುದೋ ಒಂದು ಹೊಸ ಲಯ ಶುರುವಾಗುತ್ತಿತ್ತು. ಚೆಂದದ ಪ್ರೀತಿಯನ್ನು ಮನಸ್ಸಿಗೆ ತಾಗಿಸುತ್ತಿತ್ತು. ಆಹಾ! ಈ ಪ್ರೀತಿ ಜೀವನಪೂರ್ತಿಯೆಲ್ಲ ಹೀಗೆ ಮುಂದುವರೆಯಲಿ ಎಂದು ಮನಸ್ಸು ಬಯಸುತ್ತಿತ್ತು. ನಿನ್ನ ಒರಟಾದ ಬೆರಳುಗಳ ನಡುವೆ ನನ್ನ ಪುಟ್ಟ ಬೆರಳುಗಳಿಗೆ ಜಾಗ ನೀಡಿ ಅವುಗಳೊಂದಿಗೆ ಮೆಲ್ಲಗೆ ಮುದ್ದಿನಾಟ ಆಡುತ್ತಿದ್ದರೆ ಈ ಸಮಯ ಹೀಗೆ ನಿಲ್ಲಲಿ ಎಂದನಿಸದೇ ಇರುತ್ತಿರಲಿಲ್ಲ.

ಜಗವನ್ನೆಲ್ಲ ಮರೆತು ಬರಿ ನಿನ್ನಲ್ಲೇ ಒಂದಾಗಬೇಕು ಎನಿಸುವ ಕ್ಷಣಗಳವು. ಮಾತಿನ ಚತುರತೆಯ ನಡುವೆ ಅಡಗಿರುವ ತುಂಟತನವು ಮುಂದುವರೆದಾಗ ಸಿಹಿ ಜೇನಿನ ತುಟಿಗಳು ನನಗಾಗಿಯೇ ಮೀಸಲಿರಲಿ ಎಂದು ಆಶಿಸುತ್ತಿದ್ದೆ. ಹಾಗೆ ಮನದಲ್ಲಿ ಅಂದುಕೊಂಡಾಗ ನಾಚಿಕೆಯಿಂದ ಕೆನ್ನೆ ಕೆಂಪಾಗುತ್ತಿತ್ತು. ಕೆಂಪಾದ ಕೆನ್ನೆ ಕಂಡು ನೀನು ಪಕ್ಕನೇ ಕೆನ್ನೆಗೆ ಸಿಹಿಮುದ್ರೆಯನ್ನೊತ್ತುತ್ತಿದ್ದೆ. ಒಮ್ಮೊಮ್ಮೆ ನಾನೇ ಸಂಜೆಗತ್ತಲಾಗುವವರೆಗೂ ನಿನ್ನ ಅಲ್ಲೇ ಕೂರಿಸುತ್ತಿದ್ದೆ. ನಿನ್ನುಸಿರಿನ ಬಿಸಿ ಸೋಕಿದಾಗ ಮನಸ್ಸು ಹತೋಟಿ ತಪ್ಪುತ್ತಿತ್ತು. ಕೆಂದುಟಿಗಳ ಸಿಹಿ ಸವಿಯಲು ನಾನೇ ಮುಂದಾಗಿದ್ದನ್ನು ನೆನೆದರೆ ಮೈಯಲ್ಲಿ ಈಗಲೂ ನಡುಕ ಉಂಟಾಗುತ್ತದೆ. ಪ್ರಪಂಚದ ಸುಖವೆಲ್ಲ ನಿನ್ನ ಸಿಹಿ ಮುತ್ತಿನಲ್ಲೇ ಅಡಗಿದಂತಿದೆ ಆಗಾಗ ಗಡ್ಡದ ಮೃದು ಸ್ಪರ್ಶ ಕಚಗುಳಿಯಿಡುತ್ತಿತ್ತು. ಕಂಗಳಲ್ಲಿ ನನಗಾಗಿ ಹೊಳೆಯುತ್ತಿದ್ದ ನಿನ್ನ ಪ್ರೀತಿಗೆ ನನ್ನನ್ನು ನಾನು ಮರೆಯುತ್ತಿದ್ದೆ.
ಚತುರ ಮಾತುಗಳನ್ನೂ ದಾಟಿ ಶೃಂಗಾರವನ್ನೂ ಮಾತಿನಲ್ಲಿ ಎಳೆದು ತರುತ್ತಿದ್ದುದು ನನಗೆ ತುಂಬಾ ಇಷ್ಟವಾಗುತ್ತಿತ್ತು. ಅದರಲ್ಲೂ ರತಿಯೋನ್ಮತ್ತ ವಿರಹಿಗಳ ಚಿತ್ರಣವನ್ನು ಕಣ್ಮುಂದೆ ತರುವಲ್ಲಿ ನೀನು ಸರ್ವಶಕ್ತ. ಇದನ್ನೆಲ್ಲ ಅದಾವ ಶಾಲೆಯಲ್ಲಿ ಕಲಿತಿದ್ದಿಯೋ ಗೊತ್ತಾಗುತ್ತಿಲ್ಲ. ಪಾರ್ಕಿನಲ್ಲಿ ಭೇಟಿಯಾದಗಲೊಮ್ಮೆ ತಣ್ಣನೆಯ ತಂಗಾಳಿಗೆ ಮೈಯೊಡ್ಡಿ ನುಡಿಯುತ್ತಿದ್ದ ಮಾತುಗಳೆಲ್ಲ ರಸಕಾವ್ಯದಂತೆ ಅನಿಸುತ್ತಿದ್ದವು. ಇದೆಲ್ಲ ಸಾಲದೆಂಬಂತೆ ನನ್ನನ್ನೂ ಶೃಂಗಾರ ಸಾಹಿತ್ಯದ ಸಂಭಾಷಣೆಗೆ ಎಳೆಯುತ್ತಿದ್ದ ತುಂಟಕವಿ ನೀನು. ಸಹವಾಸ ದೋಷವೆಂಬಂತೆ ನಾನೂ ಬರಬರುತ್ತ ಪ್ರೇಮ ಕವಿತೆಗಳ ಹುಚ್ಚು ಹಚ್ಚಿಸಿಕೊಂಡೆ. ಅದರಿಂದ ನಿನ್ನ ಮೇಲಿನ ಪ್ರೀತಿಯ ಹುಚ್ಚು ಮತ್ತಷ್ಟು ಹೆಚ್ಚಾಯಿತು. ಜಿದ್ದಿಗೆ ಬಿದ್ದವಳಂತೆ ಕವಿತೆಗಳನ್ನು ಗೀಚತೊಡಗಿದೆ. ಆದರೆ ನಿನ್ನನ್ನು ಸೋಲಿಸಲಾಗದು ಎಂದು ಒಳಮನಸ್ಸು ಹೇಳುತ್ತಿತ್ತು. ನೀನು ಮೊದಲೇ ಆಶುಕವಿ. ನಿನ್ನ ಕವಿತ್ವಕ್ಕೆ ಮನಸೋಲದ ಹುಡುಗಿಯರಿಲ್ಲ. ಕಾಲೇಜಿನ ಜಂಭದ ಹುಡುಗಿಯರೂ ನಿನ್ನ ಕಾವ್ಯ ಕೇಳಲು ಹಾತೊರೆಯುತ್ತಿದ್ದರು. ಹುಡುಗರನ್ನು ಕಣ್ಣೆತ್ತಿ ನೋಡದ ಹುಡುಗಿಯರು ನಿನ್ನ ಮೇಲೆ ಆಸೆ ಕನಸುಗಳನ್ನು ಚಿಗುರಿಸುವಂತೆ ಮಾಡುತ್ತಿದ್ದೆ. ಅವರ ಹೃದಯದ ವೀಣೆ ಮೀಟುವಂತೆ ಮಾಡುತ್ತಿದ್ದೆ. ಕೆಲವೊಮ್ಮೆಯಂತೂ ನನ್ನ ವಶೀಲಿ ಹಚ್ಚಿ ನಿನ್ನಿಂದ ಕವಿತೆ ಕೇಳಲು ದುಂಬಾಲು ಬೀಳುತ್ತಿದ್ದರು ಧಿಮಾಕಿನ ಹುಡುಗಿಯರು. ಅದು ನನಗೆ ದೊಡ್ಡ ಪ್ರತಿಷ್ಟೆಯ ವಿಷಯವೆನಿಸುತ್ತಿತ್ತು.
ಹೊಂಬಣ್ಣದ ಮೈಬಣ್ಣದ ನನ್ನ ಕಂಡಾಗಲಂತೂ ತುಂಬಿ ತುಳುಕುತ್ತಿದ್ದ ಯೌವ್ವನ ಭರಿತ ನನ್ನೆದೆಯನ್ನು ಗುರಿಯಾಗಿರಿಸಿ ಕವಿತೆಯಲ್ಲೇ ಮಾತನಾಡುವುದನ್ನು ಶುರು ಮಾಡುತ್ತಿದ್ದೆ. ನನ್ನ ಮೈಮಾಟದ ಸೌಂದರ್ಯವನ್ನು ಪದಗಳಲ್ಲಿ ಹಿಡಿದು ಹಾಕುವ ರಸಿಕ ಗೆಳೆಯ ನೀನಾಗಿದ್ದೆ. ರಸಿಕತೆಯ ಸೆಲೆ ನಿನ್ನಲ್ಲಿ ಮನೆ ಮಾಡಿತ್ತು. ನಿನ್ನ ಗೆಳೆಯರು ಮನೋಹರ ಶೃಂಗಾರದ ಬಣ್ಣನೆಗೆ ಮರುಳಾಗಿ ಮೂರು ಹೊತ್ತು ನಿನ್ನೊಂದಿಗೆ ಅಂಟಿಕೊಂಡೇ ಇರುತ್ತಿದ್ದರು. ಗೆಳೆಯಾ ರಸಿಕರ ರಾಸಕ್ಕೆ ಪ್ರೇರಣೆಯಂತಿರುತ್ತದೆ ನಿನ್ನ ಕಾವ್ಯ ಎಂದು ಹಾಡಿ ಹೊಗಳುತ್ತಿದ್ದರು. ವಿರಹಿಗಳಲ್ಲಿ ಮತ್ತಷ್ಟು ಇನ್ನಷ್ಟು ಪ್ರೀತಿ ಪಕ್ಕಾಗುವಂತೆ ಮಾಡುತ್ತಿ ಎಂದು ಬ್ರೆಕ್ಅಪ್ ಆದ ಗೆಳೆಯರೆಲ್ಲ ನಿನ್ನ ಸುತ್ತುವರೆಯುತ್ತಿದ್ದರು.
ಅರೆಗಳಿಗೆ ಕಣ್ಣೆದುರು ಇಲ್ಲದಿದ್ದರೂ ನೀರಿನಿಂದ ತೆಗೆದ ಮೀನಿನಂತಾಗುವೆ. ಅಂಥದ್ದರಲ್ಲಿ ಕಾಲೇಜಿನ ದಿನಗಳು ಮುಗಿದ ಮೇಲೆ ಉದ್ಯೋಗ ಹುಡುಕುತ್ತ ದೂರವಾಗಿರುವೆ. ನಿನ್ನೆ ನಿನ್ನ ಗೆಳೆಯನಿಂದ ಗೊತ್ತಾಯಿತು ನೀನೀಗ ಒಳ್ಳೆಯ ಉದ್ಯೋಗದಲ್ಲಿರುವೆ. ನನ್ನನ್ನು ನಿನ್ನ ಬಾಳ ಸಂಗಾತಿಯಾಗಿಸಿಕೊಳ್ಳಲು ತುದಿಗಾಲಲ್ಲಿ ಕಾಯುತ್ತಿರುವೆ ಎಂದು. ನಮ್ಮಿಬ್ಬರ ನಡುವೆ ಇರುವುದು ಕೇವಲ ಆಕರ್ಷಣೆಯಲ್ಲ. ‘ನಿಜವಾದ ಪ್ರೀತಿ: ನನ್ನನ್ನು ನಾನು ಕಳೆದುಕೊಂಡು ನಿನ್ನಲ್ಲಿ ನನ್ನನ್ನೇ ನಾನು ಕಂಡುಕೊಳ್ಳುವಂಥದು.’ ನನ್ನ ಜೀವ ನಿನ್ನೊಲವಿಗೆ ಮಿಡಿಯುತ್ತಿದೆ. ನಿನ್ನ ಮೌನದಲ್ಲೂ ನನಗೆ ವಿರಹದ ನೂರಾರು ಕವಿತೆಗಳು ಕೇಳುತ್ತಿವೆ. ನಿನ್ನ ಪ್ರೀತಿಯಲ್ಲಿ ಜೀವನವು ಒಂದು ಸುಂದರ ರಸಕಾವ್ಯದಂತೆ ಭಾಸವಾಗುತ್ತಿದೆ. ರತಿಕ್ರೀಡೆ ಸಂಕೇತದಂತಿರುವ ಕಾವ್ಯಗಳಿಂದ ರಸದೂಟ ಮಾಡುವ ಸಮಯ ಬಂದಾಗಿದೆ. ನಿನ್ನ ಪ್ರೀತಿಯ ಸಾಂಗತ್ಯದಲ್ಲಿ ನನ್ನನ್ನು ಪೂರ್ತಿಯಾಗಿ ಕಳೆದುಕೊಳ್ಳಲು ಸಿದ್ಧಳಾಗಿದ್ದೇನೆ. ಭಾವ ಮಿಲನದ ತುಂಟ ಪ್ರೀತಿಯ ರಂಗಿನಾಟದ ಕ್ಷಣಗಳಿಗಾಗಿ ಕಾಯುತಿರುವೆ.
ಇಂತಿ ನಿನ್ನ ರತಿ


