ಸಿಂದಗಿಯಲ್ಲಿ ಡಾ.ಚನ್ನಪ್ಪ ಕಟ್ಟಿ ಅಭಿನಂದನ ಸಮಾರಂಭ | ನೆಲೆ ಅಭಿನಂದನಾ ಗ್ರಂಥ ಬಿಡುಗಡೆ | ವಿಚಾರ ಸಂಕಿರಣ | ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಆಂಗ್ಲ ಪ್ರಾಧ್ಯಾಪಕರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಚನ್ನಪ್ಪ ಕಟ್ಟಿ ಅವರ ಕೊಡುಗೆ ಅನನ್ಯ. ಕಥೆ, ಕಾವ್ಯ, ಸಂಶೋಧನೆ, ಜೀವನ ಚರಿತ್ರೆ ಮತ್ತು ಅನುವಾದದ ಮೂಲಕ ಸಾಹಿತ್ಯದ ಕೃಷಿಯನ್ನು ಮಾಡಿ ಅಮೋಘ ಸಾಧನೆ ಮಾಡಿದ್ದಾರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.
ನಗರದ ವಿಜಯಪುರ ರಸ್ತೆಯಲ್ಲಿರುವ ಮಾಂಗಲ್ಯ ಭವನದಲ್ಲಿ ಸಿಂದಗಿಯ ಡಾ.ಚನ್ನಪ್ಪ ಕಟ್ಟಿ ಅಭಿನಂದನ ಸಮಿತಿ ಹಮ್ಮಿಕೊಂಡ ಅಭಿನಂದನ ಸಮಾರಂಭ ನೆಲೆ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿ ಅವರು ಮಾತನಾಡಿದರು.
ಡಾ.ಚನ್ನಪ್ಪ ಕಟ್ಟಿ ಅವರ ಅವಿರತ ಪರಿಶ್ರಮದಿಂದಲೇ ಇಂದು ಅವರಿಗೆ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಒದಗಿ ಬಂದಿದ್ದು ಸಿಂದಗಿ ನೆಲೆಗೆ ಹೆಮ್ಮೆಯ ಗರಿ. ಒಟ್ಟಿನಲ್ಲಿ ಡಾ.ಚನ್ನಪ್ಪ ಕಟ್ಟಿ ಅವರ ಬದುಕು, ಬರಹ ಮತ್ತು ಆಡಳಿತ ಕಾರ್ಯವೈಖರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಗರಿಮೆಯನ್ನು ಹೆಚ್ಚಿಸಿದ್ದಾರೆ ಎಂದರು.
ಈ ವೇಳೆ ನೆಲೆ ಅಭಿನಂದನ ಗ್ರಂಥವನ್ನು ಬಿಡುಗಡೆಗೊಳಿಸಿದ ಬೆಂಗಳೂರಿನ ಸಂಸ್ಕೃತಿ ಚಿಂತಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ನೆಲೆ ಎನ್ನುವ ಹೆಸರೇ ಚನ್ನಪ್ಪ ಕಟ್ಟಿ ಅವರ ಅಸ್ಮಿತೆ. ಅವರ ಇಡೀ ಬದುಕು ಮತ್ತು ಸಾಹಿತ್ಯ ಚಟುವಟಿಕೆಗೆ ಒಂದು ನೆಲೆ ಸಿಕ್ಕಿರುವುದೇ ಈ ನೆಲೆ ಎನ್ನುವ ಶಬ್ದ ಅವರ ವ್ಯಕ್ತಿತ್ವದ ಗುಣವಾಗಿದೆ. ಸ್ವಹಿತ ಮತ್ತು ಸಮಾಜ ಹಿತಕ್ಕಾಗಿ ಕಾರ್ಯ ಮಾಡಿದಾಗ ಮಾತ್ರ ಅದು ಸತ್ಯ ಶುದ್ಧ ಕಾಯಕ. ೫ ಭಾಗಗಳಾಗಿ ಈ ಕೃತಿಯನ್ನು ರಚನೆ ಮಾಡಲಾಗಿದೆ. ಇದು ನೆಲೆ ೧೦೦ರೊಳಗಿನ ಒಂದಲ್ಲ. ಇದೊಂದು ವಿಶೇಷ ಅಭಿನಂದನಾ ಗ್ರಂಥವಾಗಿದೆ. ಅಕ್ಷರ ಮಾಧ್ಯಮ ಆಚೆಗಿನ ಮಾತುಗಳನ್ನು ಕಥೆಯ ರೂಪದಲ್ಲಿ ತರಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಜಯಪುರದ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ ಅಭಿನಂದನಾ ನುಡಿಗಳನ್ನಾಡಿದರು. ಡಾ.ಅರವಿಂದ ಮನಗೂಳಿ ಹಾಗೂ ಅಭಿನಂದನ ಗ್ರಂಥದ ಗೌರವ ಸಂಪಾದಕ ಡಾ.ಶ್ರೀರಾಮ ಇಟ್ಟಣ್ಣವರ ಮತ್ತು ಮಾಜಿ ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಗಮೇಶ ಮೇತ್ರಿ ಸಂಪಾದಿಸಿದ ಅಮೋಘಸಿದ್ಧ ಜನಪದ ಮಹಾಕಾವ್ಯ ಸಾಂಸ್ಕೃತಿಕ ಮುಖಾಮುಖಿ ಗ್ರಂಥವನ್ನು ಮಾಜಿ ಶಾಸಕ ರಮೇಶ ಭೂಸನೂರ ಮತ್ತು ಚನ್ನಪ್ಪ ಕಟ್ಟಿ ಅವರ ವಿಮರ್ಶಾ ಸಂಕಲನ ಒಕ್ಕಣೆಯನ್ನು ವಿಪ ಮಾಜಿ ಸದಸ್ಯ ಅರುಣ ಶಹಾಪೂರ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷರು, ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಮ್ಮುಖವನ್ನು ಹಾಲುಮತ ಗುರುಪೀಠ ಅಗತೀರ್ಥದ ಸರೂರದ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ವಿಜಯಪುರ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ, ಪ್ರಧಾನ ಸಂಪಾದಕ ಡಾ.ಎಂ.ಎಂ.ಪಡಶೆಟ್ಟಿ, ಡಾ.ಸಂಗಮೇಶ ಮೇತ್ರಿ, ಡಾ.ಚನ್ನಪ್ಪ ಕಟ್ಟಿ, ಪತ್ನಿ ಸರೋಜಾ ಕಟ್ಟಿ, ಎಂ.ಎಸ್.ಹೈಯ್ಯಾಳಕರ, ಶಿವಪ್ಪ ಗವಸಾಯಿ, ಬಿ.ಎಸ್.ಹಣಮಶೆಟ್ಟಿ, ಚಿದಂಬರ ಬಂಡಗಾರ, ಡಾ.ರವಿ.ಗೋಲಾ, ಡಾ.ಶರಣಬಸವ ಜೋಗುರ, ಶಿವಾನಂದ ಕಲಬುರ್ಗಿ ಸೇರಿದಂತೆ ಅವರ ಗೆಳೆಯರ ಬಳಗ, ಶಿಷ್ಯ ಬಗಳ ಭಾಗವಹಿಸಿದ್ದರು.

ಡಾ.ಚನ್ನಪ್ಪ ಕಟ್ಟಿ ಸಾಹಿತ್ಯ ಮುಖಾಮುಖಿ ವಿಚಾರ ಸಂಕಿರಣ
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬೆಳಿಗ್ಗೆ ೧೦ಗಂಟೆಗೆ ಡಾ.ಚನ್ನಪ್ಪ ಕಟ್ಟಿ ಸಾಹಿತ್ಯ ಮುಖಾಮುಖಿ ವಿಚಾರ ಸಂಕಿರಣವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಮಕ್ಕಳ ಸಾಹಿತಿಗಳಾದ ಹ.ಮ.ಪೂಜಾರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಥಣಿಯ ಕತೆಗಾರ ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಅವರು ಡಾ.ಚನ್ನಪ್ಪ ಕಟ್ಟಿ ಅವರ ಕತೆಯ ಕುರಿತು ಮಾತನಾಡಿದರು. ಬೆಂಗಳೂರಿನ ವಿಮರ್ಶಕಿ ಎನ್.ಆರ್.ಲಲಿತಾಂಬಾ ಕಟ್ಟಿ ಅವರ ಕಾವ್ಯ ಕುರಿತು, ತಿಪಟೂರಿನ ಅನುವಾದಕ ಬರಹಗಾರ ಎಸ್. ಗಂಗಾಧರಯ್ಯ ಅನುವಾದ ಕುರಿತು, ಹಂಪಿ ಕನ್ನಡ ವಿಶ್ವವಿದ್ಯಾಯದ ಸಂಶೋಧಕ ಡಾ.ಎಫ್.ಟಿ.ಹಳ್ಳಿಕೇರಿ ಅವರು ಕಟ್ಟಿ ಸಂಶೋಧನೆ ಕುರಿತಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವಿಜಯಪುರದ ಚಾಣಕ್ಯ ಕರಿಯರ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಸೇರಿದಂತೆ ಇತರರು ಇದ್ದರು.
“ಸಿಂದಗಿ ನಗರದಲ್ಲಿ ಬೀದಿಯುದ್ಧಕ್ಕೂ ರಸ್ತೆ ಗುಂಡಿ, ಕಸ ಹಾಗೆಯೇ ಇದೆ. ಇದೆಲ್ಲವನ್ನು ಬರುವ ಸಮಯದಲ್ಲಿ ನಾನು ಗಮನಿಸಿದ್ದೇನೆ. ಇದರಿಂದ ನಗರವು ಅಶುಚಿತ್ವ ಮತ್ತು ಗುಂಡಿಗಳಿಂದ ಕೂಡಿದೆ ಎಂದು ತಿಳಿಯುತ್ತದೆ. ಇದರ ಕುರಿತಾಗಿ ತಾಲೂಕು ದಂಡಾಧಿಕಾರಿ ಹಾಗೂ ಪೌರಾಯುಕ್ತರಿಗೆ ಕ್ರಮಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಸೂಚಿಸುತ್ತೇನೆ.”
– ಬಿ.ಎಸ್.ಪಾಟೀಲ
ಲೋಕಾಯುಕ್ತ ನ್ಯಾಯಮೂರ್ತಿಗಳು

