ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಅವರು ಶುಕ್ರವಾರ ಬಬಲೇಶ್ವರ ತಾಲೂಕಿನ ತಿಗಣಿ ಬಿದರಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಕಾಖಂಡಕಿ- ಮಮದಾಪುರ, ಬಬಲೇಶ್ವರ- ಯಕ್ಕುಂಡಿ, ಕಾಖಂಡಕಿ- ತೊನಶ್ಯಾಳ ಹಾಗೂ ತಿಗಣಿ ಬಿದರಿ ಹಳ್ಳಗಳಿಗೆ ಅಡ್ಡಲಾಗಿ ಸರಣಿ ಚೆಕ್ ಡ್ಯಾಂ ಮತ್ತು ರಿಚಾರ್ಜ್ ಶಾಫ್ಟ್ ಗಳ ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಅಭಿವೃದ್ಧಿ ಪಡಿಸುವ ಅಂದಾಜು ರೂ. 984 ಲಕ್ಷ ಮೌಲ್ಯದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನೀರು ಬಳಕೆದಾರರ ಸಂಘ ರಚಿಸುವ ಮೂಲಕ ನೀರು ಬಳಕೆಯಲ್ಲಿ ಶಿಸ್ತು ತರಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಕಾಲುವೆಯ ಕೊನೆಯ ಭಾಗದವರೆಗೂ ನೀರು ತಲುಪಲು ಅನುಕೂಲವಾಗಲಿದೆ. ಇದರ ಜೊತೆಗೆ ಈಗ ಕೈಗೆತ್ತಿಕೊಳ್ಳಲಾಗಿರುವ ಹಳ್ಳಗಳನ್ನು ತುಂಬಿಸುವ ಯೋಜನೆಯಿಂದ ಅಂತರ್ಜಲ ಮತ್ತಷ್ಟು ಹೆಚ್ಚಾಗಲಿದೆ. ಕಾಲುವೆಗಳ ವ್ಯಾಪ್ತಿಯಲ್ಲಿ ಬರುವ 178 ಹಳ್ಳಗಳಿಗೆ ಎಸ್ಕೇಪ್ ಮೂಲಕ ನೀರು ಹರಿಸಲಾಗುವುದು. ಪ್ರತಿ ಕಿಲೋ ಮೀಟರ್ ಗೊಂದರಂತೆ ಚೆಕ್ ಡ್ಯಾಂ ನಿರ್ಮಾಣದಿಂದ ಸುಮಾರು 400 ಕಿ. ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಸಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಸಿಗಲಿದೆ. ಹಳ್ಳಗಳ ಒತ್ತುವರಿ ತೆರವಿಗೆ ರೈತರು ಕೈ ಜೋಡಿಸಬೇಕು. ಸರಣಿಯಲ್ಲಿ ಬರುವ ಪ್ರತಿಯೊಂದು ಚೆಕ್ ಡ್ಯಾಂ ಗೆ ನೀರು ತಲುಪುವಂತಾಗಬೇಕು ಎಂದು ಅವರು ಹೇಳಿದರು.
ಹಳ್ಳಗಳನ್ನು ತುಂಬಿಸುವ ಯೋಜನೆ ಪೂರ್ಣವಾದ ನಂತರ ವಿಜಯಪುರ ದೇಶದಲ್ಲಿಯೇ ಅತೀ ಹೆಚ್ಚು ಅಂತರ್ಜಲ ಹೊಂದಿರುವ ಜಿಲ್ಲೆಯಾಗಲಿದೆ. ಇದರ ಜೊತೆಗೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ ರೈತರ ಆರ್ಥಿಕತೆ ಸುಧಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಒದಗಿಸಲಾಗುತ್ತಿದ್ದು, ಯುವಕರಿಗೆ ಹೈಟೆಕ್ ಜಿಮ್ ಪ್ರಾರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದರು.
ಕೆಎಂಎಫ್ ಮಾಜಿ ಅಧ್ಯಕ್ಷ ಶ್ರೀಶೈಲಗೌಡ ಪಾಟೀಲ ನಿಡೋಣಿ ಮಾತನಾಡಿ, ಬರದ ನಾಡಿನ್ನು ಹಸಿರು ಬೀಡನ್ನಾಗಿ ಮಾಡಿರುವ ಸಚಿವ ಎಂ. ಬಿ. ಪಾಟೀಲರು ನಮ್ಮ ಪಾಲಿಗೆ ಅನ್ನದಾತರಾಗಿದ್ದಾರೆ. ರೈತರು ಕಾಲುವೆಗಳನ್ನು ಸಂರಕ್ಷಿಸುವ ಮೂಲಕ ನೀರು ಹಳ್ಳಗಳ ಕೊನೆಯಂಚಿನವರೆಗೆ ತಲುಪಲು ಕೈಜೋಡಿಸಬೇಕು ಎಂದು ಹೇಳಿದರು.
ಮುಖಂಡ ಚನ್ನಪ್ಪ ಕೊಪ್ಪದ ಮಾತನಾಡಿ, ಜಿಲ್ಲೆಗೆ ಅಂಟಿದ್ದ ಬರದ ನಾಡು ಹೆಸರನ್ನು ನೀರಾವರಿ ಮೂಲಕ ಅಳಿಸಿ ಹಾಕಿದ್ದಾರೆ. ಜಿಲ್ಲೆಯನ್ನು ನಂದನವನವನ್ನಾಗಿ ಮಾಡಿದ್ದಾರೆ. ಈಗ ಶಾಲೆಗಳ ಅಭಿವೃದ್ಧಿ, ರಸ್ತೆಗಳ ಸುಧಾರಣೆ ಮೂಲಕ ಅಭಿವೃದ್ಧಿಗೆ ವೇಗ ನೀಡಿದ್ದಾರೆ. ಎಲ್ಲರೂ ಸದಾ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.
ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಬಲೇಶ್ವರ ತಾಲೂಕು ಅಧ್ಯಕ್ಷ ಮಲ್ಲಪ್ಪ ದಳವಾಯಿ ಮಾತನಾಡಿ, ನೀರಾವರಿ ಯೋಜನೆ ಜಾರಿಗೆ ಸಚಿವ ಎಂ. ಬಿ. ಪಾಟೀಲರು ವಹಿಸಿರುವ ಶ್ರಮ, ರೈತರು, ಕೂಲಿ ಕಾರ್ಮಿಕರು, ಬಡಮಕ್ಕಳ ಭವಿಷ್ಯವನ್ನು ಅಭಿವೃದ್ಧಿಯ ಮೂಲಕ ಹಸನು ಮಾಡಿದ ಯಶೋಗಾಥೆಯನ್ನು ವಿವರಿಸಿದರು.
ಎಂಜಿನಿಯರ್ ವಿಶ್ವನಾಥ ಪೀರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡತಾದ ನಾಗರಾಜ ಕುಲಕರ್ಣಿ, ಪ್ರಭುಗೌಡ ಪಾಟೀಲ, ಬಾಬುಗೌಡ ಪಾಟೀಲ, ಅಶೋಕ ಕಾಖಂಡಕಿ, ಮುದಕನಗೌಡ ಪಾಟೀಲ, ಜಕ್ಕಪ್ಪ ಎಡವೆ, ರಫೀಕ್ ಸೋನಾರ, ಮಹೇಶ ಮಾಳಿ, ಪರಶು ಬಡಗಾರ, ರಜಾಕ ದಳವಾಯಿ, ಲಾಲಸಾಬ್ ಕಮತೆ, ಮಾಳಪ್ಪ ಜಲ್ಲೆ, ವಿನಾಯಕ ಕೊಟ್ಟಲಗಿ, ವಿದ್ಯಾರಾಣಿ ತುಂಗಳ, ಕಾವ್ಯ ಪಡತಾರೆ, ಉಮ್ಮಯ್ಯಾ ಹಿರೇಮಠ, ದಾನಮ್ಮ ಜಿರಲಿ, ಸಣ್ಣ ನೀರಾವರಿ ಮತ್ತು ಅಂತರ್ಹಲ ಅಭಿವೃದ್ಧಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ ವಸ್ತ್ರದ, ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.
ಗಣೇಶ ಮಾಳಿ ಸ್ವಾಗತಿಸಿದರು. ಭೀಮರಾವ ಶಿಂಧೆ ನಿರೂಪಿಸಿರು. ವಜೀರ ಆಲಗೂರ ವಂದಿಸಿದರು.

