ವಿಜಯಪುರದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಒಕ್ಕಲುತನದ ಬಗ್ಗೆ ಹಸಿವು ಬೇಕು. ಹಸಿವು ಇದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ ಎಂದು ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ಗುರುವಾರ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಪ್ರತಿ ಎಕರೆಗೆ 100 ಟನ್ ಕಬ್ಬು ಬೆಳೆಯುವುದು ಹೇಗೆ? ಎಂಬ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಣ್ಣು ರೈತನ ಕಣ್ಣು ಹಾಗಾಗಿ ರೈತರು ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಬೇಕು ಎಂದ ಅವರು, ಮಣ್ಣಿನ ಪೋಷಕಾಂಶಗಳ ಹೇರಳವಾಗಿರುವಂತೆ ನೋಡಿಕೊಳ್ಳಬೇಕು ಎಂದರು.
ಕಬ್ಬಿನ ಹೆಚ್ಚಿನ ಇಳುವರಿಗಾಗಿ
ನಮ್ಮದು ಕಬ್ಬು ಬೆಳೆಯಲು ನಮ್ಮಲ್ಲಿನ ಮಣ್ಣು ಬಹು ಸೂಕ್ತವಾಗಿದೆ. ಮಣ್ಣಿನ ಸತ್ವ ನೋಡಿಕೊಂಡು ಕಬ್ಬಿನ ಸಾಲಿನಿಂದ ಸಾಲಿಗೆ ಇರುವ ಅಗಲ ಖಚಿತಗೊಳಿಸಿಕೊಳ್ಳಬೇಕು ಎಂದರು.
ಕಬ್ಬಿಗೆ ಅವಶ್ಯಕತೆ ಇರುವಷ್ಟು ನೀರು ನೀಡಬೇಕು. ಕಬ್ಬಿನ ಇಳುವರಿಯಲ್ಲಿ ನೀರಿನ ಪಾತ್ರ ಬಹು ಮುಖ್ಯವಾಗಿದೆ. ಹನಿ ನೀರಾವರಿ ಅಳವಡಿಸಿಕೊಂಡು ಇಳುವರಿ ಹೆಚ್ಚಿಸಿಕೊಳ್ಳಬೇಕು ಎಂದರು.
ರೈತರಿಗಾಗಿ ತಾಂತ್ರಿಕ ಕಾರ್ಯಾಗಾರ ನಿಜವಾದ ಹಸಿವು ರೈತರಲ್ಲಿದೆ. ಈ ಕಾರ್ಯಾಗಾರಕ್ಕೆ ಬಹಳಷ್ಟು ಜನ ರೈತರು ಆಗಮಿಸಿ, ಇಲ್ಲಿನ ವಿಷಯ ತಜ್ಞರು ಮಂಡಿಸಿದ ವಿಷಯಗಳು ತಮ್ಮ ಕಬ್ಬು ಕೃಷಿಯಲ್ಲಿ ಬಳಕೆ ಮಾಡಿಕೊಂಡು ಕೃಷಿಯಲ್ಲಿ ಯಶಸ್ಸು ಕಾಣಬೇಕು ಎಂದರು.
ಬೆಳೆಯಲ್ಲಿ ವೈಜ್ಞಾನಿಕ ಜ್ಞಾನದ ಕೊರತೆಯಿಂದ ಇಳುವರಿಯಲ್ಲಿ ಕೊರತೆ ಕಾಣಬಹುದಾಗಿದೆ. ಇದು ವಾಣಿಜ್ಯ ಬೆಳೆಯೂ ಹೌದು. ಇದು ವಾರ್ಷಿಕ ಬೆಳೆಯೂ ಆಗಿದೆ. ಪೂರಕ ವಾತಾವರಣ ಒದಗಿಸಿಕೊಟ್ಟು ಬೆಳೆಯಲ್ಲಿ ಇಳುವರಿ ಹೆಚ್ಚಿಸಿಕೊಳ್ಳಬಹುದಾಗಿದೆ. ಆಸಕ್ತಿ ಹೊಂದಿ, ಜ್ಞಾನಾರ್ಜನೆ ಹಳೆ ಅನುಭವಗಳೊಂದಿಗೆ ಹೊಸತನ ಮೈಗೂಡಿಸಿಕೊಂಡು ಕೃಷಿಯಲ್ಲಿ ಖುಷಿ ಕಾಣಬೇಕು ಎಂದು ಹೇಳಿದರು. ಕೊಯ್ಲೋತ್ತರ ನಿರ್ವಹಣೆ ವೈಜ್ಞಾನಿಕವಾಗಿ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಬಾಳಪ್ಪ ಬೆಳಕೋಡ, ಇಂಡಿ ತಾಲೂಕಿನ ಶ್ರೀಮಂತ ಇಂಡಿ ಹಾಗೂ ಗೋಳಸಂಗಿಯ ನಾರಾಯಣ ಸಾಲುಂಕೆ ಅವರು ಪ್ರತಿ ಎಕರೆಗೆ 100 ಟನ್ ಕಬ್ಬು ಬೆಳೆಯುವುದು ಹೇಗೆ?” ಎಂಬ ವಿಷಯದ ಕುರಿತು ತಮ್ಮ ಅನುಭವ ಹಂಚಿಕೊಂಡರು.
ಕೃಷಿ ಮಹಾವಿದ್ಯಾಲಯದ ಮುಖ್ಯ ಕೀಟ ತಜ್ಞ ಎ.ಪಿ.ಬಿರಾದಾರ ಅವರು ಕಬ್ಬು ಬೆಳೆಯಲ್ಲಿ ಕೀಟ ನಿರ್ವಹಣೆ ಕುರಿತು ಬಹು ಸೊಗಸಾಗಿ ರೈತರೊಂದಿಗೆ ವಿಷಯ ವಿನಿಮಯ ಮಾಡಿಕೊಂಡರು.
ಕಬ್ಬು ಬೆಳೆಗಾರರು ನಾಲ್ಕು ಪ್ರಮುಖ ಸಮಸ್ಯೆಗಳ ಬಗ್ಗೆ ಕೃಷಿ ತಜ್ಞರ ಎಚ್ಚರಿಕೆ ನೀಡಿದರು. ಕಬ್ಬು ಬೆಳೆಗಾರರನ್ನು ಕಾಡುತ್ತಿರುವ ನಾಲ್ಕು ಪ್ರಮುಖ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ ಅವರು, ಕಬ್ಬಿನ ಇಳುವರಿ ಕುಸಿತಕ್ಕೆ ಕಾರಣವಾಗುತ್ತಿರುವ ಪ್ರಮುಖ ಕೀಟ ಹಾಗೂ ರೋಗಬಾಧೆಗಳ ಬಗ್ಗೆ ರೈತರು ಜಾಗೃತರಾಗಿರಬೇಕು ಎಂದರು.
ಸವಳು ಜವಳು ಸಮಸ್ಯೆ
ಮಣ್ಣಿನಲ್ಲಿ ಲವಣಾಂಶ ಹೆಚ್ಚಾಗುವುದು ಮತ್ತು ಅತಿಯಾದ ನೀರು ನಿಲ್ಲುವಿಕೆಯಿಂದ ಕಬ್ಬಿನ ಬೆಳವಣಿಗೆ ಕುಂಠಿತವಾಗುತ್ತಿದೆ. ಮಣ್ಣಿನ ಆರೋಗ್ಯ ಸುಧಾರಣೆಗೆ ರೈತರು ಗಮನ ಹರಿಸಬೇಕು.
ಬಿಳಿ ಕಸ (ಉರಮಲ್ಲಿಗೆ):
ಕಬ್ಬಿನ ಗದ್ದೆಗಳಲ್ಲಿ ಕಂಡುಬರುವ ಈ ಪರಾವಲಂಬಿ ಕಳೆ ಗಿಡವು ಕಬ್ಬಿನ ಸತ್ವವನ್ನು ಹೀರಿಕೊಳ್ಳುತ್ತದೆ. ಇದು ಇಳುವರಿಯ ಮೇಲೆ ಭಾರಿ ಹೊಡೆತ ನೀಡುತ್ತಿದೆ.
ಗೊಣ್ಣೆ ಹುಳು:
ಮಣ್ಣಿನ ಒಳಗಿರುವ ಈ ಹುಳುಗಳು ಕಬ್ಬಿನ ಬೇರುಗಳನ್ನು ತಿಂದು ಗಿಡವು ಒಣಗುವಂತೆ ಮಾಡುತ್ತವೆ. ಇದರ ಹತೋಟಿಗೆ ಸೂಕ್ತ ಕೀಟನಾಶಕಗಳ ಬಳಕೆ ಅಗತ್ಯ ಎಂದರು.
ಕಾಡಿಗೆ ರೋಗ:
ಈ ರೋಗವು ಕಬ್ಬಿನ ಸುಳಿಯಲ್ಲಿ ಕಪ್ಪು ಬಣ್ಣದ ಚಾಟಿಯಂತಹ ರಚನೆಯನ್ನು ಉಂಟುಮಾಡುತ್ತದೆ. ಇದು ಇಡೀ ಬೆಳೆಗೆ ಹರಡುವ ಸಾಧ್ಯತೆ ಇರುವುದರಿಂದ ಪೀಡಿತ ಗಿಡಗಳನ್ನು ತಕ್ಷಣವೇ ನಾಶಪಡಿಸಬೇಕು.
ತಜ್ಞರ ಸಲಹೆ:
ಈ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವುದರಿಂದ ರೈತರು ನಷ್ಟದಿಂದ ಪಾರಾಗಬಹುದು. ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಪಡೆಯಬೇಕು ಎಂದರು.
ಕಳೆ ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿದರು. ಸುಳಿ ಕೊರೆಯುವ ಕೀಟ,ಬಿಳಿ ಉಣ್ಣಿ ,ಬಿಳಿ ನೋಣ,ಗೊಣ್ಣೆ ಹುಳ ಕೀಟ ಬಾಧೆಯ ನಿರ್ವಹಣೆ ಬಗ್ಗೆ ಮಾತನಾಡಿದರು.
ಸಂಕೇಶ್ವರದ ಕೃಷಿ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಡಾ. ಎಸ್.ಎಸ್.ನೂಲಿ ಅವರು ಕಬ್ಬಿನಲ್ಲಿ ಮಣ್ಣು ಪೋಷಕಾಂಶ ಹಾಗೂ ನೀರು ನಿರ್ವಹಣೆ ಕುರಿತು ಮಾತನಾಡಿದರು.
ಕಾರ್ಯಾಗಾರದಲ್ಲಿ ಉಪ ಕೃಷಿ ನಿರ್ದೇಶಕರಾದ ಶರಣಗೌಡ ಪಾಟೀಲ ಹಾಗೂ ಚಂದ್ರಕಾಂತ ಪವಾರ, ವಿಜಯಪುರದ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜಾನಮಟ್ಟಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ,
ಎಸ್.ಬಿ ಜಗ್ಗಿನವರ,
ಶಿವಪ್ಪಗೌಡ ಬಿರಾದಾರ, ಕೃಷಿಕ ಸಮಾಜದ ಸಿಂದಗಿ ತಾಲೂಕಾಧ್ಯಕ್ಷ,
ಪ್ರಗತಿ ಪರ ರೈತರಾದ ಶ್ರೀಮಂತ ಇಂಡಿ, ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳು, ರೈತರು ಉಪಸ್ಥಿತರಿದ್ದರು.

