ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಉದಯರಶ್ಮಿ ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೂಢನಂಬಿಕೆಯಿಂದ ವೈಚಾರಿಕತೆಯೆಡೆಗೆ ಹಾಗೂ ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಉದಯರಶ್ಮಿ ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಹೇಳಿದರು.
ನಗರದಲ್ಲಿ ಗುರುವಾರ ಸಂಜೆ ಆಶ್ರಮ ರಸ್ತೆಯ ರಾಮಕೃಷ್ಣ ನಗರದಲ್ಲಿ ಗಜಾನನ ಮಿತ್ರ ಮಂಡಳಿ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಅನುಭವ ಮಂಟಪ ಸ್ಥಾಪಿಸಿ ವಿಶ್ವದಲ್ಲೇ ಮೊಟ್ಟಮೊದಲು ಪ್ರಜಾಪ್ರಭುತ್ವದ ಚಿಂತನೆಗಳನ್ನು ನೀಡಿದವರು ಬಸವಣ್ಣನವರು. ವರ್ಗ ಬೇಧ ಮತ್ತು ವರ್ಣ ಶ್ರೇಷ್ಠತೆಯನ್ನು ತೆಗೆದುಹಾಕಿದ ಏಕೈಕ ಧರ್ಮ ಬಸವ ಧರ್ಮವಾಗಿದ್ದು. ನಾವೆಲ್ಲ ಸಂಕುಚಿತ ಭಾವ ತೊರೆದು ಬಸವ ಧರ್ಮ ಪಾಲಿಸಬೇಕು ಎಂದು ಇಂದುಶೇಖರ ಮಣೂರ ಕರೆ ನೀಡಿದರು.
ಬಸವನ ಬಾಗೇವಾಡಿಯ ಕಾಂಗ್ರೆಸ್ ಪಕ್ಷದ ಮುಖಂಡ ಜಟ್ಟಿಂಗರಾಯ ಮಾಲಗಾರ ಮಾತನಾಡಿ, ಜಗತ್ತು ಕಂಡ ಬಹು ದೊಡ್ಡ ದಾರ್ಶನಿಕ ಬಸವಣ್ಣನವರು. ಕಾಯಕ ಮತ್ತು ದಾಸೋಹ, ಅರಿವು ಮತ್ತು ಆಚಾರ, ಸಮಾನತೆ ಹಾಗೂ ಮಾನವತೆ ಅವರ ಮೂಲ ತತ್ವಗಳಾಗಿದ್ದವು. ಅವರ ಜನ್ಮಭೂಮಿ ಬಸವ ನಾಡಿನಲ್ಲಿ ಜನಿಸಿದ ನಾವೆಲ್ಲ ಭಾಗ್ಯವಂತರು. ಅವರ ಹೆಸರಿನ “ಬಸವ ಸೇವಾ ಪ್ರಶಸ್ತಿ” ಪಡೆದ ಸ್ನೇಹಿತ ಇಂದುಶೇಖರ ಅವರನ್ನು ಇಂದು ಗೌರವಿಸುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದರು.
ಬಿಜೆಪಿ ಮುಖಂಡ ಮಧು ಕಲಾದಗಿ ಹಾಗೂ ಉದ್ಯಮಿ ಸಂಜಯ ಪಾಟೀಲ (ಕನ್ನೂರ) ಮಾತನಾಡಿ, ೧೨ ನೇ ಶತಮಾನದಲ್ಲಿಯೇ ಬಹು ದೊಡ್ಡ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರ ಮಾನವತೆ ಮತ್ತು ಸಮಾನತೆಯ ತತ್ವಗಳನ್ನು ನಾವು ಆಚರಣೆಯಲ್ಲಿ ತಂದು, ಅವರ ಮಾರ್ಗದಲ್ಲಿ ಸಾಗಿದರೆ ಅದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.
ರಾಮಕೃಷ್ಣ ನಗರದ ಗಣ್ಯರಾದ ರಾಮಚಂದ್ರ ಅಂಜಿಖಾನೆ, ಮನೋಜ ಕೊಂಡಗೂಳಿ, ವಿರೇಂದ್ರ ಬೆಳಮಗಿ, ಮಹಾದೇವ ಜಂಗಮಶೆಟ್ಟಿ, ಶ್ರೀಶೈಲ ಮಹಾದನಶೆಟ್ಟಿ, ಸುರೇಶ ಕುಲಕರ್ಣಿ, ನಿಂಬಾಳ ಕಾಕಾ, ಕಮಲಾಕರ ಪೀರನಾರಕ, ಬಾಬು ಮಲಕಶೆಟ್ಟಿ, ಮಹೇಶ ಮಠ, ಮಾವಿನಗಿಡದ ಸೇರಿದಂತೆ ಹಲವರಿದ್ದರು.


