ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಅಂಬೇಡ್ಕರರವರು ನಮ್ಮ ದೇಶದ ಸಂವಿಧಾನವನ್ನು ಕೇವಲ ಪೆನ್ನಿನಿಂದ ಬರೆದಿದ್ದಲ್ಲ. ಬದಲಾಗಿ ಅವರ ದೇಹದ ರಕ್ತದ ಕಣಕಣದಿಂದ ಬರೆದದ್ದು ಎಂದು ದಲಿತ ಸಾಹಿತಿ ಶಿವಪುತ್ರ ಅಜಮನಿ ಅಭಿಪ್ರಾಯ ಪಟ್ಟರು.
ತಾಲೂಕಿನ ದೇವೂರ ಗ್ರಾಮದಲ್ಲಿ ನಡೆದ ಡಾ. ಬಾಬಾಸಾಹೇಬ ಅಂಬೇಡ್ಕರರ ೧೩೫ ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಈ ದೇಶದ ಶೋಷಿತರಿಗೆ, ನಿರ್ಗತಿಕರಿಗೆ, ದೀನದಲಿತರಿಗೆ, ಸಾಮಾಜಿಕ ನ್ಯಾಯವನ್ನು ಕೊಡಿಸಲು ದೇಶದಲ್ಲಿ ಸರಿ ಸಮಾನತೆ ತರಲು ತಮ್ಮ ನಾಲ್ಕು ಮಕ್ಕಳನ್ನು ಬಲಿ ಕೊಟ್ಟು, ತಮ್ಮ ಮಡದಿಯನ್ನು ಬಲಿ ಕೊಟ್ಟು, ತಮ್ಮ ಹದಗೆಟ್ಟ ಆರೋಗ್ಯವನ್ನೂ ಲೆಕ್ಕಿಸದೆ ಈ ದೇಶಕ್ಕೆ ಬಹು ದೊಡ್ಡ ತ್ಯಾಗವನ್ನು ಮಾಡಿದ್ದಾರೆ. ಭಾರತೀಯರು ಅವರ ತ್ಯಾಗವನ್ನು ಯಾವ ಕಾಲಕ್ಕೂ ಮರೆಯಬಾರದು ಎಂದರು.
ನಿವೃತ್ತ ಉಪನ್ಯಾಸಕ ಪಿ.ಎಚ್.ಉಪ್ಪಲದಿನ್ನಿ, ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ, ಹಿರಿಯ ಪತ್ರಕರ್ತ ಪರಶುರಾಮ ಕೊಣ್ಣೂರ, ಡಿ.ಕೆ.ದ್ಯಾವಪ್ಪ ಮತ್ತೀತರರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಿದರು.
ಈ ವೇಳೆ ಮುಖಂಡರಾದ ಸಿದ್ಧಾರ್ಥ ರೂಗಿ, ಪ್ರವೀಣ ಕಟ್ಟಿಮನಿ, ಮುತ್ತಣ್ಣ ಕಟ್ಟಿಮನಿ, ಬಸಂತ ಕಟ್ಟಿಮನಿ, ಹಣಮಂತ ಅಡಿಹಾಳ, ಹಣಮಂತ ಎಮ್ಮೆಟ್ಟಿ, ಸಂಗಪ್ಪ ಚೌರಿ, ಪರಶುರಾಮ ಮಾದರ, ಲವ ಚಲವಾದಿ, ಸಂಗಮೇಶ ಚಲವಾದಿ ಸೇರಿದಂತೆ ಹಲವರು ಇದ್ದರು.
ಇಲಕಲ್ಲನ ಡಯಟ್ ಉಪನ್ಯಾಸಕ ಪರಶುರಾಮ ಚಲವಾದಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಿ.ಎಸ್.ಚಲವಾದಿ ನಿರೂಪಿಸಿದರು.

