ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ೨ ರ ಸಹಯೋಗದಲ್ಲಿ ಏ.೨೫ ರಂದು ದತ್ತು ಗ್ರಾಮ ಅರಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಮನೆ ಮನೆಗೆ, ಮನ ಮನಕೆ ಬಾಬಾಸಾಹೇಬರು ಜಾಗೃತಿ ಅಭಿಯಾನ ಹಾಗೂ ಮತದಾರರ ಜಾಗೃತಿ ಮತ್ತು ಸ್ವಚ್ಛತಾ ಅಭಿಯಾನ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಜಯಪುರ ಚುನಾವಣಾ ಸಾಕ್ಷರತಾ ಕ್ಲಬ್ನ ಜಿಲ್ಲಾ ನೋಡಲ್ ಅಧಿಕಾರಿ ಡಾ. ಶಿವಾನಂದ್ ಜಮಾದಾರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ ಎಂದರು. ಅದರಂತೆ ಮತದಾರರ ಜವಾಬ್ದಾರಿಗಳು, ಮತದಾನದ ಪಾರದರ್ಶಕತೆ, ನಾಯಕರ ಹೊಣೆಗಾರಿಕೆ ಚುನಾವಣಾ ಸಾಕ್ಷರತಾ ಕ್ಲಬ್ನ ಪರಿಣಾಮಕಾರಿ ಪಾತ್ರದ ಅರಿವನ್ನು ಸಮಗ್ರವಾಗಿ ಮಾಹಿತಿ ನೀಡಿದರು.
ಈ ವೇಳೆ ಬಾಬಾಸಾಹೇಬರ ವಿಚಾರಗಳನ್ನು ಸಾಮಾಜಿಕ ಸಮಾನತೆ, ನ್ಯಾಯ ಮತ್ತು ಶಿಕ್ಷಣದ ಮಹತ್ವವನ್ನು ಹರಡಿಸಲು ಎಲ್ಲ ಸ್ವಯಂಸೇವಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ಎನ್ಎಸ್ಎಸ್ ಘಟಕ-೧ ಮತ್ತು ೨ ರ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಮಿಲನ್ ರಾಠೋಡ್, ಡಾ.ತರನ್ನುಮ್ ಜಬೀನ್ ಖಾನ್, ಎನ್ಎಸ್ಎಸ್ ಸ್ವಯಂಸೇವಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

