ಲೇಖನ.
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಾಹರಣೆಗೆ ದಿನಪತ್ರಿಕೆ
ಯಶಸ್ಸನ್ನು ಬಯಸದವರು ಯಾರೂ ಇಲ್ಲ. ಎಲ್ಲರೂ ಅದರ ಹಿಂದೆ ಬೀಳುತ್ತಾರೆ. ಅದಕ್ಕೆಲ್ಲ ಏನೆಲ್ಲ ಮಾಡಲು ಸಿದ್ಧರಿರುತ್ತಾರೆ. ಆದರೆ ಯಶಸ್ಸು ಕೇವಲ ಕೆಲವರ ಜೀವನದಲ್ಲಿ ಹಾಸು ಹೊಕ್ಕಾದಂತೆ ಕಾಣಿಸುತ್ತದೆ. ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಹಾಗಾಗಿ ಯಶಸ್ಸಿನ ರಹಸ್ಯವೇನು ಎಂಬುದು ಸಾವಿರಾರು ಜನರ ತಲೆಯನ್ನು ಕೊರೆಯುತ್ತಲೇ ಇರುತ್ತದೆ. ನಮ್ಮ ತಯಾರಿ ಅಂದರೆ ಸಿದ್ಧತೆಯು ನಮ್ಮ ಯಶಸ್ಸನ್ನು ಗಮನಾರ್ಹವಾಗಿ ರೂಪಿಸುತ್ತದೆ. ಅಂದರೆ ಯಶಸ್ವಿ ಜನರು ಶಿಸ್ತುಬದ್ಧ ಸಿದ್ಧತೆಯೊಂದಿಗೆ ಗೆಲುವಿನ ದಾರಿಯನ್ನು ಕಂಡುಕೊಂಡಿರುತ್ತಾರೆ. ಮತ್ತು ಅದೇ ಹಾದಿಯಲ್ಲಿ ಮುಂದುವರೆಯುತ್ತಾರೆ. ಹೀಗಾಗಿ ಅವರು ಮುಖ್ಯವಾಹಿನಿಯಲ್ಲಿ ಮಿಂಚುತ್ತಿರುತ್ತಾರೆ.
ಸಿದ್ಧತೆ ಬೇಕು

‘ಅವಕಾಶಗಳು ಬರುವುದು ಅದೃಷ್ಟದಿಂದಲ್ಲ. ಸಿದ್ಧತೆ ಮತ್ತು ಅವಕಾಶಗಳು ಭೇಟಿಯಾದಾಗ ಯಶಸ್ಸು ಸಿಗುತ್ತದೆ.’ ಎಂಬ ಸಾರ್ವಕಾಲಿಕ ಸತ್ಯ ಜೀವನದಲ್ಲಿ ವೃತ್ತಿಯಲ್ಲಿ ಅಥವಾ ಓದಿನಲ್ಲಿ ಯಶಸ್ಸು ಕಾಣಲು ಕೇವಲ ಪ್ರತಿಭೆ ಸಾಲದು; ಅದಕ್ಕೆ ಸರಿಯಾದ ಸಿದ್ಧತೆ ಬೇಕೇಬೇಕು. ಸಿದ್ಧತೆಯಿಲ್ಲದೆ ಯಶಸ್ಸು ಕೇವಲ ಕಾಕತಾಳೀಯ. ಆದರೆ ಸಿದ್ಧತೆಯೊಂದಿಗಿನ ಸಾಧನೆ ಸ್ಥಿರವಾಗಿರುತ್ತದೆ.
ಸಿದ್ಧತೆ ಎಂದರೇನು?
ಸಿದ್ಧತೆ ಎಂದರೆ ಒಂದು ನಿರ್ಧಿಷ್ಟ ಗುರಿಯನ್ನು ತಲುಪಲು ಅಗತ್ಯವಾದ ಜ್ಞಾನ, ಕೌಶಲ್ಯ ಸಂಪನ್ಮೂಲಗಳನ್ನು ಮೊದಲೇ ಯೋಜಿಸಿ ತಯಾರಿ ಮಾಡಿಕೊಳ್ಳುವುದು. ಇದು ಕೇವಲ ಓದುವುದಲ್ಲ, ಬೌದ್ಧಿಕವಾಗಿ ಮತ್ತು ದೈಹಿಕವಾಗಿ ಸವಾಲುಗಳನ್ನು ಎದುರಿಸಲು ಸಿದ್ಧರಾಗುವುದಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಿದ್ಧತೆಗೆ ಅಗತ್ಯವಾದ ಶಕ್ತಿ ನೀಡುತ್ತದೆ. ಸಿದ್ಧತೆಯು ಯಶಸ್ಸಿನ ಮೇಲೆ ಅತ್ಯಧಿಕ ಪ್ರಭಾವ ಬೀರಬಲ್ಲದು.
ಆತ್ಮವಿಶ್ವಾಸ
ಯಶಸ್ಸಿನ ಮೂಲ ಆತ್ಮವಿಶ್ವಾಸದಲ್ಲಿದೆ. ಬಹುಬೇಗ ಯಶಸ್ಸು ಪಡೆಯಬೇಕೆಂದು ಬಹುಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇವೆ. ಇದರಿಂದ ವಿಫಲರಾಗುತ್ತೇವೆ. ಇದು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಬಹುಕಾರ್ಯಗಳನ್ನು ಒಂದೇ ಸಮಯದಲ್ಲಿ ಮಾಡುವುದರಿಂದ ಯಶಸ್ಸನ್ನು ನಮ್ಮದಾಗಿಸಿಕೊಳ್ಳಬೇಕೆಂದು ಹವಣಿಸುವುದು ತಪ್ಪು. ಯಶಸ್ವಿ ವ್ಯಕ್ತಿಗಳು ಒಂದೇ ವಿಷಯದ ಮೇಲೆ ಕೇಂದ್ರೀಕರಿಸುತ್ತಾರೆ. ಅದಕ್ಕಾಗಿ ತಮ್ಮ ಶಕ್ತಿ ಹಾಗೂ ಅನ್ವೇಷಣೆಗಳನ್ನೆಲ್ಲಾ ವಿನಿಯೋಗಿಸುತ್ತಾರೆ. ಅದ್ಭುತವೆನಿಸುವ ಗಮನದ ಅಭ್ಯಾಸವು ಅಚ್ಚರಿ ತರುವ ಫಲಿತಾಂಶವನ್ನು ನೀಡುತ್ತದೆ. ಇದರಿಂದ ಆತ್ಮವಿಶ್ವಾಸ ತನ್ನಿಂದತಾನೇ ಮೇಲೇರುತ್ತದೆ. ಆತ್ಮವಿಶ್ವಾಸ ದಕ್ಷತೆಯನ್ನು ಹೆಚ್ಚಿಸುತ್ತದೆ. ಗುರಿಯೆಡಗಿನ ವೇಗವನ್ನು ದ್ವಿಗುಣಗೊಳಿಸುತ್ತದೆ.
ತಪ್ಪುಗಳಿಂದ ಕಲಿಯಿರಿ
ಥಾಮಸ್ ಅಲ್ವಾ ಎಡಿಸನ್ ಲೈಟ್ ಬಲ್ಬ್ ಆವಿಷ್ಕರಿಸುವ ಮೊದಲು ಸಾವಿರಾರು ಬಾರಿ ವಿಫಲರಾದರು ಆದರೆ ಅವರು ಅದನ್ನು ಸೋಲು ಎಂದು ಕರೆಯಲಿಲ್ಲ; ಬದಲಿಗೆ ‘ಬಲ್ಬ್ ಕಂಡು ಹಿಡಿಯಲು ಕೆಲಸ ಮಾಡದ ೧೦೦೦೦ ಮಾರ್ಗಗಳನ್ನು ಕಂಡುಹಿಡಿದಿದ್ದೇನೆ’ ಎಂದು ಸಿದ್ಧತೆಯನ್ನು ಮುಂದುವರೆಸಿದರು. ವಿಫಲತೆಯನ್ನೇ ಸವಾಲಾಗಿ ಸ್ವೀಕರಿಸಿದರು. ನನ್ನಿಂದ ಏಕೆ ಸಾಧ್ಯವಿಲ್ಲವೆಂಬುದನ್ನು ಪ್ರಶ್ನೆಯಾಗಿ ತಮಗೆ ತಾವು ಹಾಕಿಕೊಂಡರು. ವಿಫಲತೆಯನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡರು. ಅಷ್ಟೇ ಅಲ್ಲ ಸೋಲಿನಲ್ಲೇ ಗೆಲುವು ಸಾಧಿಸುವ ಛಲವನ್ನು ಹುಟ್ಟಿಸಿಕೊಂಡರು. ವೈಫಲ್ಯವು ಯಶಸ್ಸಿನತ್ತ ಪಯಣದ ಒಂದು ಭಾಗವಾಗಿದೆ ಎಂದು ಮನಗಂಡರು. ಕೊನೆಗೆ ತಮ್ಮ ಆವಿಷ್ಕಾರದಲ್ಲಿ ಯಶಸ್ವಿಯಾದರು. ತಯಾರಿ ಸರಿಯಾಗಿದ್ದಾಗ, ಭಯ ಕಡಿಮೆಯಾಗುತ್ತದೆ. ಯಾವುದೇ ಕೆಲಸದಲ್ಲಿ ಭಯ ಕಾಡಿದರೆ ಅದರಲ್ಲಿ ಗೆಲುವು ಸಾಧಿಸುವುದು ತುಂಬಾ ಕಷ್ಟವಾಗುತ್ತದೆ. ಸೋಲನ್ನು ಅಂತಿಮ ಎಂದು ಭಾವಿಸದೆ, ಅದರಿಂದ ಪಾಠ ಕಲಿತು ಸನ್ನದ್ಧರಾಗಿ.

ಸಮಯದ ಸದುಪಯೋಗ
ಸಮಯವೆಂಬುದು ಒಮ್ಮೆ ಬಳಸಿದರೆ ಕಳೆದುಹೋಗುವ ನಿಧಿ. ಯಾವುದೇ ಸಿರಿವಂತಿಕೆಯನ್ನು ಕೊಟ್ಟರೂ ಎಂದೂ ಹಿಂದೆ ಬಾರದ ಸಂಪತ್ತು. ಹೀಗಾಗಿ ಸಿದ್ಧತೆಯಲ್ಲಿ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಮುಂಜಾನೆ ಬೇಗ ಎದ್ದು ಯಶಸ್ಸಿನ ಕಡೆಗೆ ಓಡಲು ಉತ್ತಮ ಸಿದ್ಧತೆ ನಡೆಸುವುದು ಯಶಸ್ಸನ್ನು ನಿಮ್ಮ ಮನೆ ಬಾಗಿಲಿಗೆ ತಂದು ನಿಲ್ಲಿಸುವುದು. ವಿಶ್ವದ ಶ್ರೇಷ್ಠ ಬಾಸ್ಕೆಟ್ ಬಾಲ್ ಆಟಗಾರ ಮೈಕೆಲ್ ಜೋರ್ಡಾನ್ ಪಂದ್ಯಗಳಿಗಿಂತ ಹೆಚ್ಚು ಸಮಯ ಅಭ್ಯಾಸಕ್ಕೆ (ಸಿದ್ಧತೆಗೆ) ಮೀಸಲಿಡುತ್ತಿದ್ದರು. ‘ನಾನು ನನ್ನ ವೃತ್ತಿಜೀವನದಲ್ಲಿ ೯೦೦೦ಕ್ಕೂ ಹೆಚ್ಚು ಶಾಟ್ಗಳನ್ನು ತಪ್ಪಿಸಿದ್ದೇನೆ. ಸುಮಾರು ೩೦೦ ಪಂದ್ಯಗಳನ್ನು ಸೋತಿದ್ದೇನೆ. ಹೀಗೆ ಪದೇ ಪದೇ ವಿಫಲವಾಗಿದ್ದರಿಂದಲೇ ನಾನು ಯಶಸ್ವಿಯಾದೆ.’ ಎನ್ನುತ್ತಾರೆ. ಮುಂಚಿತವಾದ ಯೋಜನೆಯು ಬಿಕ್ಕಟ್ಟಿನ ಸಮಯದಲ್ಲಿ ವಿಚಲಿತರಾಗದೆ, ದೃಢವಾಗಿ ನಿಲ್ಲುವ ಶಕ್ತಿಯನ್ನು ನೀಡುತ್ತದೆ. ದೈನಂದಿನ ಯೋಜನೆ ಅಥವಾ ಮಾಡಬೇಕಾದ ಕೆಲಸಗಳ ಪಟ್ಟಿ ಮೊದಲೇ ಮಾಡಿಟ್ಟುಕೊಳ್ಳಿ. ಯಶಸ್ವಿ ಜನರು ತಮಗಾಗಿ ಸಮಯ ಮೀಸಲಿರುಸುತ್ತಾರೆ. ಆ ಸಮಯದಲ್ಲಿ ಮುಂದಿನ ಯೋಜನೆಗಳ ಬಗೆಗೆ ಯೋಚಿಸಿ ಯೋಜಿಸುತ್ತಾರೆ.
ಪರಿಹಾರ
ಎಲೋನ್ ಮಸ್ಕ್ ಯಾವುದೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಮೊದಲು, ಆ ವಿಷಯದ ಬಗ್ಗೆ ಆಳವಾದ ಸಂಶೋಧನೆ ಮತ್ತು ಸಿದ್ಧತೆ ಮಾಡುತ್ತಾರೆ. ಅವರು ಒಂದೇ ವಿಷಯದ ಮೇಲೆ ಗುರಿ ಇಟ್ಟು, ಅದಕ್ಕಾಗಿ ಶಕ್ತಿಯನ್ನೆಲ್ಲಾ ವಿನಿಯೋಗಿಸುತ್ತಾರೆ. ಉತ್ತಮ ಸಿದ್ಧತೆಯು ಬಿಕ್ಕಟ್ಟಿನ ಸಮಯದಲ್ಲಿ ವಿಚಲಿತರಾಗದೆ ದೃಢವಾಗಿ ನಿಲ್ಲುವ ಶಕ್ತಿಯನ್ನು ನೀಡುತ್ತದೆ. ಅನಿರೀಕ್ಷಿತ ಸವಾಲುಗಳಿಗೆ ಪರಿಹಾರ ನೀಡುತ್ತದೆ.
ಸ್ಪಷ್ಟ ಗುರಿ
ಯಾವುದು ಗೊತ್ತುಗುರಿಯಿಲ್ಲದೆ ಏನನ್ನೂ ಸಾಧಿಸಲಾಗದು. ನೀವು ಸಾಧಿಸಲು ಬಯಸುವ ಗುರಿಗಳ ಬಗ್ಗೆ ಸ್ಪಷ್ಟತೆ ಇರಲಿ. ಸ್ಪಷ್ಟ ಗುರಿಯು ಗೊಂದಲವನ್ನು ನಿವಾರಿಸುವುದು. ಮತ್ತು ಅನಾವಶ್ಯಕವಾಗಿ ಅತ್ತಿತ್ತ ಮನಸ್ಸು ಹೊಯ್ದಾಡುವುದನ್ನು ನಿಲ್ಲಿಸುತ್ತದೆ. ಯಶಸ್ಸೆಂಬುದು ಮ್ಯಾರಥಾನ್ನಂತೆ ಅಲ್ಲ. ಅದಕ್ಕೆ ಗುರಿ ಇರುವುದು ಮುಖ್ಯ. ಗುರಿ ಉದ್ದೇಶ ಸ್ಪಷ್ಟತೆಯನ್ನು ಬಲಪಡಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ದಿನವನ್ನು ನಿರ್ಧಿಷ್ಟ ಉದ್ದೇಶದೊಂದಿಗೆ ಆರಂಭಿಸಬೇಕು. ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ನೋಡಲು ಸಾಮಾಜಿಕ ಮಾಧ್ಯಮಗಳ ಪುಟಗಳನ್ನು ಸ್ಕ್ರೋಲ್ ಮಾಡುವುದನ್ನು ಬಿಡಬೇಕು. ದೊಡ್ಡ ಗುರಿಯನ್ನು ಸಣ್ಣ ಸಣ್ಣ ಕೆಲಸಗಳನ್ನಾಗಿ ವಿಭಜಿಸಿ . ಅವುಗಳನ್ನು ಮಾಡಿ ಮುಗಿಸಲು ಮುಂದಾಗಿ.
ನಿರಂತರ ಕಲಿಕೆ
ಹೊಸ ವಿಷಯಗಳನ್ನು ಕಲಿಯಲು ಪುಸ್ತಕಗಳನ್ನು ಓದಿ. ಆನ್ಲೈನ್ ಕೋರ್ಸ್ಗಳನ್ನು ತೆಗೆದುಕೊಳ್ಳಿ. ಅವಿರತ ಪರಿಶ್ರಮ ಏಕಾಗ್ರತೆ ಇರುವುದು ಅತ್ಯವಶ್ಯಕವಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ಬಿಲಿಯನೇರ್ ಹಾಗೂ ಅಮೇಜಾನ್ನಂತಹ ಸಂಸ್ಥೆಯನ್ನು ನಿರ್ಮಿಸುವಲ್ಲಿ ಜೆಫ್ ಬೆಜೋನ್ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸಿದ್ಧತೆಗೆ ಮಾನಸಿಕ ತಿಳುವಳಿಕೆ ಮತ್ತು ಮನೋಸ್ಥೈರ್ಯ ಬೇಕು. ಮಾನಸಿಕ ಸಾಮರ್ಥ್ಯಗಳನ್ನು ನಿರಂತರವಾಗಿ ಬೆಳೆಸಿಕೊಳ್ಳಬೇಕು. ಇದರಿಂದ ಆಂತರಿಕ ಶಕ್ತಿ ಹೆಚ್ಚಾಗಿ ಗೆಲುವಿಗೆ ದಾರಿ ಮಾಡಿಕೊಡುತ್ತದೆ. ಯಶಸ್ಸು ಎಂಬುದು ಅಷ್ಟು ಸುಲಭವಾಗಿ ಸಿಗುವಂತದ್ದಲ್ಲ, ಅದನ್ನು ಪಡೆಯಲು ನಿರಂತರ ಕಲಿಕೆ ಮೂಲಕ ಹಾದು ಹೋಗಬೇಕಾಗುತ್ತದೆ. ಆ್ಯಪಲ್ ಕಂಪನಿಯ ಸಹ-ಸಂಸ್ಥಾಪಕ ಸ್ಟಿವ್ ಜಾಬ್ಸ್ ತಮ್ಮ ಪ್ರಸ್ತುತಿಗಳಿಗೆ (ಪ್ರಸೆಂಟೇಶನ್) ವಾರಗಳ ಮುಂಚಿತವಾಗಿ ಸಿದ್ಧತೆ ನಡೆಸುತ್ತಿದ್ದರು. ಪ್ರತಿಯೊಂದು ಸಣ್ಣ ಅಂಶವನ್ನು ಅವರು ಪರಿಶೀಲಿಸುತ್ತಿದ್ದರು. ಇದರಿಂದ ಅವರ ಉತ್ಪನ್ನ ಬಿಡುಗಡೆಗಳು ಅದ್ಭುತ ಯಶಸ್ಸು ಕಾಣುತ್ತಿದ್ದವು.
ಮೂಲಮಂತ್ರ
ಕೆಲವರಿಗೆ ಸಿದ್ಧತೆಯ ಬಲದಿಂದ ಯಶಸ್ಸು ಒಲಿದರೆ, ಇನ್ನೂ ಕೆಲವರಿಗೆ ಸಿದ್ಧತೆಯ ಅಭಾವದಿಂದ ಜೀವನಪರ್ಯಂತ ಕಷ್ಟಪಟ್ಟರೂ ಸಹ ಯಶಸ್ಸೆಂಬುದು ನನಸಾಗದ ಕನಸಾಗಿಯೇ ಉಳಿದು ಬಿಡುತ್ತದೆ. ಯಶಸ್ಸಿನ ಮೂಲಮಂತ್ರ ಸಿದ್ಧತೆ ಎಂಬುದು ಸರ್ವವಿಧಿತ. ಯಶಸ್ಸು ಎಂಬುದು ಒಂದು ರಾತ್ರಿಯಲ್ಲಿ ಸಿಗುವ ಫಲಿತಾಂಶವಲ್ಲ. ಅದು ದೀರ್ಘಕಾಲದ ಸಿದ್ಧತೆ, ಶ್ರಮ ಮತ್ತು ಶಿಸ್ತಿನ ಪ್ರತಿಫಲ. ‘ಉತ್ತಮ ಸಿದ್ಧತೆಯೇ ಯಶಸ್ಸಿನ ಮೂಲ.’ ಎಂಬುದನ್ನು ನೆನಪಿಡಿ. ಇಂದೇ ಸಿದ್ಧತೆಯನ್ನು ಆರಂಭಿಸಿ ನಿಮ್ಮ ಯೋಚನೆಗಳನ್ನು ಯೋಜನೆಗಳನ್ನು ಗೆಲುವಾಗಿ ಪರಿವರ್ತಿಸಲು ಪ್ರಯತ್ನಿಸಿ. ಆಗ ಯಶಸ್ಸು ತಾನೇ ನಿಮ್ಮನ್ನು ಹಿಂಬಾಲಿಸುತ್ತದೆ.


