ಬಿಸಿಲಿನ ತಾಪಮಾನ ಭಾರಿ ಹೆಚ್ಚಳ | ಕೋಳಿಗಳ ಆರೋಗ್ಯ, ಉತ್ಪಾದನೆ ಹಾಗೂ ಸಾಕಾಣಿಕಾರರ ಆರ್ಥಿಕ ಸ್ಥಿತಿಗೆ ಗಂಭೀರ ಹೊಡೆತ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ರಾಜ್ಯದ ವಿವಿಧ ಭಾಗಗಳಂತೆ ಜಮಖಂಡಿ ತಾಲೂಕು ಕೂಡ ಈ ಬಾರಿ ಭಾರೀ ಬಿಸಿಲಿನ ತಾಪಮಾನಕ್ಕೆ ಒಳಗಾಗಿದ್ದು, ಇದರ ಪರಿಣಾಮ ಕುಕ್ಕುಟೋದ್ಯಮದ ಮೇಲೆ ತೀವ್ರವಾಗಿ ಬೀಳುತ್ತಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣಾಂಶವು ಕೋಳಿಗಳ ಆರೋಗ್ಯ, ಉತ್ಪಾದನೆ ಹಾಗೂ ಸಾಕಾಣಿಕಾರರ ಆರ್ಥಿಕ ಸ್ಥಿತಿಗೆ ಗಂಭೀರ ಹೊಡೆತ ನೀಡುತ್ತಿದೆ.
ಸ್ಥಳೀಯ ಕುಕ್ಕುಟ ಸಾಕಾಣಿಕಾರರ ಮಾಹಿತಿಯಂತೆ, ಸಾಮಾನ್ಯವಾಗಿ 25ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಕೋಳಿಗಳು ಉತ್ತಮವಾಗಿ ಬೆಳೆಯುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ತಾಪಮಾನ 38ರಿಂದ 42 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿರುವುದರಿಂದ ಕೋಳಿಗಳು ತೀವ್ರ ಉಷ್ಣ ಒತ್ತಡಕ್ಕೆ ಒಳಗಾಗುತ್ತಿವೆ. ಇದರ ಪರಿಣಾಮವಾಗಿ ಅವುಗಳ ಆಹಾರ ಸೇವನೆ ಗಣನೀಯವಾಗಿ ಕುಸಿಯುತ್ತಿದೆ. ಆಹಾರ ಸೇವನೆ ಕಡಿಮೆಯಾದಂತೆ ದೇಹದ ತೂಕವೂ ಕಡಿಮೆಯಾಗುತ್ತಿದ್ದು, ಬೆಳವಣಿಗೆ ವಿಳಂಬವಾಗುತ್ತಿದೆ.
ಈ ಪರಿಸ್ಥಿತಿಯನ್ನು ಎದುರಿಸಲು ಸಾಕಾಣಿಕಾರರು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕೋಳಿ ಶೆಡ್ಗಳಲ್ಲಿ ತಂಪು ನೀರಿನ ಸಿಂಪಡಣೆ, ಫ್ಯಾನ್ಗಳ ಬಳಕೆ, ಹಸಿರು ಜಾಲರಿ (ಗ್ರೀನ್ ನೆಟ್) ಅಳವಡಿಕೆ, ಶೆಡ್ಗಳ ಮೇಲೆ ಹುಲ್ಲು ಅಥವಾ ತಂಪು ವಸ್ತುಗಳನ್ನು ಹಾಕುವುದು, ನೀರಿಗೆ ಎಲೆಕ್ಟ್ರೋಲೈಟ್ಗಳ ಮಿಶ್ರಣ ನೀಡುವುದು ಮುಂತಾದ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆದರೂ, ನಿರಂತರವಾಗಿ ಹೆಚ್ಚುತ್ತಿರುವ ಉಷ್ಣಾಂಶವು ಈ ಕ್ರಮಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತಿದೆ.
ಮೊಟ್ಟೆ ಉತ್ಪಾದನೆಗೂ ಹೊಡೆತ
ಮೊಟ್ಟೆ ಉತ್ಪಾದನೆಗೂ ಬಿಸಿಲಿನ ತೀವ್ರತೆ ದೊಡ್ಡ ಹೊಡೆತ ನೀಡಿದೆ. ಸಾಕಾಣಿಕಾರರ ಪ್ರಕಾರ, ಹಿಂದೆ ದಿನಕ್ಕೆ ನಿರಂತರವಾಗಿ ದೊರೆಯುತ್ತಿದ್ದ ಮೊಟ್ಟೆಗಳ ಸಂಖ್ಯೆ ಈಗ ಶೇಕಡಾವಾರು 20ರಿಂದ 30ರಷ್ಟು ಇಳಿಕೆಯಾಗಿರುವುದು ಗಮನಾರ್ಹವಾಗಿದೆ. ಇದು ಮಾರುಕಟ್ಟೆಯಲ್ಲಿ ಸರಬರಾಜು ಕುಸಿತಕ್ಕೆ ಕಾರಣವಾಗಿದ್ದು, ಬೆಲೆಯಲ್ಲಿ ಅಸ್ಥಿರತೆ ಉಂಟಾಗುತ್ತಿದೆ.
ಬಿಸಿಲಿನ ಪರಿಣಾಮದಿಂದ ಕೋಳಿಗಳಲ್ಲಿ ನೀರಿನ ಅವಶ್ಯಕತೆ ಹೆಚ್ಚಾಗುತ್ತಿದ್ದು, ಸರಿಯಾದ ಪ್ರಮಾಣದಲ್ಲಿ ನೀರು ಲಭ್ಯವಿಲ್ಲದಿದ್ದರೆ ಅವು ಬೇಗನೆ ದೌರ್ಬಲ್ಯಕ್ಕೊಳಗಾಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಕೆಲವು ಫಾರ್ಮ್ಗಳಲ್ಲಿ ಈಗಾಗಲೇ ಕೋಳಿಗಳ ಸಾವು ಪ್ರಕರಣಗಳು ವರದಿಯಾಗುತ್ತಿದ್ದು, ಇದು ಸಾಕಾಣಿಕಾರರಲ್ಲಿ ಆತಂಕ ಹೆಚ್ಚಿಸಿದೆ.
“ಕೋಳಿ ಆಹಾರದ ಬೆಲೆ ಏರಿಕೆಯೂ ಸಾಕಾಣಿಕಾರರ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಮೆಕ್ಕೆಜೋಳ, ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ದರ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಆದಾಯ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಹೆಚ್ಚಿದ ವೆಚ್ಚವನ್ನು ನಿರ್ವಹಿಸುವುದು ಸಾಕಾಣಿಕಾರರಿಗೆ ಕಷ್ಟಕರವಾಗಿದೆ.”
– ರಾಜು ಮಿರ್ಜಿ
ಕೋಳಿ ಸಾಕಾಣಿಕೆಗಾರ ರೈತ.
ಬಾಕ್ಸ : ಸರ್ಕಾರವು ತಕ್ಷಣವೇ ಕುಕ್ಕುಟೋದ್ಯಮಕ್ಕೆ ನೆರವು ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ವಿದ್ಯುತ್ ದರದಲ್ಲಿ ರಿಯಾಯಿತಿ, ಶೀತಲೀಕರಣ ವ್ಯವಸ್ಥೆಗಳಿಗೆ ಅನುದಾನ, ನೀರಿನ ಸರಬರಾಜಿಗೆ ವಿಶೇಷ ವ್ಯವಸ್ಥೆ, ಹಾಗೂ ನಷ್ಟ ಅನುಭವಿಸಿದ ಸಾಕಾಣಿಕಾರರಿಗೆ ಪರಿಹಾರ ಧನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಫಾರ್ಮ್ಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದರೂ, ವ್ಯಾಪಕ ಮಟ್ಟದಲ್ಲಿ ನೆರವು ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒಟ್ಟಾರೆ, ಬಿಸಿಲಿನ ತೀವ್ರತೆ ಮುಂದುವರಿದರೆ ಜಮಖಂಡಿ ತಾಲೂಕಿನಲ್ಲಿ ಕುಕ್ಕುಟೋದ್ಯಮಕ್ಕೆ ದೊಡ್ಡ ಮಟ್ಟದ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಸರ್ಕಾರ ಹಾಗೂ ಸಂಬಂಧಿತ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ, ಈ ಉದ್ಯಮವನ್ನು ಅವಲಂಬಿಸಿರುವ ನೂರಾರು ಕುಟುಂಬಗಳ ಜೀವನೋಪಾಯ ಸಂಕಷ್ಟಕ್ಕೀಡಾಗುವ ಭೀತಿ ಎದುರಾಗಿದೆ.

