ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳು ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್. ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾನೂನಿನಡಿ ಬರುವ ಕೆಲಸವನ್ನು ನಿಗದಿತ ಅವಧಿಯಲ್ಲಿ ನಿರ್ವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳು ಆಯೋಗದ ಅಧ್ಯಕ್ಷರಾದ ಡಾ. ಮೂರ್ತಿ ಎಲ್. ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಗರ ಹುಂಕುಂ ಅರ್ಜಿ ವಿಲೇವಾರಿ ಮಾಡಬೇಕು. ಗೋಮಾಳ ಜಮೀನು ಅರ್ಜಿ ಹಾಕಿಕೊಂಡಿದ್ದಾರೆ. ಆ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದರು.
ಸ್ಮಶಾನ ಭೂಮಿ ಎಲ್ಲೆಲ್ಲಿ ಅವಶ್ಯಕತೆ ಇದೆ ಎಂಬುದಾಗಿ ಜಾಗೆ ಗುರುತಿಸಬೇಕು. ತಹಶೀಲ್ದಾರ್, ಎಸಿ ಮೂಲಕ ಡಿಸಿ ಗಮನಕ್ಕೆ ತಂದು ಲೋಪ ದೋಷಗಳಾಗದಂತೆ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಗೋಮಾಳ ಜಮೀನಿಗೆ ಸಂಬಂಧಿಸಿದ ಸರ್ಕಾರದ ಅಗತ್ಯತೆ ಅನುಸಾರ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಖಾಸಗಿ ಜಮೀನು ಮಂಜೂರು ಮಾಡುವ ಯಾವುದೇ ಪ್ರಸ್ತಾವನೆ ನಮ್ಮ ಮುಂದಿರುವುದಿಲ್ಲ. ಅಂತಹ ಅರ್ಜಿಗಳ ಬಂದ ಸಂದರ್ಭದಲ್ಲಿ ಹಿಂಬರಹ ನೀಡಿ ತಕ್ಷಣ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅರ್ಜಿ ಅರ್ಹತೆ ಇರುವ ಪ್ರಕರಣಗಳನ್ನು ಎಲ್ಲ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿದ್ದಲ್ಲಿ ನಿಯಮನುಸಾರ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪಾಲಿಕೆಯಲ್ಲಿ ಒಟ್ಟು ಅನುದಾನದಲ್ಲಿ ಪಜಾ ಪಪಂ ವರ್ಗದವರಿಗೆ ಎಷ್ಟು ಅನುದಾನ ನಿಗದಿಪಡಿಸಿದ್ದಿರಿ. ಪೌರ ಕಾರ್ಮಿಕರಿಗೆ ಯಾವ ಲೆಕ್ಕ ಶೀರ್ಷಿಕೆಯಲ್ಲಿ ನೀಡುತ್ತೀರಿ. ಶೇ.25 ರಷ್ಟು ಅನುದಾನ ಮೀಸಲಿಡಬೇಕು. ಫಲಾನುಭವಿಗಳ ಆಯ್ಕೆಯನ್ನು ಹೇಗೆ ಮಾಡುತ್ತೀರಿ. ಪಜಾ, ಪಪಂ ಎಷ್ಟು ಜನ ಗುತ್ತಿಗೆದಾರರಿದ್ದಾರೆ. ಎಷ್ಟು ಜನ ಗುತ್ತಿಗೆದಾರರಿದ್ದಾರೆ. ಆ ಮಾಹಿತಿಯನ್ನು ಆಯೋಗಕ್ಕೆ ತಕ್ಷಣ ನೀಡಬೇಕು ಎಂದು ಹೇಳಿದರು.
ಪೌರ ಕಾರ್ಮಿಕರಿಗೆ ವೇತನ ಯಾವುದರ ಮೂಲಕ ಅನುದಾನ ನೀಡುತ್ತೀರಿ. ಪೌರ ಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಯಾರೂ ಇರುವುದಿಲ್ಲ. ಏಜೆನ್ಸಿ ಮೂಲಕ ನೀಡುವ ಹೊರಗುತ್ತಿಗೆ ಸಿಬ್ಬಂದಿ ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇನ್ನೊಂದೆಡೆ ಕೆಲ ಪ್ರಕರಣಗಳಲ್ಲಿ ಲೋಪ ಎಸಗುವ ಎನ್ ಜಿಓಗಳನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಪೌರ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಿ. ವಿವಿಧ ಸಿದ್ಧತಾ ಪೂರ್ವ ತಯಾರಿ ನಡೆಸುವ ಪೌರ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹಿಸಿ. ನಿಗದಿತ ಅನುದಾನ ಅದೇ ಕಾರಣಕ್ಕೆ ವಿನಿಯೋಗಿಸಬೇಕು ಎಂದರು.
ಎಸ್ ಸಿ ಪಿ ಟಿ ಎಸ್ ಪಿ ಅನುದಾನ ಬಳಕೆ ನಾಮಫಲಕ ಅಳವಡಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲೂ ಎಸ್ ಸಿ ಪಿ ಟಿ ಎಸ್ಪಿ ಅನುದಾನ ಅಪವ್ಯಯವಾಗದಂತೆ ಅನುದಾನ ವಿನಿಯೋಗಿಸಿ ಈ ಜನಾಂಗದವರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಪಜಾ, ಪಪಂ ಉದ್ದಿಮೆದಾರರಿಗೆ ಪಿಡಿಒ, ಇಒ ನಗರಸಭೆ ಕೆಲಸ ಕಾಮಗಾರಿ ನೀಡುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕೃಷಿ ಇಲಾಖೆಯಿಂದ ಕೇಂದ್ರ ಮತ್ತು ರಾಜ್ಯ ವಲಯದ ಅನುದಾನ ಸದ್ಭಳಕೆ ಮಾಡಿಕೊಂಡು ಈ ಜನಾಂಗದ ರೈತರಿಗೆ ಕೃಷಿ ಪರಿಕರ ಒದಗಿಸಿ ಕೊಡಬೇಕು ಎಂದು ಮೂರ್ತಿ ಸಲಹೆ ಮಾಡಿದರು.
ತೋಟಗಾರಿಕಾ ಇಲಾಖೆ ಹನಿ ನೀರಾವರಿ ಯೋಜನೆಯಡಿ ತೊಡಗಿಸಿಕೊಳ್ಳಲು ಹಾಗೂ ರೇಷ್ಮೆ ಇಲಾಖೆಗೆ ಸಹಾಯಧನ ಒದಗಿಸಬೇಕು ಎಂದರು.
ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ ಹಾಗೂ ಸಹಕಾರ ಇಲಾಖೆಗಳನ್ನು ಮುಖ್ಯವಾಹಿನಿಗೆ ತರಲು ಸದಸ್ಯರನ್ನು ಹೆಚ್ಚು ಮಾಡಿಸಬೇಕು. ಜನಂಖ್ಯಾಧಾರಿತ ಸದಸ್ಯರನ್ನು ಗುರುತಿಸಿ, ಸದಸ್ಯರನ್ನು ಮಾಡಬೇಕು ಎಂದರು.
ವಿವಿಧ ಅಭಿವೃದ್ದಿ ನಿಗಮ ಟಾರ್ಗೆಟ್ ಅನುಸಾರ ಭೂಒಡೆತನ ಯೋಜನೆ ಗುರಿ ಸಾಧಿಸಿ ನಿಗಮಗಳಿಂದ ಅನುಷ್ಟಾನಗೊಳ್ಳುವ ಯೋಜನೆಗಳ ಪ್ರಯೋಜನ ಪಡೆದುಕೊಂಡು ಆರ್ಥಿಕ ಸಬಲರಾಗಲು ಅರ್ಹರಿಗೆ ಯೋಜನೆ ಒದಗಿಸಬೇಕು ಎಂದು ಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಮಿಷನ್ ವಿದ್ಯಾಪುರ ಯೋಜನೆಯಡಿ ಎಲ್ಲ ಸ್ಮಾರ್ಟ ಟಿವಿ ಲ್ಯಾಬ್ ಮಟೆರಿಯಲ್ ನೀಡಿದೆ. ಅಂಗನವಾಡಿಗಳಲ್ಲಿ ವಿವಿಧ ಆಟಿಕೆ ಸಾಮಗ್ರಿ ಒದಗಿಸಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು. ಕೈಮಗ್ಗ ಮತ್ತು ಜವಳಿ ಉದ್ಯಮಕ್ಕೆ ಗಾರ್ಮೆಂಟ್ ಫ್ಯಾಕ್ಟ್ರಿಗೆ ಅವಕಾಶ ನೀಡಬೇಕು ಎಂದರು.
ಕೈಗಾರಿಕಾ ಇಲಾಖೆ ಮುಳವಾಡ ಬಳಿ ಶೇ. 40 ರಷ್ಟು ಜಮೀನು ಅಲೌಟ್ ಮಾಡಲು ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ನೀಡಬಹುದು. ಈಗಾಗಲೇ 2 ಎಕರೆಯಲ್ಲಿ 12 ಜನರಿಗೆ ಕೆಐಡಿಬಿಯಲ್ಲಿ ಜಾಗೆ ನೀಡಲಾಗಿದೆ ಎಂದರು.
ಪಜಾ, ಪಪಂಕ್ಕೆ ಸೇರಿದ ವಸತಿ ಶಾಲೆ ಹಾಗೂ ನಿಲಯಗಳ ವ್ಯವಸ್ಥೆ ಸುಧಾರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಲ್ಲಿ ಪೌಷ್ಠಿಕಾಂಶ, ಆಹಾರ ಹಾಗೂ ಮಕ್ಕಳ ಆರೋಗ್ಯವನ್ನು ನಿರಂತರವಾಗಿ ತಪಾಸಣೆ ನಡೆಸುತ್ತಿರಬೇಕು. ಯಾವುದೇ ದೂರಿಗೆ ಆಸ್ಪದೇ ನೀಡದೇ ಖಾಸಗಿ ವಸತಿ ನಿಲಯಗಳ ಮೂಲಭೂತ ಸೌಲಭ್ಯ ಒದಗಿಸಬೇಕು. ಸರಕಾರದ ಅನುದಾನ ಖರ್ಚಾಗಬೇಕು. ವೆಚ್ಚವಾದ ಅನುದಾನದ ಕುರಿತು ಬೋರ್ಡ್ ಹಾಕಬೇಕು ಎಂದರು. ಇಲ್ಲವಾದಲ್ಲಿ ತಪ್ಪಿತಸ್ಥ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಆಯೋಗ ಕ್ರಮ ಕೈಗೊಳ್ಳಲಿದೆ ಎಂದರು.
ಸಭೆಯಲ್ಲಿ ಆಯೋಗದ ಸದಸ್ಯರಾದ ಎನ್. ದಿವಾಕರ, ಸುನೀಲ ಉಕ್ಕಲಿ, ಗೀತಾ ಥಾವಂಶಿ, ಜಿಲ್ಲಾಧಿಕಾರಿ ಡಾ. ಆನಂದ.ಕೆ, ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಆಯೋಗದ ಕಾರ್ಯದರ್ಶಿಗಳಾದ ಎಚ್.ಎಂ. ಶಿವರಾಂ, ಸಂಶೋಧನಾಧಿಕಾರಿ ಸಿಂಧೂ ಎಚ್.ಎಸ್, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಕ್ರೀಡಾಧಿಕಾರಿ ರಾಜಶೇಖರ ದೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಸಂತೋಷ ಭೋವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಾ ಮಟ್ಟದ ಅಧಿಕಾರಿಗಳು ಜಿಲ್ಲೆಯ ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.

