ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸಮೀಪದ ವಂದಾಲ ಗ್ರಾಮದ ಶಾಕಂಬರಿ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅಂಕ ತಪ್ಪಾಗಿ ನಮೂದಾಗಿದ್ದು, ವಿದ್ಯಾರ್ಥಿಗೆ ಅನ್ಯಾಯವಾಗಿದೆ.
ಗ್ರಾಮದ ವಿದ್ಯಾರ್ಥಿ ಸಂತೋಷ ರಾಘವೇಂದ್ರ ಖೇಡದ ೨೦೨೫-೨೬ನೇ ಸಾಲಿನ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ ೮೦ಕ್ಕೆ ೬೬ ಅಂಕ ಪಡೆದಿದ್ದಾನೆ. ಇದು ಉತ್ತರ ಪತ್ರಿಕೆಯ ಝೆರಾಕ್ಸ್ ಪ್ರತಿ ಪಡೆದಾಗ ತಿಳಿದುಬಂದಿದೆ.
ಆದರೆ ಏಪ್ರಿಲ್ ೨೩ರಂದು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟವಾದ ಅಂಕಪಟ್ಟಿಯಲ್ಲಿ ಸಂತೋಷಗೆ ವಿಜ್ಞಾನ ವಿಷಯದಲ್ಲಿ ಕೇವಲ ೨೫ ಅಂಕ ಮಾತ್ರ ನಮೂದಾಗಿದೆ.
ಇದರಿಂದ ನೊಂದ ವಿದ್ಯಾರ್ಥಿ, ಉತ್ತರ ಪತ್ರಿಕೆಯ ಪ್ರತಿ ಕೋರಿ ಪರೀಕ್ಷಾ ಮಂಡಳಿಗೆ ಅರ್ಜಿ ಸಲ್ಲಿಸಿದ್ದ. ಪ್ರತಿ ಕೈಸೇರಿದಾಗ ಅಸಲಿ ಎಡವಟ್ಟು ಬಯಲಾಗಿದೆ.
“ಉತ್ತರ ಪತ್ರಿಕೆಯ ಮುಖಪುಟದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಎಂದು ಮೂರು ವಿಭಾಗಗಳಿಗೆ ಪ್ರತ್ಯೇಕ ಅಂಕ ನಮೂದಿಸಿ ಒಟ್ಟು ಮೊತ್ತ ಹಾಕಬೇಕು. ಇಲ್ಲಿ ಮೌಲ್ಯಮಾಪಕರು ಅಕ್ಷರದಲ್ಲಿ ೬೬ ಅಂಕ ಎಂದು ಬರೆದಿದ್ದಾರೆ. ಆದರೆ ಗಣಕಯಂತ್ರದಲ್ಲಿ ದಾಖಲಿಸುವಾಗ ಜೀವಶಾಸ್ತ್ರ ವಿಭಾಗದ ೨೫ ಅಂಕವನ್ನು ಮಾತ್ರ ನಮೂದಿಸಿದ್ದಾರೆ” ಎಂದು ಶಾಲೆಯ ಮುಖ್ಯ ಶಿಕ್ಷಕ ಆನಂದ ಕಂಠಿ ತಿಳಿಸಿದರು.
ವಾಸ್ತವವಾಗಿ ೬೬ ಅಂಕದ ಜೊತೆಗೆ ಆಂತರಿಕ ಮೌಲ್ಯಮಾಪನದ ೨೦ ಅಂಕ ಸೇರಿದರೆ ವಿಜ್ಞಾನಕ್ಕೆ ವಿದ್ಯಾರ್ಥಿ ಪಡೆಯಬೇಕಾದ ಒಟ್ಟು ಅಂಕ ೧೦೦ಕ್ಕೆ ೮೬. ಆದರೆ ಈಗ ಆಂತರಿಕ ಅಂಕ ಸೇರಿ ಕೇವಲ ೪೫ ಅಂಕ ಬಂದಿದೆ. ಇದರಿಂದ ವಿದ್ಯಾರ್ಥಿಗೆ ೪೧ ಅಂಕ ಕಡಿಮೆಯಾಗಿದ್ದು, ಒಟ್ಟಾರೆ ಫಲಿತಾಂಶದಲ್ಲಿ ಶೇ.೬.೫೬ ಅಂಕಗಳ ವ್ಯತ್ಯಾಸವಾಗಲಿದೆ.
“ಮೌಲ್ಯಮಾಪಕರು ಮಾಡಿದ ಎಡವಟ್ಟಿನಿಂದ ನಾನು ಹೆಚ್ಚು ಅಂಕ ಪಡೆದರೂ ಕಡಿಮೆ ಅಂಕ ಬಂದಿದೆ. ಪರೀಕ್ಷಾ ಮಂಡಳಿ ತಕ್ಷಣ ನನಗೆ ನ್ಯಾಯ ಒದಗಿಸಬೇಕು” ಎಂದು ವಿದ್ಯಾರ್ಥಿ ಸಂತೋಷ ಖೇಡದ ಮನವಿ ಮಾಡಿದ್ದಾನೆ.

