ಮೇ.೦೧ ಸಾಹಿತಿ ಡಾ.ಡಾ.ಚನ್ನಪ್ಪ ಕಟ್ಟಿ ಜನ್ಮದಿನ ಈ ಸಂದರ್ಭದಲ್ಲಿ ಅವರ ಶಿಷ್ಯ ಬಳಗ ಮತ್ತು ಅಭಿಮಾನಿಗಳು ಸೇರಿ ಸಿಂದಗಿಯಲ್ಲಿ ಇದೇ ಮೇ .೦೧ ಶುಕ್ರವಾರ ದಂದು “ನೆಲೆ” ಎನ್ನುವ ಅಭಿನಂದನಾ ಗ್ರಂಥ ಅರ್ಪಿಸುವ ಮೂಲಕ ಅವರ ೭೦ ನೇ ವರ್ಷದ ಜನ್ಮದಿನ ಅರ್ಥಪೂರ್ಣವಾಗಿಸಲಿದ್ದಾರೆ. ಆ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮನು ಪತ್ತಾರ, ಕಲಕೇರಿ
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಸೃಜನಶೀಲತೆಯೇ ಜೀವಾಳವಾಗಿಸಿಕೊಂಡ ಕನ್ನಡದ ಅಪರೂಪದ ಲೇಖಕರಲ್ಲಿ ಡಾ. ಚನ್ನಪ್ಪ ಕಟ್ಟಿ ಅವರು ಕೂಡಾ ಒಬ್ಬರು.
ಸಿಂದಗಿ ಎಂಬ ‘ಅರೆ ನಗರಿ’ ಯಲ್ಲಿ ನೆಲೆ ನಿಂತು, ಕಾವ್ಯದ ಮೂಲಕ ಸಾಹಿತ್ಯದ ಯಾನವನ್ನು ಪ್ರಾರಂಭಿಸಿ ಕಥೆ, ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ, ಸಂಪಾದನೆ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅನೂಹ್ಯವಾದ ಕಾರ್ಯ ಮಾಡಿ ಮೌನ ಸಾಧಕರಾದ ಡಾ. ಚನ್ನಪ್ಪ ಕಟ್ಟಿ ಅವರು ಅಪ್ಪಟ ಗ್ರಾಮೀಣ ಪ್ರತಿಭೆ. ತಮ್ಮ ಗ್ರಾಮ ಬದುಕಿನ ಸಶಕ್ತ ಅನುಭವಗಳಿಗೆ ಸಾಹಿತ್ಯದ ಆಧುನಿಕ ಚಿಂತನಾ ದಾರಿಯನ್ನು ತಂದು ಜೋಡಿಸುವ ಮೂಲಕ ಬರಹಕ್ಕೆ ಹೊಸ ಮೆರುಗನ್ನು ತಂದುಕೊಟ್ಟವರು.
ಕನಕಪ್ಪ ಮತ್ತು ವೆಂಕವ್ವ ನವರ ಸುಪುತ್ರ
ಸಿಂದಗಿಯ ನಿವಾಸಿಯಾದ ಡಾ. ಚನ್ನಪ್ಪ ಕಟ್ಟಿ ಅವರು ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಕೊನೆಯ ಸಣ್ಣ ಹಳ್ಳಿ ಹಿರೇಹಾಳ ಗ್ರಾಮದವರು, ಕೃಷಿಯನ್ನೇ ಅವಲಂಬಿಸಿದ ಕನಕಪ್ಪ ಮತ್ತು ವೆಂಕವ್ವ ನವರ ಆರನೆಯ ಮಗನಾಗಿ ಮೇ 1, 1956 ರಲ್ಲಿ ಜನಿಸಿದರು.
ಸ್ನಾತಕೋತ್ತರ ಪದವಿ
ಚೆನ್ನಪ್ಪ ಅವರು ಹಿರೇಹಾಳದಲ್ಲಿಯೇ ಪ್ರಾಥಮಿಕ ಶಿಕ್ಷಣ, ಬಾದಾಮಿಯಲ್ಲಿ ಮಾಧ್ಯಮಿಕ ಮತ್ತು ಪದವಿಪೂರ್ವ ಶಿಕ್ಷಣವನ್ನು ಪಡೆದು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ, 1979 ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಭಾಷಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು.
ಶಿಷ್ಯ ಬಳಗಕ್ಕೆ ಪ್ರೋತ್ಸಾಹ
ಸ್ನಾತಕೋತ್ತರ ಪದವಿ ಪೂರೈಸಿದ ವರ್ಷವೇ ಚನ್ನಪ್ಪ ಕಟ್ಟಿ ಅವರು ಸಿಂದಗಿಯ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಜಿ. ಪಿ ಪೋರವಾಲ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆಯನ್ನು ಪ್ರಾರಂಭಿಸಿದರು. ನಂತರ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿರುವರು. ಒಟ್ಟು ಮೂವತ್ತೇಳು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯವನ್ನು ಮನ ಮುಟ್ಟುವಂತೆ ಪಾಠ ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಪೂಜ್ಯ ಗುರುಗಳಾಗಿ, ಮಾರ್ಗದರ್ಶಕರಾಗಿ ಇವತ್ತಿಗೂ ಶಿಷ್ಯ ಬಳಗವನ್ನು ಪ್ರೋತ್ಸಾಹಿಸುತ್ತಲೇ ಸಾಗಿದ್ದಾರೆ.
ಸುಖೀ ಹಾಗೂ ಸುಂದರ ಕುಟುಂಬ
ಡಾ. ಚನ್ನಪ್ಪ ಕಟ್ಟಿ ಅವರದ್ದು ಸುಖೀ ಹಾಗೂ ಸುಂದರ ಕುಟುಂಬ, 1985 ರಲ್ಲಿ ಸರೋಜಾ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಸಚಿನ್ ಮತ್ತು ಸುಮಾ ಎಂಬ ಇಬ್ಬರು ಮಕ್ಕಳನ್ನು ಪಡೆದ ಚನ್ನಪ್ಪ ಕಟ್ಟಿ ಹಾಗೂ ಸರೋಜಾ ಅವರು ಇಂದು ಅಜ್ಜ-ಅಜ್ಜಿಯಾಗಿ ಮೊಮ್ಮಕ್ಕಳಾದ ಧೃತಿ ಮತ್ತು ಅವ್ಯುಕ್ತ ರವರೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಸಾಹಿತ್ಯದ ರುಚಿ ತೋರಿಸಿದ ಧಾರವಾಡ ಗಾಳಿ
ಸಾಹಿತ್ಯದ ವಾತಾವರಣವೇ ಇಲ್ಲದ ಕುಟುಂಬದ ಪರಿಸರದಲ್ಲಿ ಬೆಳೆದ ಬಂದ ಚೆನ್ನಪ್ಪ ಕಟ್ಟಿ ಅವರಿಗೆ ಪಾಠ ಹೇಳಿಕೊಟ್ಟ ಗುರುಗಳು ಸಾಹಿತ್ಯದ ದಾರಿಗೆ ಕರೆದುಕೊಂಡು ಬಂದರೆ, ಅಣ್ಣ ನ ಉಸ್ತುವಾರಿಕೆ ಉನ್ನತ ಶಿಕ್ಷಣ ನೀಡಿತು, ಧಾರವಾಡದ ಗಾಳಿ ಸಾಹಿತ್ಯದ ರುಚಿ ತೋರಿಸಿತು. ಸಿಂದಗಿಯ ಜಾನಪದ ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಡಾ. ಎಂ ಎಂ ಪಡಶೆಟ್ಟಿ ಅಪರಿಮಿತ ಗೆಳೆಯರಾಗಿ ದೊರೆತು ಅವರ ಸಾಹಿತ್ಯವು ಹುಲುಸಾಗಿ ಬೆಳೆಯಲು ಸಾಧ್ಯವಾಯಿತು.
“ಎರಡು ಸೆಲೆ, ಒಂದು ನೆಲೆ”ಯಿಂದ ಮುನ್ನುಡಿ
ಬಂಡಾಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ ಗೆಳೆಯರಾದ ನಾಗೇಶ್ ರಾಂಪೂರ ಅವರೊಂದಿಗೆ ಸೇರಿಕೊಂಡು ” ಎರಡು ಸೆಲೆ, ಒಂದು ನೆಲೆ ” ಕವನ ಸಂಕಲನ ಪ್ರಕಟಿಸಿ ಆಧುನಿಕ ಬದುಕಿಗೆ ಮುಖ ಮಾಡಿರುವ ಮನುಷ್ಯನ ಒಳ ತುಮುಲಗಳನ್ನು ತೆರೆದು ತೋರುವ ಪ್ರಯತ್ನಕ್ಕೆ ಮುನ್ನುಡಿ ಬರೆದರು,
ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುವ ಧ್ವನಿ
” ಇಂಡಿಯಾದಲ್ಲಿ”, “ನೆನಪುಗಳು ಸಾಯುವುದಿಲ್ಲ”, “ಸೂರ್ಯನಿಗೆ ಸಾವ ನೋಡಲು ಬೇಸರವಿಲ್ಲ”, ” ಬೇರು – ಚಿಗುರು” , ” ಓಡುವ ಪಾದ, ಕಾಡುವ ಸರಪಳಿ” ಕವಿತಾ ಸಂಕಲನಗಳಲ್ಲಿ ‘ ಸಾಮಾಜಿಕ ನ್ಯಾಯಕ್ಕಾಗಿ ಸದಾ ಹಂಬಲಿಸುವ ತಮ್ಮ ಧ್ವನಿಯನ್ನು ಮಾರ್ದನಿಸುವಂತೆ ಚಿತ್ರಿಸಿರುವುದನ್ನು ಕಾಣಬಹುದಾಗಿದೆ ” ಹೇಳಲೇಬೇಕಾದುದನ್ನು ಹೇಳುವ ಸಲುವಾಗಿ, ಹೇಳಲಾಗದನ್ನು ಹೇಳಿಯೇ ತೀರುವ ಸಲುವಾಗಿ ” ಬರೆಯುವೆ ಎನ್ನುವ ಅವರ ಮಾತು ಆಪ್ತವೆಸುತ್ತದೆ.
ಕಾವ್ಯದೊಳಗಿದ್ದು ಕಥೆಯೆಡೆಗೆ
ಕಾವ್ಯದೊಳಗಿದ್ದು ಕಥೆಯ ಕಡೆಗೆ ಕಣ್ಣು ಹಾಯಿಸಿದ ಕಟ್ಟಿ ಅವರು ” ಮುಳುಗಡೆ ಮತ್ತು ಇತರ ಕಥೆಗಳು”, ” ಬೆಂಕಿ ಇರದ ಬೆಳಕು”, ಹಾಗೂ ” ಏಕತಾರಿ” ಕಥಾ ಸಂಕಲನಗಳ ಮೂಲಕ ಗ್ರಾಮೀಣ ಪರಿಸರ, ಅಲ್ಲಿನ ಸಂಘರ್ಷ, ಶೋಷಣೆ, ಶ್ರೀಮಂತಯ ಅಮಲು, ಹೆಣ್ಣೆ ಮಕ್ಕಳ ಅಸಹಾಯಕತೆ, ಜಗಳ ಈರ್ಷೆ, ಹಾದರ, ಮಹಿಳೆಯರ ದಿಟ್ಟತನ, ಪ್ರೀತಿ- ಪ್ರಣಯ- ಸಂಬಂಧ ಗಳ ಕುರಿತಾಗಿ ಗಾಢವಾಗಿ ಪರಿಣಾಮ ಬೀರುವ ಹಾಗೆ ಕಾವ್ಯಾತ್ಮಕ ಭಾಷೆಯಲ್ಲಿ ರೂಪಿತಗೊಂಡ ಕಥೆಗಳು ಕನ್ನಡದ ಕಥನ ಲೋಕವನ್ನು ಇನ್ನಷ್ಟು ವಿಸ್ತರಿಸಿ ಮನುಷ್ಯ ಸಂಬಂಧಗಳನ್ನು ಹಾಗೂ ಸಮುದಾಯದ ಧಾರಣ ಶಕ್ತಿಯ ಮೇಲಿರುವ ವಿಶ್ವಾಸ ಮತ್ತು ನಂಬಿಕೆಗಳನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಹೀಗಾಗಿ ಕಟ್ಟಿ ಅವರ ಕಥೆಗಳನ್ನು ಓದಲು ಓದುಗ ಹಾಗೂ ವಿಮರ್ಶಕ ಒಟ್ಟಿಗೆ ಕಾತುರತೆಯಿಂದ ಕಾಯುವರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ತುಡಿತ
ಸಾಹಿತ್ಯ ಮತ್ತು ಸಾಂಸ್ಕೃತಿಕ ಕುರಿತಾಗಿ ತೀವ್ರ ತುಡಿತ ಹೊಂದಿರುವ ಕಟ್ಟಿ ಅವರು “ಸಾರಣೆ”, ” ಕುಯಿಲು”, ” ಶಬ್ದ ಸೋಪಾನ”, ” ಒಕ್ಕಣೆ”, ವಿಮರ್ಶಾ ಕೃತಿಗಳ ಮೂಲಕವೂ ತಮ್ಮ ಓದಿನ ಹರವನ್ನು ಬಿಚ್ಚಿಟ್ಟು, ಕಾವ್ಯ, ಕಥೆಗಳು ಹಾಗೂ ಸೃಜನಶೀಲ ಆಶೆಯದ ಬರಹದ ಒಳ ಸುಳಿವುಗಳ ಮರ್ಮ ಹೇಗಿರಬೇಕೆಂಬುದರ ಕುರಿತಾಗಿ ಚರ್ಚಿಸಿ ಕನ್ನಡ ವಿಮರ್ಶೆಗೆ ಹೊಸತಾದ ದಾರಿಯೊಂದನ್ನು ರೂಪಿಸಿಕೊಟ್ಟಿರುವರು.
” ಚೆನ್ನುಡಿ” – ಮುನ್ನುಡಿ ಬೆನ್ನುಡಿ ಅಭಿಪ್ರಾಯಗಳ ಸಂಕಲನ, ” ಕಸವರಮೆಂಬುದು” – ವೈಚಾರಿಕ ಲೇಖನಗಳ ಸಂಕಲನ, ” ಬಬಲೇಶ್ವರ ಶಾಂತವೀರ ಪಟ್ಟಾಧ್ಯಕ್ಷರು”, ” ಇಟಗಿ ಶ್ರೀ ಭೀಮಾಂಬಿಕೆ” – ಜೀವನ ಚರಿತ್ರೆಗಳು, ” ನೆನಹು ಮಂದಾರ” – ವ್ಯಕ್ತಿಗಳ ಕಿರು ಜೀವನ ಚರಿತ್ರೆಗಳು ಈ ಕೃತಿಗಳ ಮೂಲಕ ಡಾ. ಚನ್ನಪ್ಪ ಕಟ್ಟಿ ಕನ್ನಡದ ಸಾಂಸ್ಕೃತಿಕ ಲೋಕದ ಕಾಳಜಿಯನ್ನು ಎತ್ತಿ ತೋರಿಸಿದ್ದಾರೆ
ಸಂಶೋಧನಾ ಕ್ಷೇತ್ರಕ್ಕೂ ಪ್ರವೇಶ
ಕಾವ್ಯ, ಕಥೆ ಹಾಗೂ ವಿಮರ್ಶಾಯಲ್ಲಿ ದಾಪುಗಾಲು ಇಡುತ್ತಲೇ ಡಾ. ಕಟ್ಟಿ ಅವರು ಸಂಶೋಧನಾ ಕ್ಷೇತ್ರಕ್ಕೂ ತಮ್ಮ ” ಅಮೋಘಸಿದ್ದ ಪರಂಪರೆ ” ಸಂಶೋಧನಾ ಕೃತಿಯ ಮೂಲಕ ಹೊಸ ಬೆಳಕನ್ನು ತಂದು ಚೆಲ್ಲಿರುವರು. ಸಂಶೋಧಕರಿಗೆ ಮಾದರಿಯಾದ ಈ ಮಹಾಪ್ರಬಂಧ ಅಕ್ಷರ ಇತಿಹಾಸದ ಹೊರಗಿರುವ ಸಿದ್ದರ, ಸಂತರ, ಅನುಭಾವಿಗಳ ಹಾಗೂ ಆರೂಢರ ಪರಂಪರೆಗಳ ಅಧ್ಯಯನಕ್ಕೆ ಮಾರ್ಗಿ ಆಗಿದೆ
” ಅಮೋಘಸಿದ್ದ ಜನಪದ ಮಹಾಕಾವ್ಯ”, ” ಕುರುಬ ಮಹಿಳೆ”, ” ಕುರುಬ ಸಮುದಾಯದ: ವಿದೇಶಿ ವಿದ್ವಾಂಸರ ಅಧ್ಯಯನಗಳು”, ” ಸೀತಾಳ ಬಿಂದಿಗೆ ” ಈ ಕೃತಿಗಳು ಡಾ. ಚನ್ನಪ್ಪ ಕಟ್ಟಿ ಅವರು ಹಾಲುಮತ ಸಂಬಂಧಿ ಕೃತಿಗಳು, ಸಾಹಿತ್ಯ ಸಮ್ಮೇಳನದ, ಸಂಘ ಸಂಸ್ಥೆಗಳ ಸ್ಮರಣಯ ಗ್ರಂಥಗಳನ್ನು ಹಾಗೂ ನಾಡಿನ ಹತ್ತಾರು ಹಿರಿಯ ಲೇಖಕರ ಅಭಿನಂದನಾ ಗ್ರಂಥಗಳಿಗೂ ಕೂಡಾ ಸಂಪಾದಕರಾಗಿ ಅಮೂಲ್ಯವಾದ ಕೃತಿಗಳನ್ನು ಈ ನಾಡಿಗೆ ನೀಡಿರುವುದು ಸ್ಮರಣೀಯವಾಗಿದೆ.

ಸದಾ ಹೊಸತೇನಾದರೂ ನೀಡಬೇಕೆಂಬ ಹಂಬಲ
ಸೃಜನಶೀಲತೆಯನ್ನು ಕಾಪಿಟ್ಟುಕೊಂಡ ಡಾ. ಚನ್ನಪ್ಪ ಕಟ್ಟಿ ಅವರಿಗೆ ಹೊಸತೇನಾದರೂ ನೀಡಬೇಕೆಂಬ ಹಂಬಲ ಯಾವತ್ತೂ ಅವರಲ್ಲಿ ಜಂಗಮತ್ವವನ್ನು ಪಡೆದುಕೊಂಡದೆ ಇದಕ್ಕೆ ಸಾಕ್ಷಿ ಎಂಬಂತೆ ಅವರ ಅನುವಾದ ಕೃತಿಗಳಾದ ” ಸ್ಕಾರ್ಲೆಟ್ ಪ್ಲೇಗ ( ಕಾದಂಬರಿ), ” ಯುದ್ಧ ಕಾಲದ ಹುಡುಗಿಯರು” ( ಕಥಾ ಸಂಕಲನ), ” ಮೃತ್ಯು ಮುಟ್ಟದ ಮುನ್ನ “( ಸಾವ ಧೇನಿಸುವ ಕವಿತೆಗಳು), ” ಕುವರಿಯಾದೊಡೆ ಕುಂದೇನು?” ( ಏಳು ಏಕಾಂಕ ನಾಟಕಗಳು) ಕೃತಿಗಳು ವೈವಿಧ್ಯಮಯ ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡುವಲ್ಲಿ ಸಫಲತೆಯನ್ನು ಸಾಧಿಸಿವೆ.
ನೆಲೆ ಪ್ರಕಾಶನ ಸಂಸ್ಥೆ ಸ್ಥಾಪನೆ
ರಾಜಧಾನಿಯಿಂದ ಐದುನೂರುದ ಮೂವತ್ತು ಹಾಗೂ ಸಾಂಸ್ಕೃತಿಕ ನಗರಿ ಧಾರವಾಡದಿಂದ ಎರಡು ನೂರದಾ ಐವತ್ತು ಕಿಲೋಮೀಟರ್ ದೂರದಲ್ಲಿರುವ ಸಿಂದಗಿ ಪಟ್ಟಣದಲ್ಲಿ ಠಿಕಾಣಿ ಹೂಡಿದ ಚನ್ನಪ್ಪ ಕಟ್ಟಿ ಅವರು ಡಾ. ಎಂ ಎಂ ಪಡಶೆಟ್ಟಿ ಹಾಗೂ ನಾಗೇಶ್ ರಾಂಪೂರ ಅವರೊಂದಿಗೆ ಸೇರಿಕೊಂಡು ಸಿಂದಗಿಯ ಸಾಂಸ್ಕೃತಿಕ ಚಹರೆಯನ್ನು ಬದಲಿಸಿ, ನೆಲೆ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ ಎಪ್ಪತ್ತಕ್ಕೂ ಹೆಚ್ಚು ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸಿ, ಕಿರಿಯ ಲೇಖಕರನ್ನು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿಕೊಡುವಲ್ಲಿ ಸಫಲರಾಗಿದ್ದಾರೆ,
ಬಹುಮುಖ ವ್ಯಕ್ತಿತ್ವ
ಬೋಧನೆ, ಬರವಣಿಗೆ ಮತ್ತು ಆಡಳಿತ ವನ್ನು ತಮ್ಮ ಪ್ರಾಮಾಣಿಕ ನಡೆಯ ಮೂಲಕ ನ್ಯಾಯ ಒದಗಿದ ಕಟ್ಟಿ ಅವರದು ಬಹುಮುಖ ವ್ಯಕ್ತಿತ್ವ , ಯಾವಾಗಲೂ ಗೋಜು ಮತ್ತು ಗದ್ದಲಗಳ ಆಚೆ ನಿಂತು ತಮ್ಮ ನಿತಾಂತ ಸಂಯಮದಿಂದ ಪ್ರತಿಯೊಂದನ್ನು ಅವಲೋಕಿಸಿ ನಿರ್ಣಯಿಸುವ ಇವರ ನಡೆ ನಿಧಾನವಾದರೂ ಪ್ರಧಾನವಾಗಿದೆ.
ನಲವತ್ತಕ್ಕೂ ಹೆಚ್ಚು ಕೃತಿಗಳ ರಚನೆ
ಡಾ. ಚನ್ನಪ್ಪ ಕಟ್ಟಿ ಅವರು ಇದುವರೆಗೂ ಸುಮಾರು ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು ಎಲ್ಲಾ ಕೃತಿಗಳು ಕನ್ನಡ ನಾಡಿಗೆ ವೈವಿಧ್ಯಮಯ ಸಾಂಸ್ಕೃತಿಕ ಲೋಕವನ್ನು ಪರಿಚಯಿಸಿಕೊಟ್ಟಿವೆ, ಡಾ. ಕಟ್ಟಿ ಅವರು ತಮ್ಮ ಕಾವ್ಯ ಭಾಷೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಧ್ವನಿಯೊಂದನ್ನು ತಂದು ಸೇರಿಸಿದ್ದಾರೆ ಎಂದು ವಿಮರ್ಶಕರು ಗುರುತಿಸಿದ್ದಾರೆ.
ಒಟ್ಟಾರೆ ಡಾ. ಚನ್ನಪ್ಪ ಕಟ್ಟಿ ಅವರ ಬದುಕು, ಬರಹ ಮತ್ತು ಆಡಳಿತದ ಹರಿವು ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವನ್ನು ಸಮೃದ್ಧಗೊಳಿಸಿವೆ, ಇವರ ಚಿಂತನೆ ಮತ್ತು ವಿಚಾರಗಳು, ಕಾರ್ಯವೈಖರಿ ಹೊಸ ಬರಹಗಾರರಿಗೆ ಹೊಸ ವಿವೇಕವನ್ನು ತುಂಬುವ ಈ ಸಂದರ್ಭದಲ್ಲಿಯೇ ಅವರಿಗೀಗ ಎಪ್ಪತ್ತು ವರ್ಷ. ಈ ಸಂದರ್ಭದಲ್ಲಿ ಅವರ ಶಿಷ್ಯ ಬಳಗ ಮತ್ತು ಅಭಿಮಾನಿಗಳು ಸೇರಿ ಸಿಂದಗಿಯಲ್ಲಿ ಇದೇ ಮೇ ೦೧ ನೇ ತಾರೀಖಿನಂದು “ನೆಲೆ” ಎನ್ನುವ ಅಭಿನಂದನಾ ಗ್ರಂಥ ಅರ್ಪಿಸುವ ಮೂಲಕ ಅವರ ಎಪ್ಪತ್ತನೇಯ ವರ್ಷದ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಪ್ರಶಸ್ತಿ – ಪುರಸ್ಕಾರ
ಡಾ.ಚನ್ನಪ್ಪ ಕಟ್ಟಿ ಅವರ ಸಾಹಿತ್ಯದ ಈ ಸುದೀರ್ಘ ಪಯಣದ ಹಾದಿಯಲ್ಲಿ ಕಟ್ಟಿ ಅವರನ್ನು – ಜಯತೀರ್ಥ ರಾಜಪುರೋಹಿತ ದತ್ತಿನಿಧಿ ಸಣ್ಣ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ, ಸಂಕ್ರಮಣ ಕಾವ್ಯ ಪ್ರಶಸ್ತಿ, ಎಚ್ ಎಂ ಟಿ ಕಥಾ ಪ್ರಶಸ್ತಿ, ಮಲ್ಲೇಪುರಂ ಜಿ. ವೆಂಕಟೇಶ ಸಾಂಸ್ಕೃತಿಕ ಪ್ರತಿಷ್ಠಾನದ ಬಿ. ಶ್ಯಾಮಸುಂದರ ಪ್ರಶಸ್ತಿ, ರತ್ನಾಕರವರ್ಣಿ – ಮುದ್ದಣ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಬೆಟದೂರು ಅಮರಮ್ಮ ಚೆನ್ನಬಸಪ್ಪ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ಪುಸ್ತಕ ಬಹುಮಾನ, ಡಾ. ಬಸವರಾಜ ಕಟ್ಟಿಮನಿ ಕಥಾ ಪ್ರಶಸ್ತಿ, ಸ್ವಾಭಿಮಾನಿ ಕನ್ನಡ ಬಳಗ ಪುಸ್ತಕ ಬಹುಮಾನ, ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ” ಊರ್ಧರೇತ” ಕಿರು ಚಲನಚಿತ್ರದ ಕಥೆಗೆ ಉತ್ತರ ಕರ್ನಾಟಕ ಇಂಟರ್ ನ್ಯಾಷನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್ 2022 ಟೆಲೆ ಫಿಲ್ಮ್ ಬೆಸ್ಟ್ ಸ್ಟೋರಿ ಅವಾರ್ಡ್ ಗಳು ಹುಡುಕಿಕೊಂಡು ಬಂದಿವೆ.

ಪದವಿ ಗೌರವ
ಡಾ.ಚನ್ನಪ್ಪ ಕಟ್ಟಿ ಅವರು, ಸಿಂದಗಿ ನೆಲೆ ಪ್ರಕಾಶನ ಸಂಸ್ಥೆಯ ಸಂಸ್ಥಾಪಕ ಸದಸ್ಯರಾಗಿ , ವಿಜಯಪುರದ ಕಲಬುರಗಿ ಫೌಂಡೇಶನ್ ದ ಸದಸ್ಯ, ಹಲಸಂಗಿ ಪ್ರತಿಷ್ಠಾನದ ಸದಸ್ಯ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕನ್ನಡ ಭಾಷೆಯನ್ನು ನವೀನವಾಗಿ ಕಟ್ಟುವಲ್ಲಿ ನಿರಂತರತೆಯನ್ನು ಕಾಯ್ದುಕೊಂಡಿರುವರು ಎಲ್ಲಕ್ಕೂ ಮಣಿಮುಕುಟದಂತೆ ಸದ್ಯ ಕರ್ನಾಟಕದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಬೆಂಗಳೂರು ವಲಯದಲ್ಲಿ ಉತ್ತರ ಕರ್ನಾಟಕದ ಸಿಂದಗಿಯ ಸೊಗಡನ್ನು ತಮ್ಮ ಬರಹ ಮಾತು ಮತ್ತು ಆಡಳಿತದ ಮೂಲಕ ಸಾದರ ಪಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.


