ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲ್ಲೂಕಿನ ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿರುವ ಲಾಡ್ಜ್ ಒಂದರ ಮೇಲೆ ಅಥಣಿ ಪೊಲೀಸರು ಅನಿರೀಕ್ಷಿತ ದಾಳಿ ನಡೆಸಿ, ವೇಶ್ಯಾವಾಟಿಕೆ ದಂಧೆಯನ್ನು ಪತ್ತೆಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಾಡ್ಜ್ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ.
ಬಳ್ಳಿಗೇರಿ ಗ್ರಾಮದ ವ್ಯಾಪ್ತಿಯಲ್ಲಿರುವ ಪ್ರಶಾಂತ ಹೋಟೆಲ್ ಮತ್ತು ಲಾಡ್ಜ್’ ನಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ದಿನಾಂಕ 24-04-2026ರಂದು ಅಥಣಿ ಪೊಲೀಸ್ ವೃತ್ತ ನಿರೀಕ್ಷಕರಾದ ಸಂತೋಷ್ ಡಿ. ಹಳ್ಳೂರ ಅವರ ನೇತೃತ್ವದ ತಂಡವು ಪಂಚರೊಂದಿಗೆ ಲಾಡ್ಜ್ ಮೇಲೆ ದಾಳಿ ನಡೆಸಿತು.
ದಾಳಿಯ ವೇಳೆ ಒಬ್ಬ ಮಹಿಳೆಯನ್ನು ಈ ಜಾಲದಿಂದ ರಕ್ಷಿಸಲಾಗಿದ್ದು, ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳು: ಸರದಾರ ಭಗವಂತ ಕಾಂಬಳೆ (ಲಾಡ್ಜ್ ಮಾಲೀಕ, ಸಾ|| ಬಳ್ಳಿಗೇರಿ), ಪ್ರವೀಣ ಬಸವರಾಜ ಮಲ್ದಾರಿ (ಸಾ|| ಚಡಚಣ, ಹಾಲಿ ವಾಸ ಅಥಣಿ)
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಥಣಿ ವೃತ್ತ ನಿರೀಕ್ಷಕ ಸಂತೋಷ್ ಹಳ್ಳೂರ ಅವರೊಂದಿಗೆ ಪ್ರೊಬೇಷನರಿ ಪಿಎಸ್ಐ ಆರತಿ ತೇಲಿ, ಸಿಬ್ಬಂದಿಗಳಾದ ಬಿ.ಆರ್. ಪಾಟೀಲ, ಬಿ.ವೈ. ಮನ್ನಾಪೂರ, ಎಸ್.ಬಿ. ಖೋತ ಹಾಗೂ ಅಂಗನವಾಡಿ ಶಿಕ್ಷಕಿ ಮೀನಾಕ್ಷಿ ಹನಮಂತ ಮುಡಸಿ ಭಾಗವಹಿಸಿದ್ದರು.
ಈ ಕುರಿತು ಅಥಣಿ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಅಥಣಿ ಠಾಣೆಯಲ್ಲಿ ಗುನ್ನಾ ನಂಬರ್ 323/2026 ರಂತೆ ಅಕ್ರಮ ಮಾನವ ಸಾಗಾಣಿಕೆ ತಡೆ ಕಾಯ್ದೆ (ITP Act 1956) ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದ್ದು, ತನಿಖೆ ಮುಂದುವರಿದಿದೆ.

