ವಿಜಯಪುರದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ | ಸಾಧಕರಿಗೆ ಸನ್ಮಾನ | ಜಿಪಂ ಸಿಇಓ ರಿಷಿ ಆನಂದ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತದಲ್ಲಿ ಸ್ಥಳೀಯ ಸ್ವರಾಜ್ಯ ವ್ಯವಸ್ಥೆಗೆ ಸಂವಿಧಾನಾತ್ಮಕ ಬಲ ನೀಡಿದ 73ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಸ್ಮರಣಾರ್ಥವಾಗಿ ಆಚರಿಸಲ್ಪಡುವ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ವಿಜಯಪುರ ಜಿಲ್ಲಾ ಪಂಚಾಯತಿ ವತಿಯಿಂದ ಶುಕ್ರವಾರ ಭವ್ಯವಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗ್ರಾಮೀಣ ಅಭಿವೃದ್ಧಿಯ ಹೃದಯವಾಗಿರುವ ಪಂಚಾಯತ್ ರಾಜ್ ಸಂಸ್ಥೆಗಳ ಸಾಧನೆಗಳನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಆಡಳಿತ ನೀಡುವ ದಿಸೆಯಲ್ಲಿ ಸಂಕಲ್ಪ ಕೈಗೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್ ಅವರು, “ಪಂಚಾಯತ್ ರಾಜ್ ವ್ಯವಸ್ಥೆಯು ಪ್ರಜಾಪ್ರಭುತ್ವದ ಮೂಲ ಆಧಾರವಾಗಿದ್ದು, ಗ್ರಾಮೀಣ ಜನರ ಸಬಲೀಕರಣಕ್ಕೆ ಪ್ರಮುಖ ವೇದಿಕೆಯಾಗಿದೆ. 73ನೇ ಸಂವಿಧಾನ ತಿದ್ದುಪಡಿ ಮೂಲಕ ಪಂಚಾಯತಿಗಳಿಗೆ ದೊರೆತಿರುವ ಸಂವಿಧಾನಾತ್ಮಕ ಸ್ಥಾನಮಾನವು ಗ್ರಾಮೀಣ ಆಡಳಿತವನ್ನು ಶಕ್ತಿಶಾಲಿಯಾಗಿ ರೂಪಿಸಿದೆ. ಜನಪಾಲ್ಗೊಳ್ಳಿಕೆ, ಪಾರದರ್ಶಕತೆ ಮತ್ತು ಜವಾಬ್ದಾರಿತನವನ್ನು ಹೆಚ್ಚಿಸುವ ಮೂಲಕ ನಾವು ಸಮಗ್ರ ಅಭಿವೃದ್ಧಿಯನ್ನು ಸಾಧಿಸಬಹುದು”. ಭಾರತವು ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ ದೇಶವಾಗಿದೆ ಭಾರತದಲ್ಲಿ ಶೇ.70 ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ದೇಶದ ಅಭಿವೃದ್ಧಿ ಆಗಬೇಕೆಂದರೆ ಗ್ರಾಮಗಳು ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಪಾರದರ್ಶಕತೆಯಿಂದ ಶ್ರಮವಹಿಸಿದಲ್ಲಿ ಗ್ರಾಮಗಳ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಪ್ರಕಾಶ ವಡ್ಡರರವರು, ಇಂದು ನಾವು ಆಚರಿಸುತ್ತಿರುವ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ನಮ್ಮ ದೇಶದ ಪ್ರಜಾಪ್ರಭುತ್ವದ ಆತ್ಮವನ್ನು ಪ್ರತಿಬಿಂಬಿಸುವ ಮಹತ್ವದ ದಿನವಾಗಿದೆ. ಗ್ರಾಮ ಮಟ್ಟದಲ್ಲಿ ಜನರಿಗೆ ಆಡಳಿತದ ಅಧಿಕಾರ ನೀಡುವ ಮಹತ್ವದ ವ್ಯವಸ್ಥೆಯೇ ಪಂಚಾಯತ್ ರಾಜ್ ವ್ಯವಸ್ಥೆ. ಈ ವ್ಯವಸ್ಥೆಯ ಇತಿಹಾಸವು ನಮ್ಮ ದೇಶದ ಪ್ರಜಾಪ್ರಭುತ್ವದ ಬೆಳವಣಿಗೆಯ ಕಥೆಯನ್ನು ಹೇಳುತ್ತದೆ ಎಂದರು.
ಉಪನ್ಯಾಸಕಾರಾಗಿ ಆಗಮಿಸಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಓಂಕಾರಗೌಡ ಕಾಕಡೆಯವರು ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆಯ ಇತಿಹಾಸವು ಕೇವಲ ಆಡಳಿತದ ಬೆಳವಣಿಗೆಯ ಕಥೆಯಲ್ಲ, ಅದು ನಮ್ಮ ಪ್ರಜಾಪ್ರಭುತ್ವದ ಬಲದ ಸಂಕೇತವಾಗಿದೆ. ಪ್ರಾಚೀನ ಕಾಲದಿಂದ ಆರಂಭಗೊಂಡು ಬ್ರಿಟಿಷರ ಕಾಲದಲ್ಲಿ ಬದಲಾವಣೆ ಕಂಡು, ಸ್ವಾತಂತ್ರ್ಯ ನಂತರ ಸಮಿತಿಗಳ ಶಿಫಾರಸುಗಳ ಮೂಲಕ ಅಭಿವೃದ್ಧಿ ಹೊಂದಿ, ಕೊನೆಗೆ ಸಂವಿಧಾನಾತ್ಮಕ ಮಾನ್ಯತೆ ಪಡೆದಿರುವ ಈ ವ್ಯವಸ್ಥೆ ಇಂದು ಗ್ರಾಮೀಣ ಭಾರತದ ಅಭಿವೃದ್ಧಿಗೆ ಮೂಲಸ್ತಂಭವಾಗಿದೆ.
ಆದ್ದರಿಂದ ನಾವು ಎಲ್ಲರೂ ಪಂಚಾಯತ್ ವ್ಯವಸ್ಥೆಯನ್ನು ಗೌರವಿಸಿ, ಗ್ರಾಮ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಮ್ಮ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವ ಸಂಕಲ್ಪ ಮಾಡಬೇಕು. ಇದೇ ಈ ದಿನದ ನಿಜವಾದ ಸಂದೇಶವಾಗಿದೆ ಎಂದರು.
ಇನ್ನೋರ್ವ ಉಪನ್ಯಾಸಕ ಪ್ರಕಾಶ ಭಟ್ ರವರು ಮಾತನಾಡಿ, ಇಂದು ನಾವು ಆಚರಿಸುತ್ತಿರುವ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಕೇವಲ ಒಂದು ಆಚರಣೆ ಮಾತ್ರವಲ್ಲ, ಇದು ನಮ್ಮ ಜವಾಬ್ದಾರಿಗಳನ್ನು ನೆನಪಿಸುವ ಮತ್ತು ಗ್ರಾಮಾಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನವಾಗಿದೆ ಎಂದರು.
ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ನೌಕರರಿಗೆ ಪ್ರಶಸ್ತಿ ವಿತರಣೆ ಮಾಡುವ ಮೂಲಕ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಸಿ. ಬಿ. ಕುಂಬಾರ, ಯೋಜನಾ ನಿರ್ದೇಶಕರಾದ ಅಶೋಕ ಕಲಘಟಗಿ, ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ, ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ವಿದ್ಯಾಧರ ನ್ಯಾಮಗೊಂಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಸಂಜಯ ಕೋಟೆನ್ನವರ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಆನಂದ ಸ್ವಾಮಿ, ಸಿಂದಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮು ಅಗ್ನಿ, ತಾಳಿಕೋಟಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನುಸೂಯಾ ಚಲವಾದಿ, ದೇವರ ಹಿಪ್ಪರಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಾರತಿ ಚೆಲುವಯ್ಯ, ಬಬಲೇಶ್ವರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜೆ. ಎಸ್. ಪಠಾಣ, ಮುದ್ದೇಬಿಹಾಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಗನಗೌಡ ಬಿರಾದಾರ, ತಿಕೋಟಾ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವಂತ್ರಾಯಗೌಡ ಬಿರಾದಾರ, ನಿಡಗುಂದಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೆಂಕಟೇಶ ವಂದಾಲ, ಕೊಲ್ಹಾರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನಿಲ ಮದ್ದಿನ, ಇಂಡಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭೀಮಾಶಂಕರ ಕನ್ನೂರ, ಚಡಚಣ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಶೋಕ ಕುಮಾರ ರಾಠೋಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರಾದ ಎಸ್. ಆರ್. ಕಟ್ಟಿ, ಗ್ರಾ.ಪಂ. ಕಾರ್ಯದರ್ಶಿಗಳ ಸಂಘದ ಅಧಕ್ಷರಾದ ನಡಗೇರಿ, ದ್ವತೀಯ ದರ್ಜೆ ಲೆಕ್ಕ ಸಹಾಯಕರ ಸಂಘದ ಅಧಕ್ಷರಾದ ಬಳಬಟ್ಟಿ, ಬಿಲ್ ಕಲೆಕ್ಟರ್ ಸಂಘದ ಅಧಕ್ಷರಾದ ನಾರಾಯಣ ಬಡಿಗೇರ, ಡಿ ಗ್ರೂಪ್ ನೌಕರರ ಸಂಘದ ಅಧಕ್ಷರಾದ ಜಗಳೂರ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

