ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಪ್ರಸಕ್ತ ೨೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ-೧ರಲ್ಲಿ ಸ್ಥಳೀಯ ಎಸ್.ವಿ.ವಿ. ಸಂಸ್ಥೆಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಂಎಚ್ಎಂ ಪ್ರೌಢಶಾಲಾ ವಿಭಾಗ ಶೇ.೯೭.೫೯ ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ.
ಪರೀಕ್ಷೆಗೆ ಹಾಜರಾಗಿದ್ದ ೮೩ ವಿದ್ಯಾರ್ಥಿಗಳಲ್ಲಿ ೮೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುತ್ತಮ ಶ್ರೇಣಿಯಲ್ಲಿ ೭, ಪ್ರಥಮ ಶ್ರೇಣಿಯಲ್ಲಿ ೪೬, ದ್ವಿತೀಯ ಶ್ರೇಣಿಯಲ್ಲಿ ೧೭ ಹಾಗೂ ತೃತೀಯ ಶ್ರೇಣಿಯಲ್ಲಿ ೧೧ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶಾಲೆ, ಸಂಸ್ಥೆ ಹಾಗೂ ಆಲಮಟ್ಟಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.೯೬.೮೦ ಅಂಕ ಗಳಿಸಿ ಕುಮಾರಿ ಸಂಜನಾ ದಳವಾಯಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರಿ ತನುಶ್ರೀ ಧನವೆ ಶೇ.೯೩.೧೨ ಅಂಕಗಳೊಂದಿಗೆ ದ್ವಿತೀಯ, ಕುಮಾರಿ ಸುಂದರಮ್ಮ ಬಡಿಗೇರ ಶೇ.೯೨.೮೦ ಅಂಕಗಳೊಂದಿಗೆ ತೃತೀಯ ಹಾಗೂ ಕುಮಾರಿ ರತ್ನಾ ಜಲ್ಲಿ ಶೇ.೯೦.೪೦ ಅಂಕಗಳೊಂದಿಗೆ ಚತುರ್ಥ ಸ್ಥಾನ ಪಡೆದಿದ್ದಾರೆ. ಶಾಲೆಯ ಟಾಪರ್ಗಳೆಲ್ಲ ಬಾಲಕಿಯರೇ ಎಂಬುದು ವಿಶೇಷ.
ಹಿಂದಿ ವಿಷಯದಲ್ಲಿ ತನುಶ್ರೀ ಧನವೆ ಹಾಗೂ ಗೋಪಾಲ ಮನಗೂಳಿ ೧೦೦ಕ್ಕೆ ೧೦೦ ಅಂಕ ಪಡೆದು ಗಮನ ಸೆಳೆದಿದ್ದಾರೆ. ಕರುನಾಡು ಗಾಂಧಿ ಹರ್ಡೇಕರ ಮಂಜಪ್ಪ ಅವರ ಹೆಸರಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಹಿನ್ನೆಲೆಯ ಈ ಶಾಲೆಯ ಫಲಿತಾಂಶ ಜಿಲ್ಲೆಯಲ್ಲಿಯೇ ಅತ್ಯುತ್ತಮವಾಗಿದೆ.
ಮುಖ್ಯ ಶಿಕ್ಷಕ ಎಸ್.ಐ. ಗಿಡ್ಡಪ್ಪಗೋಳ ಮಾತನಾಡಿ, “ಲಿಂ. ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಕನಸನ್ನು ಸಂಸ್ಥೆಯ ಕಾರ್ಯದರ್ಶಿ ಪ್ರೊ. ಶಿವಾನಂದ ಪಟ್ಟಣಶೆಟ್ಟರ ಅವರು ನನಸು ಮಾಡಿದ್ದಾರೆ. ಹೈಟೆಕ್ ಮಾದರಿಯಲ್ಲಿ ಸುಸಜ್ಜಿತ ಕಟ್ಟಡ, ೫೦ ಎಕರೆಗೂ ಹೆಚ್ಚು ವಿಸ್ತೀರ್ಣದ ಕಾಂಪೌಂಡ್ ನಿರ್ಮಿಸಿ ಗ್ರಾಮೀಣ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದಾರೆ. ಈಗಿನ ಪೀಠಾಧ್ಯಕ್ಷ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ಸಹ ಲಿಂ. ಶ್ರೀಗಳ ಕನಸುಗಳನ್ನು ಮುಂದುವರಿಸುತ್ತಿದ್ದಾರೆ” ಎಂದರು.
ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಬಳಗಕ್ಕೆ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು, ಕಾರ್ಯದರ್ಶಿ ಪ್ರೊ. ಶಿವಾನಂದ ಪಟ್ಟಣಶೆಟ್ಟರ, ಮುಖ್ಯೋಪಾಧ್ಯಾಯ ಎಸ್.ಐ. ಗಿಡ್ಡಪ್ಪಗೋಳ, ಸಿಬ್ಬಂದಿ, ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

