ವಿಜಯಪುರದಲ್ಲಿ ನಡೆದ ಡಾ.ರಾಜ್ ಕುಮಾರ ಜನ್ಮದಿನೋತ್ಸವ ಹಾಗೂ ಅವರ ಗೀತೆಗಳ ಗಾಯನ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಟನೆಯ ಮೂಲಕ ಜೀವನ ಮೌಲ್ಯಗಳನ್ನು ಬೋಧಿಸಿದ ವರನಟ ಡಾ.ರಾಜಕುಮಾರ್ ಕನ್ನಡದ ಶ್ರೇಷ್ಠ ರತ್ನ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಹೇಳಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಡಾ.ರಾಜ್ ಕುಮಾರ ಜನ್ಮದಿನೋತ್ಸವ ಹಾಗೂ ಅವರ ಗೀತೆಗಳ ಗಾಯನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ.ರಾಜಕುಮಾರ್ ಅವರು ತಮ್ಮ ಚಿತ್ರದ ಮೂಲಕ ಸಾಮಾಜಿಕ ಜಾಗೃತಿ ಸಂದೇಶ ಸಾರಿದರು, ಡಾ.ರಾಜಕುಮಾರ್ ಅವರ ಸರಳತೆ, ಶ್ರೇಷ್ಠತೆ ಎಲ್ಲರಿಗೂ ಸ್ಪೂರ್ತಿ ಎಂದರು.
ಉಪನ್ಯಾಸ ಮಂಡಿಸಿದ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಹಳ್ಳಿ ಮಾತನಾಡಿ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸುವ ಅವಕಾಶ ಬಂದು ಬಹುಭಾಷಾ ನಟರಾಗಿ ಮಿಂಚುವ ಅವಕಾಶ ಬಂದರೂ ಸಹ ಅದನ್ನು ನಿರಾಕರಿಸಿ ಕನ್ನಡ ಚಿತ್ರಗಳಲ್ಲಿ ಮಾತ್ರ ನಟಿಸುವೆ ಎಂಬ ಅವರ ನಿಲುವೇ ಅವರ ಕನ್ನಡಾಭಿಮಾನಕ್ಕೆ ದಿವ್ಯ ನಿದರ್ಶನ ಎಂದರು.
ಗೋಕಾಕ್ ಚಳವಳಿಗೆ ಒಂದು ಹೊಸ ಚೈತನ್ಯ ತುಂಬಿ ಅದರ ಯಶಸ್ವಿ ಹೋರಾಟದಲ್ಲಿಯೂ ಡಾ.ರಾಜ್ ಅವರ ಪಾತ್ರ ಅನನ್ಯ ಎಂದರು.
ಉಪನ್ಯಾಸ ಮಂಡಿಸಿದ ಪತ್ರಕರ್ತ ಪರಶುರಾಮ ಭಾಸಗಿ ಮಾತನಾಡಿ, ಡಾ.ರಾಜಕುಮಾರ್ ಅವರದ್ದು ಹೋಲಿಕೆಗೆ ನಿಲುಕದ ವ್ಯಕ್ತಿ, ಅವರಿಗೆ ಅವರೇ ಸಾಟಿ, ನಾವು ಒಳ್ಳೆಯವರನ್ನು ರಾಜಕುಮಾರ್ ಅವರಿಗೆ ಹೋಲಿಸುತ್ತೇವೆ, ಓರ್ವ ತಾಯಿ ತನ್ನ ಮಗನನ್ನು ನನ್ನ ಮಗ ರಾಜಕುಮಾರ್ ಇದ್ದಂತೆ ಇದ್ದಾನೆ ಎಂದು ಅಭಿಮಾನದಿಂದ ಹೇಳುವುದುಂಟು, ಅಭಿಮಾನಕ್ಕೆ ಹೋಲಿಕೆ ಡಾ.ರಾಜ್ ಆಗಿದ್ದಾರೆ ಹೊರತು ಅವರಿಗೆ ಹೋಲಿಕೆ ಪದಗಳಿಲ್ಲ, ಅವರದ್ದು ವರ್ಣನಾತೀತ ವ್ಯಕ್ತಿತ್ವ, ಅವರ ಬಣ್ಣಿಸಲು ಉಪಮೇಯಗಳೇ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಭೀಮರಾವ ಜಿಗಜಿಣಗಿ, ಸೋಮು ಕಲ್ಲೂರ, ಫಯಾಜ್ ಕಲಾದಗಿ, ಸುರೇಶ ಬಿಜಾಪೂರ, ಶರಣು ಸಬರದ ಮೊದಲಾದವರು ಉಪಸ್ಥಿತರಿದ್ದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸ್ವಾಗತಿಸಿದರು. ವಿರೇಶ ವಾಲಿ ಪ್ರಾರ್ಥಿಸಿದರು. ವಿರೇಶ ವಾಲಿ ಹಾಗೂ ಮಂಜುಳಾ ಹಿಪ್ಪರಗಿ ನಾಡಗೀತೆ ಪ್ರಸ್ತುತ ಪಡಿಸಿದರು. ಸಂಗೀತಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು.

ಜನಮನಸೂರೆಗೊಂಡ ಕಲಾವಿದರ ಪ್ರದರ್ಶನ
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು ೭೦ಕ್ಕೂ ಹೆಚ್ಚು ಜನ ಕಲಾವಿದರು ಡಾ.ರಾಜ್ ಕುಮಾರ ಹಾಡು ಹಾಗೂ ಸಂಭಾಷಣೆಗಳನ್ನು ಹೇಳುವ ಮೂಲಕ ಜನಮನಸೂರೆಗೊಂಡರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಪ್ರಮಾಣ ಪತ್ರ ನೀಡಲಾಯಿತು.
ಬೆಳಿಗ್ಗೆ ೯ ಗಂಟೆಯಿಂದ ಆರಂಭವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಕಲಾವಿದರಿಂದ ಸ್ಪಂದನೆ ಅದ್ಭುತವಾಗಿತ್ತು..

“ಡಾ.ರಾಜಕುಮಾರ ಕನ್ನಡ ಚಿತ್ರರಂಗದ ಧೃವತಾರೆ. ಎಂತಹ ಪಾತ್ರಗಳನ್ನಾದರೂ ಲೀಲಾಜಾಲವಾಗಿ ಅಭಿನಯಿಸುವ ಮೇರುನಟರಾಗಿದ್ದರು. ಅವರ ಕನ್ನಡಾಭಿಮಾನ, ಸರಳ ಸಜ್ಜನ ವ್ಯಕ್ತಿತ್ವ ನಮಗೆಲ್ಲ ಮಾದರಿಯಾಗಬೇಕು.”
– ಅಮರೇಶ ದೊಡಮನಿ
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರು

