ಮಹಿಳಾ ವಿವಿಯಲ್ಲಿ ಬಸವ ಅಧ್ಯಯನ ಪೀಠ ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಯಾಗಬೇಕು | ಶುಭ್ರ ವಸ್ತ್ರಧಾರಿಣಿ ಅಕ್ಕಮಹಾದೇವಿ ಪುತ್ಹಳಿ ನಿಲ್ಲಿಸಬೇಕು | ಬಸವ ತಿಳಿವಳಿಕೆ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ & ಪದಾಧಿಕಾರಿಗಳಿಂದ ಜಿಲ್ಲಾಧಿಕಾರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಲಿಂಗಾಯತ ಧರ್ಮಕ್ಕೆ ಮಾನ್ಯತೆ ಹಾಗೂ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ನೇತೃತ್ವದಲ್ಲಿ ಪದಾಧಿಕಾರಿಗಳು, ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಮೂರ್ತಿ ನಾಗಮೋಹನದಾಸ ವರದಿಯಾಧಾರಿತ ತಮ್ಮ ಹಿಂದಿನ ಸರಕಾರದ ಶಿಫಾರಸನ್ನು ಸದೃಡಗೊಳಿಸಿ ಲಿಂಗಾಯತ ಧರ್ಮೀಯರನ್ನು ಅಲ್ಪಸಂಖ್ಯಾತ ಎಂದು ಪರಿಗಣಿಸಲು ಮತ್ತೆ ಕೇಂದ್ರ ಸರ್ಕಾರಕ್ಕೆ ಮರು ಮೇಲ್ಮನವಿ ಸಲ್ಲಿಸಿ ಬಸವಣ್ಣನವರಿಗೆ, ಲಿಂಗಾಯತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ನಗರದಲ್ಲಿರುವ ನಾಡಿನ ಏಕಮೇವ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠವನ್ನು ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸಿ ಹೆಚ್ಚಿನ ಆರ್ಥಿಕ ಅನುದಾನವನ್ನು ನೀಡಿ ಶರಣ ಸಾಹಿತ್ಯದ ಸಂಶೋಧನೆ, ಪರಿಷ್ಕರಣೆ ಪ್ರಕಟಣೆಗೆ ತ್ವರಿತವಾಗಿ ಕಾರ್ಯ ರೂಪಿಸಬೇಕು. ಅಲ್ಲದೆ, ದಿಟ್ಟ ಶರಣೆ ಅಕ್ಕಮಹಾದೇವಿ ಶರಣ ಸಂಕುಲದ ಶ್ರೇಷ್ಠ ಅನುಭಾವಿಯಾಗಿದ್ದು, ಅವಳು ಅರೆಬೆತ್ತಲೆಯಾಗಿ ಬಂದಿಲ್ಲ ಎನ್ನುವುದಕ್ಕೆ ಹಲವು ಉಲ್ಲೇಖ, ಪುರಾವೆಗಳಿದ್ದು ಅಕ್ಕಮಹಾದೇವಿಯನ್ನು ಹೀಗೆ ಅರೆಬೆತ್ತಲೆಯಾಗಿ ಚಿತ್ರಿಸಿ ಹೆಣ್ಣು ಕುಲಕ್ಕೆ, ನಾಗರಿಕ ಸಮಾಜವು ತಲೆತಗ್ಗಿಸುವಂತೆ ಆಗಿದೆ. ಕಾರಣ ಅಕ್ಕಮಹಾದೇವಿ ವಿವಿಯಲ್ಲಿರುವ ಅರೆಬೆತ್ತಲೆ ಪುತ್ಹಳಿ ತೆರವುಗೊಳಿಸಿ ಆ ಸ್ಥಳದಲ್ಲಿ ಶುಭ್ರ ವಸ್ತ್ರಧಾರಿಣಿ ಅಕ್ಕಮಹಾದೇವಿ ಪುತ್ಹಳಿ ನಿಲ್ಲಿಸಬೇಕು ಎಂದು ಡಾ.ಪಟ್ಟಣ ಒತ್ತಾಯಿಸಿದರು.
ಈ ವಿಷಯವಾಗಿ ಈ ಹಿಂದೆ ಹೋರಾಟ ನಡೆಸಿ, ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ
ಡಾ.ಸರಸ್ವತಿ ಪಾಟೀಲ, ರೇಣುಕಾ ಪಾಟೀಲ, ಆರ್.ಎಸ್. ಬಿರಾದಾರ, ರತ್ನಕ್ಕ ಬಿರಾದಾರ, ಸಿದ್ಪಪ್ಪ ಪಡನಾಡ, ಉದ್ಯಮಿ ಗಂಗಾಧರ ಸಾಲಕ್ಕಿ, ಶರಣು ಸಬರದ, ಆರ್.ಎಸ್.ಪಾಟೀಲ, ಮಲ್ಲಿಕಾರ್ಜುನ ಮುರಗೋಡ, ಸಂಖ ಸರ್, ಶೈಲಾ ಇಂದುಶೇಖರ ಮಣೂರ, ಡಾ.ಶಾರದಾಮಣಿ ಹುಣಶ್ಯಾಳ, ರೇಖಾ ಬಿರಾದಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

