ವಿಜಯಪುರ ನಗರದಲ್ಲಿ ಹಲವಾರು ಕಳ್ಳತನ ಪ್ರಕರಣಗಳ ಭೇದನೆ | ವಿಜಯಪುರ ಜಿಲ್ಲಾ ಪೋಲಿಸ್ ಅಧಿಕ್ಷಕ ಲಕ್ಷ್ಮಣ ನಿಂಬರಗಿ ವಿವರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ ನಗರದ ಉಪ-ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ವಿಜಯಪುರ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ ಎಂದು ವಿಜಯಪುರ ಜಿಲ್ಲೆಯ ಪೋಲಿಸ್ ಅಧಿಕ್ಷಕರಾದ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಶುಕ್ರವಾರ ಪೋಲಿಸ್ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗೌಡ ಹಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಡಿಎಸ್ಪಿ ನಾಗರಾಜ್ ಜಿ ಅವರ ಮಾರ್ಗದರ್ಶನದಲ್ಲಿ.
ಗೋಲಗುಂಬಜ್ ವೃತ್ತದ ಸಿಪಿಐ ಎಸ್.ಎಸ್. ಬಳಿಗಾರ ಹಾಗೂ ಗಾಂಧಿಚೌಕ ಠಾಣೆಯ ಪಿಐ ಪ್ರದೀಪ ತಳಕೇರಿ ಅವರ ನೇತೃತ್ವದಲ್ಲಿ ಗಾಂಧಿಚೌಕ, ಗೋಲಗುಂಬಜ್, ಎಪಿಎಮ್ಸಿ, ಆದರ್ಶನಗರ ಮತ್ತು ಜಲನಗರ ಠಾಣೆಗಳ ಪಿಎಸ್ಐ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ತಂಡಗಳು ತ್ವರಿತ ಕಾರ್ಯಾಚರಣೆ ನಡೆಸಿ ಹಲವಾರು ಆರೋಪಿಗಳನ್ನು ಬಂಧಿಸಿ, ಕಳ್ಳತನವಾದ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದರು.
ಗಾಂಧಿಚೌಕ ಠಾಣೆ:
2026ರಲ್ಲಿ ದಾಖಲಾಗಿದ್ದ 7 ಪ್ರಕರಣಗಳಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿತರಿಂದ 70 ಗ್ರಾಂ ಬಂಗಾರದ ಆಭರಣಗಳು (₹10.50 ಲಕ್ಷ), 18 ದ್ವಿಚಕ್ರ ವಾಹನಗಳು (₹15.42 ಲಕ್ಷ), ₹1.10 ಲಕ್ಷ ನಗದು, ಲ್ಯಾಪ್ಟಾಪ್ ಮತ್ತು ಮೊಬೈಲ್ ಸೇರಿ ಒಟ್ಟು ₹27.25 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿದೆ.
ಗೋಲಗುಂಬಜ್ ಠಾಣೆ:
2025ರ 6 ಪ್ರಕರಣಗಳಲ್ಲಿ 6 ಆರೋಪಿಗಳು ಮತ್ತು 2026ರ 1 ಪ್ರಕರಣದಲ್ಲಿ 2 ಆರೋಪಿಗಳನ್ನು ಬಂಧಿಸಲಾಗಿದೆ. 100 ಗ್ರಾಂ 60 ಗುಂಜಿ ಬಂಗಾರ (₹15 ಲಕ್ಷ), ಬೆಳ್ಳಿ ಕೈಖಡಗ, ಇನ್ನೋವಾ ಕ್ರೀಸ್ಟಾ ಕಾರು ಸೇರಿ ₹33.02 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿದೆ..
ಎ.ಪಿ.ಎಮ್ ಸಿ.ಠಾಣೆ:
2026ರ 2 ಪ್ರಕರಣಗಳಲ್ಲಿ 3 ಆರೋಪಿಗಳನ್ನು ಬಂಧಿಸಿ, 90 ಗ್ರಾಂ ಬಂಗಾರ (₹14.40 ಲಕ್ಷ) ಮತ್ತು ಟೆರೆನೋ ಪ್ಲಸ್ ಕಾರು (₹4.80 ಲಕ್ಷ) ಸೇರಿ ₹19.20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿದೆ.
ಆದರ್ಶನಗರ ಠಾಣೆ:
2025ರ 10 ಪ್ರಕರಣಗಳಲ್ಲಿ 21 ಆರೋಪಿಗಳನ್ನು ಬಂಧಿಸಿ, 410 ಗ್ರಾಂ ಬಂಗಾರ (₹61.50 ಲಕ್ಷ), ದ್ವಿಚಕ್ರ ವಾಹನಗಳು, ಹುಂಡೈ ಕಾರು ಹಾಗೂ ಇತರೆ ವಸ್ತುಗಳು ಸೇರಿ ಒಟ್ಟು ₹74.55 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿದೆ.
ಜಲನಗರ ಠಾಣೆ:
2025ರ 1 ಪ್ರಕರಣದಲ್ಲಿ 1 ಆರೋಪಿಯನ್ನೂ, 2026ರ 3 ಪ್ರಕರಣಗಳಲ್ಲಿ 4 ಆರೋಪಿಗಳನ್ನು ಬಂಧಿಸಲಾಗಿದೆ. 10 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿ ಹಾಗೂ 7 ದ್ವಿಚಕ್ರ ವಾಹನಗಳು ಸೇರಿ ₹6.30 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿದೆ.
ಒಟ್ಟಾರೆ, 2025ರ 17 ಪ್ರಕರಣಗಳಲ್ಲಿ 28 ಆರೋಪಿಗಳು ಹಾಗೂ 2026ರ 13 ಪ್ರಕರಣಗಳಲ್ಲಿ 15 ಆರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟು ₹1,60,32,000 ಮೌಲ್ಯದ ಬಂಗಾರ, ಬೆಳ್ಳಿ, ನಗದು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸೇವೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

