ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಸೌಜನ್ಯ ಬಸವರಾಜ ಕಂದಕೂರ ಅವಳ ಸಾಧನೆ ಎಲ್ಲ ಮಕ್ಕಳಿಗೂ ಪ್ರೇರಣೆಯಾಗಲಿ, ಶ್ರೇಷ್ಠ ವೈದ್ಯಳಾಗಬೇಕೆನ್ನುವ ಅವಳ ಕನಸಿನ ಜೊತೆಗೆ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದು, ಐಏಎಸ್ ಅಧಿಕಾರಿಯಾಗಬೇಕೆನ್ನುವ ಅವಳ ಕನಸು ನನಸಾಗಲೆಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹಾರೈಸಿದರು.
ಶುಕ್ರವಾರ ತಮ್ಮ ನಿವಾಸಕ್ಕೆ ಆಗಮಿಸಿದ್ದ ಸಾಧಕ ವಿದ್ಯಾರ್ಥಿನಿಯನ್ನು ಹಾಗೂ ಪಾಲಕರನ್ನು ಸನ್ಮಾನಿಸಿ ಅವರು ಶುಭ ಹಾರೈಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಮ್ ಬಿ ಪಾಟೀಲರ ಮಾರ್ಗದರ್ಶನದಲ್ಲಿ, ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮತ್ತು ಅವರ ತಂಡ ಹಾಗೂ ಜಿಲ್ಲೆಯ ಎಲ್ಲ ಶಿಕ್ಷಕ ಬಂಧುಗಳ ಸಹಕಾರದಿಂದ ಫಲಿತಾಂಶದಲ್ಲಿ ಸುಧಾರಣೆ ಕಂಡಿರುವುದು ಸಂತೋಷದ ಸಂಗತಿಯಾಗಿದೆಯಾದರೂ ಬರುವ ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿಜಯಪುರ ಜಿಲ್ಲೆಯ ಫಲಿತಾಂಶ ರಾಜ್ಯಕ್ಕೆ ಮೊದಲ ಜಿಲ್ಲೆಯಾಗಿ ನಿಲ್ಲುವಂತೆ ಎಲ್ಲರೂ ಸಾಂಘಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು. ರಾಜ್ಯದ ಸಾಧಕ ಮಕ್ಕಳೆಲ್ಲರನ್ನು ನಾನು ಅಭಿನಂದಿಸುತ್ತೇನೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಸಾಧನೆ ಮಾಡಿದ ಸಾಧಕ ಮಕ್ಕಳಿಗೆ ಕರ್ನಾಟಕ ಘನ ಸರ್ಕಾರ ಆಕರ್ಷಕ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ಸಚಿವರಿಗೆ ಮಾನ್ಯ ಮುಖ್ಯಮಂತ್ರಿಗಳಿಗೆ ವಿನಂತಿಸಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯ ತಂದೆ ಆದರ್ಶ ಶಿಕ್ಷಕ ದಂಪತಿಗಳಾದ ಬಸವರಾಜ ಕಂದಕೂರ ಹಾಗೂ ಗಿರಿಜಾ ಕಂದುಕುರ್ ಅವರನ್ನು ಸಹ ಸನ್ಮಾನಿಸಿ ಅಭಿನಂದಿಸಿದರು.

