ಪುಣೆಯ ಬಸವ ತಿಳುವಳಿಕೆ & ಸಂಶೋಧನೆ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ & ಪದಾಧಿಕಾರಿಗಳಿಂದ ಒಕ್ಕೊರಲಿನ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಕ್ಕ ಮಹಾದೇವಿಯ ಅರೆಬೆತ್ತಲೆ ಪ್ರತಿಮೆ ಸ್ಥಾಪನೆ ಮಾಡಿರುವುದು ಸ್ತ್ರೀ ಕುಲಕ್ಕೆ ಅಗೌರವ, ಕೂಡಲೇ ಆ ಪ್ರತಿಮೆ ತೆರವುಗೊಳಿಸಿ, ಗೌರವ ತರುವ ರೀತಿಯಲ್ಲಿ ಅಕ್ಕಮಹಾದೇವಿ ಪ್ರತಿಮೆ ಸ್ಥಾಪಿಸಬೇಕು ಎಂದು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಆಗ್ರಹಿಸಿದರು.
ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಅಕ್ಕ ಮಹಾದೇವಿ ಬಟ್ಟೆಯನ್ನು ಉಡುವುದನ್ನು ಬಿಟ್ಟಿರಲೇ ಇಲ್ಲ, ಕೆಲವು ಸನಾತನಿಗಳ ಕುತಂತ್ರದಿಂದ ಅಕ್ಕಮಹಾದೇವಿ ಗೌರವಕ್ಕೆ ಚ್ಯುತಿ ಬರುವ ಕೆಲಸ ಮಾಡುತ್ತಿದೆ, ಹೀಗಾಗಿ ಕೂಡಲೇ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿರುವ ಪ್ರತಿಮೆಯನ್ನು ಸ್ಥಳಾಂತರಿಸಿ ಹೊಸ ಪ್ರತಿಮೆ ಸ್ಥಾಪಿಸಿ ಎಂದು ಒತ್ತಾಯಿಸಿದರು.
ಬಸವ ಜನ್ಮ ಭೂಮಿಯಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿಯೇ ಬಸವ ಅಧ್ಯಯನ ಪೀಠ ಇಲ್ಲದಿರುವುದು ನೋವಿನ ಸಂಗತಿ, ಅನೇಕ ಬಾರಿ ಮನವಿ ಸಲ್ಲಿಸಿದರೂ ಸಹ ಸರ್ಕಾರ ಈ ನಿಟ್ಟಿನಲ್ಲಿ ಶೇ.೧ ರಷ್ಟು ಸಹ ದಿಟ್ಟ ಹೆಜ್ಜೆ ಇರಿಸಿಲ್ಲ ಎಂದು ಡಾ.ಪಟ್ಟಣ ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಷಯವಾಗಿ ಹೋರಾಟ ನಡೆಸಿದರೂ ಸಹ ಆ ಸಮಯದಲ್ಲಿ ನಮ್ಮ ಹೋರಾಟವನ್ನು ದಮನಗೊಳಿಸುವ ಕಾರ್ಯ ನಡೆಯುತ್ತಿದೆ, ಜೇಡರ ದಾಸಿಮಯ್ಯ ಹಾಗೂ ದೇವರ ದಾಸಿಮಯ್ಯ ಬೇರೆ, ಆದರೆ ಇತ್ತೀಚಿಗೆ ಶರಣರ ವಿಷಯದಲ್ಲಿಯೂ ತಪ್ಪು ಕಲ್ಪನೆ ಬಿತ್ತುವ ಕೆಲಸ ನಡೆಯುತ್ತಿದೆ,
ವಚನ ಸಾಹಿತ್ಯದಲ್ಲಿ ಕೆಲವು ವಿನಾಕಾರಣ ಕೆಲವು ಶಬ್ದ ಸೇರಿಸಿ ಅವುಗಳ ತಾತ್ಪರ್ಯ ತಿದ್ದುವ ಕೆಲಸ ನಡೆಯುತ್ತಿದೆ, ಇದು ಸಂಪೂರ್ಣ ನಿಲ್ಲಬೇಕಿದೆ. ಹೀಗಾಗಿ ವಚನ ಪರಿಷ್ಕರಣೆ ಹಾಗೂ ಶುದ್ಧೀಕರಣ ನಡೆಯಬೇಕು ಎಂದರು.
ಮತಗಳ ಓಲೈಕೆಗಾಗಿ ಶರಣರ ಜಯಂತಿ ನಡೆಯುತ್ತಿದೆ, ಆದರೆ ಶರಣರಿಗೆ ಗೌರವ ನೀಡುವ ಅರ್ಥಪೂರ್ಣ ಕೆಲಸ ಆಗುತ್ತಿಲ್ಲ ಎಂದು ಡಾ.ಪಟ್ಟಣ ವಿಷಾದಿಸಿದರು.
ಸುದ್ದಿಗೋಷ್ಟಿಯಲ್ಲಿ ಡಾ.ಸರಸ್ವತಿ ಪಾಟೀಲ, ರೇಣುಕಾ ಪಾಟೀಲ, ಆರ್.ಎಸ್. ಬಿರಾದಾರ, ರತ್ನಕ್ಕ ಬಿರಾದಾರ, ಸಿದ್ಪಪ್ಪ ಪಡನಾಡ, ಪ್ರಮುಖರಾದ ಗಂಗಾಧರ ಸಾಲಕ್ಕಿ, ಶರಣು ಸಬರದ, ಡಾ.ಶಾರದಾಮಣಿ ಹುಣಶ್ಯಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಏ.೨೫ ರಂದು ಬಸವ ಜಯಂತಿ ಕಾರ್ಯಕ್ರಮ
ಬಸವ ತಿಳಿವಳಿಕೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಇದೇ ದಿ.೨೫ ರಂದು ವಿಜಯಪುರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಬೆಳಿಗ್ಗೆ ೧೦ ಕ್ಕೆ ಬಸವ ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಶಶಿಕಾಂತ ಪಟ್ಟಣ ಹೇಳಿದರು.
ವಿಜಯಪುರದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ್ ಸಂಬಣ್ಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ.ಅಜಿತ್ ರಾಂಪುರೆ ಮುಖ್ಯ ಕಾರ್ಯನಿರ್ವಾಹಕರು ಮತ್ತು ಡೀನ್ ಅರೆಯುಸ್ ವಿಶ್ವವಿದ್ಯಾಲಯ ಅರೋಬಾ ಇವರು ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಇದೆ ಸಂಧರ್ಭದಲ್ಲಿ ಡಾ.ಅಶೋಕ ಆಲೂರ , ಕುಲಪತಿಗಳು, ಕೊಡಗು ವಿಶ್ವವಿದ್ಯಾಲಯ ಇವರು ‘ಬಸವ ತತ್ವ ಜಗದ ತತ್ವ ‘ ಎಂಬ ವಿಷಯ ಕುರಿತು ಅನುಭಾವ ನೀಡಲಿದ್ದಾರೆ.
ಡಾ.ಶಶಿಕಾಂತ ಪಟ್ಟಣ, ಅಧ್ಯಕ್ಷರು, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ ಇವರು ಅಧ್ಯಕ್ಷ ಸ್ಥಾನ ವಹಿಸಲಿದ್ದು, ಗೌರವ ಉಪಸ್ಥಿತರಾಗಿ ಡಾ.ಮಹಾಂತೇಶ ಬಿರಾದಾರ, ಬಿಎಲ್ಡಿಇ ಸಂಸ್ಥೆ ಸಂಪರ್ಕ ಅಧಿಕಾರಿಗಳು, ಸುರೇಶ ದೇಸಾಯಿ ಪ್ರಥಮ ದರ್ಜೆ ಗುತ್ತಿಗೆದಾರರು ಅಧ್ಯಕ್ಷರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ, ವಿಜಯಪುರ, ಪ್ರೊ.ಶಾರದಾ ಪಾಟೀಲ (ಮೇಟಿ) ವಿಶ್ವಸ್ಥರು, ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ, ಪುಣೆ, ಡಾ.ಸರಸ್ವತಿ ಪಾಟೀಲ, ಗೌರವಾಧ್ಯಕ್ಷರು, ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ ವಿಜಯಪುರ ಜಿಲ್ಲಾ ಘಟಕ, ಶರಣೆ ವಿಜಯಲಕ್ಷ್ಮೀ ಹಂಗರಗಿ, ಯಾದಗಿರಿ ಜಿಲ್ಲಾಧ್ಯಕ್ಷರು ಇವರು ಆಗಮಿಸಲಿದ್ದಾರೆ ಎಂದು ಡಾ.ಪಟ್ಟಣ ವಿವರಿಸಿದರು.

ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ
ಜೈನ ಧರ್ಮಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ದೊರಕುವ ಮುನ್ನವೂ ಸಹ ಕೆಲವು ರಾಜ್ಯಗಳಲ್ಲಿ ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಗಿತ್ತು, ಹೀಗಾಗಿ ರಾಜ್ಯದಲ್ಲಿಯೂ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಸರ್ಕಾರ ಮೀನಮೇಷ ಎಣಿಸಬಾರದು ಎಂದು ಡಾ.ಶಶಿಕಾಂತ ಪಟ್ಟಣ ಒತ್ತಾಯಿಸಿದರು.
ಬಾಕ್ಸ್ ೩
೨೦ ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ
ನಗರದಲ್ಲಿ ಏ.೨೫ ರಂದು ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಒಟ್ಟು ೨೦ ಜನ ಸಾಧಕ ಶರಣ-ಶರಣೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
೮ ಜನ ಶರಣೆಯರಿಗೆ ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ ಪ್ರಶಸ್ತಿ, ೪ ಜನರಿಗೆ ವಚನ ಗಾನ ಕೋಗಿಲೆ ಪ್ರಶಸ್ತಿ ಹಾಗೂ ೮ ಜನ ಬಸವ ಸೇವಾ ಪ್ರಶಸ್ತಿ ಪ್ರದಾನ ಸಹ ನಡೆಯಲಿದೆ ಎಂದು ಡಾ.ಪಟ್ಟಣ ವಿವರಿಸಿದರು.

