ಬಿ.ಎಲ್.ಡಿ.ಇ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಸವ ಜಯಂತಿ ಉತ್ಸವ | ತಿಕೋಟಾ ಕಸಾಪ ಅಧ್ಯಕ್ಷ ಎಸ್.ಜಿ.ಲಕ್ಕುಂಡಿಮಠ ಅಭಿಮತ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ 12ನೇ ಶತಮಾನದ ಅಣ್ಣ ಬಸವಣ್ಣನವರ ವಿಚಾರಗಳು ಮತ್ತು ಅವರ ಆಡಳಿತದ ವೈಖರಿ ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸತ್ಯದ ದಾರಿಯನ್ನು ತೋರಿಸುತ್ತದೆ ಎಂದು ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಜಿ. ಲಕ್ಕುಂಡಿಮಠ ಅವರು
ಹೇಳಿದರು.
ಬಿ.ಎಲ್.ಡಿ.ಇ. ಸಂಸ್ಥೆಯ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ದಿನ ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವ, ವಚನ ಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
900 ವರ್ಷಗಳ ಹಿಂದೆ ರಚನೆಗೊಂಡಿರುವ ವಚನಗಳು ಇಂದಿಗೂ ಉಳಿದುಕೊಂಡಿವೆ ಎಂದರೆ ಅದು ವಚನ ಸಾಹಿತ್ಯದ ಶಕ್ತಿಯನ್ನು ತೋರಿಸುತ್ತದೆ.
ಮೂಲತಃ ವಿಜಯಪುರ ನಾಡಿನವರಾದ ಬಸವಣ್ಣನವರು ಬಾಲ್ಯದಲ್ಲಿಯೇ ಲಿಂಗ ಅಸಮಾನತೆಯ ವಿರುದ್ಧ ಬಂಡೆದ್ದು ಕುಟುಂಬದಿಂದ ದೂರಾಗಿ ಕೂಡಲಸಂಗಮದಲ್ಲಿ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಂಡರು.
ಮುಂದೆ ಕಲ್ಯಾಣದಲ್ಲಿ ಬಿಜ್ಜಳನ ಆಡಳಿತದಲ್ಲಿ ಮಂತ್ರಿ, ಮಹಾಮಂತ್ರಿ, ಪ್ರಧಾನಮಂತ್ರಿ ಆಗುವ ಮೂಲಕ ಸಮ ಸಮಾಜ ಕಟ್ಟುವಲ್ಲಿ ಅವರು ಮಾಡಿದ ಅವಿರತ ಹೋರಾಟ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು. ಅನುಭವ ಮಂಟಪ ರಚನೆ ಮಾಡಿ ಅನುಭವದ ಚಿಂತನ ಮಂಥನ ಮಾಡುವಂತ ವಿಶ್ವದ ಮೂಲೆ ಮೂಲೆಗಳಿಂದ ಅನೇಕ ಜನರನ್ನು ತನ್ನತ್ತ ಸೆಳೆದು ಶರಣ ಸಂಗಮದಲ್ಲಿ ಸಮ್ಮಿಲನಗೊಂಡಿದ್ದು ದೊಡ್ಡ ಇತಿಹಾಸ ಎನಿಸಿದೆ.
ಪ್ರಸ್ತುತ ರಾಜನೀತಿಯಲ್ಲಿ ಬಸವಣ್ಣನವರ ಆಡಳಿತದ ನಿಯಮಗಳು ಕೇವಲ ಭಾಷಣಕ್ಕಷ್ಟೇ ಸೀಮಿತ ಆಗಿ ಅವು ಆಚರಣೆಗೆ ಬರದೇ ಇರುವುದರಿಂದ ರಾಜಕೀಯ ವ್ಯವಸ್ಥೆ ಹದಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂದಿನ ಯುವಕ ಯುವತಿಯರು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಅದರ ತತ್ವ ಮತ್ತು ವಿಚಾರ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದದ್ದೇ ಆದರೆ ಬಸವಣ್ಣನವರಿಗೆ ತಾವು ಕೊಡುವ ನಿಜವಾದ ಗೌರವ ಎನಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದಕ್ಕೂ ಮುನ್ನ, ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಡಾ. ಸಂತೋಷ ನವಲಗುಂದ ಅವರು ಮಾತನಾಡಿ, ಅಣ್ಣ ಬಸವಣ್ಣನವರು ನಡೆದಂತೆ ನುಡಿದು ನುಡಿದಂತೆ ನಡೆದು ತೋರಿಸಿದ ಬಹುದೊಡ್ಡ ದಾರ್ಶನಿಕ ಎನ್ನುವುದನ್ನು ನಾವು ತಿಳಿದುಕೊಂಡಿದ್ದರೂ ದಾರ್ಶನಿಕರ ಹಾದಿಯಲ್ಲಿ ನಡೆಯದೆ ಜೀವನದಲ್ಲಿ ನಾವು ಸೋಲುತ್ತಿರುವುದು ಕಾಣುತ್ತಿದ್ದೇವೆ. ನಿತ್ಯ ಜೀವನದಲ್ಲಿ ಆಡುವ ಮಾತು ನುಡಿಯಾಗಬೇಕು. ಮಾಡುವ ಕೆಲಸ ಕಾಯಕವಾಗಬೇಕು ಎಂಬುದು ಜಯಂತಿ ಆಚರಣೆಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ
ಪ್ರೊ. ಬಿಎಸ್ ಬೆಳಗಲಿ, ಯುವ ಗಾಯಕ ನಾಗರಾಜ ಹಿರೇಮಠ, ತಬಲಾ ವಾದಕ ಅಂಬಣ್ಣ ಬಿಜ್ಜರಗಿ, ಫರ್ಣೇಕರ್ ಅವರಿಂದ ವಚನ ಗಾಯನ ಕಾರ್ಯಕ್ರಮ ಜರುಗಿತು.
ನಂತರ ವಿದ್ಯಾರ್ಥಿಗಳಿಂದ ವಚನವಾಚನ ಸ್ಪರ್ಧೆ ನಡೆದು, ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ .ಎಸ್. ತೋಳನೂರ ಅವರು ಮಾತನಾಡಿ, ಬಸವಣ್ಣನವರ ವಿಚಾರ ಕ್ರಾಂತಿ ಸಮಾಜದ ಪ್ರತಿ ವ್ಯಕ್ತಿಯನ್ನು ಜಾಗೃತ ಮಾಡುವಂತವು. ಯುವಕರಾದ ತಾವು ವಚನಗಳನ್ನು ಮನನ ಮಾಡಿಕೊಂಡು ತಮ್ಮ ವಿದ್ಯಾರ್ಜನೆ ಮುಂದುವರಿಸಿದರೆ ತಮ್ಮ ಕನಸಿನ ಸಾಧನೆ ಬೇಗ ಹತ್ತಿರವಾಗುತ್ತದೆ ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ
ಪ್ರೊ. ಪಿ. ಎಸ್. ತೋಳನೂರ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಕ್ಯೂಎಸಿ ಸಂಯೋಜಕರಾದ ಪ್ರೊ. ಬಿ. ಎಸ್. ಬೆಳಗಲಿ, ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಜಿ. ಲಕ್ಕುಂಡಿಮಠ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ದೊಡ್ಡಮನಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ. ಸಂತೋಷ ಬಿ. ನವಲಗುಂದ, ಕಾಲೇಜಿನ ಪ್ರಾಧ್ಯಾಪಕರು ಕಾರ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಕು. ರಕ್ಷಿತಾ ಪ್ರಾರ್ಥಿಸಿದರು, ಕು. ಪಲ್ಲವಿ ಉಪ್ಪಣಗಿ ನಿರೂಪಿಸಿದರು.
ಕು.ಸಂಗೀತಾ ಕಾಲೇಬಾಗ ವಂದಿಸಿದರು.

