’
*’ಉದಯರಶ್ಮಿ’ ಸಂಪಾದಕ ಇಂದುಶೇಖರ ಮಣೂರ ಅವರಿಗೆ ನಾಳೆ (ಏಪ್ರಿಲ್ ೨೫ ರವಿವಾರ ) “ಬಸವ ಸೇವಾ ಪ್ರಶಸ್ತಿ” ಪ್ರದಾನವಾಗಲಿದೆ. ಈ ನಿಮಿತ್ತ ಈ ವಿಶೇಷ ಲೇಖನ*
ಲೇಖನ
– ಶಿಲ್ಪಾ ಮೃತ್ಯುಂಜಯ ಮಿಣಜಗಿ
ಶಿಕ್ಷಕರು
ಕೆ.ಇ.ಬೋರ್ಡ್ ಸೆಂಟ್ರಲ್ ಸ್ಕೂಲ್
ಧಾರವಾಡ.
ಉದಯರಶ್ಮಿ ದಿನಪತ್ರಿಕೆ
ಜನಪರ-ಜೀವಪರ ಧೋರಣೆಯ ’ಉದಯರಶ್ಮಿ’ ದಿನಪತ್ರಿಕೆ ಸಂಪಾದಕರು ಹಾಗೂ ಶರಣ ಮತ್ತು ಬಸವ ತತ್ವಗಳ ಪರಿಪಾಲಕರಾದ
ಶ್ರೀಯುತ ಇಂದುಶೇಖರ ಸಿದ್ದಣ್ಣ ಮಣೂರ ಅವರು ಸಂಪಾದಕರಷ್ಟೇ ಅಲ್ಲ, ಅಪ್ಪಟ ಬಸವ ಭಕ್ತರೂ ಹೌದು.
ಸಂಪಾದಕ ಎಂದರೆ ಕೇವಲ ಬರಹದ ದೋಷ ತಿದ್ದುವವರಲ್ಲ, ಸಮಾಜದ ನಾಡಿಮಿಡಿತವನ್ನು ಅರಿತು ಸತ್ಯವನ್ನು ಜನರಿಗೆ ಮುಟ್ಟಿಸುವ ದಿಕ್ಸೂಚಿ ಎಂಬುದು ನಮಗೆ ಗೊತ್ತಿರುವ ವಿಷಯವಾಗಿದೆ. ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡ ಒಬ್ಬ ಸಂಪಾದಕ ಸಮಾಜದಲ್ಲಿ ಬದಲಾವಣೆ ತರಬಲ್ಲರು ಎಂಬುದನ್ನು ಅಕ್ಷರಶಃ ನಿಜ ಮಾಡಿದ ಕೀರ್ತಿ ಇಂದುಶೇಖರ ಇವರಿಗೆ ಸಲ್ಲುತ್ತದೆ.

ಸತ್ಯದ ಅನ್ವೇಷಣೆ (ನುಡಿದಂತೆ ನಡೆಯುವಿಕೆ)
ಬಸವಣ್ಣನವರು “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂದಿದ್ದಾರೆ. ಒಬ್ಬ ಉತ್ತಮ ಸಂಪಾದಕನ ಬರಹವು ಅಷ್ಟೇ ಪಾರದರ್ಶಕವಾಗಿರಬೇಕು. ಪೂರ್ವಾಗ್ರಹ ಪೀಡಿತರಾಗದೆ, ಸತ್ಯಕ್ಕೆ ಚ್ಯುತಿ ಬರದಂತೆ ವಿಷಯವನ್ನು ಪ್ರಸ್ತುತಪಡಿಸುವುದು ಸಂಪಾದಕನ ಮೊದಲ ಧರ್ಮ. ಅಂತರಂಗ ಮತ್ತು ಬಹಿರಂಗದ ಶುದ್ಧಿಯೇ ವೃತ್ತಿ ಬದುಕಿನ ಶಕ್ತಿಯಾಗಬೇಕೆಂಬುದನ್ನು ಸಂಪಾದಕ ಇಂದುಶೇಖರ ಅವರು ತೋರಿಸಿಕೊಟ್ಟಿದ್ದಾರೆ.
ಕಾಯಕವೇ ಕೈಲಾಸ

ಸಂಪಾದಕೀಯ ವೃತ್ತಿಯನ್ನು ಕೇವಲ ಉದ್ಯೋಗ ಎಂದು ಪರಿಗಣಿಸದೆ, ಅದನ್ನು ಸಮಾಜ ಸೇವಾ ‘ಕಾಯಕ’ ಎಂದು ಭಾವಿಸುವುದು ಮುಖ್ಯ. ಸಮಯದ ಮಿತಿ ಮೀರಿ ಕೆಲಸ ಮಾಡುವಾಗ, ಅಕ್ಷರಗಳ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಶ್ರದ್ಧೆಯೇ ಇವರ ಪಾಲಿನ ಕೈಲಾಸವಾಗುತ್ತದೆ ಎಂಬುದನ್ನು ನಾವಿಲ್ಲಿ ನೋಡಬಹುದು. ಪ್ರತಿಯೊಂದು ಅಕ್ಷರದ ಹಿಂದೆ ಸಂಪಾದಕರ ಶ್ರಮವಿರುತ್ತದೆ. ಏಕೆಂದರೆ ಬರೆಯುವ
ಕೈ ಎರಡಾದರೂ ಓದುವ ಕಣ್ಣುಗಳು
ಸಾವಿರಾರು. ಅಂತಹ ಸಹಸ್ರ ದೃಷ್ಟಿಕೋನದಲ್ಲಿ ಬಸವತತ್ವದ ಜಾಗೃತಿ ತುಂಬುತ್ತ ಇಂದುಶೇಖರ ಅವರು ತಮ್ಮ ಕಾಯಕವನ್ನು ಮಾಡುತ್ತ ಬಂದಿದ್ದಾರೆ.
ಸಮಾನತೆಯ ದೃಷ್ಟಿಕೋನ
ಅನುಭವ ಮಂಟಪವು ಜಗತ್ತಿಗೆ ಸಮಾನತೆಯ ಸಂದೇಶ ನೀಡಿದ ಮೊದಲ ಸಂಸತ್ತು. ಅದೇ ರೀತಿ, ಒಬ್ಬ ಸಂಪಾದಕನು ತನ್ನ ಪ್ರಕಟಣೆಗಳಲ್ಲಿ ಜಾತಿ-ಮತ ಅಥವಾ ಲಿಂಗ ಭೇದವಿಲ್ಲದೆ ಎಲ್ಲ ವರ್ಗದ ಜನರ ಧ್ವನಿಗೆ ಸಮಾನ ಅವಕಾಶ ನೀಡಬೇಕು. ಕಟ್ಟಕಡೆಯ ವ್ಯಕ್ತಿಯ ನೋವಿಗೂ ಅಕ್ಷರ ರೂಪ ನೀಡುವುದು ಬಸವ ಪ್ರೇಮಿ ಸಂಪಾದಕನ ಲಕ್ಷಣ. ಸದಾ ನಗು ಮೊಗದಿಂದಲೇ ಅಕ್ಷರ ಲೋಕಕ್ಕೆ ಸಾರಥಿಯಾಗುವಲ್ಲಿ ಇಂದುಶೇಖರ ಅವರು ಮೇಲುಗೈ ಸಾಧಿಸಿದವರೆಂದು ಹೇಳಬಹುದು.
ಸರಳತೆ ಮತ್ತು ಸಂವಹನ

ವಚನಗಳು ಜನಸಾಮಾನ್ಯರ ಆಡುಭಾಷೆಯಲ್ಲಿ ಅತಿ ಕ್ಲಿಷ್ಟವಾದ ತತ್ವಗಳನ್ನು ಸರಳವಾಗಿ ತಿಳಿಸಿದವು. ಒಬ್ಬ ಉತ್ತಮ ಸಂಪಾದಕ ಕೂಡ ಕ್ಲಿಷ್ಟಕರವಾದ ವಿಷಯಗಳನ್ನು ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ರೂಪಿಸಬೇಕು. ಪಾಂಡಿತ್ಯ ಪ್ರದರ್ಶನಕ್ಕಿಂತ ಜನಸಾಮಾನ್ಯರಿಗೆ ತಲುಪುವ ‘ಸರಳತೆ’ ಇಲ್ಲಿ ಮುಖ್ಯವಾಗುತ್ತದೆ. ಸಮಾಜದ ತಪ್ಪುಗಳನ್ನು ತಿದ್ದುವ ಜವಾಬ್ದಾರಿ “ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ತಿದ್ದಿಕೊಳ್ಳಿ” ಎನ್ನುವ ವಚನದಂತೆ, ಸಂಪಾದಕರು ಮೊದಲು ತಾವು ಮನಗಂಡವರು ಮತ್ತು ಜವಾಬ್ದಾರಿಯುತರಾಗಿದ್ದು, ನಂತರ ಸಮಾಜದ ತಪ್ಪುಗಳನ್ನು ನಿರ್ಭಯವಾಗಿ ಎತ್ತಿ ತೋರಿಸಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವಾಗ ಯಾವುದೇ ಪ್ರಭಾವಕ್ಕೂ ಒಳಗಾಗದಿರುವುದು ಬಸವ ಪಥದ ಹಾದಿಯಾಗಿದೆ.
ಯಾರು ಬಸವಣ್ಣನವರ ವಿಚಾರಧಾರೆಗಳನ್ನು ಪ್ರೀತಿಸುತ್ತಾರೋ, ಅವರು ಸ್ವಾಭಾವಿಕವಾಗಿಯೇ ನ್ಯಾಯಪರ ಮತ್ತು ಜನಪರ-ಜೀವಪರ ಸಂಪಾದಕರಾಗಿ ರೂಪುಗೊಳ್ಳುತ್ತಾರೆ. ಅದರಂತೆ ಸಂಪಾದಕ ಇಂದುಶೇಖರ ಮಣೂರ ಅವರು ತಮ್ಮ ’ ಉದಯರಶ್ಮಿ’ ಪತ್ರಿಕೆಯ ಅಡಿಬರಹವನ್ನು ಜನಪರ-ಜೀವಪರ ಎಂದೇ ಬರೆದು ಪತ್ರಿಕೆಯ ಧೋರಣೆಯನ್ನು ಓದುಗರಿಗೆ ಆರಂಭದಲ್ಲಿಯೇ ಸ್ಪಷ್ಟಪಡಿಸುತ್ತಾರೆ.
ರಾಷ್ಟ್ರದ ಶಕ್ತಿಯನ್ನು ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಲು ಸಮಾಜದಲ್ಲಿ ಏಕತೆ ಮತ್ತು ಶಾಂತಿ ಅಡಿಪಾಯವಾಗಿದೆ. ವಿಭಿನ್ನ ಧರ್ಮ, ಜಾತಿ ಮತ್ತು ಜನಾಂಗದ ಜನರು ಪರಸ್ಪರ ಗೌರವ, ಪ್ರೀತಿ ಮತ್ತು ಶಾಂತಿಯುತವಾಗಿ ಸಹಬಾಳ್ವೆ ನಡೆಸಲು ಬುದ್ಧ-ಬಸವ-ಅಂಬೇಡ್ಕರ ಅವರ ತತ್ವಗಳನ್ನು ಜನಮಾನಸಕ್ಕೆ ತಲುಪಿಸುವುದು ಪತ್ರಕರ್ತರ ದ್ಯೇಯವಾಗಿರಬೇಕು. ಅಕ್ಷರ ಲೋಕದಲ್ಲಿ ಇಂತಹ ತತ್ವಗಳನ್ನು ಬಿತ್ತುವ ಇಂದುಶೇಖರ ಮಣೂರ ರಂತಹ ಸಂಪಾದಕರು ಇಂದಿನ ಸಮಾಜಕ್ಕೆ ಅಗತ್ಯ ಎಂಬುದು ನನ್ನ ಅಭಿಪ್ರಾಯ.

ನುಡಿನಮನ
“ನಮ್ಮೆಲ್ಲರ ಹೆಮ್ಮೆಯ ’ಉದಯರಶ್ಮಿ’ ದಿನಪತ್ರಿಕೆಯ ಸಂಪಾದಕ ಶ್ರೀಯುತ ಇಂದುಶೇಖರ ಮಣೂರ ಅವರಿಗೆ “ಬಸವ ಸೇವಾ ಪ್ರಶಸ್ತಿ” ಲಭಿಸಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ಯಾವುದೇ ತಮ್ಮ ಕಾರ್ಯದ ಒತ್ತಡದಲ್ಲಿಯೂ ಸಹಿತ ಇವರು ಲೇಖಕರ ನಾಡಿಮಿಡಿತವಾದವರು. ಪ್ರತಿಯೊಬ್ಬರಿಗೂ ಸಮಾಧಾನದಿಂದಲೇ ಉತ್ತರ ನೀಡುತ್ತಾ “ದಯವೇ ಧರ್ಮದ ಮೂಲವಯ್ಯ” ಎಂಬುದನ್ನು ಅಕ್ಷರಶಃ ಪರಿಪಾಲಿಸುವಂತಹ ಸಂಪಾದಕರಿಗೆ ಈ ಪ್ರಶಸ್ತಿ ಒದಗಿ ಬಂದಿರುವುದು ಅತ್ಯಂತ ಹೆಮ್ಮೆಯ ಮತ್ತು ಸಂತೋಷದ ವಿಚಾರವಾಗಿದೆ. ಹತ್ತು ಹಲವು ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರಾಗಲಿ ಎಂದು ಸದಾ ಹಾರೈಸುವೆ. ನಮ್ಮಂತಹ ಉದಯೋನ್ಮುಖ ಲೇಖಕರಿಗೆ ತಮ್ಮ ಪತ್ರಿಕೆ ಮೂಲಕ ವೇದಿಕೆ ಒದಗಿಸುತ್ತಿರುವ ಸಂಪಾದಕರಿಗೆ ನನ್ನ ನುಡಿನಮನ ಸಲ್ಲಿಸುವೆ.
– ಶ್ರೀಮತಿ ಶಿಲ್ಪಾ ಮಿಣಜಗಿ
ಶಿಕ್ಷಕಿ ಮತ್ತು ಲೇಖಕಿ
ಧಾರವಾಡ

ಅಕ್ಷರ ಲೋಕದಲ್ಲಿ ಬಸವ ತತ್ವಗಳನ್ನು ಬಿತ್ತುವ ಸಂಪಾದಕರು ಸಮಾಜಕ್ಕೆ ಅಗತ್ಯ
ಪ್ರಸ್ತುತ ಜಾಗತಿಕವಾಗಿ ಕಂಡು ಬರುವ ಹಿಂಸಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆಯ ಪರಿಕಲ್ಪನೆ ಅಗತ್ಯವಾಗಿದೆ. ತಾನು ಚನ್ನಾಗಿ ಬದುಕಿ ಇತರರನ್ನೂ ಬದುಕಲು ಅವಕಾಶ ನೀಡುವ ಮನೋಸ್ಥಿತಿ ಬೆಳೆದಾಗ ಮಾತ್ರ ಉತ್ತಮ ಬದುಕುವ ವಾತಾವರಣ ನಿರ್ಮಾಣವಾಗಲು ಸಾಧ್ಯ. ಬಸವಣ್ಮನವರ ತತ್ವಗಳೇ ನಮ್ಮ ಸಂವಿಧಾನದ ಅಶಯವಾಗಿದೆ. ಶಾಂತಿ, ಸಹಬಾಳ್ವೆ ಹಾಗೂ ಸಮಾನತೆಯ ಚಿಂತನೆಗಳು ಇಂದಿನ ಯುವ ಸಮುದಾಯದಲ್ಲಿ ಬೆಳೆದಾಗ ಭವ್ಯ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ. ಇಂತಹ ವಿಚಾರಗಳನ್ನು, ಬಸವ ತತ್ವಗಳನ್ನು ಅಕ್ಷರ ಲೋಕದಲ್ಲಿ ಬಿತ್ತುವ ಸಂಪಾದಕರು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ.

