ಉದಯರಶ್ಮಿ ದಿನಪತ್ರಿಕೆ
ಚಡಚಣ: ಬಳ್ಳೊಳ್ಳಿ ಗ್ರಾಮದ ನಾಡ ಕಚೇರಿಯಲ್ಲಿ ಶ್ರೀ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ನಾಡ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಸಾಕ್ಷಿಯಾದರು.
ಕಾರ್ಯಕ್ರಮದ ಅಂಗವಾಗಿ ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಉಪದೇಶಗಳು ಮತ್ತು ತತ್ವಗಳ ಮಹತ್ವವನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಳ್ಳೊಳ್ಳಿ ನಾಡ ಕಚೇರಿ ಉಪ ತಹಸೀಲ್ದಾರ್ ಆನಂದ ಪಮ್ಮಾರ, ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಆದಿ ಶಂಕರಾಚಾರ್ಯರ ಜಯಂತಿ ಅತ್ಯಂತ ಪವಿತ್ರ ದಿನವಾಗಿದ್ದು, ಅದ್ವೈತ ವೇದಾಂತದ ಮಹಾನ್ ಗುರುಗಳ ಜನ್ಮದಿನವಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬಲಪಡಿಸಲು ಇಂತಹ ಆಚರಣೆಗಳು ಅಗತ್ಯವೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಡಿಎ ಎಂ.ಪಿ. ಕೊಡತೆ, ಗ್ರಾಮ ಆಡಳಿತಾಧಿಕಾರಿ ಶಂಕರ ಕಲಕೇರಿ, ಆಪರೇಟರ್ ಮಂಜುನಾಥ ಬನಸೋಡೆ, ಮಲ್ಲಿಕಾರ್ಜುನ ಭೋಸಗಿ ಸೇರಿದಂತೆ ಇತರ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರೂ ಆದಿ ಶಂಕರಾಚಾರ್ಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಂಕಲ್ಪ ಮಾಡಿದರು.

