ಕೆರೆಗೆ ಹೊಂದಿ ಕೊಳವೆಬಾವಿ ಕೊರೆಯಿಸಿ ಕಾನೂನು ಬಾಹಿರ ನೀರು ಮಾರಾಟ | ನೀರು ಮಾರಾಟ ಸ್ಥಳಕ್ಕೆ ಅಧಿಕಾರಿಗಳ ತಂಡ ದಾಳಿ | ನೀರು ಮಾರಾಟ ಮಾಡದಂತೆ ಮಾರಾಟಗಾರರಿಗೆ ತಹಸೀಲ್ದಾರ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ೨೩ ವಾರ್ಡಗಳಿಗೆ ನೀರು ಸರಬರಾಜು ಮಾಡುಲು ನಗರದಲ್ಲಿನ ಕೆರೆಗೆ ಕಾಲುವೆ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ಆದರೆ ಕೆರೆಯ ಪಕ್ಕದಲ್ಲಿ ಕಾನೂನು ಬಾಹಿರವಾಗಿ ಬಾವಿ ಮತ್ತು ಕೊಳವೆ ಬಾವಿ ಕೊರೆದು ಅಕ್ರಮವಾಗಿ ನೀರು ಮಾರಾಟ ಮಾಡುತ್ತಿರುವ ಸ್ಥಳಕ್ಕೆ ಬುಧವಾರ ತಹಶೀಲ್ದಾರ ಕರೆಪ್ಪ ಬೆಳ್ಳಿ ಮತ್ತು ಪುರಸಭೆ ಅಭಿಯಂತರ ಅಜರ ನಾಟಿಕಾರಿ ಜಂಟಿಯಾಗಿ ದಾಳಿ ನಡೆಸಿ ನೀರು ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದ ಪಕ್ಷದಲ್ಲಿ ಟ್ಯಾಂಕರ್ಗಳನ್ನು ಸೀಜ್ ಮಾಡಲಾಗುತ್ತದೆ ಎಂದು ನೀರು ಮಾರಾಟಗಾರರಿಗೆ ಎಚ್ಚರಿಕೆ ನಿಡಿದ ಘಟನೆ ನಡೆದಿದೆ.
೨೦೧೧ ಅಡಿಯಲ್ಲಿ ವಾಣಿಜ್ಯ ಅಥವಾ ಟ್ಯಾಂಕರ್ ಮೂಲಕ ಅಂತರ್ಜಲ ಮಾರಾಟಕ್ಕೆ ನಿರಾಕ್ಷೇಪಣಾ ಪತ್ರ ಕಡ್ಡಾಯ. ಆದರೆ ಸಿಂದಗಿ ನಗರದ ಕೆರೆಯ ಹತ್ತಿರ ಯಾವುದೇ ಅನುಮತಿ ಪಡೆಯದೇ ಟ್ಯಾಂಕರ್ ಮೂಲಕ ಕಾನೂನು ಬಾಯಿರ ನೀರು ಮಾರಾಟ ಮಾಡಬಾರದು ಎಂದು ಸಾಕಷ್ಟು ಬಾರಿ ಮೌಖಿಕವಾಗಿ ಸೂಚಿಸಿದರೂ ಅಧಿಕಾರಿಗಳ ಸೂಚನೆಗೆ ಬೆಲೆ ಕೊಡದೇ ಇರುವ ಹಿನ್ನಲೆಯಲ್ಲಿ ತಹಶೀಲ್ದಾರ ಹಾಗೂ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಕಾನೂನು ಬಾಹಿರ ನೀರು ಮಾರಾಟ ಮಾಡದಂತೆ ಎಚ್ಚರಿಸಿದ ಸಂದರ್ಭದಲ್ಲಿ ಅಧಿಕಾರಿಗಳ ಮತ್ತು ನೀರು ಮಾರಾಟ ಮಾಡುವರ ನಡುವೆ ಮಾತಿನ ವಾಗ್ವಾದ ನಡೆದಿದೆ.
ನಾವು ಕಳೆದ ೧೫ ವರ್ಷಗಳಿಂದ ನೀರು ಮಾರಾಟ ಮಾಡುತ್ತಿದ್ದೇವೆ. ನಗರರಸಭೆ ಪೌರಾಯುಕ್ತರಿಗೆ, ಸದಸ್ಯರಿಗೂ ನೀರು ಹಾಕುತ್ತೇವೆ. ಮತ್ತು ಸರ್ಕಾರಿ ಹಾಸ್ಟೇಲ್ಗಳಿಗೆ ನೀರು ಮಾರಾಟ ಮಾಡುತ್ತೇವೆ. ನಮಗೆ ಯಾರೂ ಸೂಚನೆ ನೀಡಿಲ್ಲ ಎಂದು ನೀರು ಮಾರಾಟಗಾರರಾದ ರಾಜು ಕುಂಬಾರ, ರೇಣುಕಾ ಕುಂಬಾರ ಅಧಿಕಾರಿಗೆ ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಕರೆಪ್ಪ ಬೆಳ್ಳಿ ನೀರು ಮಾರಾಟಗಾರರಿಗೆ ಸೂಚನೆ ನೀಡಿ ಮಾತನಾಡಿ, ನಗರದಲ್ಲಿನ ೨೩ ವಾರ್ಡಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಕೆರೆಯಲ್ಲಿ ನೀರು ಸಂಗ್ರಹಿಸಲಾಗುವುದು. ಕೆರೆಯ ಪಕ್ಕದಲ್ಲಿ ಬಾವಿ ತೋಡಿ, ಕೊಳೆಬಾವಿ ತೊಡಿ ನೀರು ಮಾರಾಟ ಮಾಡುವುದು ಮೊದಲನೆಯ ತಪ್ಪು. ಈಗಾಗಲೇ ಮೊದಲಿದ್ದ ತಹಶೀಲ್ದಾರರು, ನಗರಸಭೆ ಅಧಿಕಾರಿಗಳು ಕಾನೂನು ಬ್ಯಾಹಿರ ಟ್ಯಾಂಕರ್ ಮೂಲಕ ನೀರು ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆಯಿದ್ದು, ಸೆಪ್ಟಂಬರ್ ತಿಂಗಳಲ್ಲಿ ಮಳೆ ಕಡಿಮೆ ನಿರೀಕ್ಷಿಸಲಾಗಿದೆ. ಈ ಹಿನ್ನಲೆಯಲ್ಲಿ ಮುಂಬರುವ ದಿನಗಳಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಬಾರದು ಎಂದು ಮುಂಜಾಗೃತ ವಹಿಸಲಾಗಿದೆ. ಅಕ್ರಮವಾಗಿ ನೀರನ್ನು ಮಾರಾಟ ಮಾಡುವ ಟ್ಯಾಂಕರ್ಗಳ ವಿರುದ್ಧ ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡಬೇಕು. ಸರ್ಕಾರಿ ಜಲಮೂಲಗಳಿಗೆ ದಕ್ಕೆಯಾಗುವ ಕೊಳವೆಬಾವಿ ಕೊರೆದು ಅಕ್ರಮವಾಗಿ ಬಳಸಿ ನೀರು ಮಾರಾಟ ಮಾಡುವ ಖಾಸಗಿ ಟ್ಯಾಂಕರ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ನಗರಸಭೆ ಅಭಿಯಂತರ ಅಜರ ನಾಟಿಕಾರ ಮಾತನಾಡಿ, ಈ ಬಾರಿ ಎಪ್ರಿಲ್-ಜೂನ್ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಗಾಳಿ ದಿನಗಳು ಕಂಡು ಬರುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಬಾರದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಕೊಳ್ಳಲಾಗಿದೆ. ಮಳೆಗಾಲ ವಿಳಂಬವಾಗಿ ಆರಂಭವಾಗುವ ಸಾಧ್ಯತೆಯಿರುವುದರಿಂದ ಜುಲೈ ಮಧ್ಯದವರೆಗೂ ಕುಡಿಯುವ ನೀರಿಗಾಗಿ ಕೆರೆಯಲ್ಲಿ ನೀರಿನ ಸಂಗ್ರಹ ಕೊರತೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ. ಕೆರೆಯ ಪಕ್ಕದಲ್ಲಿ ಬಾವಿ, ಕೊಳವೆ ಬಾವಿ ಕೊರೆದು ನೀರು ಮಾರಾಟ ಮಾಡುವುದು ಕಾನೂನು ಬಾಹಿರ. ಅಲ್ಲದೇ ನೀರು ಮಾರಾಟ ಮಾಡುವ ಯಾವ ಟ್ಯಾಂಕರ್ ಮೇಲೆ ರಜಿಸ್ಟರ್ ನಂಬರ ಇಲ್ಲ. ಆದ್ದರಿಂದ ಇನ್ನಾದರೂ ಕಾನೂನು ಬಾಹಿರ ನೀರು ಮಾರಾಟ ಮಾಡುವುದು ನಿಲ್ಲಿಸಬೇಕು. ಇಲ್ಲದ ಪಕ್ಷದಲ್ಲಿ ಶಿಸ್ತಿನ ಕ್ರಮ ಕೈಕೊಳ್ಳಲಾಗುವುದು ಎಂದು ಎಚ್ಚರಿಸಿದರು.

