ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಸತ್ಯ ಶರಣರು, ಸಂತರು, ಪವಾಡ ಪುರುಷರು ನಡೆದಾಡಿದ ದೇಶ ನಮ್ಮದು ಯುವ ಪೀಳಿಗೆ ಸತ್ಪುರುಷರ, ಶರಣರ, ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಗ್ರಾಮದಲ್ಲಿ ಸಮಗಾರ ಸಮುದಾಯದ ಬಾಂದವರು ಹಮ್ಮಿಕೊಂಡ ಶರಣ ಹರಳಯ್ಯನವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಶರಣ ಹರಳಯ್ಯ ದಂಪತಿಗಳು ಬಸವಣ್ಣನವರಿಗಾಗಿ ತಮ್ಮ ತೊಡೆಯ ಚರ್ಮ ಕೊಟ್ಟು ಪಾದುಕೆಗಳನ್ನು ತಯಾರಿಸಿ ಪಾವನರಾದರು. ಅವರ ಈ ತ್ಯಾಗವು ಕೇವಲ ಭಕ್ತಿ ಕಥೆಯಲ್ಲ, ಅದು ಸಮಾನತೆ ಮತ್ತು ಶರಣತತ್ತ್ವದ ಶಾಶ್ವತ ಸಂದೇಶ. ಬಸವಣ್ಣನವರು ಈ ಪಾದುಕೆಯನ್ನು ಸ್ವೀಕರಿಸಿ, ಅದನ್ನು ಕೂಡಲಸಂಗಮದೇವರಿಗೇ ಅರ್ಪಿಸಿದ ಘಟನೆ ಇಂದಿಗೂ ಇತಿಹಾಸವಾಗಿ ಉಳಿದಿದೆ. ಇಂತಹ ಮಹಾ ಶರಣರ ಜಯಂತೋತ್ಸವಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಅವರ ಆಚಾರ ವಿಚಾರಗಳು ಪ್ರತಿ ನಿತ್ಯವೂ ನಮ್ಮ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕು. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು. ನಿಮ್ಮೊಂದಿಗೆ ನಾವಿದ್ದೇವೆ. ಸರಕಾರದ ಸವಳತ್ತಗಳನ್ನು ತಮ್ಮ ಸಮಾಜಕ್ಕೆ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಬಿಳಿಯಾನಿಸಿದ್ದ ವಡೆಯರ್ ಸಾನಿಧ್ಯ ವಹಿಸಿದ್ದರು. ಮಾಜಿ ಜಿಪಂ ಸದಸ್ಯ ಎನ್ ಆರ್ ತಿವಾರಿ, ಮಾಜಿ ತಾಪಂ ಅಧ್ಯಕ್ಷ ಶಿವರಾಯ ಹಿಪ್ಪರಗಿ, ಪಿಕೆಪಿಎಸ್ ಅಧ್ಯಕ್ಷ ವೀರನಗೌಡ ಪಾಟೀಲ್, ಅಂಜುಮನ್ ಸಮೀತಿ ಕಾರ್ಯದರ್ಶಿ ಮೈಬೂಬಸಾಬ ಕಣ್ಣಿ, ಸೇರಿದಂತೆ ಗ್ರಾಪಂ ಮಾಜಿ ಸದಸ್ಯರು ಇದ್ದರು.

