ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಲೋಣಿ (ಬಿಕೆ) ಗ್ರಾಮದ ಗ್ರಾಮ ದೇವತೆ ಶ್ರೀ ಭಾಗ್ಯವಂತಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಅಕ್ಷಯ ತೃತೀಯ ದಂದು ಶ್ರೀ ಭಾಗ್ಯವಂತಿ ದೇವಿಯ ಜಾತ್ರೆಯನ್ನು ಗ್ರಾಮಸ್ಥರು ಸೇರಿಕೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೇಸ್ ಮುಖಂಡ ಬಾಬಾಸಾಹೇಬ ವಿಜಯಧಾರೆ, ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ಹೇಳಿದರು.
ಜಾತ್ರೆಯ ಅಂಗವಾಗಿ ಭಾಗ್ಯವಂತಿ ದೇವಿಯ ಫೋಟೋ ಪೂಜೆ ನೆರವೇರಿಸಿ, ನಂತರ ಬರಗೂಡಿ ಭಾಗ್ಯವಂತಿ ಪಲ್ಲಕ್ಕಿ, ಲೋಣಿ ಬಿಕೆ ಲಾಯಗಂಗಾ ಪಲ್ಲಕ್ಕಿ, ರುದ್ರಮಹಾರಾಜರ ದಿಂಡಿ, ಗೊಂಬೆ ಕುಣಿತ ಹಾಗೂ ನೂರಾರು ಮುತ್ತೈದೆಯರಿಂದ ಕುಂಭದೊಂದಿಗೆ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿಬಂದಿತು.
ಶ್ರೀ ಸಿದ್ದಾರೂಢ ಮಠ, ಆಳೂರ-ಪಡನೂರದ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಧರ್ಮದ ಕಾರ್ಯಕ್ರಮಗಳು ಜೀವನದ ದಾರಿದೀಪವಾಗಿದ್ದು, ಸಾಂಪ್ರದಾಯಿಕ ಬೆಳವಣಿಗೆಗೆ ಕಾರಣವಾಗುತ್ತವೆ. ಹಬ್ಬ-ಜಾತ್ರೆಗಳು ಕೇವಲ ಆಚರಣೆಗೆ ಸೀಮಿತವಾಗದೆ, ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ ಎಂದು ಹೇಳಿದರು.
ಪ್ರಕಾಶ ಜಿತ್ತಿ ಮಾತನಾಡಿ, ಜನರಲ್ಲಿ ಹಾಗೂ ಯುವಕರಲ್ಲಿ ಸಮಾನತೆ ಮತ್ತು ಸಾಂಪ್ರದಾಯಿಕ ಅರಿವು ಮೂಡಿಸುವ ಉದ್ದೇಶ ದೊಂದಿಗೆ ಪ್ರತಿ ವರ್ಷ ಗ್ರಾಮದ ಹಿರಿಯರು ಕಿರಿಯರು ಎನ್ನದೆ ಜಾತ್ರೆಯಲ್ಲಿ ಎಲ್ಲರು ಭಾಗವಹಿಸುವದರೊಂದಿಗೆ ಈ ಜಾತ್ರೆ ವಿಶೇಷವಾಗಿ ಸಾಮಾಜಿಕ ಜಾಗೃತಿ ಮೂಡಿಸುವದರಲ್ಲಿ ಮುಂಚುಣಿಯಲ್ಲಿದೆ ಎಂದರು.
ಇದೇ ವೇಳೆ ಶ್ರೀಮತಿ ಅನ್ನಪೂರ್ಣೇಶ್ವರಿ ಶಿರಾಡೋಣ, ಕಾಶಿಬಾಯಿ ವಾಲಿಕಾರ, ಗೀತಾ ಜಿತ್ತಿ, ಮಂಜುಳಾ ಮಾನೆ, ರೇಣುಕಾ ಅವಜಿ ಇವರಿಂದ ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನ ಪೂಜಾರಿ ಸುರೇಶ ಪೂಜಾರಿ, ರಮೇಶ ಜಿತ್ತಿ, ಶ್ರೀನಿವಾಸ ಕುಲಕರ್ಣಿ, ರಾಜಕುಮಾರ ಜಿತ್ತಿ, ಸೋಮು ಸ್ವಾಮಿ, ಗುರುಲಿಂಗಪ್ಪ ಉಮ್ಮರ್ಜಿ, ಮಲ್ಲಿಕಾರ್ಜುನ ಮೇತ್ರಿ, ಚಿದಾನಂದ ನಾವಿ, ಸುರೇಶಗೌಡ ಪಾಟೀಲ, ಸಿದ್ದು ಕರಜಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

