ವಿಜಯಪುರದಲ್ಲಿ “ಬಯಕೆಯ ಬಳ್ಳಿ” ಪುಸ್ತಕ ಲೋಕಾರ್ಪಣೆಗೊಳಿಸಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರಾಹುಲ್ಕುಮಾರ್ ಭಾವಿದೊಡ್ಡಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾಹಿತ್ಯ ಎಂಬುದು ಕೇವಲ ಪದಗಳ ಜೋಡಣೆವಲ್ಲ ಅದು ಮನಸ್ಸಿನ ನಿಜ ಸ್ವರೂಪವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಅನುಭವಗಳ ಆಳ ಭಾವಗಳ ವ್ಯಾಪ್ತಿ ಜೀವನಗಳ ಸತ್ಯ ಸೌಂದರ್ಯಗಳ ಸಂಗಮವೇ ಕಾವ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ರಾಹುಲ್ಕುಮಾರ್ ಭಾವಿದೊಡ್ಡಿ ಅವರು ಹೇಳಿದರು.
ನಗರದ ಸರ್ಕಾರಿ ಆರ್ಟ್ಸ್ ಗ್ಯಾಲರಿಯಲ್ಲಿ ಬುಧವಾರ ಹಮ್ಮಿಕೊಂಡ ಬಯಕೆಯ ಬಳ್ಳಿ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಣ್ಣು ಮತ್ತು ಸಸಿ ಹಣ್ಣುಗಳ ಸಂರಕ್ಷಣೆ ಮತ್ತು ಪೋಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಗೀತ ತೇಲಿ ಅವರು ಸಾಹಿತ್ಯದೊಂದಿಗೆ ಆಸಕ್ತಿ ಹೊಂದಿ ತಮ್ಮ ಚೊಚ್ಚಲ ಪುಸ್ತಕವನ್ನು ರಚಿಸಿರುವ ಇವರ ಸಾಹಿತ್ಯ ಪಯಣ ಯಶಸ್ವಿಯಾಗಲಿ, ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಇವರು ಗುರುತಿಸಿಕೊಳ್ಳಲಿ ಎಂದು ಅವರು ಹೇಳಿದರು.
ಈ ಸಂದರ್ಭ ಸಾಹಿತಿ ಮನು ಪತ್ತಾರ ಮಾತನಾಡಿ, ಬಯಕೆಯ ಬಳ್ಳಿಯಲ್ಲಿ 30 ಹನಿ ಕವನಗಳು ಮಲ್ಲಿಗೆ ಹೂವಿನ ಪರಿಮಳ ಸೂಸುವ ಹಾಗೂ ಸತ್ಯ ಮಿಥ್ಯಗಳ ನಂಬಿಕೆ ಈ ಸಂದರ್ಭದಲ್ಲಿ ಕನಸು ನನಸಾಗುಗಳ ನಡುವೆ ಮೌನವಾಗಿ ಹೆಜ್ಜೆ ಹಾಕುತ್ತಲೆ ಬದುಕಿನ ಸಂದರ್ಶನವನ್ನು ಹೇಳಿಹೊರಟಿರುವ ಸಾಧ್ಯತೆಗಳು ಈ ಹನಿಕವನಗಳಲ್ಲಿ ಗೋಚರಿಸುತ್ತವೆ.
ಕಥೆ ಕಾದಂಬರಿ ಕುಟುಂಬದೊಂದಿಗೆ ಆತರತೆಯಿಂದ ಬೆರೆತುಕೊಳ್ಳಲು ಸಾಧ್ಯ. ಬೆಳಕು ನೀಡುವ ಹೃದಯ ಮನಸ್ಸಿಗೆ ಅರಳಿಸುವ ಕಾರ್ಯ ಕವಿ ಮಾಡುತ್ತಾನೆ. ಜಿಲ್ಲೆಯಲ್ಲಿ ಮಹಿಳೆಯರು ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ಕವಿತೆ ಓದುಗರಿಗೆ ಆಳವಾದ ಅನುಭಾವ ಸೃಷ್ಟಿಮಾಡುತ್ತದೆ. ಪ್ರೇರಣೆ ಕವಿತೆ ಶಬ್ಧಗಳೆಲ್ಲಾ ಅನುಭವದ ಜೊತೆಗೆ ಅನುಭಾವ ಕಟ್ಟಿಕೊಡುತ್ತದೆ. ಬಯಕೆಯ ಬಳ್ಳಿ ಪುಸ್ತಕದಲ್ಲಿನ ಎಲ್ಲ ಕವಿತೆಗಳು ಆಪ್ತ ಎನಿಸುತ್ತವೆ. ಹೂವಿನ ಹಾಗೆ ಅರಳಿ ಸುಗಂಧ ಸೂಸುತ್ತವೆ.
ಈ ಸಂದರ್ಭ ಪತ್ರಕರ್ತ ಪರಶುರಾಮ ಬಾಸಗಿ ಮಾತನಾಡಿ, ಬಯಕೆಯ ಬಳ್ಳಿಯ ಪುಸ್ತಕದಲ್ಲಿನ ಮಾಯೆಯ ಮರಳು ಕವನಗಳ ಸಾಲುಗಳನ್ನು ಓದುವ ಮೂಲಕ, ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನ ಹೆಚ್ಚುತ್ತವೆ. ಕವಿತೆಗಳು ಭಾವನೆಗಳ ಪ್ರತಿಬಿಂಬವಾಗಿವೆ ಎಂದರು.
ಆರ್.ಎಸ್ ಪಾಟೀಲ ಕೂಚಬಾಳ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಬಸನಗೌಡ ಪಾಟೀಲ ಮಾತನಾಡಿದರು.
ಕವಯತ್ರಿ ಸಂಗೀತಾ ರಾ. ತೇಲಿ ಮಾತನಾಡಿ, ಬಯಕೆಯ ಬಳ್ಳಿ ಕೃತಿ ನನ್ನ ಚೊಚ್ಚಲ ಕವನ ಸಂಕಲನವಾಗಿದ್ದು, ಈ ಕೃತಿಯಲ್ಲಿ ನನ್ನ ಮನದಾಳದ ಭಾವನೆಗಳ ಜೊತೆಗೆ ಬದುಕಿನ ವಿವಿಧ ಅನುಭವ, ನೋವುಗಳು ಪ್ರತಿಬಿಂಬಿಸಿರುವೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಭಗವಂತ ಜಿಗಜಿಣಗಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದಶಕರಾದ ಅರವಿಂದ ಹೂಗಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರೇಶ ದೊಡಮನಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ಶಾಲಿನಿ ಎಸ್. ತಳಕೇರಿ, ರಾಯಗೊಂಡ ಶಿವಪ್ಪ ತೇಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

