ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ಉತ್ಸವ ಅತಿ ವಿಜೃಂಭಣೆಯಿಂದ ಸಾವಳಗಿ ಗ್ರಾಮದಲ್ಲಿ ನಡೆಯಿತು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಮಲ್ಲಯ್ಯನ ಐದೇಶಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಐದೇಶಿ ಉತ್ಸವ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ವಾದ್ಯ ಮೇಳದೊಂದಿಗೆ ಅದ್ಧೂರಿಯಾಗಿ ಉತ್ಸವ ಸಾಗಿತು.
ಇಲ್ಲಿಂದ ಅಲ್ಲಿಗೆ ಹೋದಾರತ್ತ ಏನ್ ಕೊಡುವನೋ ಮಲ್ಲಯ್ಯ’ ಕೇಳಿದೆ ಅಂದರ, ಕುದರಿ ಛತ್ತರಗಿ ಸಂಪತ್ತು ಕೊಡುವನೋ ಮಲ್ಲಯ್ಯ, ಧನವು ಕೊಟ್ಟು ಧಾನ್ಯವ ಕೊಟ್ಟು, ಸಿರಿಯ ಕೊಡುವನೋ ಮಲ್ಲಯ್ಯ.
ಕಂಬಿ ಮಲ್ಲಯ್ಯ ದೇವರನ್ನು ಹೆಗಲ ಮೇಲೆ ಹೊತ್ತು ಸಾಗಿದ್ದು ಒಂದೆಡೆಯಾದರೆ ಅದರ ಮುಂಭಾಗದಲ್ಲಿ ಕನ್ನಡಿ, ಬಾಸಿಂಗ , ಮುತ್ತೈದೆಯರು ಆರತಿ, ದಿವಟಗಿ, ವಿವಿಧ ವಾದ್ಯ ಮೇಳದೊಂದಿಗೆ ಪ್ರತೀ ವರ್ಷದ ಪದ್ಧತಿಯಂತೆ ಕಂಬಿ ಮಲ್ಲಯ್ಯನನ್ನು ಕೂಡಿಸಿ ಮಂಗಳಾರತಿ ಮಾಡಿ ಕಂಬಿ ಐದೇಶಿ ಕಾರ್ಯಕ್ರಮ ನಡೆಯಿತು, ಸಾವಿರಾರು ಭಕ್ತರು ಕಂಬಿ ಮಲ್ಲಯ್ಯನಿಗೆ ಬೆಲ್ಲ ಅರ್ಪಿಸಿ ಭಕ್ತಿಯಿಂದ ನಮಿಸಿದರು.
ಐದೇಶಿ ಇಲ್ಲಿಯ ಆಚರಣೆಯಾಗಿದ್ದು, ಈ ಉತ್ಸವಕ್ಕೆ ಸಾವಳಗಿ ಪಟ್ಟಣದ ಎಲ್ಲ ಜನರು ಮನೆಯನ್ನು ಶುಚಿಗೊಳಿಸಿ ಬೀಗರನ್ನು ಆಹ್ವಾನಿಸಿ ಮಹಿಳೆಯರು ಆರತಿ ಸಮೇತ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಭಕ್ತರು ಮಲ್ಲಯ್ಯಾ ದೇವಸ್ಥಾನಕ್ಕೆ ಬಂದು ಮಲ್ಲಿಕಾರ್ಜುನ ಕಂಬಿ ಮಲ್ಲಯ್ಯನಿಗೆ ಬೆಲ್ಲದ ನೈವೇದ್ಯ ಹಂಚಿದರು.
ನಂತರ ಆಗಮಿಸಿದ ಸಾವಿರಾರು ಭಕ್ತರು ಕಂಬಿ ಮಲ್ಲಯ್ಯನಿಗೆ ಬೆಲ್ಲ ಅರ್ಪಿಸಿ ಭಕ್ತಿ ಮೆರೆದರು. ಶ್ರೀಶೈಲ ಪಾದಯಾತ್ರೆ ಮುಗಿಸಿಕೊಂಡು ಬಂದವರಿಗೆ ಅವರ ಬೀಗರು, ಅಕ್ಕ ತಂಗಿಯರು ವಸ್ತ್ರಗಳ ಕಾಣಿಕೆ ನೀಡಿದರು ಹಾಗೂ ಕಂಬಿಯ ಪೂಜಾರಿಗಳಿಂದ ಮಲ್ಲಯ್ಯಾ ಮಲ್ಲಯ್ಯಾ, ಗಿರಿ ಗಿರಿ ಮಲ್ಲಯ್ಯ ಹಾಗೂ ಪಂಚಾದಾರಿಗೆ ಮಂಗಲ, ಪಲ್ಲಾಧಾರಿಗೆ ಮಂಗಲ ಎಂಬ ದೇವರ ಬಿರುದಾವಳಿ ಘೋಷಣೆಯೊಂದಿಗೆ ಕಾಣಿಕೆ ಸಲ್ಲಿಸಿದರು.
ಶ್ರೀಶೈಲ ಪಾದಯಾತ್ರೆ ಮುಗಿಸಿಕೊಂಡ ಬಂದವರಿಗೆ ಅವರ ಬೀಗರು, ಅಕ್ಕ ತಂಗಿಯರು (ಆಹೇರಿ) ಸಮವಸ್ತ್ರಗಳನ್ನು ನೀಡಿ ಸತ್ಕರಿಸಿದರು. ಐದೇಶಿ ದಿನವಾಗಿದ್ದರಿಂದ ಇಡೀ ಊರಲ್ಲಿ ಒಂದು ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಒಟ್ಟಾರೆಯಾಗಿ ಐದೇಶಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.

