ಉದಯರಶ್ಮಿ ದಿನಪತ್ರಿಕೆ
ಅಥಣಿ: ಕ್ಷೇತ್ರದ ಗ್ರಾಮೀಣ ಭಾಗದ ಜನರಿಗೆ ಮೂಲಸೌಕರ್ಯ ಕಲ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದ್ದು, ತಾಲೂಕಿನ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು,” ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ಸಪ್ತಸಾಗರ, ತೀರ್ಥ ಹಾಗೂ ಖವಟಕೊಪ್ಪ ಗ್ರಾಮಗಳಲ್ಲಿ ಸುಮಾರು 14 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮಸ್ಥರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ಕಾಮಗಾರಿಗಳು ಸಹಕಾರಿಯಾಗಲಿವೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ 30 ಜನ ಶಾಸಕರು ದೆಹಲಿಗೆ ತೆರಳಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸವದಿ ಅವರು, “ಶಾಸಕರು ದೆಹಲಿಗೆ ಹೋಗಿರುವ ವಿಚಾರ ನನ್ನ ಗಮನದಲ್ಲಿದೆ. ಸರ್ಕಾರ ರಚನೆಯಾದ ಸಂದರ್ಭದಲ್ಲಿ ಹೈಕಮಾಂಡ್, ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಎರಡುವರೆ ವರ್ಷಗಳ ನಂತರ ಸಚಿವ ಸಂಪುಟ ಪುನರ್ ರಚನೆ ಮಾಡಿ ಬೇರೆಯವರಿಗೆ ಅವಕಾಶ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ಈಗ ಆ ಕಾಲಮಿತಿ ಮುಗಿದಿದೆ,” ಎಂದ ಅವರು “ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳೆ ಹೇಳಿದ್ದಾರೆ. ಆದ್ದರಿಂದ ಶಾಸಕರು ತಮ್ಮ ಭಾವನೆಗಳನ್ನು ಹೈಕಮಾಂಡ್ ಮುಂದೆ ವ್ಯಕ್ತಪಡಿಸಲು ಸಿಎಂ ಮತ್ತು ಡಿಸಿಎಂ ಅವರ ಒಪ್ಪಿಗೆ ಪಡೆದೇ ದೆಹಲಿಗೆ ತೆರಳಿದ್ದಾರೆ. ಸಚಿವ ಸಂಪುಟ ಪುನರ್ ರಚನೆಯಾಗಿ ಹೊಸಬರಿಗೆ ಅವಕಾಶ ಸಿಗಬೇಕು ಎಂಬುದು ಶಾಸಕರ ಆಶಯವಾಗಿದೆ,” ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಶಿವರುದ್ರ ಗುಳ್ಳಪ್ಪನವರ, ಅಕ್ಬರ ನಾಲತವಾಡ ಮುಖಂಡರಾದ ಸಂಜಯ ನಾಡಗೌಡರ, ಚಂದು ಸಂಕ್ರಟ್ಟಿ,ಡಿ ಬಿ ನದಾಫ, ಅಶೋಕ ಐಗಳಿ, ಅಪ್ಪಾಸಾಬ ಕಾಂಬಳೆ,ಮಹೇಂದ್ರ ಸುಲಾರೆ, ಯಲ್ಲಪ್ಪ ಕಾಂಬಳೆ,ಸುಬಾಸ ಕಾಂಬಳೆ,ಕಾಸಪ್ಪ ಕಾಂಬಳೆ ರಾಮು ಗಸ್ತಿ,ರಾಮೇಶ ಕಾಂಬಳೆ, ರಾಮು ಪುಜೇರಿ, ರಾಜು ಪಾಟೀಲ, ವಿಜಯ ಕಾಂಬಳೆ, ಅಶೋಕ್ ನಾಯಿಕ , ಪ್ರದೀಪ ನಂದಗಾಂವ , ಆನಂದ ಕುಲಕರ್ಣಿ, ಮಹಾದೇವ ಚೌಗಲಾ, ಚಂದ್ರಕಾಂತ್ ಕಾಮಗೌಡ, ಕಾಮಣ್ಣ ಸನದಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

