ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಕೃಷಿಯಲ್ಲಿ ನಿರಂತರ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದ್ದು, ಇಳುವರಿ ಕುಂಠಿತವಾಗುತ್ತಿದೆ. ಮಣ್ಣಿನ ಸಾರಾಂಶ ಸಂರಕ್ಷಿಸುವ ನಿಟ್ಟಿನಲ್ಲಿ ರಾಸಾಯನಿಕ ಗೊಬ್ಬರ ಬದಲಾಗಿ ಸಾವಯವ ಗೊಬ್ಬರ ಬಳಕೆ ಮಾಡಬೇಕೆಂದು
ಶಾಸಕ ಅನಿಲ್ ಚಿಕ್ಕಮಾದು ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಮೈಸೂರು-ಮಾನಂದವಾಡಿ ಮಾರ್ಗ ಮಧ್ಯೆದಲ್ಲಿರುವ ಲಕ್ಷ್ಮೀಪುರದಲ್ಲಿ ನೂತನವಾಗಿ ಆರಂಭವಾಗಿರುವ ಮೈಟೆಕ್ ಆಗ್ರೋ ಸಲ್ಯೂಷನ್ಸ್ ಕಚೇರಿ ಓಪನ್ ಮಾಡಿ ಮಾತನಾಡಿದರು. ಈ ಹಿಂದೆ ನಮ್ಮ ಪೂರ್ವಜರು ಸಾವಯವ ಗೊಬ್ಬರ ಬಳಸಿ, ಜಮೀನಿನಲ್ಲಿ ತರಕಾರಿ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದರು. ಈ ಪದ್ಧತಿಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನವನ ಆರೋಗ್ಯಕ್ಕೂ ಸಹಕಾರಿಯಾಗಿತ್ತು. ನೈಸರ್ಗಿಕವಾಗಿ ಬೆಳೆದ ತರಕಾರಿಗಳನ್ನು ತಿಂದು ಮನುಷ್ಯ 100-120 ವರ್ಷಗಳವರೆಗೆ ಬದುಕುತ್ತಿದ್ದರು. ಆದರೆ ಇತ್ತೀಚಿಗೆ ಜಾಸ್ತಿ ಕೆಮಿಕಲ್ಸ್ ಬಳಕೆ ಮಾಡುವುದರಿಂದ ಭೂಮಿಯ ಆರೋಗ್ಯ ಕೆಡುವುದರ ಜೊತೆಗೆ ಮನುಷ್ಯ ಜೀವಿಯು ಕೂಡ ಅನಾರೋಗ್ಯಕ್ಕೆ ತುತ್ತಾಗಿ 30 ವರ್ಷದ ಆಸುಪಾಸಿನಲ್ಲೇ ಅಕಾಲಿಕ ಮರಣಕ್ಕೀಡಾಗುತ್ತಿದ್ದಾರೆ. ದಯವಿಟ್ಟು ತಾಲೂಕಿನ ಜನತೆ ಸಾವಯವ ಗೊಬ್ಬರ ಬಳಸಿ ಶುಂಠಿ, ಬಾಳೆ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆಯಬೇಕೆಂದು ಶಾಸಕ ಅನಿಲ್ ಚಿಕ್ಕಮಾದು ಮನವಿ ಮಾಡಿದರು.
ಈ ವೇಳೆ ರೈತ ಪರ್ವ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೈ. ಎಲ್ ನವೀನ್ ಕುಮಾರ್, ಪುರಸಭೆ ಮಾಜಿ ಸದಸ್ಯ ಪ್ರೇಮ್ ಸಾಗರ್, ರೈತ ಪರ್ವ ಸಂಘದ ಸಿದ್ದಲಿಂಗೇಗೌಡ, ಇಂದಿರಾ ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು.
“ತಾಲೂಕಿನಲ್ಲಿ ರೈತರು ಅತಿ ಹೆಚ್ಚಾಗಿ ಶುಂಠಿ ಮತ್ತು ಬಾಳೆ ಬೆಳೆ ಬೆಳೆಯುತ್ತಿದ್ದು, ರಾಸಾಯನಿಕ ಗೊಬ್ಬರ ಬಳಕೆಯಿಂದ ಇಳುವರಿ ಕಾಣದೆ ನಷ್ಟ ಅನುಭವಿಸುತ್ತಿದ್ದಾರೆ. ಇನ್ನು ಮುಂದೆ ರೈತರು ಮೈಟೆಕ್ ಆಗ್ರೋದ ಸಾವಯವ ಗೊಬ್ಬರ ಬಳಕೆ ಮಾಡಿ ಅಧಿಕ ಇಳುವರಿ ಪಡೆಯಬೇಕು.”
– ನವೀನ್ ಕುಮಾರ್
ರೈತ ಪರ್ವ ಸಂಘದ ರಾಜ್ಯ ಕಾರ್ಯಾಧ್ಯಕ್ಷರು

