ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಇಂದಿನ ದಿನಮಾನಗಳಲ್ಲಿ ಮೊಬೈಲ್ ಅಬ್ಬರದ ನಡುವೆ ಮಕ್ಕಳಿಗೆ ಯೋಗ, ಧ್ಯಾನವೇ ಪರಿಹಾರ ಎಂದು ನಿವೃತ್ತ ಮುಖ್ಯಗುರು ಡಿ.ಎಂ.ಚೌದರಿ ಹೇಳಿದರು.
ಪಟ್ಟಣದ ಗುರು ಖಾಸ್ಗತೇಶ್ವರ ಮಿಡ್ಬ್ರೇನ್ ಯೋಗ ಮತ್ತು ಧ್ಯಾನ ತರಬೇತಿ ಕೇಂದ್ರದ ವತಿಯಿಂದ, ಶಾಲಾ ಆವರಣದಲ್ಲಿ, ವಿದ್ಯಾರ್ಥಿಗಳಿಗೆ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಈಗಿನ ಪರಿಸರದಲ್ಲಿ ಮಕ್ಕಳು ಮೊಬೈಲ್, ಕಂಪ್ಯೂಟರ್ ಗಳ ಹಿಂದೆ ಬಿದ್ದು ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಪಾಲಕರು ಎಷ್ಟೇ ಹತೋಟಿಗೆ ತರಬೇಕೆಂದರೂ ಸಾಧ್ಯವಾಗುತ್ತಿಲ್ಲ. ಇಂತವರಿಗೆ ಗುರು ಖಾಸ್ಗತೇಶ್ವರ ಮಿಡ್ಬ್ರೇನ್ ಯೋಗಾ ಶಾಲೆ ಮಕ್ಕಳಿಗೆ ಯೋಗ ಮತ್ತು ಧ್ಯಾನದ ತರಬೇತಿ ನೀಡುವ ಮೂಲಕ ಮಕ್ಕಳ ಮೂರನೇ ಕಣ್ಣನ್ನು ತೆರೆಸಿ ಅವರ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದಾರೆ. ಈ ವಿದ್ಯೆ ಪಡೆದ ಮಕ್ಕಳು ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಹೊಂದುವ ವಿಶ್ವಾಸ ನನಗಿದೆ. ಅಂತಹ ಶಕ್ತಿ ಯೋಗ ಮತ್ತು ಧ್ಯಾನಕ್ಕಿದೆ ಎಂದರು.
ಅತಿಥಿಯಾಗಿದ್ದ ಪ್ರೊ.ಪ್ರಕಾಶ ನರಗುಂದ ಮಾತನಾಡಿ, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವದರ ಜೊತೆಗೆ ದೈಹಿಕವಾಗಿ, ಮಾನಸಿಕವಾಗಿ ಸದೃಢರನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮನೆಯಲ್ಲಿ ಎಷ್ಟೇ ಕಲಿಸುತ್ತೇವೆ ಎಂದರೂ ಅವರ ಮೆದುಳನ್ನು ಚುರುಕುಗೊಳಿಸುವ ಪೂರ್ಣ ಕಾರ್ಯ ನಮ್ಮಿಂದ ಮಾಡಲು ಸಾಧ್ಯವಾಗುವದಿಲ್ಲ. ನಮ್ಮ ಮಕ್ಕಳ ಮೆದುಳನ್ನು ಚುರುಕುಗೊಳಿಸುವ ವಿದ್ಯೆ ಅತೀ ಸುಲಭವಾಗಿ ನಮ್ಮೂರಲ್ಲೇ ಸಿಗುತ್ತಿದೆ ಎಂದರೆ ನಾವು ಪುಣ್ಯವಂತರು. ಪ್ರತಿಯೊಬ್ಬ ಪಾಲಕರು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದರು.
ನಿವೃತ್ತ ಕಂಟ್ರೋಲರ್ ಎಂ.ಎಸ್.ಪೊಲೇಶಿ ಮುಖ್ಯ ಅತಿಥಿಯಾಗಿ ಮಾತನಾಡಿದರೆ, ಪಾಲಕರ ಪರವಾಗಿ ದೀಪಾ ಕುಲಕರ್ಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಗೆ ಯೋಗದ ಕಿಟ್ ವಿತರಿಸಲಾಯಿತು. ಪಾಲಕರೆಲ್ಲರೂ ಸೇರಿ ತರಬೇತಿ ಕೇಂದ್ರದ ಮುಖ್ಯಸ್ಥ, ನಿವೃತ್ತ ಶಿಕ್ಷಕ ಎ.ಆರ್.ಮುಲ್ಲಾ ಅವರಿಗೆ ಸನ್ಮಾನಿಸಿ ಗೌರವಿಸಿದರು. ತರಬೇತಿ ಪಡೆದ ನುರಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಾಲಕರಾದ ದಾನಮ್ಮ ಶಿವಶಿಂಪಿ, ಸಿ.ಎಂ.ಹಿರೇಮಠ, ಶಾಂತಾ ಢವಳೇಶ್ವರ, ಎಂ.ಎ.ಹೊನವಾಡ, ಬಿ.ಆರ್.ರಕ್ಕಸಗಿ ಸೇರಿದಂತೆ ಹಲವರು ಇದ್ದರು. ವೈದ್ಯ ರಾಮನಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಶರಣಮ್ಮ ಪಾಟೀಲ ನಿರ್ವಹಿಸಿದರು.

