ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹಕ್ಕೊತ್ತಾಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 2025-26 ನೇ ಸಾಲಿನ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣ, ಪ್ರಥಮ ಮಾನ್ಯತೆ ನೀಡುವಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದ್ದು, ಕೂಡಲೇ ಇದನ್ನು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಸಂಸದ ರಮೇಶ ಜಿಗಜಿಣಗಿ ಹಕ್ಕೊತ್ತಾಯ ಮಂಡಿಸಿದರು.
ಮಂಗಳವಾರ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕೇವಲ ಹಗರಣವಲ್ಲ, ಮಕ್ಕಳ ಭವಿಷ್ಯದ ದೃಷ್ಟಿಕೋನದ ಪ್ರಶ್ನೆ, ಮುಂದೆ ನಿಯಮಾವಳಿ ಮೀರಿವೆ ಎಂದು ಶಾಲೆಗಳನ್ನು ಬಂದ್ ಮಾಡಿದರೆ ಆ ಮಕ್ಕಳು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದರು.
ಈ ವಿಷಯವಾಗಿ ತಪ್ಪಾಗಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ, ಆದರೆ ತಪ್ಪಾಗಿದೆ ಎಂದು ಹೇಳಿ ಸುಮ್ಮನೆ ಕುಳಿತರೇ ಸಾಕೇ? ಎಂದು ಪ್ರಶ್ನಿಸಿದರು.
ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ, ಮುಖ್ಯಮಂತ್ರಿ,8 ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ, ಈ ವಿಷಯದಲ್ಲಿ ತನಿಖೆ ನಡೆಸಲು ವಿಳಂಬ ನೀತಿ ಅನುಸರಿಸಿದರೆ ಹೋರಾಟದ ದಾರಿ ಅನಿವಾರ್ಯ ಎಂದರು.
ಡಿ.ಡಿ.ಪಿ.ಐ ದಾಖಲಿಸಿರುವ ಎಫ್ ಐ ಆರ್ ಕುರಿತು ತನಿಖೆ ತ್ವರಿತತವಾಗಿ ಪೂರ್ಣಗೊಇಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಅದೇ ತೆರನಾಗಿ ಡಿ.ಡಿ.ಪಿ.ಐ ಎಫ್ ಐ ಆರ್ ನಲ್ಲಿ ದಾಖಸಿರುವ 58 ಶಾಲೆಗಳ ಹೊರತಾಗಿಯೂ ಇನ್ನು 200 ಕ್ಕೂ ಅಧಿಕ ಶಾಲೆಗಳ ಮಾನ್ಯತೆ ನವೀಕರಣದಲ್ಲಾದ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅನುದಾನ ನುಂಗಿ ನೀರು ಕುಡಿದಿರುವ ಸರ್ಕಾರ, ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ದೊಡ್ಡ ಪ್ರಮಾಣದಲ್ಲಿ ಹಗರಣ ನಡೆಸಿತು. ಇದೀಗ ಶಿಕ್ಷಣ ಇಲಾಖೆಗೂ ಬಾಯಿ ಹಾಕಿದ್ದು, “ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣ, ಪ್ರಥಮ ಮಾನ್ಯತೆ ಪ್ರಕರಣ’ ದಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿದೆ ಎಂದರು.
2025-26 ನೇ ಸಾಲಿಗೆ ರಾಜ್ಯದಲ್ಲಿ ಒಟ್ಟು 7483 ಸಂಸ್ಥೆಗಳು ಶಾಲೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 1310 ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 446 ಸಂಸ್ಥೆಗಳು ಮಾನ್ಯತೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, 206 ಸಂಸ್ಥೆಗಳಿಗೆ ಮಾನ್ಯತೆ ನವೀಕರಿಸಲಾಗಿದೆ. ಆ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾದ ಮತ್ತು ಮಾನ್ಯತೆ ನವೀಕರಣಗೊಂಡ ಜಿಲ್ಲೆಗಳಲ್ಲಿ ವಿಜಯಪುರ ಪ್ರಥಮ ಸ್ಥಾನದಲ್ಲಿದೆ.
ಕಳೆದ ವಿಧಾನ ಸಭೆ ಅಧಿವೇಶನದಲ್ಲಿಯೂ ಈ ಕುರಿತು ಎಂಎಲ್ಸಿ ಕೇಶವ ಪ್ರಸಾದ್ ಅವರು ಧ್ವನಿ ಎತ್ತಿದಾಗ ‘ಸ್ವತಂತ್ರ ತನಿಖಾ ತಂಡ ರಚಿಸುವುದಾಗಿ ‘ ಭರವಸೆ ನೀಡಿದ್ದ ಶಿಕ್ಷಣ ಸಚಿವರು ಈವರೆಗೂ ತಂಡ ರಚಿಸಿಲ್ಲ ಎಂದು ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿವೇಕಾನಂದ ಡಬ್ಬಿ, ಸಂದೀಪ ಪಾಟೀಲ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಅಧಿಕಾರಿಗಳನ್ನು ಅಮಾನತ್ತು ಮಾಡಿ
ಆರೋಪ
ಎದುರಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ತಕ್ಷಣದಿಂದಲೇ ಕರ್ತವ್ಯದಿಂದ ತಾತ್ಕಾಲಿಕವಾಗಿಯಾದರೂ ಅಮಾನತ್ತಿನಲ್ಲಿಡಬೇಕು ಎಂದು ಸಂಸದ ಜಿಗಜಿಣಗಿ ಒತ್ತಾಯಿಸಿದರು.
ಈ ಹಗರಣದ ಕುರಿತು ಪಾಲಕರು ಆತಂಕಕ್ಕೀಡಾಗಿದ್ದಾರೆ, ಮಕ್ಕಳ ಭವಿಷ್ಯ ಅವರನ್ನು ಕಾಡುತ್ತಿದೆ,
ಅಕ್ರಮ ಎಂದು ಕಂಡು ಬಂದಿರುವ ಶಾಲೆಗಳ ಪಟ್ಟಿಯನ್ನು ಕೂಡಲೇ ಬಹಿರಂಗಗೊಳಿಸಿ ಪಾಲಕ ಹಾಗೂ ಪೋಷಕರ ಆತಂಕ ನಿವಾರಿಸಬೇಕು, ಈಗಿರುವ ಗೊಂದಲ ನಿವಾರಣೆ ಮಾಡಿ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣ ಪ್ರಕ್ರಿಯೆ ಹೊಸದಾಗಿ ಆರಂಭಿಸಬೇಕು ಎಂದರು.

