ವಿಜಯಪುರದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಪ್ರಮುಖರಿಂದ ಸುದ್ದಿಗೋಷ್ಟಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಇದೇ ೧೯ ರಿಂದ ಎರಡು ದಿನಗಳ ಕಾಲ ಜಿಲ್ಲಾಡಳಿತ ಹಾಗೂ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಬಸವ ಜಯಂತಿ ಉತ್ಸವ-೨೦೨೬ ಅರ್ಥಪೂರ್ಣ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಪ್ರಮುಖ ವಿ.ಸಿ. ನಾಗಠಾಣ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ದಿ.೧೯ ರಂದು ಬೆಳಿಗ್ಗೆ ಮಕ್ಕಳಿಂದ ವಚನ ಕಂಠಪಾಠ, ಬಸವಾದಿ ಶರಣರ ಕುರಿತಾದ ಮಕ್ಕಳ ಕವನಗೋಷ್ಠಿ ನಡೆಯಲಿದೆ, ನಂತರ ಯುವ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಸಂಜೆ ೬ ರಿಂದ ೯.೩೦ ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭಗವಂತನ ಮರಣ ಎಂಬ ಸಾಮಾಜಿಕ ಸಂದೇಶವುಳ್ಳ ನಾಟಕ ಪ್ರದರ್ಶನ ನಡೆಯಲಿದೆ. ಚಿಕ್ಕಮಕ್ಕಳಾದಿಯಾಗಿ ಪ್ರತಿಯೊಬ್ಬರನ್ನು ಒಳಗೊಂಡು ಅದರಲ್ಲೂ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಬಸವ ಪ್ರಜ್ಞೆ ಮೂಡಿಸುವುದಕ್ಕಾಗಿ ಹೆಚ್ಚಿನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ದಿ.೨೦ ರಂದು ಸಹ ವಿಭಿನ್ನ ಕಾರ್ಯಕ್ರಮಗಳು ಜರುಗಲಿವೆ, ಅಂದು ಬಸವನ ಬಾಗೇವಾಡಿಯಿಂದ ಮ್ಯಾರಾಥಾನ್ ಮೂಲಕ ಬಸವ ಜ್ಯೋತಿ ವಿಜಯಪುರ ತಲುಪಲಿದೆ. ನಂತರ ಕಾಯಕಯೋಗಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಯೋಗ ಹಾಗೂ ಮಲ್ಲಗಂಬ ಪ್ರದರ್ಶನ ನಡೆಯಲಿದ್ದು, ನಂತರ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ದಕ್ಷಿಣ ಭಾರತದ ವಿವಿಧ ಕವಿಗಳು ಕವನ ವಾಚನ ಮಾಡಲಿದ್ದಾರೆ. ಅದೇ ದಿನ ೫೦೦ಕ್ಕೂ ಅಧಿಕ ಮಹಿಳೆಯರು ಮಧ್ಯಾಹ್ನ ೩ ಕ್ಕೆ ಪವಿತ್ರ ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ಭಕ್ತಿಪೂರ್ಣ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಳ್ಳುವ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ರಂಗಮಂದಿರಕ್ಕೆ ತಲುಪಲಿದೆ. ಅದೇ ದಿನ ಸಂಜೆ ಜಿಲ್ಲಾಡಳಿತ ಹಾಗೂ ಉತ್ಸವ ಸಮಿತಿ ಸಹಯೋಗದಲ್ಲಿ ಬಸವ ಜಯಂತಿ ಆಚರಣೆ ನಡೆಯಲಿದೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಪ್ರಮುಖರಾದ ಸಂ.ಗು. ಸಜ್ಜನ, ಘನಶ್ಯಾಂ ತೋಸ್ನಿವಾಲ್, ಪ್ರಭುಗೌಡ ಪಾಟೀಲ, ಡಾ.ಜೆ.ಎಸ್. ಪಾಟೀಲ, ಬಸನಗೌಡ ಹರನಾಳ, ಎಸ್.ಎಚ್. ನಾಡಗೌಡ, ಡಾ.ರವಿಕುಮಾರ ಬಿರಾದಾರ, ಜಂಬುನಾಥ ಕಂಚ್ಯಾಣಿ, ವಿದ್ಯಾರಾಣಿ ತುಂಗಳ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಲಿಂಗಾಯತೇತರ ಸಾರಥ್ಯ
ಅಖಿಲ ಭಾರತ ಲಿಂಗಾಯತ ಮಹಾಸಭೆ ಬಸವ ಜಯಂತಿಯನ್ನು ಆಚರಣೆ ಮಾಡುತ್ತಾ ಬಂದಿದೆ, ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿ ಬಸವಾದಿ ಶರಣರ ಜಯಂತೋತ್ಸವ ನಡೆಯಬೇಕು, ಕೇವಲ ಮಹಾತ್ಮರನ್ನು ಆಯಾ ಸಮುದಾಯದವರಿಗೆ ಸೀಮಿತಗೊಳಿಸುವ ಕೆಲಸ ನಡೆಯುತ್ತಿರುವುದು ನೋವಿನ ಸಂಗತಿ, ಈ ಹಿನ್ನೆಲೆಯಲ್ಲಿ ಬಸವ ಜಯಂತಿ ಎಲ್ಲ ಸಮುದಾಯದವರ ಸಹಭಾಗಿತ್ವದಲ್ಲಿ ನಡೆಯಬೇಕು ಎನ್ನುವ ಕಾರಣಕ್ಕೆ ಖ್ಯಾತ ಉದ್ಯಮಿ ಘನಶ್ಯಾಮ ತೋಸ್ನಿವಾಲ್ ಅವರನ್ನು ಉತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಉತ್ಸವ ಸಮಿತಿ ಪ್ರಮುಖರು ವಿವರಿಸಿದರು.

