ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೨೦೨೫-೨೬ನೇಯ ಸಾಲಿನಲ್ಲಿ ಸಿಇಟಿ/ನಿಟ್ ತರಬೇತಿಗಾಗಿ ಬೆಂಗಳೂರಿನ ಎಕ್ಷೆಲ್ ಅಕಾಡೆಮಿಯ ಸಹಯೋಗದೊಂದಿಗೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವರ್ಷಪೂರ್ತಿ ತರಬೇತಿಯನ್ನು ನೀಡಲಾಗಿದೆ. ಪ್ರಸ್ತುತ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಹೇಳಿದರು.
ಸಿಂದಗಿ ಪಟ್ಟಣದ ಆರ್.ಡಿ.ಪಾಟೀಲ ಕಾಲೇಜಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಗಣೇಶ ಬಿರಾದಾರ ಎಂಬ ವಿದ್ಯಾರ್ಥಿ ೬೦೦ ಅಂಕಗಳಿಗೆ ೫೮೮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ೭ನೆಯ ಸ್ಥಾನ ಪಡೆದುಕೊಂಡು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಕಾಲೇಜಿನ ಒಟ್ಟು ಫಲಿತಾಂಶ ಶೇ.೯೪.೨೪ರಷ್ಟಾಗಿದೆ. ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ರೇಂಜರ್ ವಿವಿಧ ಕ್ರೀಡೆಗಳಲ್ಲಿಯೂ ಭಾಗವಹಿಸುವ ಮೂಲಕ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗೂ ಸಾಧನೆ ಮಾಡಿದ್ದಾರೆ. ಬೆಲ್ಟ್ಕುಸ್ತಿಯಲ್ಲಿ ಗಣೇಶ ಎಂಬ ವಿದ್ಯಾರ್ಥಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ೩ನೆಯ ಸ್ಥಾನ ಪಡೆದುಕೊಂಡು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾನೆ ಎಂದರು.
ಈ ವೇಳೆ ಶ್ರೀ ಪದ್ಮರಾಜ ಮಹಿಳಾ ಪಪೂ ಕಾಲೇಜಿನ ಪ್ರಾಚಾರ್ಯ ವ್ಹಿ.ಡಿ.ಪಾಟೀಲ ಮಾತನಾಡಿ, ಶೈಕ್ಷಣಿಕ ಸಾಧನೆಯ ಜೊತೆಗೆ ಮಹಿಳಾ ಪಪೂ ಕಾಲೇಜಿನ ವಿದ್ಯಾರ್ಥಿನಿಯರು ಕ್ರೀಡೆಯಲ್ಲಿಯೂ ಸಹ ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟç ಮಟ್ಟದವರೆಗೂ ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ ಮೇಲುಗೈ ಸಾಧಿಸುತ್ತಿದ್ದಾರೆ. ಅದರಲ್ಲಿ ರಜಿಯಾಬೇಗಂ ಮ್ಯಾಗೇರಿ ಎನ್ನುವ ವಿದ್ಯಾರ್ಥಿನಿ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ, ಝಾರ್ಖಂಡ ರಾಜ್ಯದಲ್ಲಿ ನಡೆಯುವ ಅಂತರ್ರಾಷ್ಟ್ರೀಯ ವ್ಹಾಲಿಬಾಲ್ ತಂಡಕ್ಕೆ ಆಯ್ಕೆಯಾಗಲು ತರಬೇತಿಗಾಗಿ ಮಹಾವಿದ್ಯಾಲಯ ವತಿಯಿಂದ ಕಳುಹಿಸಿಕೊಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿಗೆ ಪ್ರಥಮ ಹಾಗೂ ಜಿಲ್ಲೆಗೆ ೭ನೆಯ ಸ್ಥಾನ ಪಡೆದ ವಿದ್ಯಾರ್ಥಿ ಗಣೇಶ ಬಿರಾದಾರ ಹಾಗೂ ವಾಣಿಜ್ಯ ವಿಭಾಗದ ಸುಪ್ರಿತಾ ಮಾವೂರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ವಿಶ್ವನಾಥ ನಂದಿಕೋಲ, ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾದವ್, ಬಿ.ಬಿ.ಜಮಾದಾರ, ಪ್ರಸನ್ನಕುಮಾರ ಜೋಗುರ, ಜಿ.ಎ.ನಂದಿಮಠ, ನವೀನ ಶೆಳ್ಳಗಿ, ಚಂದ್ರು ಬಬಲೇಶ್ವರ ಸೇರಿದಂತೆ ಇತರರು ಇದ್ದರು.

