ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಬಾಳ ದೇವತೆ,
ನಾನಿಂದು ಬಾನಿನಾಚೆಯ ಪರಿಧಿಯಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿದ್ದೇನೆಂದರೆ ಅದಕ್ಕೆ ಕಾರಣ ನಿನ್ನೊಂದಿಗೆ ಕಳೆದ ಸವಿ ಕ್ಷಣಗಳೇ ಹೊರತು ಬೇರೆನಿಲ್ಲ. ನಿನ್ನನ್ನು ಸೇರುವ ಮುನ್ನ ಬದುಕು ಹರಿದ ಗಾಳಿ ಪಟವಾಗಿತ್ತು. ಮನದೊಳಗೆ ಸುಂದರ ಕನಸುಗಳು ನುಸುಳಲು ಬಿಡದಂಥ ವಿಚಿತ್ರ ಪರಿಸ್ಥಿತಿ. ಒಳಗೊಳಗೆ ಅವಮಾನ ನುಂಗಿ ಕೊಳ್ಳುತ್ತಿದ್ದೆ. ಬಡತನದ ಅಸಹಾಯಕ ಸ್ಥಿತಿ ಕಣ್ಣೀರನ್ನೂ ಬತ್ತಿಸಿತ್ತು. ಹೋದಲೆಲ್ಲ ಹಡೆದವ್ವನಿಗಾದ ಅವಮಾನಗಳು ಸುತ್ತಿಕೊಂಡು ಬರುತ್ತಿದ್ದವು. ಹಣೆಯ ಮೇಲಿನ ಗಾಯದ ಗೀರಿನಂತೆ ಎದ್ದು ಕಾಣುತ್ತಿದ್ದವು.ಬೀದಿ ದೀಪಗಳ ಕೆಳಗೆ ಪುಸ್ತಕ ತೆರೆದಾಗಲೂ ನನ್ನನ್ನು ನಿಲ್ಲಿಸಿ ಕೇಳುತ್ತಿದ್ದವು. ಬೆಟ್ಟದ ಮೇಲೆ ಚಳಿ ಬೀಸುವಾಗಲೂ ಮೈಯಲ್ಲಿ ಸಣ್ಣ ನಡುಕ. ಬದುಕು ಹೀಗೇ ನನ್ನನ್ನು ಕಪಿ ಮುಷ್ಟಿಯಲ್ಲಿ ಹಿಡಿದುಕೊಂಡೇ ನಡೆದರೆ ಗತಿ ಏನು? ಎಂಬ ಚಿಂತೆಯ ಸುಳಿಯಲ್ಲಿ ಸಿಕ್ಕಾಗ ಭರವಸೆಯ ಕಿರಣದಂತೆ ಬಂದ ಬಾಳ ದೇವತೆ ನೀನು. ಬೆಟ್ಟದ ಮೇಲಿನ ಹನುಮಂತನ ದೇವಾಲಯ ನನ್ನ ಖಾಯಂ ವಿಳಾಸ. ನೀನು ಪ್ರತಿ ಶನಿವಾರ ಗೆಳತಿಯರ ಗುಂಪಿನೊಂದಿಗೆ ತಪ್ಪದೇ ಆಂಜನೇಯನಿಗೆ ಕೈ ಮುಗಿಯಲು ಬರುತ್ತಿದ್ದೆ.
ನನ್ನೆಡೆಗೆ ವಿಶೇಷ ಪ್ರೀತಿಯ ನಗೆ ಚೆಲ್ಲಿ ನೋಡುತ್ತಿದ್ದೆ. ಅದೊಂದು ದಿನ ಸಂಜೆ ನೀನೊಬ್ಬಳೇ ಶನಿ ದೇವರಿಗೆ ಬಂದಿದ್ದೆ. ಎಂದಿನಂತೆ ನಾನು ದೇವಸ್ಥಾನದಿಂದ ಸ್ವಲ್ಪ ದೂರ ಇರುವ ಚಪ್ಪಡಿ ಕಲ್ಲಿನ ಮೇಲೆ ಒಂಟಿಯಾಗಿ ಕೂತಿದ್ದೆ. ಪ್ರದಕ್ಷಿಣೆ ಹಾಕಿ ಪೂಜೆ ಸಾಮಗ್ರಿಗಳನ್ನು ಹಿಡಿದು ಅತ್ತಿತ್ತ ನೋಡುತ್ತ ನಿಧಾನವಾಗಿ ನಾನು ಕುಳಿತಲ್ಲಿಗೆ ಬಂದೆ. ತೆಂಗಿನ ಕಾಯಿ ಚಿಪ್ಪು ಕೈಯಲ್ಲಿ ಕೊಟ್ಟು ಚಚ್ಚಲು ಹೇಳಿದೆ. ಚಚ್ಚಿ ಕೊಟ್ಟದ್ದನ್ನು ಮರಳಿ ನನಗೆ ಪ್ರಸಾದ ಎಂದು ನೀಡಿದ್ದೆ. ನನ್ನನ್ನೇ ದಿಟ್ಟಿಸುತ್ತ ಮೆಲ್ಲನೆ ಮಂದಹಾಸ ಬೀರಿದೆ. ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮನಸ್ಸು ಹಂಬಲಿಸಿತಾದರೂ ಧೈರ್ಯವಾಗಲಿಲ್ಲ. ಬೇರೆಡೆಗೆ ನೋಟ ಹರಿಸಿ ಕೂತೆ.

‘ಯಾವಾಗಲೂ ನೀವಿಲ್ಲಿರುವುದನ್ನು ನೋಡಿದಿನಿ. ತುಂಬಾ ಮುಗ್ಧ ಜೀವಿ ನೀವು. ನನ್ನಂಥ ಅಂದ ಚೆಂದದ ಹುಡುಗಿಯ ಕಂಡರೆ ಮಂಗನಂತೆ ಹಲ್ಕಿರಿದು ಬೆನ್ನು ಬೀಳೋ ಹುಡಗರೇ ಜಾಸ್ತಿ ಅಂಥದ್ದರಲ್ಲಿ ನೀವು ಒಂದು ದಿನವೂ ಕಣ್ಣೆತ್ತಿ ನೋಡಿಲ್ಲ. ಅದ್ಯಾವ ಹುಳು ನಿಮ್ಮ ತಲೆ ಕೊರಿತಿದೆ ಅನ್ನೋ ವಿಷಯ ಅರ್ಥಾನೇ ಆಗ್ತಿಲ್ಲ. ನನಗೆ ತಿಳಿದ ಹಾಗೆ ಬದುಕಿನ ಬವಣೆಗಳು ನಿಮ್ಮನ್ನು ತಿನ್ನುತ್ತಿರಬಹುದು. ಸಮಸ್ಯೆಗಳು ಯಾರಿಗಿಲ್ಲ ಹೇಳಿ. ನಿಮಗೆ ದುಡ್ಡಿನ ಸಮಸ್ಯೆ. ದುಡ್ಡಿದ್ದವರಿಗೆ ದುಡ್ಡು ಇದ್ದಾಗ ಮಾತ್ರ ಎಲ್ಲರೂ ನಮ್ಮವರು. ದುಡ್ಡು ಕಳೆದು ಹೋದರೆ ಯಾರೂ ನನ್ನೊಂದಿಗಿಲ್ಲ.ಅನ್ನೋ ಸಮಸ್ಯೆ. ತಲೆ ಇರೊರು ಎಲೆ ಮಾರಿ ಜೀವನ ಮಾಡ್ತಾರೆ. ನಿಜ ಹೇಳಬೇಕಂದರೆ ಬಡತನ ಅನ್ನೋದು ಶಾಪ ಅಲ್ಲ. ಸೂಪ್ತ ಸಾಮರ್ಥ್ಯ ಹೊರಗೆಳೆಯೋ ಸಾಧನ. ಅದೊಂದು ಸುವರ್ಣ ಅವಕಾಶ.’ಎನ್ನುತ್ತ ಕಲ್ಲಿನ ಅಂಚಿನ ಮೇಲಿಟ್ಟಿದ್ದ ನನ್ನ ಕೈ ಮೇಲೆ ಕೈ ಇರಿಸಿ ಧೈರ್ಯ ತುಂಬಿದೆ. ಕಾರ್ಗತ್ತಲು ತುಂಬಿದ ಬದುಕಿನಲ್ಲಿ ನಿನ್ನ ಸ್ಪೂರ್ತಿ ಮಾತುಗಳು ಬೆಳಕಿನ ಬೀಜದಂತೆ ತಲೆಯಲ್ಲಿ ಮೊಳೆಯತೊಡಗಿದವು. ನೀನಾಡಿದ ಮಾತುಗಳು ನಿನ್ನ ಮೃದು ಸ್ಪರ್ಷ ಪುನಃ ಪುನಃ ನೆನಪಾಗಿ ರಾತ್ರಿಯೆಲ್ಲ ಕಣ್ರೆಪ್ಪೆಗಳು ಅಂಟಿಕೊಳ್ಳಲೇ ಇಲ್ಲ
ಭಗಿರಥ ಪ್ರಯತ್ನ ಮಾಡಿಯಾದರೂ ಸರಿ ಮೇಲೇಳಲೇಬೇಕೆಂದು ಅಂದೇ ನಿರ್ಧರಿಸಿದೆ. ವಾಚನಾಲಯದಲ್ಲಿರುವ ಎಲ್ಲ ಪುಸ್ತಕಗಳ ತಿರುವಿ ಹಾಕದೇ ಬಿಡಲಿಲ್ಲ. ಐದಾರು ತಿಂಗಳ ಅಜ್ಞಾತವಾಸದಂತೆ ಕಳೆದೆ. ನಿನ್ನನ್ನು ಕಾಣುವ ಹಂಬಲ ಹೆಚ್ಚಾಗಿ ಶನಿವಾರ ಸಂಜೆ ಬೆಟ್ಟ ಹತ್ತಿದೆ. ನೀನೇ ಮಾತಿಗೆಳದೆ.ಸಂತಸದ ಭರದಲ್ಲಿ ನನ್ನಿಂದ ಮಾತು ಹೊರ ಬರಲಿಲ್ಲ. ಒಲವ ಕಂಗಳಿಂದ ನೋಡುತ್ತ ‘ಏನ್ ಸಮಾಚಾರ? ಇಷ್ಟು ದಿನ ಎಲ್ಲಿ ಮಾಯ ಆಗಿದ್ರಿ?’ ಎಂದು ಕಣ್ಮಿಟುಕಿಸಿದೆ. ನನ್ನ ಜೊತೆ ಹೇಳಿಕೊಳ್ಳೋಕೆ ನಾಚಿಕೆ ಅಡ್ಡ ಆಗ್ತಿದೆಯಾ? ಎಂದು ಕಿಚಾಯಿಸಿ ನಿನ್ನ ಮೃದುವಾದ ಕೈ ಬೆರಳುಗಳೊಂದಿಗೆ ನನ್ನ ಒರಟಾದ ಬೆರಳುಗಳನು ಹಿಡಿದುಕೊಂಡೆ. ಹಿತವಾದ ಸ್ಪರ್ಷವೆನಿಸಿ ನಿನ್ನನ್ನೇ ದಿಟ್ಟಿಸುತ್ತ ಕುಳಿತೆ. ಯಾರಾದರೂ ನೋಡಿದರೆ ಎಂದು ಭಯವೆನ್ನಿಸಿತು ಆದರೂ ಕೈಯನ್ನು ಬಿಡಿಸಿಕೊಳ್ಳುವ ಮನಸ್ಸಾಗಲಿಲ್ಲ. ಯಾರೋ ನೋಡ್ತಾರೆ ಅನ್ನೋ ಭಯ ಬೇಡ. ನೀನೆಂದ್ರೆ ನಂಗೆ ತುಂಬಾನೇ ಇಷ್ಟ. ಎನ್ನುತ್ತ ಕೈ ಅದುಮಿದೆ.. ಮತ್ತಷ್ಟು ಪುಳಕವೆನಿಸಿತು. ‘ಇಲ್ಲ ನೀನೇ ಹೇಳು ನಾ ಕೇಳ್ತಿನಿ.’ ಎಂದು ಹೇಳುವಾಗ ದನಿ ನಡುಗುತ್ತಿತ್ತು. ಕೈ ಹಿಡಿದೇ ಕೂತೆ. ನಿನ್ನ ಮಾತಿಗೆ ಕಿವಿಯಾದೆ.
ನೀನು ನನಗೆ ತಾಗುವಂತೆ ಕುಳಿತಿದ್ದರಿಂದ ನಿನ್ನ ಮೈ ಸುವಾಸನೆಯ ಘಮಲು ಮೂಗಿಗೆ ತಾಕಿ ತಡೆಯಲಾರೆನ್ನಿಸಿ ನನ್ನ ಬಾಹುಗಳಲ್ಲಿ ಗಟ್ಟಿಯಾಗಿ ಬಂಧಿಸಿ ಬಿಡಬೇಕೆನ್ನಿಸಿತು. ಬಾಚಿ ತಬ್ಬಿಕೊಂಡರೆ ನೀನು ಏನೆಂದುಕೊಳ್ಳುವೆ ಏನೋ ಎಂದು ಸುಮ್ಮನಾದೆ. ನೀನು ನನ್ನೆಡೆಗೆ ಪ್ರೀತಿ ತುಂಬಿದ ನೋಟ ಚೆಲ್ಲುತ್ತ ‘ಕಳೆದ ಐದಾರು ತಿಂಗಳಲ್ಲಿ ಒಂಚೂರು ಬದಲಾಗಿಲ್ಲ. ಆದರೆ ಕಟ್ಟಿದ ಸಿಇಟಿ ಪರೀಕ್ಷೆಗೆ ತಯಾರಿ ಜೋರಾಗಿ ಮಾಡಿದಿಯಾ ಅಂತ ನಿನ್ನ ಕಂಗಳೇ ಹೇಳ್ತಿವೆ. ಈ ಸಲ ನೌಕರಿ ಖಂಡಿತ ಸಿಕ್ಕೇ ಸಿಗುತ್ತೆ. ನಿನ್ನ ಹಡದವ್ವನ ದುಃಖ ಕೊನೆಗೊಳ್ಳುವ ಕಾಲ ಸನಿಹ ಬಂದಿದೆ.’ ಅಂದೆ ದೈನ್ಯತೆಯಿಂದ ನಿನ್ನ ನೋಡಿದೆ.
ಮುಸ್ಸಂಜೆ ಸುತ್ತಲೂ ಕತ್ತಲಾವರಿಸುತ್ತಿತ್ತು. ‘ತಡವಾಗುತ್ತೆ. ಮನೆಯಲ್ಲಿ ದಾರಿ ಕಾಯ್ತಿರ್ತಾರೆ. ಹೋಗೋಣ್ವಾ.’ ಎಂದು ನನ್ನೆದೆಗೆ ನವಿರಾಗಿ ತಿವಿದು ನಿನ್ನ ಗಾಡಿಯ ಕೀ ಕೈಗಿತ್ತೆ. ‘ನೀನೇ ಓಡಿಸು ನಾ ಹಿಂದೆ ಕೂತ್ಕೋತಿನಿ.’ ಎಂದು ಜಂಭದ ಚೀಲ ಹೆಗಲೇರಿಸಿಕೊಂಡೆ. ಆ ದಾರಿಯಲ್ಲಿ ಗಾಡಿಗಳು ಆಗೊಮ್ಮೆ ಈಗೊಮ್ಮೆ ಎದುರಾಗುತ್ತಿದ್ದವು. ಕತ್ತಲಾಗುತ್ತಿದ್ದಂತೆ ನಿಧಾನವಾಗಿ ಗಾಡಿ ಓಡಿಸುತ್ತಿದ್ದ ನನ್ನ ಬೆನ್ನಿಗೆ ಮುಖ ಒತ್ತಿದೆ. ನಿನ್ನ ಕಪ್ಪಾದ ಮುಂಗುರಳಗಳು ಕೆನ್ನೆಗೆ ತಾಕುತ್ತಿದ್ದವು. ಕೂದಲಿನ ಪರಿಮಳ ಹುಚ್ಚು ಹಿಡಿಸ ಹತ್ತಿತು. ಒಮ್ಮೆ ಗಟ್ಟಿಯಾಗಿ ಆಲಿಂಗಿಸಿದರೆ ತಪ್ಪೇನು ಆಗಲ್ಲ ಎಂದು ಹೇಳಬೇಕೆನಿಸಿತು. ನೀರವ ಮೌನ ಇಬ್ಬರೂ ಮಾತನಾಡುತ್ತಿಲ್ಲ. ಧೈರ್ಯ ತಂದುಕೊಂಡು ಸ್ವಲ್ಪ ಹಿಂದೆ ಸರಿದೆ.’ಇದೆಲ್ಲ ಕೊರಳಿಗೆ ತಾಳಿ ಕಟ್ಟಿದ ಮೇಲೆ.’ ಎಂದು ನಕ್ಕೆ. ಗಾಡಿ ನಿಲ್ಲಿಸಿ ನಾನು ಮುಖ ತಗ್ಗಿಸಿದೆ.. ‘ಚಿಂತಿಸದಿರು. ನಾನು ಎಂದೆಂದಿಗೂ ನಿನ್ನವಳೆ. ನೀನೇ ನನ್ನುಸಿರು.’ ಎಂದಾಗ ಎಷ್ಟೇ ತಡೆದುಕೊಂಡರೂ ಕಣ್ಣಲ್ಲಿ ನೀರು ಜಿನುಗಿತು. ತಗ್ಗಿಸಿದ ನನ್ನ ಮುಖವನ್ನೆತ್ತಿ ಮೆಲ್ಲಗೆ ಹಣೆಗೆ ಹೂ ಮುತ್ತನಿಕ್ಕಿದೆ. ನನ್ನ ಮಾತಿಗೂ ಕಾಯದೇ ಜೋರಾಗಿ ಎಕ್ಸಿಲೇಟರ್ ತಿರುವಿ ಹೊರಟೇ ಬಿಟ್ಟೆ.
ನಿನ್ನ ಕನಸಿನಂತೆ ನನ್ನ ಹಡೆದವ್ವನ ದುಃಖಗಳಿಗೆಲ್ಲ ಮಂಗಳ ಹಾಡುವ ಸುಯೋಗ ಕೂಡಿ ಬಂದಿದೆ. ನಾನೀಗ ನಿನಗೆ ತಕ್ಕ ವರ. ಬೆಟ್ಟ ಹತ್ತಿ ಬಂದು ಬಿಡು. ಬ್ರಹ್ಮಚಾರಿಯನ್ನು ಸಾಕ್ಷಿಯಾಗಿರಿಸಿ ಮೂರು ಗಂಟು ಹಾಕುವೆ. ನಿನ್ನ ಓಲಾಡುವ ಮುಂಂಗುರುಳುಗಳನು ಹಿಂದೆ ಸರಿಸಿ ಬೊಗಸೆಯಲ್ಲಿ ಅರಳುವ ನಿನ್ನಂದದ ಮುಖಕೆ ಮುತ್ತಿನ ಮಳೆಗರೆಯಲು ಕಾಯುತಿರುವೆ.
ಎಂದೆಂದಿಗೂ ನಿನ್ನವನೇ ಆದ
ನಿನ್ನ ಉಸಿರು


