ಜಿಲ್ಲೆಯ ೨೬ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದೂರುಗಳು | ಸಿಎಐಆರ್ ಪೋರ್ಟ್ಲ್ ಬಲ ಮೂಲಕ ಮೊಬೈಲ್ಗಳ ಪತ್ತೆ | ಎಸ್ಪಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಸಿಇಐಆರ್ ಪೋರ್ಟ್ಲ್ ಬಲದ ಮೂಲಕ ಕಳ್ಳತನವಾಗಿರುವ ಮೊಬೈಲ್ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವಿವಿಧ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿ ೩೪೦ ಮೊಬೈಲ್ಗಳನ್ನು ಜಪ್ತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ೨೬ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದೂರುಗಳನ್ನು ಆಧರಿಸಿ ಮೊಬೈಲ್ ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹೇಳಿದರು.
ಈ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಮೊಬೈಲ್ ಕಳ್ಳತನ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸೆಂಟ್ರಲ್ ಇಕ್ಯೂಪಮೆಂಟ್ ಐಡೆಂಟಿಟಿ ರಜಿಸ್ಟ್ರರ್ ದೂರ ಸಂಪರ್ಕ ಇಲಾಖೆ ನಿರ್ಮಿಸಿದ ಡಿಜಿಟಲ್ ವ್ಯವಸ್ಥೆಯಾಗಿದ್ದು, ಮೊಬೈಲ್ ಕಳೆದು ಹೋದಾಗ ಟ್ರ್ಯಾಕ್, ಬ್ಲಾಕ್ ಹಾಗೂ ರಿಕವರಿ ಮಾಡಲು ಸಹಾಯಕವಾಗಿದೆ, ಈ ತಂತ್ರಾಶ ಆಧರಿಸಿ ೩೪೦ ಮೊಬೈಲ್ಗಳನ್ನು ವಿವಿಧ ರಾಜ್ಯಗಳಿಂದ ಪತ್ತೆ ಹಚ್ಚಿ ಅದನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು.
ಮೊಬೈಲ್ ಬಳಕೆದಾರರು ತಮ್ಮ ಸಾಧನವನ್ನು ಐಎಂಇಐ ಸಂಖ್ಯೆಯ ಮೂಲಕ ಟ್ರ್ಯಾಕ್ ಮಾಡಲು ಸಹಾಯಕವಾಗಿದ್ದು, ಮೊಬೈಲ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಅನುಪಮ ಪಾತ್ರ ವಹಿಸಿದೆ ಎಂದು ವಿವರಿಸಿದರು.
ಎಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿಗಳಾದ ಸುನೀಲ್ ಕಾಂಬಳೆ, ಟಿ.ಎಸ್. ಸುಲ್ಪಿ, ಸಿಪಿಐಗಳಾದ ಮಲ್ಲಯ್ಯ ಮಠಪತಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪೆರೋಲ್ ರಜೆ ಮೇಲೆ ಹೋಗಿ ತಲೆ ಮರೆಸಿಕೊಂಡ ಕೈದಿ ವಶಕ್ಕೆ
ಪೆರೋಲ್ ರಜೆ ಮೇಲೆ ಜೈಲಿನಿಂದ ಹೊರಗೆ ಬಂದು ಕಳೆದ ೨ ವರ್ಷ ೧೦ ತಿಂಗಳಿನಿಂದ ನಾಪತ್ತೆಯಾಗಿದ್ದ ಕೈದಿ ಮೈಸೂರಿನಲ್ಲಿ ಇರುವ ಖಚಿತ ಮಾಹಿತಿ ಆಧರಿಸಿ ಆ ಕೈದಿಯನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನಾಗಿರುವ ಸಜಾ ಬಂಧಿಯನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಕಿರಣಕುಮಾರ ಆನಂದಯ್ಯ ಹಿರೇಮಠ (೩೦) ಎಂದು ಗುರುತಿಸಲಾಗಿದೆ. ಈ ಸಜಾ ಬಂಧಿಯ ಮೇಲೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿ ಕಳೆದ ೨೦೧೭ ರ ಡಿಸೆಂಬರ್ ೩ ರಂದು ತೀರ್ಪು ಪ್ರಕಟಿಸಿತ್ತು. ಅದರನ್ವಯ ಈ ಬಂಧಿಯನ್ನು ಬಾಗಲಕೋಟೆ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ನಂತರ ಆತನನ್ನು ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಹಸ್ತಾಂತರಿಸಲಾಗಿತ್ತು. ಕಳೆದ ೨೦೨೩ ರ ಆಗಸ್ಟ್ ೧೧ ರಿಂದ ೨೦೨೩ ರ ಆಗಸ್ಟ್ ೨೩ ರವರೆಗೆ ೧೩ ದಿನಗಳ ಕಾಲ ಪೆರೋಜ್ ರಜೆ ಪಡೆದು ಕೇಂದ್ರ ಕಾರಾಗೃಹದಿಂದ ತೆರಳಿದ್ದ, ಆದರೆ ಪೆರೋಲ್ ರಜೆ ಅವಧಿ ಮುಗಿದರೂ ವಾಪಾಸ್ಸಾಗದೇ ತಲೆ ಮರೆಸಿಕೊಂಡಿದ್ದ, ಈ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹದ ಉಪಾಧೀಕ್ಷಕ ಡಾ.ಎಚ್.ಜಿ. ಮಂಜುನಾಥ ಆದರ್ಶ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಈ ಪ್ರಕರಣ ದಾಖಲಿಸಿಕೊಂಡು ನಿರಂತರವಾಗಿ ಆರೋಪಿ ಪತ್ತೆ ಜಾಲ ಬೀಸಿದ್ದ ಪೊಲೀಸರು ಆರೋಪಿ ಮೈಸೂರಿನಲ್ಲಿರುವ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಆದರ್ಶ ನಗರ ಪೊಲೀಸ್ರ ತಂಡ ಮೈಸೂರಿಗೆ ತೆರಳಿ ಸಜಾ ಬಂಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ನ್ಯಾಯಾಲಯದ ಮೇಲೆ ಹಾಜರು ಪಡಿಸಲಾಗಿದೆ ಎಂದು ವಿವರಿಸಿದರು.

