ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ತಾಳಿಕೋಟಿ ತಾಲೂಕಿನ ಮೂಕಿಹಾಳ ಗ್ರಾಮದ ರೈತರ ಜಮೀನನ್ನು ಚಿಮ್ಮಲಗಿ ಏತ ನೀರಾವರಿಯ ಪೂರ್ವ ಕಾಲುವೆಗೆ ಸ್ವಾಧೀನಪಡಿಸಿಕೊಂಡು ಹಲವು ವರ್ಷಗಳಾದರೂ ಇದುವರೆಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಗುರುವಾರ ಆಲಮಟ್ಟಿಯ ವಿಶೇಷ ಭೂಸ್ವಾಧೀನಾಧಿಕಾರಿ (ಎಸ್ಎಲ್ಒ) ಎಂ.ಬಿ. ನಾಗಠಾಣ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಚಿಮ್ಮಲಗಿ ಪೂರ್ವ ಕಾಲುವೆಗೆ ಮೂಕಿಹಾಳ ರೈತರ ಜಮೀನು ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇರುವ ಅಲ್ಪಸ್ವಲ್ಪ ಜಮೀನಿನಲ್ಲೂ ಕಾಲುವೆ ಹೋದ ಮೇಲೆ ಪರಿಹಾರ ನೀಡದಿದ್ದರೆ ರೈತ ಬದುಕುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ಪರಿಹಾರ ನೀಡಬೇಕು. ಇಲ್ಲದಿದ್ದರೆ ಆಲಮಟ್ಟಿ ಎಸ್ಎಲ್ಒ ಕಚೇರಿ ಮುಂದೆ ಮೂಕಿಹಾಳ ಸೇರಿದಂತೆ ಇತರೆ ಏತ ನೀರಾವರಿ ವ್ಯಾಪ್ತಿಯ ರೈತರನ್ನು ಸೇರಿಸಿಕೊಂಡು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.”ಕೂಡಲೇ
ಏ.೧೨ರಂದು ರೈತರ ಸಭೆ:
ಮನವಿ ಸ್ವೀಕರಿಸಿದ ಎಸ್ಎಲ್ಒ ಎಂ.ಬಿ. ನಾಗಠಾಣ ಅವರು, ಪರಿಹಾರ ಪ್ರಕ್ರಿಯೆಗೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ಏ.೧೨, ೨೦೨೬ರಂದು ಮೂಕಿಹಾಳ ಗ್ರಾಮದಲ್ಲಿ ರೈತರ ಸಭೆ ಕರೆಯುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ದನಗೌಡ ಇಸ್ಲಾಂಪೂರ, ಪರಮಣ್ಣ ಹೊಕ್ರಾಣಿ, ಮೈಬೂಬ್ಸಾಬ್ ಪಟೇಲ ಬೇವಿನಗಿಡ, ಅಮೀನ್ಸಾಬ್ ಬಿರಾದಾರ, ಜಾಕೀರ್ ಮಕಾಶಿ, ಸಾಹೇಬ್ಪಟೇಲ ಮಕಾಶಿ, ಕಾಶಿಂಪಟೇಲ ಪಾಟೀಲ, ಸಿವಪ್ಪ ಚಿಗರಿ, ಎಮನಪ್ಪ ಚಿಗರಿ, ಯಲ್ಲಪ್ಪ ಚಿಗರಿ, ಶಿವಪ್ಪ ಶಿವಣಗಿ, ಸೋಮಪ್ಪ ಚಿಗರಿ ಮತ್ತಿತರರು ಇದ್ದರು.

