ಕನ್ನಡ-ಮರಾಠಿ ಭಾಷಾ ಬಾಂಧವ್ಯ ಬೆಳೆಸಿ, ಬಲಪಡಿಸಲೆಂದು ಈ ಪ್ರತಿಷ್ಟಿತ ಪ್ರಶಸ್ತಿ | “ಉದಯರಶ್ಮಿ” ಬಳಗದ ಅಭಿನಂದನೆ
ಉದಯರಶ್ಮಿ ದಿನಪತ್ರಿಕೆ
ಧಾರವಾಡ: ಕನ್ನಡ ಮರಾಠಿ ಭಾಷಾ ಬಾಂಧವ್ಯ ಬೆಳೆಸಲೆಂದು ಬಲಪಡಿಸಲೆಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಕೊಡ ಮಾಡಿದ
ಡಾ ಪಂಡಿತ ಅವಳೀಕರ ಅವರ ದತ್ತಿ ಪ್ರಶಸ್ತಿ ಆನಂದ ಕಂದ ೨೦೨೬ ಈ ಭಾರಿ ಡಾ ಜಯಶ್ರೀ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಇವರಿಗೆ ದೊರೆತಿದೆ.
ಕನ್ನಡ ಸಾಹಿತ್ಯದ ಕವಿ ಶ್ರೇಷ್ಠ ಸಾಹಿತಿ ಡಾ ಬೆಟಗೇರಿ ಕೃಷ್ಣ ಶರ್ಮಾ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ೨೦೦೦ ರಿಂದ ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡದಿಂದ ಮರಾಠಿಗೆ ಮರಾಠಿಯಿಂದ ಕನ್ನಡಕ್ಕೆ ಭಾಷಾಂತರ ಅನುವಾದ ಮತ್ತು ಸಾಹಿತ್ಯ ರಚನೆ ಮಾಡುವ ಎರಡೂ ಭಾಷೆಯ ಮಧ್ಯೆ ಬಾಂಧವ್ಯ ಸಾಮರಸ್ಯ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಮಹಾರಾಷ್ಟ್ರದ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.
ಡಾ ಗುರುಲಿಂಗ ಕಾಪಸೆ ಹಿಂದಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಮೊದಲ ಆನಂದ ಕಂದ ಪ್ರಶಸ್ತಿ ದೊರೆತಿತ್ತು. ತದನಂತರ ಕರ್ನಾಟಕದ ಅನೇಕ ಹಿರಿಯ ಸಾಹಿತ್ಯ ದಿಗ್ಗಜರಿಗೆ ಈ ಪ್ರಶಸ್ತಿಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ನೀಡುತ್ತ ಬಂದಿದೆ.
ಡಾ ಜಯಶ್ರೀ ಶಶಿಕಾಂತ ಪಟ್ಟಣ ಇವರು ಕರ್ನಾಟಕದ ಮೇರು ಸಾಹಿತಿಗಳನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ಗಡಿನಾಡು ಸೋಲಾಪುರ ಜತ್ತ ಅಕ್ಕಲಕೋಟ ಭಾರ್ಸಿ ಮುಂತಾದ ಭಾಗಗಳ ಅನೇಕ ದಾನಿ ದಾಸೋಹಿಗಳ ಪುಣ್ಯ ಪುರುಷರ ಪರಿಚಯವನ್ನು ಮರಾಠಿಯಲ್ಲಿ ಲೇಖನ ಪುಸ್ತಕಗಳ ಮೂಲಕ ಸಾಹಿತ್ಯ ರಚಿಸಿ ಮಹಾರಾಷ್ಟ್ರದ ಜನರಿಗೆ ಕನ್ನಡಿಗರ ಚರಿತ್ರೆಯನ್ನು ಪ್ರಕಟ ಮಾಡಿದ್ದಾರೆ. ಬಸವ ಸಮಿತಿಯ ಮರಾಠಿ ದ್ವೈ ಮಾಸಿಕ ಪತ್ರಿಕೆಯಲ್ಲಿ ಹತ್ತಾರು ಮರಾಠಿ ಲೇಖನಗಳನ್ನು ಸಿದ್ದ ಪಡಿಸಿ ಪ್ರಕಟ ಮಾಡಿದ್ದಾರೆ.
ದಲಿತ ಕವಿ ಸಿದ್ದಲಿಂಗಯ್ಯ ಅವರ ದೊಡ್ಡ ಗೌಡರ ಬಾಗಿಲಿಗೆ ನಮ್ಮ ಎಲುಬಿನ ತೋರಣ ಎಂಬ ಕವನವನ್ನು ಮರಾಠಿಗೆ ತರ್ಜುಮೆ ಮಾಡಿದ್ದಾರೆ. ಪ್ರೊ ಎಸ್ ಜಿ ಸಿದ್ದರಾಮಯ್ಯ ಅವರ ಕನ್ನಡದ ಲಿಂಗಾಯತ ಧರ್ಮ ಎನ್ನುವ ಮಹತ್ತರ ಕೃತಿಯನ್ನು ಮರಾಠಿಗೆ ಅನುವಾದ ಮಾಡಿದ್ದಾರೆ. ಕಳೆದ ಆರು ವರ್ಷಗಳಿಂದ ಅಂತರಜಾಲ ಗೂಗಲ್ ಮೀಟ್ ಮಾಡುವ ಮೂಲಕ ಕನ್ನಡದ ಶರಣರನ್ನು ಸಂತರನ್ನು ಮಹಾರಾಷ್ಟ್ರದ ಜನತೆಗೆ ಮರಾಠಿ ಹಿಂದಿ ಇಂಗ್ಲಿಷ್ ಭಾಷೆಗಳಲ್ಲಿ ಉಪನ್ಯಾಸ ಏರ್ಪಡಿಸಿ ಕನ್ನಡದ ಕಂಪನ್ನು ಮಹಾರಾಷ್ಟ್ರದ ಜನತೆಗೆ ಉಣ ಬಡಿಸಿದ್ದಾರೆ. ಡಾ ಜಯಶ್ರೀ ಶಶಿಕಾಂತ ಪಟ್ಟಣ ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅರಹಟ್ಟಿ ಎಂಬ ಪುಟ್ಟ ಗ್ರಾಮದವರಾದ ಲಿಂಗೈಕ್ಯ ಶ್ರೀ ಶ್ರೀಶೈಲಪ್ಪ ಅಂಗಡಿ ಇವರ ಹಿರಿಯ ಮಗಳು. ಲಿಂಗೈಕ್ಯ ಶ್ರೀ ಶ್ರೀಶೈಲಪ್ಪ ಅಂಗಡಿ ಇವರು ಮಹಾರಾಷ್ಟ್ರದ ನಾಸಿಕನಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದರು. ಹೀಗಾಗಿ ಜಯಶ್ರೀ ಅಂಗಡಿ ನಾಸಿಕದಲ್ಲಿ ಹುಟ್ಟಿದರು. ತಾಯಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಕಡಕೋಳ ಮನೆತನದವರು. ಶರಣೆ ವಿಜಯಾ ಅಂಗಡಿ ಇವರು ತಮ್ಮ ಎಲ್ಲಾ ಮಕ್ಕಳಿಗೆ ಶರಣ ಸಂಸ್ಕೃತಿ ಕನ್ನಡ ಸಾಹಿತ್ಯ ಪರಿಚಯ ಮಾಡಿ ಕೊಟ್ಟವರು.
ಡಾ ಜಯಶ್ರೀ ಅಂಗಡಿ ತಮ್ಮ ಪದವಿ ಸ್ನಾತ್ತಕೋತ್ತರ ಮತ್ತು ಪಿ ಏಚ್ ಡಿ ಪದವಿಯನ್ನು ಪುಣೆಯ ವಿಶ್ವ ವಿದ್ಯಾಲಯದಿಂದ ಪಡೆದರು.
ಮುಂದೆ ಬೆಳಗಾವಿ ಜಿಲ್ಲೆಯ ರಾಮದುರ್ಗದ ಡಾ ಶಶಿಕಾಂತ ಪಟ್ಟಣ ಇವರನ್ನು ಮದುವೆಯಾದ ಮೇಲೆ ೧೫ ವರ್ಷ ಬೆಳಗಾವಿಯಲ್ಲಿ ಹೈ ಟೆಕ್ ಡೈಗ್ನೊಸ್ಟಿಕ್ ಸೆಂಟರ್ ನಲ್ಲಿ ಮೈಕ್ರೊ ಬಾಯಾಲೋಜಿಸ್ಟ್ ಆಗಿ ಕಾರ್ಯ ನಿರ್ವಹಿಸಿದರು .ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜು ಮತ್ತು ಪುಣೆಯ ಡಿ ವೈ ಪಾಟೀಲ್ ಕಾಲೇಜಿನಲ್ಲಿ ಹತ್ತು ವರ್ಷಗಳ ಬೋಧನೆ ಮಾಡಿದ್ದಾರೆ.
ಮರಾಠಿಯಿಂದ ಕನ್ನಡಕ್ಕೆ ಮೂರು ಕೃತಿಗಳನ್ನು ರಚಿಸಿ ಸಂಪಾದಿಸಿದ್ದಾರೆ. ತಮ್ಮ ಪತಿ ಡಾ ಶಶಿಕಾಂತ ಪಟ್ಟಣ ಇವರ ಜೊತೆಗೂಡಿ ಅಕ್ಕನ ಅರಿವು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಮೂಲಕ ಕರ್ನಾಟಕ ಮಹಾರಾಷ್ಟ್ರ ಮತ್ತು ರಾಷ್ಟ್ರ ಜಗತ್ತಿನಾದ್ಯಂತ ಬಸವ ತತ್ವ ಪ್ರಸಾರ ಮಾಡುವ ಕೈಂಕರ್ಯಕ್ಕೆ ನಿಂತಿದ್ದಾರೆ.
ಇವರಿಗೆ ಒಬ್ಬ ಮಗನಿದ್ದಾನೆ.
ಡಾ ಜಯಶ್ರೀ ಶಶಿಕಾಂತ ಪಟ್ಟಣ ಇವರಿಗೆ ದಿನಾಂಕ ೧೬ ಏಪ್ರಿಲ್ ೨೦೨೬ ರಂದು ಸಂಜೆ ೬ ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ ಹ ದೇಶಪಾಂಡೆ ಸಭಾ ಭವನದಲ್ಲಿ ಶ್ರೀ ಚಂದ್ರಕಾಂತ ಬೆಲ್ಲದ ಅವರ ಅಧ್ಯಕ್ಷತೆಯಲ್ಲಿ ಡಾ ರಾಘವೇಂದ್ರ ಪಾಟೀಲ ಖ್ಯಾತ ಸಾಹಿತಿಗಳು ಪ್ರಶಸ್ತಿ ಪ್ರದಾನ ಮಾಡುವರು. ಡಾ ಬೆಟಗೇರಿ ಕೃಷ್ಣ ಶರ್ಮಾ ಸ್ಮಾರಕ ಟ್ರಸ್ಟ್ ಬೆಳಗಾವಿ ಇದರ ಅಧ್ಯಕ್ಷರಾದ ಡಾ ವಿನಯಾ ಒಕ್ಕುಂದ ಇವರು ಅತಿಥಿಗಳಾಗಿ ಆಗಮಿಸುವರು. ಧಾರವಾಡದ ಆನಂದ ಕಂದರ ಗೆಳೆಯರ ಬಳಗ ಆನಂದ ಕಂದರ ಗೀತಗಾಯನ ಪ್ರದರ್ಶನ ಮಾಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಮತ್ತು ಡಾ ಬೆಟಗೇರಿ ಕೃಷ್ಣ ಶರ್ಮಾ ಅವರ ಅಭಿಮಾನಿಗಳು ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಶಂಕರ ಹಲಗತ್ತಿ ಅವರು ತಿಳಿಸಿದ್ದಾರೆ.

“ಉದಯರಶ್ಮಿ” ಬಳಗದ ಅಭಿನಂದನೆ
ಜಗತ್ತಿನಾದ್ಯಂತ ಬಸವ ತತ್ವ ಪ್ರಸಾರ ಮಾಡುವ ಕೈಂಕರ್ಯಕ್ಕೆ ಟೊಂಕಕಟ್ಟಿ ನಿಂತಿರುವ ಡಾ.ಜಯಶ್ರೀ ಶಶಿಕಾಂತ ಪಟ್ಟಣ ಇವರಿಗೆ ಪ್ರತಿಷ್ಟಿತ “ಆನಂದ ಕಂದ” ಪ್ರಶಸ್ತಿ ದೊರೆತಿರುವುದನ್ನು ಸ್ವಾಗತಿಸಿದ “ಉದಯರಶ್ಮಿ” ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಮತ್ತು ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಸೇರಿದಂತೆ ಪತ್ರಿಕಾ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.

