೨೧ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜಿಲ್ಲಾ ಸಮ್ಮೇಳನವನ್ನು ಏಪ್ರಿಲ್ ಪ್ರಥಮ ವಾರದಲ್ಲಿ ಹಮ್ಮಿಕೊಳ್ಳಲು ನಿಶ್ಚಯಿಸಲಾಗಿತ್ತು. ಆದರೆ ಪ್ರಥಮ ವಾರದಲ್ಲಿ ಪರೀಕ್ಷೆಗಳು ಹಾಗೂ ಮೌಲ್ಯಮಾಪನ, ದ್ವಿತೀಯ ವಾರದಲ್ಲಿ ಅಂಬೇಡ್ಕರ್ ಜಯಂತಿ, ಮೂರನೇ ವಾರದಲ್ಲಿ ಬಸವ ಜಯಂತಿಯ ಕಾರ್ಯಕ್ರಮಗಳು ಇರುವುದರಿಂದ ಏಪ್ರಿಲ್ ಕೊನೆಯ ವಾರ ೨೭ ಮತ್ತು ೨೮ರಂದು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು ಅಧಿಕೃತ ದಿನಾಂಕವನ್ನು ಮುಂದಿನ ಸಭೆಯಲ್ಲಿ ತಿಳಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ೨೧ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸುದೀರ್ಘ ೧೪ವರ್ಷಗಳ ಅವಧಿಯ ನಂತರ ಸಿಂದಗಿ ತಾಲೂಕಿಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಭಾಗ್ಯ ಒದಗಿ ಬಂದಿದ್ದು, ಸಮ್ಮೇಳನದ ಯಶಸ್ಸಿಗೆ ಎಲ್ಲ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು, ಮಹಿಳೆಯರು, ಹಿರಿಯ ಮತ್ತು ಕಿರಿಯ ಕವಿಗಳು, ಸಾಹಿತ್ಯಾಸಕ್ತರು ಮತ್ತು ಮಕ್ಕಳು ಕಂಕಣಬದ್ಧರಾಗಬೇಕು. ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಪದಾಧಿಕಾರಿಗಳ ಮುತುವರ್ಜಿ ಹಾಗೂ ಆಸಕ್ತಿಯಿಂದಾಗಿ ಸಮ್ಮೇಳನ ಆಯೋಜನೆಯಾಗಿರುವುದು ಹರ್ಷದಾಯಕ. ಸಮ್ಮೇಳನಕ್ಕೆ ಸಾಕಷ್ಟು ಖರ್ಚು ವೆಚ್ಚಗಳಿದ್ದು ದಾನಿಗಳು ಉದಾರ ಹಸ್ತದಿಂದ ಸಾಕಾರ ನೀಡಬೇಕು. ಅಲ್ಲದೇ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳಿಗೂ ಕನ್ನಡ ನಾಡು ನುಡಿಯ ಅಸ್ಮಿತೆಯ ಬಗ್ಗೆ ಅಪಾರ ಗೌರವವಿದ್ದು, ಸಮ್ಮೇಳನ ಸಮಯದಲ್ಲಿ ಅದನ್ನು ಅವರು ಸಾದರಪಡಿಸಬೇಕು. ಅಲ್ಲದೆ ಸಕ್ರಿಯವಾಗಿ ಪಾಲ್ಗೊಂಡು ಕೆಲಸ ಕಾರ್ಯಗಳಲ್ಲಿ ಕೈಜೋಡಿಸಬೇಕು. ಸಮ್ಮೇಳನದಲ್ಲಿ ಸರ್ವಾಧ್ಯಕ್ಷರ ಮೆರವಣಿಗೆ, ಕುಂಭಮೇಳ, ಬುತ್ತಿ ಜಾತ್ರೆ, ವಿವಿಧ ಕಲಾತಂಡಗಳಿಂದ ಮೆರವಣಿಗೆ ಕಾರ್ಯಕ್ರಮ ಇರುತ್ತವೆ. ಇವೆಲ್ಲವುಗಳ ಜೊತೆಗೆ ಊಟೋಪಚಾರ, ವಸತಿ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿದಾಗ ಮಾತ್ರ ಸಮ್ಮೇಳನ ಯಶಸ್ವಿಯಾಗುತ್ತದೆ. ಸಿಂದಗಿ ನಗರದ ಕೀರ್ತಿ ನಾಡಿಗೆಲ್ಲ ಹಬ್ಬುವಂತೆ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರು, ಸಾರ್ವಜನಿಕರು, ಮಕ್ಕಳು, ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ನವಿ ಮಾಡಿದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲೂಕಾಧ್ಯಕ್ಷ ವಾಯ್.ಸಿ ಮಯೂರ್ ಮಾತನಾಡಿ, ಕನ್ನಡದ ಸಹೃದಯಿ ಮನಸುಗಳೆಲ್ಲ ಸೇರಿ ಕನ್ನಡದ ನುಡಿ ಜಾತ್ರೆಯನ್ನು ಯಶಸ್ವಿಯಾಗಿ ಸಂಪನ್ನಗೊಳಿಸುವಲ್ಲಿ ತನು, ಮನ, ದನದಿಂದ ಸಹಕಾರ ನೀಡಬೇಕೆಂದು ವಿನಂತಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಸಿಂದಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ದೇವರ ಹಿಪ್ಪರಗಿ ತಾಲೂಕಾಧ್ಯಕ್ಷ, ಸಿದ್ದು ಮೇಲಿನಮನಿ, ಆಲಮೇಲ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಅಶೋಕ ಕೊಳಾರಿ, ತಾಲೂಕ ಪಂಚಾಯತ್ ಇಒ ರಾಮು ಅಗ್ನಿ ಇದ್ದರು. ಸಿಂದಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಆನಂದ್ ಶಾಬಾದಿ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

