ಲೇಖನ
– ಅವಿನಾಶ ಸೆರೆಮನ
ಉಪನ್ಯಾಸಕರು
ಬೈಲಹೊಂಗಲ
ಬೆಳಗಾವಿ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಕಷ್ಟಗಳ ಬೆಂಕಿಯಲ್ಲಿ ಬೆಂದು ಕಣ್ಣೀರಿನ ನದಿಯಲಿ ಮಿಂದು ಎಂದಿಗೂ ನೋವು ತೋರಿಸೊಕೊಳ್ಳದೆ ಒಳಗೊಳಗೆ ನುಂಗಿ
ಮನೆತನದ ಪ್ರತಿ ಸದಸ್ಯರ ಕೊಂಕು, ಪ್ರೀತಿ, ಕೋಪ ರೋಷಭರಿತ ಮಾತುಗಳನ್ನು ಸಹಿಸಿ ತಾನು ಉಪವಾಸವಿದ್ದರೂ ಚಿಂತೆಯಿಲ್ಲ ಮನೆಮಂದಿ ಮಕ್ಕಳು ಚೆನ್ನಾಗಿರಲಿ ಎಂದು ಬಯಸುತ ಹಿಂದೆ ಮುಂದೆ ಸಾವಿರಾರು ಜನ ಏನೇ ಅಂದರೂ ಕುಗ್ಗದೆ ಸವಾಲಾಗಿ ಸ್ವೀಕರಿಸಿ ತನ್ನೆಲ್ಲ ಬಯಕೆಗಳನ್ನು ನೋವು ನಲಿವುಗಳನ್ನು ಬದಿಗೊತ್ತಿ ಮಕ್ಕಳ ಖುಷಿಯಲ್ಲೇ ತನ್ನ ಖುಷಿಯ ಕಾಣುತ. ಮಕ್ಕಳ ಬಟ್ಟೆ ಹರಿದರೆ ಹೊಸದನ್ನು ಕೊಡಿಸಿ ತಾನು ಮಾತ್ರಸೀರೆ ಹರಿದರೂ ದಾರದಿಂದ ಹೊಲೆದುಕೊಂಡು ಜೀವನ ಸಾಗಿಸುತ ಮನೆಯಲ್ಲಿ ಎಲ್ಲರಿಗೂ ಬಿಸಿ ಬಿಸಿಯಾದ ಅಡುಗೆ ಮಾಡಿ ತಾನು ಹಿಂದಿನ ದಿನ ಅಥವಾ ಇತರ ಉಳಿದ ಆಹಾರ ಸೇವಿಸುತ ಮನೆಯಲ್ಲಿ ಮನದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ
ಮೌನವಾಗಿಯೇ ಪರಿಹಾರ ಕಂಡುಕೊಳ್ಳುತ ಎಲ್ಲವನ್ನು ತನ್ನವರಿಗಾಗಿ ತ್ಯಾಗ ಮಾಡುವ ಏಕೈಕ ಜೀವವೆಂದರೆ ಹೆಸರಿಡಲಾಗದ ಹೆಸರಿಗೂ ನಿಲುಕದ ಉಸಿರಿಗೂ ಜೀವ ತುಂಬುವ ದೇವರ ಸ್ವರೂಪಿ ಕರುಣಾಮಯಿ ಮಹಿಳೆ.
ಇಂದಿನ ದಿನಗಳಲ್ಲಿ ನಾವೆಲ್ಲ ನಿತ್ಯ ನೋಡುತ್ತಿದ್ದೇವೆ ಮಹಿಳೆಯನ್ನು ಕಾಣುವ ರೀತಿ ಗೌರವಿಸುವ ರೀತಿ ನೋಡಿದರೆ ಬೇಸರವಾಗುತ್ತದೆ. ನೋವಾಗುತ್ತದೆ. ಮಾರ್ಚ್ 8 ಬಂದರೆ ಸಾಕು ಮಹಿಳೆಯರಿಗೋಸ್ಕರ ಕಾರ್ಯಕ್ರಮಗಳೆನೋ ಸನ್ಮಾನಗಳೆನೋ ಹೊಗಳಿಕೆ ಮಾತುಗಳು ಪ್ರಶಂಸನೀಯ ನುಡಿಗಳು ಒಂದಾ ಎರಡಾ ಅಬ್ಬಾ ನಮ್ಮ ಸಮಾಜ ಹೀಗೆ ಮಹಿಳೆಯನ್ನು ಕಾಣುತ್ತೆ ಎಂದು ತುಂಬಾ ಹಿಗ್ಗುತ್ತೇವೆ ಆದರೆ ಇದು ಮಾರನೇಯ ದಿವಸ ಮರೆಯಾಗಿ ಮತ್ತೆ ಮಹಿಳೆಯ ಮೇಲೆ ಹೀಗಾಯ್ತು ಹಾಗಾಯ್ತು ಇದೇನಾ ನಾವು ಮಹಿಳೆಗೆ ನೀಡುವ ಗೌರವ ಇದೇನಾ ನಮ್ಮನ್ನು ಬೆಳೆಸಿ ಜೀವನದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ ಮಾನಿನಿಗೆ ಪ್ರತಿಫಲವಾಗಿ ನೀಡುವುದು. ಮಹಿಳೆ ಎಂದರೆ ಒಂದು ದಿನಕ್ಕೆ ಮಾತ್ರ ಸೀಮಿತನಾ ಎಂಬುದನ್ನು ಅರಿಯಬೇಕಾಗಿದೆ.

ದಿನ ಬೆಳಗಾದರೆ ಸಾಕು ಪತ್ರಿಕೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರದಂತ ಘೋರ ಕೃತ್ಯಗಳು ಯಾಕೆ ಇದೆಲ್ಲ ಇದಕ್ಕೆಲ್ಲ ಯಾವಾಗ ಅಂತ್ಯ ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಮಹಿಳೆ ಎಂದರೆ ವಸ್ತುನಾ ಅಥವಾ ಸರಕುನಾ. ನೀವು ಏನೇ ಹೇಳಿ ದಿನೇ ದಿನೇ ಶಿಕ್ಷಣ ವ್ಯವಸ್ಥೆ ಹೇಗೆ ವಿಭಿನ್ನ ರೂಪ ತಾಳಿ ತಂತ್ರಜ್ಞಾನದ ಅಧೀನವಾಗುತ್ತಿದೆಯೋ ಅಂದಿನಿಂದ ಮಹಿಳೆಯ
ಸ್ಥಾನಮಾನ ಕುಂದುತ್ತ ಸಾಗುತ್ತಿರುವುದು ಕಟು ಸತ್ಯ. ಅರಿವಿದ್ದರೂ ಅರಿವಿಲ್ಲದವರಂತೆ ವರ್ತಿಸುತ ಪದೇ ಪದೇ ಅದೇ ತಪ್ಪು ಮಾಡಿದರೆ ಅದೂ ತಪ್ಪಾ? ಪ್ರತಿವರ್ಷ ಮಾರ್ಚ್ 8 ಮಹಿಳಾ ದಿನಾಚರಣೆ ಆಚರಿಸಿ ದೊಡ್ಡ ದೊಡ್ಡದಾಗಿ ಮಹಿಳೆಯ
ಬಣ್ಣಿಸಿ ಮರುದಿನ ಅದೇ ಮಹಿಳೆಯನ್ನು ದೂಷಿಸಿದರೆ ಇದು ಮಹಿಳಾ ದಿನಾಚರಣೆಗೆ ದೊರೆತ ನಿಜವಾದ ಅರ್ಥವೆ?
ಮಹಿಳೆ ಎಂದರೆ ಸಕಲವನ್ನೂ ತ್ಯಾಗ ಮಾಡಿ ಉಸಿರಿತ್ತ ಜೀವಕ್ಕೆ ನಂಬಿದ ಜೀವಗಳಿಗೆ ಆಧಾರಸ್ತಂಭ. ನೂರೆಂಟು ವಿಘ್ನಗಳು ಎದುರಾದರೂ ದಿಟ್ಟತನದಿ ಎದುರಿಸುವ ದೇವತಾ ರೂಪಿ.ಹೆಣ್ಣಿನ ವಿವಿಧ ಸ್ಥಾನಮಾನ ಅಲಂಕರಿಸುತ ಸದಾ ಮಮತೆ ಪ್ರೀತಿ ತೋರುವ ಮಮತಾಮಯಿ. ಅರಿವಿನ ಪಥವ ತೋರಿ ಅರಿವಿನಿಂದ ಜಗವ ಪರಿಚಯಿಸುವ ಅರಿವಿನ ಗುರುಯಿವಳು. ಮನೆಯನು ಅರಿವಿನಿಂದ ಬೆಳಗುವವಳೇ ಹೆಣ್ಣು ಹೆಣ್ಣಿಲ್ಲದ ಮನೆ ಕುರುಡಿದ್ದಂತೆ ಹೆಣ್ಣಿರುವ ಮನೆಯು ಸ್ವರ್ಗದ ಸಿರಿಯಂತೆ. ಪ್ರತಿ ಮನೆಗೂ ಹೆಣ್ಣೇ ಬೆಳಕು ಹಾಗಾಗಿ ಹೆಣ್ಣನು ಪೂಜ್ಯ ಭಾವದಿಂದ ಕಾಣುತ ಯಾವುದೇ ಕಟ್ಟುಪಾಡು ವಿಧಿಸದೆ ಸಮಾನತೆ ಪರಿಕಲ್ಪನೆಯಂತೆ ಎಲ್ಲ ಕ್ಷೇತ್ರದಲ್ಲಿ ಬೆಳೆಯಲು ಪ್ರಾಶಸ್ತ್ಯ ನೀಡಬೇಕು.
ಹೆಣ್ಣಿನ ಕುರಿತು ಕುವೆಂಪುರವರು ಬಹಳ ಅರ್ಥಪೂರ್ಣವಾಗಿ ತಮ್ಮ ಕವಿತೆಯಲ್ಲಿ ಬಣ್ಣಿಸಿದ್ದಾರೆ.
ಹೆಸರಿಲ್ಲದ ಹೆಸರು ನಿನಗೆ ‘ಗೃಹಶ್ರೀ’!
ಹೇ ದಿವ್ಯ ಸಾಮಾನ್ಯೆ, ಮನೆಯೆಲ್ಲ ಬೆಳಗುವ ಜ್ಯೋತಿ.
ಹೆಣ್ಣನ್ನು ಕೇವಲ ಒಬ್ಬ ಮಹಿಳೆಯಾಗಿ ನೋಡದೆ ಮನೆಯನ್ನು ಬೆಳಗುವ ಜ್ಯೋತಿ ಎಂದು ಬಣ್ಣಿಸಿದ್ದು ಮಹಿಳೆಯ ಹಿರಿಮೆ ಗರಿಮೆಯನ್ನು ಸಾರಿ ಹೇಳುತ್ತದೆ. ಮನೆಯಲ್ಲಿ ದೀಪ ಇಲ್ಲದಿರಬಹುದು ಆದರೆ ಹೆಣ್ಣು ಇಲ್ಲದಿರೆ ಮನೆಯೇ ಅಂಧಕಾರ ಇರದು ಪ್ರೀತಿ ಮಮಕಾರ ಹಾಗಾಗಿ ಮಹಿಳೆಯು ಮನೆಯ ಪರಮಜ್ಯೋತಿ ಎಂದು ಕುವೆಂಪು ತಮ್ಮ ಕವಿತೆಯಲ್ಲಿ ಅರ್ಥಪೂರ್ಣವಾಗಿ ದೈವದತ್ತವಾಗಿ ವರ್ಣಿಸಿದ್ದಾರೆ.
ಮಹಿಳೆಯನ್ನು ಆದರದಿಂದ ಗೌರವಿಸುತ ನಯ ವಿನಯದಿಂದ ನಡೆದುಕೊಳ್ಳುತ ದೇವತೆಯಂತೆ ಕಾಣೋಣ. ಇಡೀ ಕುಟುಂಬ ಉದ್ಧಾರ ಮಾಡುವ ಜ್ಞಾನಮಯಿ ಒಂದು ಹೆಣ್ಣಿಗೆ ಶಿಕ್ಷಣ ಕೊಟ್ಟರೆ ಇಡೀ ಕುಟುಂಬ ಶಿಕ್ಷಣದಿಂದ ಬೆಳಗುತ್ತದೆ. ಪ್ರತಿಯೊಬ್ಬರೂ ಒಳ್ಳೆಯ ಭಾವದಿಂದ ಕಾಣುತ ಸದಾ ರಕ್ಷಣೆಗೆ ಕಂಕಣ ಬದ್ಧರಾಗಿರೋಣ. ಆಗಲೇ ಮಹಿಳೆಗೂ ತಾ ಮಹಿಳೆಯಾಗಿ ಹುಟ್ಟಿದ್ದಕ್ಕೂ ಸಾರ್ಥಕತೆ ಅವಳ ಬದುಕು ಪರಿಪೂರ್ಣತೆ
ಹೆಣ್ಣೇ ನಮ್ಮ ಜೀವದ ಮೂಲ ಇಲ್ಲದಿರೆ ನಮಗೆಲ್ಲಿ ದೊರೆಯುತ್ತಿತ್ತು ಈ ಜಗದಲಿ ಜೀವಿಸುವ ಭಾಗ್ಯ. ಹಾಗಾಗಿ ಮಹಿಳೆಯನ್ನು ಸದಾ ಗೌರವಿಸಿ ಅವಳ ಹುಟ್ಟಿಗೆ ಅರ್ಥವ ನೀಡಿರಿ. ಹಾಗಾಗಿ ಮಹಿಳಾ ದಿನಾಚರಣೆಗೆ ಮೀಸಲಾಗದಿರಲಿ ಮಹಿಳೆಯ ಗುಣಗಾನ ನಿತ್ಯವೂ ಮಹಿಳೆಗೆ ನೀಡಿರಿ ಗೌರವದ ಸ್ಥಾನಮಾನ.


