ವಿಜಯಪುರದಲ್ಲಿ ನೈಡೆಕ್ ಕಂಪನಿ ಕ್ಯಾಂಪಸ್ ಸಂದರ್ಶನ | ಸಚಿವ ಎಂ ಬಿ ಪಾಟೀಲ ಸಂತಸ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹುಬ್ಬಳ್ಳಿಯಲ್ಲಿ ನೆಲೆಯೂರಿರುವ ಜಪಾನ್ ಮೂಲದ ಪ್ರತಿಷ್ಠಿತ ನೈಡೆಕ್ ಕಂಪನಿಯು ನಡೆಸಿದ ಎರಡು ದಿನಗಳ ಕ್ಯಾಂಪಸ್ ಸಂದರ್ಶನದಲ್ಲಿ ತಮ್ಮ ನೇತೃತ್ವದ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಕಾಲೇಜಿನ ಒಟ್ಟು 94 ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಿರುವುದು ಸಂತಸದ ಸಂಗತಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕೈಗಾರಿಕಾ ಬೆಳವಣಿಗೆಯ ಮೂಲಕ ಉತ್ತರ ಕರ್ನಾಟಕದ ಪ್ರಗತಿಗೆ ಶ್ರಮಿಸಲಾಗುತ್ತಿದೆ. ಇದರ ಲಾಭವು ವಿಜಯಪುರ ಸೇರಿದಂತೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ಕಲಬುರಗಿ ಹೀಗೆ ಈ ಭಾಗದ ಹಲವು ಜಿಲ್ಲೆಗಳ ಯುವಜನರಿಗೆ ಸಿಕ್ಕುತ್ತಿದೆ. ನೈಡೆಕ್ ಕಂಪನಿ ನಡೆಸಿರುವ ಕ್ಯಾಂಪಸ್ ಸಂದರ್ಶನ ಇದಕ್ಕೊಂದು ನಿದರ್ಶನವಾಗಿದೆ ಎಂದಿದ್ದಾರೆ.
ತಾವು ಕೈಗಾರಿಕಾ ಸಚಿವರಾದ ಬಳಿಕ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಇಲಾಖೆಯ ಮೂಲಕವೂ ಹಲವು ಉಪಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನೈಡೆಕ್ ಸಂಸ್ಥೆಗೆ ತಾವು ಕೈಗಾರಿಕಾ ಸಚಿವನಾದ ಮೇಲೆ ಧಾರವಾಡ ಸಮೀಪ ಭೂಮಿ ಒದಗಿಸಿ, ಅಲ್ಲಿ ವಿದ್ಯುಚ್ಚಾಲಿತ ವಾಹನಗಳ ಮೋಟಾರು ತಯಾರಿಕೆಗೆ ಚಾಲನೆ ನೀಡಲಾಗಿದೆ. ಆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಮಕ್ಕಳಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂದು ಸಲಹೆ ನೀಡಿದ್ದೆ. ಆ ಪ್ರಕಾರ ಸಂಸ್ಥೆಯವರು ಮಾಡಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೈಡೆಕ್ ಸಂಸ್ಥೆಯ ಉನ್ನತಾಧಿಕಾರಿಗಳ ತಂಡವು ಜೂನ್ 16 ಮತ್ತು 17ರಂದು ಎರಡು ದಿನಗಳ ಕಾಲ ಕ್ಯಾಂಪಸ್ ಸಂದರ್ಶನ ನಡೆಸಿತು. ಇದರಲ್ಲಿ ಒಟ್ಟು 110 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮವಾಗಿ 46 ಡಿಪ್ಲೊಮಾ ಮತ್ತು 48 ಐಟಿಐ ಪದವೀಧರರು ಆಯ್ಕೆಯಾದರು. ಇವರೆಲ್ಲರಿಗೂ ನೈಡೆಕ್ ಕಂಪನಿ ಆಕರ್ಷಕ ವೇತನದ ಉದ್ಯೋಗಗಳನ್ನು ನೀಡಿದೆ. ಇದಕ್ಕಾಗಿ ಕಂಪನಿಗೂ ಅಭಿನಂದನೆಗಳು ಸಲ್ಲುತ್ತವೆ ಎಂದು ಅವರು ಹೇಳಿದ್ದಾರೆ.
ಎಲೆಕ್ಟ್ರಿಕಲ್, ಎಂಜಿನಿಯರಿಂಗ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ ವಿಭಾಗಗಳ ಅರ್ಹ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ತಮ್ಮ ಊರಿನ ಹತ್ತಿರದಲ್ಲೇ ಈಗ ಉದ್ಯೋಗಾವಕಾಶ ದೊರೆಯುತ್ತಿರುವುದು ಸಂತಸಕ್ಕೆ ಕಾರಣಾವಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ನೈಡೆಕ್ ಕಂಪನಿಯ ಅಧಿಕಾರಿಗಳಾದ ಸೋಮಶೇಖರ್, ಮಂಜುನಾಥ್, ಚಂದನಾ ಮತ್ತು ನಿಶ್ಮಿಕಾ ಅವರು ಕ್ಯಾಂಪಸ್ ಸಂದರ್ಶನ ನಡೆಸಿದರು. ಕಾಲೇಜಿನ ಪ್ರಾಂಶುಪಾಲ ಪ್ರಭುದೇವ ಕಳಸಗೊಂಡ, ಉದ್ಯೋಗಾಧಿಕಾರಿ ಸುಧನ್ವ ಕುಲಕರ್ಣಿ, ಐಟಿಐ ಉದ್ಯೋಗಾಧಿಕಾರಿ ವಾಗೀಶ ಮರೀಮಠ ಕೂಡ ಸಮನ್ವಯಾಧಿಕಾರಿಗಳಾಗಿ ಇದ್ದರು ಎಂದು ಅವರು ಹೇಳಿದ್ದಾರೆ.

