ವಿಜಯಪುರದಲ್ಲಿ ಬಂಜಾರ ಯುವಕ ಯುವತಿಯರಿಗೆ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಾಗಾರದ ಸಮಾರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಆದರ್ಶ ನಗರದ ಶ್ರೀ ಸಂತ ಸೇವಾಲಾಲ ದೇವಸ್ಥಾನ, ರಾಮರಾಮ ಮಹಾರಾಜರ ಭವನದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು ವತಿಯಿಂದ ಜೂ.18 ರಿಂದ 20 ವರೆಗೆ ಬಂಜಾರ ಯುವಕ ಯುವತಿಯರಿಗೆ ಹವೇಲಿ, ವಳಂಗ, ವಿತಿ, ಕಡಿ ಕಸಳಾತ, ಸಿಕವಾಡಿ”ಗಳ ಕುರಿತು ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.
ಸಮಾರಂಭದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ನಾರಾಯಣ ಬಿ ಪವಾರ ಇವರು ಸಮಾರೋಪ ನುಡಿಗಳನ್ನಾಡುತ್ತಾ, ಬಂಜಾರ ಭಾಷೆಯನ್ನು ಮಾತನಾಡುವುದರ ಜೊತೆಗೆ ವ್ಯವಹಾರಿಕ ಭಾಷೆಯಾಗಿ ಕನ್ನಡ, ಇಂಗ್ಲಿಷ್ ಅವಶ್ಯಕವಾಗಿ ಬೇಕಾಗುತ್ತದೆ. ಬಂಜಾರರು ಇಡೀ ವಿಶ್ವದಲ್ಲಿ ಹರಡಿಕೊಂಡಿದ್ದಾರೆ. ಬಂಜಾರರು ಬಳಸುವ ಭಾಷೆಯಲ್ಲಿ ಅನೇಕ ಪದಗಳು ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತದಿಂದ ಕೂಡಿವೆ. ಬಂಜಾರಾ ಮಹಿಳೆಯರು ತಮ್ಮ ಭಾವನೆಗಳನ್ನು ಢಾವಲೋ (ಕೊಳರಗೆ ಅಪ್ಪಿಕೊಂಡು ಅಳುವುದು) ಮೂಲಕ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.
ಸುವರ್ಣ ಕರ್ನಾಟಕ ಪ್ರಶಸ್ತಿಯನ್ನು ಪಡೆದ ಗದುಗಿನ ಸುರೇಶ್ ಲಮಾಣಿಯವರು ಮಾತನಾಡುತ್ತಾ, ಇಂದಿನ ಯುವ ಪೀಳಿಗೆ ಬಂಜಾರರ ವಿತಿ, ಕಡಿ, ಕಸಲಾತ, ಢಾವಲೋ ಕಲಿಯುವುದರ ಮೂಲಕ ಸಂಸ್ಕೃತಿಯನ್ನು ಉಳಿಸಬೇಕಾಗಿದೆ ಎಂದರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯೆಯಾದ ಡಾ.ಸುರೇಖಾ ರಾಠೋಡ ಅವರು, ಮೂರು ದಿನಗಳವರೆಗೆ ನಡೆದ ಕಾರ್ಯಕ್ರಮದ ವಿವರವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಬಾಬು ಲಮಾಣಿ, ಬಾಬು ಚವ್ಹಾಣ, ಸುನಿತಾ ಜಾಧವ, ಜ್ಯೋತಿ ಚವ್ಹಾಣ, ಶಾನು ರಾಠೋಡ, ಶಂಕರ ರಾಠೋಡ, ಸಂಗೀತಾ ನಾಯಕ, ಅಶ್ವಿನಿ ಲಮಾಣಿ ಮತ್ತಿತರರು ಭಾಗಿಯಾಗಿದ್ದರು.
ಅಂಜಲಿ ರಾಠೋಡ ವಂದನಾರ್ಪಣೆ ಮಾಡಿದರು.

