ಪುಸ್ತಕಾವಲೋಕನ: ಸ್ಪಾರ್ಕ್-೧
ಉದಯರಶ್ಮಿ ದಿನಪತ್ರಿಕೆ
ಕೆಲವೊಮ್ಮೆ ನಮ್ಮೆಲ್ಲರ ಜೀವನದಲ್ಲಿ ಕೆಲ ಕ್ಷಣಗಳು ದಿಕ್ಕುತೋಚದ, ಹಿಡಿತ ತಪ್ಪಿದ ಅಂಧಕಾರದಂತಿರುತ್ತವೆ. ಅಂತಹ ಕಠಿಣ ಸಂದರ್ಭದಲ್ಲಿ ನಮ್ಮೊಳಗಿನ ಅಂತಃಶಕ್ತಿಯನ್ನು ಹುರಿದುಂಬಿಸಿದಾಗ ಪವಾಡಗಳು, ಸಾಧನೆಗಳು ನೆಡೆಯುತ್ತವೆ. ಆ ಕ್ಷಣದಲ್ಲಿ ಒಂದು ಸಣ್ಣ ಸ್ಪೂರ್ತಿಯ ಕಿರಣ ಸಾಕು ಬದುಕನ್ನು ಬೆಳಗಿಸಲು. ಈ ನಿಟ್ಟಿನಲ್ಲಿ ಅಂತಹ ಒಳಜ್ಯೋತಿಯನ್ನು ಹತ್ತಿಸಿ ಜಡತ್ವದಿಂದ ಸ್ಪೂರ್ತಿಯೆಡೆಗೆ ಎಬ್ಬಿಸುವ ಉದ್ದೇಶದಿಂದ ರೂಪುಗೊಂಡ ಕೃತಿಯೇ “ಸ್ಪಾರ್ಕ್-1″ ಎನ್ನಬಹುದು.
ಸಕಾರಾತ್ಮಕ ಚಿಂತನೆ, ಪ್ರಾರ್ಥನೆ, ಆತ್ಮವಿಶ್ವಾಸ, ಧೈರ್ಯ ಮತ್ತು ನಿರಂತರ ಪ್ರಯತ್ನಗಳ ಮಹತ್ವವನ್ನು ಸರಳವಾದ ಪದಗಳಲ್ಲಿ ಓದುಗರ ಮನಸ್ಸಿಗೆ ತಲುಪಿಸುವ ಈ ಪುಸ್ತಕವು ಬದುಕಿನ ಮಾರ್ಗದಲ್ಲಿ ದಾರಿದೀಪದಂತೆ ಕಾರ್ಯವನ್ನು ನಿರ್ವಹಿಸುತ್ತದೆ ಎನ್ನಬಹುದು.
ಪ್ರತಿಯೊಂದು ಲೇಖನವೂ ಮನಸ್ಸನ್ನು ಮುಟ್ಟುವ ಚಿಂತನೆಯಾಗಿ ಮೂಡಿಬಂದಿವೆ. “ನಿರಾಸೆಯ ನಡುವೆ ನಮ್ಮ ಆಸೆಗಳನ್ನು, ಸೋಲಿನ ನಡುವೆ ಹೊಸ ಆರಂಭವನ್ನು ಕಂಡುಕೊಳ್ಳುವ ಶಕ್ತಿಯನು” ನೀಡುವ ಈ ಸರಳ ಕೃತಿ ಓದುಗರೊಳಗಿನ ನಂಬಿಕೆಯನ್ನು ಜಾಗೃತಗೊಳಿಸಿ, “ನಿನ್ನೊಳಗೇ ಶಕ್ತಿ ಇದೆ” ಎಂಬ ಸಂದೇಶವನ್ನು ಮನಮುಟ್ಟುವಂತೆ ಹೇಳುವ ಮೂಲಕ ಕೇವಲ ಓದಲು ಮಾತ್ರವಲ್ಲ ಮೌಲ್ಯಯುತವಾಗಿ ಬಾಳಲು ಪ್ರೇರೇಪಿಸುವ ಆತ್ಮಸಂಗಾತಿಯಂತಿದೆ.
ಜೀವನದಲ್ಲಿ ಕೆಲವೇ ಕೆಲವು ಪುಸ್ತಕಗಳು ಮನಸ್ಸಿಗೆ ಸ್ಪರ್ಶಿಸಿ ನಮ್ಮೊಳಗಿಂದಲೇ ಒಂದು ಹೊಸ ಬೆಳಕನ್ನು ಬೆಳಗಿಸುತ್ತವೆ. ಅಂತಹ ಪ್ರೇರಣಾದಾಯಕ ಕೃತಿಗಳಲ್ಲಿ “ಸ್ಪಾರ್ಕ್-”1 ಕೂಡ ಪ್ರಮುಖವಾದುದು. ಸಕಾರಾತ್ಮಕ ಚಿಂತನೆ, ಧೈರ್ಯ, ಆತ್ಮವಿಶ್ವಾಸ ಮತ್ತು ಹೋರಾಟ ಮನೋಭಾವವನ್ನು ಓದುಗರಲ್ಲಿ ಜಾಗೃತಗೊಳಿಸುವ ಉದ್ದೇಶದಿಂದ ಈ ಪುಸ್ತಕವನ್ನು ಲೇಖಕ ಡಾ.ರಾಜಶೇಖರ ನಾಗೂರ ರವರು ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಶೈಲಿಯಲ್ಲಿ ರಚಿಸಿದ್ದಾರೆ.

ಈ ಕೃತಿಯ ವಿಶೇಷತೆ ಎಂದರೆ ಪ್ರತಿಯೊಂದು ಲೇಖನವೂ ಓದುಗರ ಮನಸ್ಸಿನಲ್ಲಿ ಒಂದು ಚಿಕ್ಕ ಬೆಳಕಿನ ಕಿಡಿಯನ್ನು (spark) ಹಚ್ಚುವಂತಿದೆ. ನಿರಾಶೆ, ಸೋಲು, ಭಯ, ಆತಂಕ ಇವುಗಳಿಂದ ಬಳಲುವ ಮನಸ್ಸಿಗೆ ಹೊಸ ದಾರಿ ತೋರಿಸಿ “ನೀನು ಮಾಡಬಲ್ಲೆ” ಎಂಬ ನಂಬಿಕೆಯನ್ನು ತುಂಬುತ್ತದೆ. ಜೀವನದ ಸಾಮಾನ್ಯ ಸನ್ನಿವೇಶಗಳು ಅನುಭವಗಳು ನೈಜ ಘಟನೆಗಳು ಹಾಗೂ ಮೌಲ್ಯಪೂರ್ಣ ಸಂದೇಶಗಳನ್ನು ಸುಂದರವಾಗಿ ಹೆಣೆದು ಲೇಖಕರು ಓದುಗರ ಹೃದಯವನ್ನು ತಲುಪಿದ್ದಾರೆ.
ಭಾಷೆಯ ಸರಳತೆ ಈ ಪುಸ್ತಕದ ಮತ್ತೊಂದು ಬಲ, ಎಲ್ಲ ವರ್ಗದ ಓದುಗರಿಗೂ ಸುಲಭವಾಗಿ ಅರ್ಥವಾಗುವಂತೆ ಲೇಖಕರು ಚಿಕ್ಕಚಿಕ್ಕ ಚಿಂತನೆಗಳ ಮೂಲಕ ದೊಡ್ಡ ಸಂದೇಶವನ್ನು ನೀಡಿದ್ದಾರೆ. ಪ್ರತಿಯೊಂದು ಪುಟವೂ ಓದುಗರನ್ನು ಯೋಚನೆಗೆ ಪ್ರೇರೇಪಿಸಿ, ತಮ್ಮ ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುತ್ತದೆ. ವಿಶೇಷವಾಗಿ ಯುವಜನತೆಗೆ ಈ ಕೃತಿ ದಾರಿದೀಪದಂತೆ ಕಾರ್ಯನಿರ್ವಹಿಸುತ್ತದೆ.
“ಸ್ಪಾರ್ಕ್-1” ಕೇವಲ ಓದಲು ಮಾತ್ರವಲ್ಲ, ಬಾಳಲು ಕಲಿಸುವ ಪುಸ್ತಕ. ಸೋಲಿನ ಕ್ಷಣದಲ್ಲಿ ಧೈರ್ಯ ನೀಡುವ, ಗೊಂದಲದ ಸಮಯದಲ್ಲಿ ದಿಕ್ಕು ತೋರಿಸುವ, ಮನಸ್ಸು ಕುಗ್ಗಿದಾಗ ಉತ್ಸಾಹ ತುಂಬುವ ಸ್ನೇಹಿತನಂತೆ ಇದು ಜೊತೆಗಿರುತ್ತದೆ. ಆತ್ಮವಿಕಾಸ ಮತ್ತು ಸಕಾರಾತ್ಮಕ ಬದುಕಿನತ್ತ ಹೆಜ್ಜೆ ಇಡಲು ಬಯಸುವ ಪ್ರತಿಯೊಬ್ಬರೂ ಈ ಕೃತಿಯನ್ನು
ಓದಿ ಅರ್ಥೈಸಿಕೊಳ್ಳಬೇಕು.
ಈ ಕೃತಿ ಓದುಗರ ಮನಸ್ಸಿನಲ್ಲಿ ದೀರ್ಘಕಾಲ ಉಳಿದು ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ. ಈ ಪುಸ್ತಕವು ಓದುಗರನ್ನು ಕೇವಲ ಪ್ರೇರೇಪಿಸುವುದಲ್ಲ, ಅವರೊಳಗೆ ಅಡಗಿದ ಸಾಮರ್ಥ್ಯವನ್ನು ಅರಿತುಕೊಳ್ಳುವಂತೆ ಮಾಡುತ್ತದೆ. ಪ್ರತಿಯೊಂದು ಚಿಂತನೆಯೂ ಮನಸ್ಸಿಗೆ ಹತ್ತಿರವಾಗಿ ಮಾತನಾಡುವಂತೆ ಅನುಭವವಾಗುತ್ತದೆ. “ಸಾಧ್ಯವೇ ಇಲ್ಲ” ಎಂಬ ನಕಾರಾತ್ಮಕ ಭಾವನೆಯನ್ನು ಕರಗಿಸಿ “ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ” ಎಂಬ “ದೃಢ ನಂಬಿಕೆಯನ್ನು” ಬೆಳಗಿಸುತ್ತದೆ.
ಜೀವನದ ಸಣ್ಣ ಸಣ್ಣ ಕ್ಷಣಗಳಲ್ಲೂ ಅರ್ಥ ಕಂಡುಕೊಳ್ಳುವ ಕಲೆಯನ್ನು ಈ ಕೃತಿ ಕಲಿಸುತ್ತದೆ. ಪ್ರತಿದಿನವನ್ನು ಹೊಸ ಆಸೆಯೊಂದಿಗೆ ಆರಂಭಿಸಲು ಓದುಗರಿಗೆ ಮನೋಬಲ ನೀಡುತ್ತದೆ. ಆದ್ದರಿಂದ “ಸ್ಪಾರ್ಕ್-1″ ಒಂದು ಓದಿನ ಅನುಭವವಲ್ಲ, ಅದು ಜೀವನವನ್ನು ಸಕಾರಾತ್ಮಕತೆಯೆಡೆಗೆ ಬೆಳಗಿಸುವ ಶಾಶ್ವತ ಸ್ಪೂರ್ತಿಯ ದೀಪವೆಂದು ಹೇಳಬಹುದು.
ಪ್ರತೀ ಲೇಖನದ ಕೊನೆಯಲ್ಲಿ ಕಾಣಿಸಿಕೊಳ್ಳುವ “ರಾಜನುಡಿ” ಓದುಗರಿಗೆ ಕೇವಲ ಸಂದೇಶವಲ್ಲ ಅವು ನೊಂದ ಮನಸಿಗೆ ಹಾಗೂ ಸೋತ ದಾರಿಗೆ ದಿಕ್ಕು ತೋರಿಸುವ ದೀಪವಾಗಿವೆ.
ಈ ಕೃತಿಯ ಯಶಸ್ಸೇ ಮುಂದಿನ ಭಾಗವಾದ “ಸ್ಪಾರ್ಕ್–2” ಬಗ್ಗೆ ಅಪಾರ ನಿರೀಕ್ಷೆಯನ್ನು ಹುಟ್ಟಿಸಿದೆ. ಇನ್ನಷ್ಟು ಉಜ್ವಲವಾದ ಸಂದೇಶಗಳು, ಹೊಸ ಚಿಂತನೆಗಳು ಮತ್ತು ಬದುಕಿಗೆ ಬೆಳಕು ತುಂಬುವ ಸ್ಪೂರ್ತಿಯೊಂದಿಗೆ ಅದು ಶೀಘ್ರದಲ್ಲೇ ನಮ್ಮ ಕೈ ಸೇರಲಿ ಎಂಬುದೇ ನಮ್ಮೆಲ್ಲರ ಆಶಯ.
ಪುಸ್ತಕ ಬೇಕಾದವರು 8904264284 ನಂಬರ್ ಗೆ ಸಂಪರ್ಕಿಸಬಹುದು.
– ಸಂಪಾದಕ


