ಲೇಖನ
– ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಹದಿಹರೆಯದ ವಯಸ್ಸಿನಲ್ಲಿ ಗೆಳೆಯರಿಂದ ದೂರ ಇರುವುದು ಕಷ್ಟವೆನಿಸುತ್ತದೆ. ಆ ವಯಸ್ಸೇ ಹಾಗೆ ಗೆಳೆಯರ ಜೊತೆ ಇರದಿದ್ದರೆ ಎಲ್ಲರೂ ಸೇರಿ ಅವಮಾನಿಸುತ್ತಾರೆ. ಅಗೌರವ ತೋರುತ್ತಾರೆ ಎನ್ನುವ ಭಯದಲ್ಲಿ ಅವರೊಂದಿಗೆ ಸಮಯ ಕಳೆಯುವುದನ್ನು ಮಾಡುತ್ತಾರೆ. ಎಷ್ಟೋ ಸಲ ಆ ಭಯದಿಂದ ಹೊರಬರಬೇಕೆಂದು ಮನಸ್ಸಿಗೆ ಅನಿಸುತ್ತದೆ. ಆದರೂ ಅದೊಂಥರ ಜಿಮ್ನಾಸ್ಟಿಕ್ ಬೆಡ್ನಲ್ಲಿ ಬಿದ್ದಂತೆ ಮೇಲೇಳಲು ಆಗದೇ ಅದೇ ವೃತ್ತದಲ್ಲಿ ಬಿದ್ದು ಕೊರಗುತ್ತಾರೆ. ನಿಜವಾದ ಸ್ನೇಹಿತನಂತೆ ನನ್ನನ್ನು ನಡೆಸಿಕೊಳ್ಳುವುದಿಲ್ಲ ಎಂಬ ನೋವು ಕಾಡುತ್ತದೆ. ಇಲ್ಲಿ ನಾನು ಹೇಳ ಹೊರಟಿರುವುದು ಗೆಳೆಯರ ಸಹವಾಸವನ್ನು ಕಟ್ ಮಾಡಿಬಿಡಿ ಅಂತಲ್ಲ. ಉತ್ತಮ ಗೆಳೆಯರ ಸಂಗ ಮಾಡಿ ಎಂದು. ‘ನಿಮ್ಮ ಗೆಳೆಯರನ್ನು ತೋರಿಸಿ ನೀವು ಎಂತಹ ವ್ಯಕ್ತಿ ಎಂದು ಹೇಳುವೆ.’ ಎಂಬಂತೆ ಒಳ್ಳೆಯ ಅಭಾಸಗಳುಳ್ಳ ಗೆಳೆಯರ ಜೊತೆಗಿದ್ದರೆ ಅವರ ಅಭ್ಯಾಸಗಳು ನಿಮ್ಮ ಮೇಲೆ ಪ್ರಭಾವ ಬೀಳುತ್ತವೆ. ನೀವೆಲ್ಲ ಕೂಡಿ ಒಂದು ತಂಡವಾಗಿ ಕೆಲಸದ ಜವಾಬ್ದಾರಿಯನ್ನು ನಿಭಾಯಿಸಬಹುದು. ತಂಡದಲ್ಲಿ ಕೆಲಸ ಮಾಡಿದಾಗ ಮನ್ನಣೆ ದೊರೆಯುವುದು. ಮನ್ನಣೆಯಿಂದ ವಿಶ್ವಾಸ ಹೆಚ್ಚುವುದು.
ತಪ್ಪುವ ಹಳಿ
ಇತ್ತೀಚಿಗಂತೂ ಅನೇಕ ಮಕ್ಕಳು ಒಂದು ರೀತಿಯ ಕೆಟ್ಟ ಗೆಳೆಯರ ಸಂಗದಲ್ಲಿ ಸಿಲುಕಿಕೊಂಡು ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೆಂದು ಒಳಗೊಳಗೆ ನೋವು ಅನುಭವಿಸುತ್ತಾರೆ. ಈ ಕೆಟ್ಟ ಸ್ನೇಹ ತಮಗೆ ಉಂಟುಮಾಡಿದ ಹಾನಿಯನ್ನು ಅರ್ಥಮಾಡಿಕೊಳ್ಳುವ ಹೊತ್ತಿಗೆ ಸಣ್ಣದಾಗಿ ಬದುಕು ಹಳಿ ತಪ್ಪಲು ಶುರುವಾಗಿರುತ್ತದೆ.
ಆರೋಗ್ಯಕರ ಗಡಿ
ನೀವು ಇತರರಿಂದ ಸಹಾಯ ಪಡೆಯಲು, ಆರೋಗ್ಯಕರ ಗಡಿಗಳನ್ನು ಹೊಂದಿಸಲು ಮತ್ತು ಉತ್ತಮ ಸ್ನೇಹಕ್ಕಾಗಿ ಆದ್ಯತೆಗಳನ್ನು ನೀಡಲು ಸಾಧ್ಯವಾದರೆ, ನಿಮ್ಮ ಮೇಲೆ ನಕಾರಾತ್ಮಕ ಪ್ರಭಾವ ಬೀರಲು ಪ್ರಯತ್ನಿಸುವ ಸ್ನೇಹಿತರನ್ನು ನೀವು ಉತ್ತಮವಾಗಿ ನಿರ್ವಹಿಸಲು ಅಥವಾ ದೂರವಿರಲು ಸಾಧ್ಯವಾಗುತ್ತದೆ. ಗೆಳೆತನದಲ್ಲಿ ಆರೋಗ್ಯಕರ ಗಡಿಯನ್ನು ಹೊಂದಿಸುವುದು ಮುಖ್ಯ. ಆ ಗಡಿರೇಖೆಗಳು ಶಕ್ತಿ ಸಮಯ ಮತ್ತು ಆದ್ಯತೆಗಳನ್ನು ರಕ್ಷಿಸುವ ಸಂಗತಿಗಳಾಗಿರಲಿ. ನಿಮ್ಮ ಮೌಲ್ಯಗಳು ಮತ್ತು ಅಗತ್ಯತೆಗಳನ್ನು ನೆನಪಿಟ್ಟು ಕೆಟ್ಟ ಸ್ನೇಹದಿಂದ ಪಾರಾಗುವುದು ಹೇಗೆ ನೋಡೋಣ ಬನ್ನಿ.
ಸ್ವಯಂ ನಿಯಂತ್ರಣ

ಸ್ವಯಂ ನಿಯಂತ್ರಣವು ಒಳಗಿನಿಂದ ಬರುತ್ತದೆ ಎಂದು ಆಗಾಗ್ಗೆ ನಾವು ಭಾವಿಸುತ್ತೇವೆ, ಆದರೆ ನಮ್ಮ ಅನೇಕ ಕ್ರಿಯೆಗಳು ನಮ್ಮಂತೆಯೇ ನಮ್ಮ ಸ್ನೇಹಿತರು ಮತ್ತು ಕುಟುಂಬದವರ ಮೇಲೂ ಅವಲಂಬಿತವಾಗಿವೆ. ಸುತ್ತವರೆದಿರುವವರು ನಮ್ಮನ್ನು ಒಳ್ಳೆಯವರನ್ನಾಗಿಸಬಹುದು ಇಲ್ಲವೇ ಕೆಟ್ಟವರನ್ನಾಗಿಸುವ ಶಕ್ತಿಯನ್ನು ಹೊಂದಿದ್ದಾರೆ. ಸೂರ್ಯನ ರಕ್ಷಣೆಯಂತೆ ಕೆಲವರಾದರೆ ಕಾಲಿಗೆ ಚುಚ್ಚುವ ಮುಳ್ಳಿನಂತೆ ಹಲವರು ಇರುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂಬುದನ್ನು ತಿಳಿದಿರಲೇಬೇಕು.
ಗುಂಪು ವರ್ತನೆ
‘ನೀವು ಒಂದು ಗುಂಪಿನಿಂದ ನಿಮ್ಮ ಗುರುತನ್ನು ಹೆಚ್ಚು ಪಡೆಯುತ್ತೀರಿ, ನೀವು ಆ ಗುಂಪಿನ ಸುತ್ತಲೂ ಇಲ್ಲದಿದ್ದರೂ ಸಹ, ನೀವು ಆ ಮೌಲ್ಯಗಳನ್ನು ಎತ್ತಿಹಿಡಿಯುವ ಸಾಧ್ಯತೆ ಹೆಚ್ಚು. ಎಂದು ಹಂಬೋಲ್ಟ್ ಸ್ಟೇಟ್ ಯೂನಿವರ್ಸಿಟಿಯ ಸಾಮಾಜಿಕ ಮನಃಶಾಸ್ತçಜ್ಞೆ ಅಂಬರ್ ಗ್ಯಾಪ್ನಿ ಹೇಳುತ್ತಾರೆ. ಇದು ಕೇವಲ ಗೆಳೆಯರ ಒತ್ತಡವಲ್ಲ. ಇದರಲ್ಲಿ ನೀವು ಗುಂಪಿನೊಂದಿಗೆ ಹೊಂದಿಕೊಳ್ಳಲು ಉದ್ದೇಶಪೂರ್ವಕವಾಗಿ ಒಂದು ನಿರ್ಧಿಷ್ಡ ರೀತಿಯಲ್ಲಿ ವರ್ತಿಸುತ್ತೀರಿ. ಬದಲಾಗಿ, ಇದು ಹೆಚ್ಚಾಗಿ ಪ್ರಜ್ಞಾಹೀನವಾಗಿರುತ್ತದೆ. ನಿಮ್ಮ ಅರಿವಿನ ಅಡಿಯಲ್ಲಿ ನಿಮ್ಮ ಮೆದುಳು ನಿಮ್ಮ ನಡವಳಿಕೆಯನ್ನು ತಿಳಿಸಲು ನಿಮ್ಮ ಸುತ್ತಲಿನ ಜನರಿಂದ ಸೂಚನೆಗಳನ್ನು ನಿರಂತರವಾಗಿ ಪಡೆಯುತ್ತಿರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಂಡು ನಡೆಯಬೇಕು.
ಸರಿಯಾದ ಸಮಯ
ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ‘ಸರಿಯಾದುದನ್ನು ಮಾಡಲು ಸಮಯ ಯಾವಾಗಲೂ ಸರಿಯಾಗಿದೆ.’ ಎಂಬ ಪ್ರೇರಕ ಉಲ್ಲೇಖವು ನೈತಿಕ ಧೈರ್ಯ ಮತ್ತು ವೈಯಕ್ತಿಕ ಜವಾಬ್ದಾರಿಯ ಬಗ್ಗೆ ಪ್ರಬಲ ಸಂದೇಶವನ್ನು ನೀಡುತ್ತದೆ. ಗೆಳೆಯರ ಗುಂಪಿನ ಭಯದ ಕಾರಣದಿಂದಾಗಿ ಸರಿಯಾದ ಕೆಲಸ ಮಾಡುವುದನ್ನು ಎಂದಿಗೂ ವಿಳಂಬ ಮಾಡಬಾರದು. ಅನೇಕರು ಗೆಳೆಯರು ಜೊತೆಗೆ ಇರುವಾಗ (ಉದಾ: ಅಭ್ಯಾಸ ಮಾಡುವುದನ್ನು, ವಾಚನಾಲಯಕ್ಕೆ ಹೋಗುವುದನ್ನು, ಉತ್ತಮ ಹವ್ಯಾಸ ಬೆಳೆಸಿಕೊಳ್ಳುವುದನ್ನು) ಇದೆಲ್ಲ ಬೇಡ ಆಮೇಲೆ ನೋಡಿದರಾಯಿತು. ಎಂದು ಕಾಯುತ್ತಾರೆ. ಆ ಸಮಯ ಯಾರಿಗಾಗಿಯೂ ಕಲಿಯುವುದಿಲ್ಲ. ವೈಯಕ್ತಿಕ ಜೀವನವು ಗೆಳೆಯರಿಗೆ ಸಂಬಂಧಿಸಿಲ್ಲ. ಸರಿಯಾದ ಸಮಯದಲ್ಲಿ ಸರಿಯಾದುದನ್ನು ಮಾಡಿದರೆ ಮುಂದಿನ ಜೀವನ ಸುಲಭವೆನಿಸುತ್ತದೆ. ಅಪಾಯಕಾರಿ ಕಷ್ಟಕರ ಸನ್ನಿವೇಶಗಳನ್ನು ಖಂಡಿತ ಕಡಿಮೆ ಮಾಡುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದುದನ್ನು ಮಾಡಿದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಗೆಳೆಯರ ಸಂಗದಲ್ಲಿ ಸಮಯ ವ್ಯರ್ಥ ಮಾಡಬಾರದು.
ಧೈರ್ಯಶಾಲಿ ನಿರ್ಧಾರ
ಇದರರ್ಥ ನಿಮ್ಮ ಸುಖಕರ ನಾಳೆಗಳಿಗಾಗಿ ಈಗ ಸರಿಯಾದುದನ್ನು ಮಾಡುವುದು ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸುತ್ತದೆ. ಒಂದು ಸಮಯದಲ್ಲಿ ಒಂದು ಧೈರ್ಯಶಾಲಿ ನಿರ್ಧಾರ ಬದುಕನ್ನು ಚೆಂದಗಾಣಿಸಬಲ್ಲದು. ಸಮಯವು ಹಣವಿದ್ದಂತೆ. ಹೀಗಾಗಿ ಇತರರ ಸಮಯವನ್ನು ಗೌರವಿಸುವುದು ಬಲು ಮುಖ್ಯ. ನಿಮ್ಮ ಸಮಯದಂತೆ ಇತರರ ಸಮಯದ ಬಗ್ಗೆ ಕಾಳಹಿ ವಹಿಸಿದಾಗ ನಿಮ್ಮ ಮೇಲಿನ ನಂಬಿಕೆ ಇನ್ನಷ್ಟು ದ್ವಿಗುಣಗೊಳ್ಳುತ್ತದೆ. ಗೆಳೆತನವೂ ಹೂವಿನಂತೆ ಅರಳುತ್ತದೆ.
ಜೀವನ ಶಿಸ್ತು
ನಿಮ್ಮದೇ ಆದ ಪ್ರಭಾವಲಯವನ್ನು ಸೃಷ್ಟಿಸುವ ಜೀವನಶಿಸ್ತನ್ನು ಅನುಸರಿಸುವ ವಯೋಮಾನವಿದು. ಗುಣ ನಡತೆಗಳನ್ನು ದಿನಚರಿಗಳನ್ನು ಬಿಟ್ಟು ಗೆಳೆಯರ ವ್ಯರ್ಥ ಸಮಯದ ಹರಟೆಯಲ್ಲಿ ಕಾಲ ಕಳೆದರೆ ನಿಮ್ಮ ಮೇಲೆ ನೀವು ಭರವಸೆಯನ್ನು ಕಳೆದುಕೊಳ್ಳುವ ಬದುಕು ನಿಮ್ಮ ಪಾಲಿಗೆ ಬರುತ್ತದೆ. ಆದ್ದರಿಂದ ಬದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಉತ್ತಮ ಅಭ್ಯಾಸಗಳು ನಿಮ್ಮ ಮೇಲಿನ ನಿಮಗಿರುವ ನಂಬಿಕೆಯನ್ನು ಗಟ್ಟಿಗೊಳಿಸಲು ನೆರವಾಗುತ್ತವೆ. ಸುಂದರ ಬದುಕಿಗೆ ಬೇಕಾದ ಈ ಎಲ್ಲ ಅಂಶಗಳು ತಿಳಿದ ಮೇಲೆ ‘ಅಯ್ಯೋ! ಇಷ್ಟು ದಿನ ದೊಡ್ಡ ತಪ್ಪು ಮಾಡಿಬಿಟ್ಟೆ.’ ಎಂದು ಖಿನ್ನತೆಯ ಕೂಪದಲ್ಲಿ ಬೀಳುವುದಲ್ಲ. ಬದುಕಿನಲ್ಲಿ ತಪ್ಪುಗಳಾಗುವುದು ಸಾಮಾನ್ಯ. ಇದೊಂದು ಬದುಕಿನ ಪಾಠವೆಂದು ಸ್ವೀಕರಿಸಬೇಕು. ತಪ್ಪುಗಳಾದ ಸಮಯದಲ್ಲಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದೇ ಆದ ತಪ್ಪನ್ನು ಒಪ್ಪಿಕೊಳ್ಳುವುದು ಅದನ್ನು ಸರಿಪಡಿಸಲು ಪ್ರತಿಕ್ರಿಯಿಸುವುದು ಮುಖ್ಯ.
ಕೈ ಚಾಚಿ ಒಳ್ಳೆಯ ಗೆಳೆಯರಿಗೆ
ಅಬ್ರಹಾಂ ಲಿಂಕನ್ ಅವರ “ಒಂದು ಮರವನ್ನು ಕಡಿಯಲು ನನಗೆ ಆರು ಗಂಟೆಗಳನ್ನು ನೀಡಿ, ಮೊದಲ ನಾಲ್ಕು ಗಂಟೆಗಳನ್ನು ನನ್ನ ಕೊಡಲಿಯನ್ನು ಹರಿತಗೊಳಿಸಲು ಕಳೆಯುತ್ತೇನೆ” ಎಂಬ ಮಾತನ್ನು ನಾವು ಗೆಳೆತನದ ವಿಷಯದಲ್ಲೂ ಉಲ್ಲೇಖಿಸಬಹುದು. ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಬಂಧು ಬಳಗ ಹೀಗೆ ಯಾವುದೇ ಸಂಬಂಧವನ್ನು ಆರಿಸಿಕೊಳ್ಳುವುದು ನಮ್ಮ ಕೈಯಲ್ಲಿ ಇಲ್ಲ ಆದರೆ ನಮಗೆ ಬೇಕಾದ ಗೆಳೆಯರನ್ನು ನಾವೇ ಆರಿಸಿಕೊಳ್ಳಬಹುದು. ಹೀಗಿದ್ದರೂ ಬಹುತೇಕ ಮಕ್ಕಳು ಗೆಳೆತನ ಆರಂಭಿಸಲು ಬಹುತೇಕ ಅವಸರಿಸುತ್ತಾರೆ. ನಮ್ಮ ವ್ಯಕ್ತಿತ್ವ ಬೆಳೆಯಲು ನೆರವಾಗುವ ಗೆಳೆಯರನ್ನು ಆರಿಸಿಕೊಳ್ಳಲು ವಿಫಲರಾಗುತ್ತಾರೆ. ನೀವು ಮಾಡಿದ್ದಕ್ಕೆಲ್ಲ ಒಳ್ಳೆಯದೆಂದು ಹೊಗಳುವ ಗೆಳೆಯರ ಜೊತೆ ಇರುವುದು ಅಪಾಯಕಾರಿ. ಏಕೆಂದರೆ ಅವರು ನಿಮಗೆ ಉತ್ತಮ ಸಲಹೆಯನ್ನು ನೀಡಲಾರರು. ಹೌದಪ್ಪಗಳಾಗಿ ಉಳಿದು ಬಿಡುವರು. ಇದಕ್ಕೆ ವಿರುದ್ಧವಾಗಿ ನೀವು ಮಾಡಿದನ್ನೆಲ್ಲ ತೆಗಳುವ ಗೆಳೆಯರು ಸಹ ಒಳ್ಳೆಯ ಸ್ನೇಹಿತರಲ್ಲ. ಅವರು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವರು. ಗೆಳೆಯರ ಆಯ್ಕೆಗೆ ಸಮಯ ಕಳೆದರೆ ಅದು ಸಮಯ ವ್ಯರ್ಥವಲ್ಲವೇ? ಎಂದೆನಿಸಬಹುದು ಆದರೆ ಸಮಯದ ದೊಡ್ಡ ವ್ಯರ್ಥವೆಂದರೆ ತಯಾರಿ ಅಲ್ಲ. ತಪ್ಪು ಗೆಳೆಯರೊಂದಿಗೆ ಕೈ ಮಿಲಾಯಿಸುವುದು ಅಥವಾ ಒಳ್ಳೆಯ ಗೆಳೆಯರಿಗೆ ಕೈಚಾಚದಿರುವುದು..


