ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಪಾಲಕರು ತಮ್ಮ ಸಮಾನ ವಯಸ್ಕರೊಂದಿಗೆ ಮಾತನಾಡುವಾಗ ಮಕ್ಕಳೊಂದಿಗೆ ವಿಪರೀತ ಶಿಸ್ತಿನಿಂದ ಮತ್ತು ಕಠಿಣತೆಯಿಂದ ನಡೆದುಕೊಳ್ಳಬೇಕು ಎಂದು ಹೇಳುವುದನ್ನು ನಾವು ಬಹುತೇಕ ಕೇಳಿದ್ದೇವೆ.
ಮಕ್ಕಳೊಂದಿಗೆ ಶಿಸ್ತಿನಿಂದ ನಡೆದುಕೊಳ್ಳಲು ನಾವು ಬಯಸಿದಾಗ ನಮ್ಮದೇ ಆದ ಕಿಲ ನಿಯಮಾವಳಿಗಳನ್ನು ಮಾಡಿಕೊಂಡು ಅವುಗಳನ್ನು ಮಕ್ಕಳು ಪಾಲಿಸಲಿ ಎಂದು ಅಪೇಕ್ಷಿಸುತ್ತೇವೆ, ಆಶಿಸ್ತುಕ್ರಮಗಳನ್ನು ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತೇವೆ. ಅವುಗಳನ್ನು ಮಕ್ಕಳು ಪಾಲಿಸದೆ ಹೋದಾಗ ಅವರನ್ನು ದಂಡಿಸುತ್ತೇವೆ ಕಠಿಣವಾಗಿ ಮಾತನಾಡುತ್ತೇವೆ, ಆದರೆ ಅವರು ನಮ್ಮ ಮಕ್ಕಳು ನಮ್ಮದೇ ಪ್ರತಿರೂಪ. ಅತಿಯಾದ ಶಿಸ್ತು ಮಕ್ಕಳು ಪಾಲಕರ ವಿರುದ್ಧ ತಿರುಗಿ ಬೀಳುವಂತೆ ಮಾಡುತ್ತದೆ. ಅವರು ಪಾಲಕರ ಮಾತನ್ನು ಮೀರಬಹುದು. ವಿದ್ಯಾಭ್ಯಾಸದಲ್ಲಿ, ಆಟೋಟಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು.

ಆದರೆ ಇಲ್ಲಿ ಇನ್ನೊಂದು ಪದ ಇದೆ.. ಅದುವೇ ಬದ್ಧತೆ. ಬದ್ಧತೆ ಎಂದರೆ ಯಾವುದೇ ಒಂದು ವಿಷಯಕ್ಕೆ ದೃಢವಾಗಿ ಕಚ್ಚಿಕೊಂಡು ನಿಲ್ಲುವುದು, ನಿಲುವಿಗೆ ಬದ್ಧರಾಗುವುದು. ಇಂಥವರು ನನ್ನ ಜೊತೆಗಿದ್ದರೆ ನಾನು ಪರ್ವತವನ್ನೇ ಕಿತ್ತಿ ತರಬಲ್ಲೆ ಎಂಬ ಭಾವವನ್ನು ಮಕ್ಕಳಲ್ಲಿ ಮೂಡಿಸುವ ಬದ್ಧತೆಯನ್ನು ತಮ್ಮ ಮಕ್ಕಳಲ್ಲಿ ಮೂಡಿಸಲು ಸಾಧ್ಯವಾಗುವುದು ಕೇವಲ ಅವರ ಪಾಲಕರಿಗೆ ಮಾತ್ರ
ಬದ್ಧತೆಗೆ ಒಂದು ಉದಾಹರಣೆಯನ್ನು ನೀಡುವುದಾದರೆ 2019 ಮತ್ತು 20ರಲ್ಲಿ ಕರೋನ ಎಲ್ಲೆಡೆ ಲಾಕ್ ಡೌನ್ ಅನ್ನು ತಂದಿತ್ತು ಆ ಸಮಯದಲ್ಲಿ ಮನೆಯಲ್ಲಿ ಇದ್ದ ಮಗುವಿಗೆ ಜ್ವರ ಬಂದಾಗ ಮಗುವಿಗೆ ಕೊಡಬೇಕಾದ ಒಂದು ಸಣ್ಣ ಪ್ಯಾರಾಸೆಟಮಾಲ್ ಮಾತ್ರೆ ಕೂಡ ಮನೆಯಲ್ಲಿ ಇಲ್ಲದೆ ಹೋದ ವ್ಯಕ್ತಿ ಅಕ್ಕ ಪಕ್ಕದ ಮನೆಯವರನ್ನು ಸಹಾಯಕ್ಕಾಗಿ ಕರೆದಾಗ ಯಾರೂ ಆತನಿಗೆ ಕಿವಿಗೊಡಲಿಲ್ಲ. ಇಂತಹ ಸಮಯದಲ್ಲಿ ಆತ ಅದೇನೇ ಬಂದರೂ ನಾನು ನೋಡಿಕೊಳ್ಳುತ್ತೇನೆ, ನನ್ನ ಮಗುವನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ಇದನ್ನು ಬಿಟ್ಟು ನನಗೆ ಬೇರೆ ಯಾವುದೇ ವಿಷಯಗಳು ಮುಖ್ಯವಲ್ಲ ಎಂದು ಹಠ ತೊಟ್ಟು ಕಾರ್ಯನಿರ್ವಹಿಸುತ್ತಾನೆ. ಇದನ್ನು ನಾವು ಬದ್ಧತೆ ಎಂದು ಹೇಳಬಹುದು
ಯಾವುದೇ ಒಂದು ಕೆಲಸವನ್ನು ಹಠ ತೊಟ್ಟು ಸಾಧಿಸಿ ತೋರಿಸುವ ವ್ಯಕ್ತಿ ಬದ್ಧತೆಯನ್ನು ಹೊಂದಿದ್ದರೆ ಮಾತ್ರ ತನ್ನ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯ.
ಕಮಿಟ್ ಮೆಂಟನ್ನು ಕನ್ನಡದಲ್ಲಿ ನಿಲುವು, ಬದ್ಧತೆ ಎಂದೆಲ್ಲ ಕರೆಯುತ್ತಾರೆ. ಎಲ್ಲದರ ಅರ್ಥ ಒಂದೇ. ಶಿಸ್ತಿನಲ್ಲಿ ಕಠಿಣತೆಯ ಬಿಸಿ ಗಾಳಿ ಇದ್ದರೆ ಬದ್ಧತೆಯಲ್ಲಿ ನಿರ್ವಹಣಾ ಸಾಮರ್ಥ್ಯ ಮತ್ತು ಛಲವನ್ನು ಕಾಣಬಹುದು.
ಕಟ್ಟುನಿಟ್ಟಾಗಿ ಮಕ್ಕಳನ್ನು ಬೆಳೆಸುವುದಕ್ಕಿಂತ ಬದ್ಧತೆಯಿಂದ ಬೆಳೆಸುವುದು ಒಳ್ಳೆಯದು. ಕಟ್ಟುನಿಟ್ಟು ಹೆಸರೇ ಹೇಳುವಂತೆ ಮಕ್ಕಳಲ್ಲಿನ ಸಂವಹನ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ ಪಾಲಕರೊಂದಿಗೆ ಮಕ್ಕಳು ಮಾತನಾಡಲು ಹಿಂಜರಿಯುತ್ತಾರೆ. ಮಕ್ಕಳಲ್ಲಿ ಪಾಲಕರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುವಲ್ಲಿ ಸ್ತಬ್ದತೆ ಆವರಿಸುತ್ತದೆ. ಈ ನಿರ್ವಾತವನ್ನು ತುಂಬಿಕೊಳ್ಳಲು ಮಕ್ಕಳು ಮನೆಯ ಹೊರಗೆ ಸ್ನೇಹವನ್ನು ಬಯಸುತ್ತಾರೆ… ಇದು ಪಾಲಕರು ಮತ್ತು ಮಕ್ಕಳ ನಡುವೆ ಅಂತರ ಬೆಳೆಯಲು ಕಾರಣವಾಗುತ್ತದೆ.

ಕಟ್ಟುನಿಟ್ಟಿನಲ್ಲಿ ನಕಾರಾತ್ಮಕ ಭಾವನೆಗಳು ಇರುತ್ತವೆ. ಮಕ್ಕಳು ನಮ್ಮ ಮಾತನ್ನು ಕೇಳಲೇಬೇಕು ಎಂಬ ಹಠ ಇರುತ್ತದೆ. ಕೇಳದೆ ಹೋದಾಗ ಕೋಪ, ಸಿಟ್ಟು, ಉದ್ವೇಗಗಳು ನಮ್ಮನ್ನು ಆಳುತ್ತವೆ. ಆ ಸಿಟ್ಟಿನ ಕೈಗೆ ಬುದ್ಧಿಯನ್ನು ನೀಡಿದಾಗ ಅನಾಹುತಗಳಿಗೆ ದಾರಿಯಾಗುತ್ತದೆ ಅನಾಹುತಗಳಿಂದ ಮನೆಯಲ್ಲಿನ ಶಾಂತಿ, ನೆಮ್ಮದಿ ಮತ್ತು ಸಹಜತೆ ಕೆಟ್ಟು ಹೋಗುತ್ತದೆ. ಭಾವನೆಗಳಿಗೆ ಶಬ್ದದ ರೂಪವನ್ನು ಕೊಟ್ಟಾಗ ಶಿಸ್ತು ಬಿಸಿ ಗಾಳಿಯಂತೆ ಭಾಸವಾಗುತ್ತದೆ. ಆದರೆ ಬದ್ಧತೆಗೆ ಭಾವನೆಗಳಿಲ್ಲ ಬದ್ಧತೆಗೆ ಕ್ರಿಯೆ ಇದೆ. ಮಕ್ಕಳಲ್ಲಿ ಬದ್ಧತೆಯನ್ನು ನಾವು ಸೃಷ್ಟಿಸಿದಾಗ ಅವರ ನಿಲುವಿನ ಕುರಿತು, ಅವರ ಭಾವನೆಗಳ ಕುರಿತು ಅವರ ವಿಚಾರಗಳ ಕುರಿತು ನಾವು ಅವರೊಂದಿಗೆ ವಿಚಾರ ವಿಮರ್ಶೆ ಮಾಡಿದಾಗ ಮಾತ್ರ ಮಕ್ಕಳಿಗೆ ನಮ್ಮ ಭಾವನೆಗಳು ಅರ್ಥವಾಗುತ್ತವೆ. ಇದು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಲ್ಲ ಎಲ್ಲರಿಗೂ ಇದು ಅನ್ವಯಿಸುವ ವಿಷಯ.
ಮತ್ತೆ ಕೆಲ ಪಾಲಕರು ಇರುತ್ತಾರೆ… ತಮ್ಮ ಮಕ್ಕಳೊಂದಿಗೆ ಮಾತನಾಡದೆ ವರ್ಷಗಳೇ ಕಳೆದು ಹೋಗಿರುತ್ತವೆ. ಪತ್ನಿಯ ಮೂಲಕ ಅವರ ಅವಶ್ಯಕತೆಗಳನ್ನು ತಾನು ಪೂರೈಸಿದರೂ ಕೂಡ ಮಕ್ಕಳನ್ನು ಆಗಾಗ ಹೀಯಾಳಿಸುವುದನ್ನು ಅವರು ಬಿಡುವುದಿಲ್ಲ. ಮಕ್ಕಳ ಮುಖ ಕೂಡ ನೆನಪಿಲ್ಲ ಎಂದು ಹೇಳುವ ಪಾಲಕರನ್ನು ನಾವು ಕಾಣಬಹುದು. ಒಂದೇ ಮನೆಯಲ್ಲಿದ್ದು ಮಕ್ಕಳ ಆಹಾರ ಓದು ವಿದ್ಯಾಭ್ಯಾಸಗಳ ಕುರಿತು ಪತ್ನಿಯ ಮೂಲಕ ಕಾರ್ಯನಿರ್ವಹಿಸಿಯೂ ಕೂಡ ಮಕ್ಕಳೊಂದಿಗೆ ವಿರೋಧ ಕಟ್ಟಿಕೊಳ್ಳುವ ಬದಲು ಮಕ್ಕಳೊಂದಿಗೆ ಗೆಳೆತನ ಬೆಳೆಸಿದರೆ ಎಷ್ಟು ಚೆನ್ನ ಅಲ್ಲವೇ? ಮಕ್ಕಳೊಂದಿಗೆ ಮಾತುಕತೆಯಾಡಿ ಎಲ್ಲ ತೊಂದರೆಗಳಿಂದ ಒಂದು ಚಿಟಿಕೆ ಹೊಡೆಯುವಷ್ಟರಲ್ಲಿ ನಿವಾರಣೆ ಕಾಣಬಹುದು.
ವೇದನೆಗಳಿಗಿಂತ ಸಂವೇದನೆಗಳು ಮುಖ್ಯ. ಸತ್ಯ ಸಂಗತಿಗಳನ್ನು ಅರಿತು ಕಾಲಕ್ಕೆ ತಕ್ಕಂತೆ ನಾವು ಕೂಡ ಕೆಲ ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಮಕ್ಕಳನ್ನು ಬದ್ಧರಾಗಿಸಬೇಕು. ಆ ಮೂಲಕ ಯಶಸ್ವಿ ಜೀವನವನ್ನು ಸಾಗಿಸಲು ನೆರವು ನೀಡಬೇಕು.
ಸಾಮಾಜಿಕವಾಗಿ ಈ ರೀತಿಯ ಬದ್ಧತೆ ತೋರಿದವರನ್ನು ಜಗತ್ತು ಇಂದಿಗೂ ನೆನೆಯುತ್ತದೆ. ದೊಡ್ಡ ದೊಡ್ಡ ನೇತಾರರೆಲ್ಲ ಸ್ವಾತಂತ್ರ್ಯದ ಹೋರಾಟಕ್ಕಾಗಿ ತೋರಿದ ಬದ್ಧತೆಯಿಂದ ಇಂದು ಕೇವಲ ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗದೆ ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ. ನಾವು ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಉತ್ತಮ ಜೀವನವನ್ನು ನಡೆಸಲು ಬದ್ಧರಾಗಬೇಕಾಗಿದೆ. ನಮ್ಮ ಬದ್ಧತೆಯು ನಮ್ಮ ಬಾಧ್ಯತೆಗಳನ್ನು ಹೆಚ್ಚಿಸಿ ಜವಾಬ್ದಾರಿಯುತ ಪ್ರಜೆಗಳನ್ನಾಗಿಸುತ್ತದೆ.


