ಉದಯರಶ್ಮಿ ದಿನಪತ್ರಿಕೆ
ವರದಿ: ಶ್ರೀಕಂಠ ಈಶ್ವರ್
ಹೆಚ್ ಡಿ ಕೋಟೆ: ಹೆಗ್ಗಡದೇವನ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯ ಅನಿಲ್ ಚಿಕ್ಕಮಾದು ರಾಜಕೀಯಕ್ಕೆ ಬರುತ್ತಾರಾ? ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ..? ತೆರೆಮರೆಯಲ್ಲಿ ರಾಜಕೀಯ ಆಗುಹೋಗು ಗಮನಿಸುತ್ತಾ, ಪತಿ ಅನಿಲ್ ಚಿಕ್ಕಮಾದುಗೆ ಸಲಹೆ, ಸೂಚನೆ ನೀಡುತ್ತಾ ಬರುತ್ತಿರುವ ಸೌಮ್ಯ ಅನಿಲ್ ಚಿಕ್ಕಮಾದು ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಾರಾ.. ಈ ಎಲ್ಲ ಪ್ರಶ್ನೆಗಳು ಹೆಚ್ ಡಿ ಕೋಟೆ ಅಥವಾ ಸರಗೂರು ತಾಲೂಕಿನ ಮತದಾರರ ಪ್ರಭುಗಳಲ್ಲಿ ಮಾತ್ರ ಉದ್ಭವಿಸುತ್ತಿಲ್ಲ. ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಮಾತಾಡಿಕೊಳ್ಳುತ್ತಿದ್ದಾರೆ. ಸಭೆ ಸಮಾರಂಭಗಳು ಮುಗಿದ ಬಳಿಕ ರಾಜಕೀಯ ಪಡಸಾಲೆಯಲ್ಲಿ ಕುಳಿತು ಚರ್ಚಿಸುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದು ಸೌಮ್ಯ ಅನಿಲ್ ಚಿಕ್ಕಮಾದು ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು. ಜೊತೆಗೆ ಅವರ ಪ್ರಬುದ್ಧ ಮಾತುಗಾರಿಕೆ.
ನಂಜನಗೂಡು ತಾಲೂಕಿನ ತಾಂಡವಪುರ ಸಮೀಪದ ಹಳ್ಳಿದಿದ್ದಿ ಗ್ರಾಮದ ಸೌಮ್ಯ ಅನಿಲ್ ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ಹೆಚ್ಚು ಸಂಚಾರ ಮಾಡುತ್ತಿದ್ದಾರೆ. ಶುಭ ಸಮಾರಂಭಗಳ ಜೊತೆಗೆ ಕೆಲ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲೆಲ್ಲ ಅನಿಲ್ ಚಿಕ್ಕಮಾದು ಬದಲಿಗೆ ಅವರ ತಾಯಿ ನಾಗಮ್ಮ ಕಾಣಿಸಿಕೊಳ್ಳುತ್ತಿದ್ದರು. ಕೆಲ ಕಾರಣಗಳಿಂದ ಶಾಸಕರು, ಹಾಜರಾಗಲು ಸಾಧ್ಯವಾಗದಿದ್ದಾಗ, ತುರ್ತು ಕಾರ್ಯಗಳಿಗೆ ಬೇರೆಡೆ ಹೋಗಿದ್ದಾಗ, ಅವರ ತಾಯಿ ನಾಗಮ್ಮ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ಆದರೆ ಅನಿಲ್ ಚಿಕ್ಕಮಾದು ಸಹಕಾರ ಕ್ಷೇತ್ರ ಸ್ಪರ್ಧಿಸಲು ಎಂಸಿಡಿಸಿಸಿ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಸೌಮ್ಯ ಅನಿಲ್, ಹೆಚ್ ಡಿ ಕೋಟೆ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶುಭಸಮಾರಂಭಗಳ ಜೊತೆಗೆ ಪಲ್ಸ್ ಪೋಲಿಯೊ ಕಾರ್ಯಕ್ರಮ, ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ, ಓಣಂ ಹಬ್ಬ, ಅಂಗನವಾಡಿ ಹಬ್ಬ ಸೇರಿದಂತೆ ಕೆಲ ಕಾರ್ಯಕ್ರಮಗಳಿಗೆ ಹಾಜರಾಗುವ ಮೂಲಕ ಕ್ಷೇತ್ರದ ಜನರ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಪ್ರಬುದ್ಧ ಮಾತುಗಾರಿಕೆ ಮೂಲಕವೂ ಸುದ್ದಿ ಮಾಧ್ಯಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಪತಿ ಅನಿಲ್ ಚಿಕ್ಕಮಾದು ವಿರುದ್ಧ ಟೀಕೆಗಳಿಗೆ ತೀಕ್ಷಣವಾಗಿಯೇ ತಿರುಗೇಟು ನೀಡುತ್ತಿದ್ದಾರೆ. ಜೊತೆಗೆ ಅನಿಲ್ ಚಿಕ್ಕಮಾದುಗೆ ರಾಜಕೀಯ ಸಲಹೆ ನೀಡುತ್ತಿದ್ದಾರೆ.
ಶಾಸಕರಿಗೆ ಸೌಮ್ಯ ಸಲಹೆ ಸೂಚನೆ
ಮತ್ತೊಂದು ಅಚ್ಚರಿ ಸಂಗತಿ ಅಂದರೆ, ಪತಿ ಅನಿಲ್ ಚಿಕ್ಕಮಾದು ಸಾಮಾಜಿಕ ಜಾಲತಾಣವನ್ನು ಸೌಮ್ಯ ಅನಿಲ್ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಎರಡನೇ ಬಾರಿಗೆ ಶಾಸಕರಾದ ಬಳಿಕ ಶಾಸಕ ಅನಿಲ್ ಚಿಕ್ಕಮಾದು ಕಾರ್ಯವೈಖರಿ ಬಗ್ಗೆ ಟೀಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ರಸ್ತೆ ಅವ್ಯವಸ್ಥೆ, ಸಾಗುವಳಿ ಪತ್ರ ನೀಡುವಲ್ಲಿ ವಿಳಂಬ, ಹುಲಿ ದಾಳಿ ಬಳಿಕ ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಹೋರಾಟಗಾರರು ಮಾಧ್ಯಮಗಳ ಮುಂದೆ ಬೆಂಕಿ ಉಗುಳುತ್ತಿದ್ದಾರೆ. ಅಕ್ರಮ ರೆಸಾರ್ಟ್ ಗಳ ಬಗ್ಗೆ ಮೌನ ವಹಿಸಿರುವ ಕುರಿತು ಪ್ರಶ್ನೆ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯದಲ್ಲಂತೂ ನೆಟ್ಟಿಗರು ಹದ್ದುಮೀರಿ ವರ್ತನೆ ಮಾಡುತ್ತಿದ್ದಾರೆ. ಹುಟ್ಟುಹಬ್ಬ ಆಚರಣೆ ವೇಳೆ ಪತ್ನಿ ಜೊತೆ ಜಸ್ಟ್ ಎರಡು ಸ್ಟೆಪ್ ಹಾಕಿದ್ದಕ್ಕೆ ನೆಟ್ಟಿಗರು ಕೆಟ್ಟ ಕಾಮೆಂಟ್ ಹಾಕಿ, ತರಾಟೆಗೆ ತೆಗೆದುಕೊಂಡಿದ್ದರು. ಈ ಎಲ್ಲ ಘಟನೆಗಳಿಂದ ಬೇಸತ್ತಿರುವ ಸೌಮ್ಯ ಅನಿಲ್, ಪತಿಯ ಸಾಮಾಜಿಕ ಜಾಲತಾಣವನ್ನು ಅವರೇ ನಿರ್ವಹಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಇನ್ನು ಇದೆಲ್ಲವನ್ನು ಗಮನಿಸಿರುವ ಶಾಸಕರ ಆಪ್ತರೇ, ಸೌಮ್ಯ ಅನಿಲ್ ಮೇಡಂ ಏನಾದ್ರು ರಾಜಕೀಯಕ್ಕೆ ಬರುತ್ತಾರಾ ಎಂಬ ಪ್ರಶ್ನೆಗಳನ್ನು ತಮ್ಮಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ಪ್ರಶ್ನೆ ಕಾರ್ಯಕರ್ತರನ್ನು ಬಹಳವಾಗಿ ಕಾಡುತ್ತಿದೆ. ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ನಿಲ್ಲಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರಾ? ಕೆ ಬೆಳತ್ತೂರು ಅಥವಾ ಮುಳ್ಳೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಅಖಾಡಕ್ಕೆ ಧುಮುಕುತ್ತಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಲು ಶುರುವಾಗಿದೆ.

