ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ನಾವು ಬಹಳಷ್ಟು ಬಾರಿ ತಾಳಿದವನು ಬಾಳಿಯಾನು ಎಂಬ ಮಾತನ್ನು ಕೇಳಿದ್ದೇವೆ. ಪ್ರಸ್ತುತ 21ನೇ ಶತಮಾನ ಮಾಹಿತಿಗಳ ಯುಗ. ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಹತ್ತು ಹಲವು ವಿಧಗಳಲ್ಲಿ ನಾವು ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ, ನಿಜ. ಆದರೆ ಸಂಶೋಧನೆಗಳು ಮಾತ್ರ ಕಡಿಮೆಯಾಗಿದೆ.
ಸಂಶೋಧನೆಗಳು ತಾವಾಗಿ ಹುಟ್ಟಿಕೊಂಡದ್ದಲ್ಲ. ಎಲ್ಲೋ ಮಾರುಕಟ್ಟೆಯಲ್ಲಿ ಕೆರೆಯ ದಡದಲ್ಲಿ ಯಾವುದೋ ಮನೆಯ ಮೂಲೆಯಲ್ಲಿ ಅಥವಾ ಹರಟೆ ಕಟ್ಟೆಯಲ್ಲಿ ಕುಳಿತಾಗ ಸಂಶೋಧನೆಗಳು ಹುಟ್ಟಿಕೊಂಡಿಲ್ಲ ವಿವಿಧ ವಿಷಯಗಳ ಜ್ಞಾನಿಗಳು, ಪಂಡಿತರು ಕಾರ್ಯನಿರತರಾಗಿದ್ದಾಗ ಆಕಸ್ಮಿಕವಾಗಿ ಹುಟ್ಟಿಕೊಂಡ ಸಂಶೋಧನೆಗಳು ನಮ್ಮ ಬಾಳನ್ನು ಬೆಳಗಿವೆ. ಕವಿಗಳು ಸಾಹಿತಿಗಳು ತಮ್ಮ ಮನಸ್ಸಿನ ಮಾತುಗಳನ್ನು ಕತೆ ಕವನಗಳನ್ನಾಗಿ ರಚಿಸಿದರು. ಅವರು ಕೂಡ ಎಲ್ಲೋ ಸಂತೆಯ ಗದ್ದಲದಲ್ಲಿ ತಮ್ಮ ಸಾಹಿತ್ಯವನ್ನು ರಚಿಸಿಲ್ಲ. ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ಅವರ ಅನುಭವದ ಮೂಸೆಯಿಂದ ಹೊರಬಿದ್ದ ಪದಗಳು ಕಥೆಗಳಾಗಿ ಕವನಗಳಾಗಿ ರೂಪುಗೊಂಡವು. ಹಾಗಾದರೆ ಸಂಶೋಧನೆಗಳಾಗಲಿ, ಕತೆ ಕವನಗಳ ರಚನೆಯೇ ಆಗಲಿ ಯಾವುದೇ ಒಂದು ಕೆಲಸ ಮಾಡಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಪ್ರಶಾಂತವಾದ ಮನಸ್ಥಿತಿ ಮತ್ತು ಪರಿಸ್ಥಿತಿ.
ಮಕ್ಕಳಿಗೆ ಶಾಲಾ ಪಠ್ಯ ಚಟುವಟಿಕೆಗಳ ಜೊತೆ ಜೊತೆಗೆ ಹೊಸ ವಿಷಯಗಳನ್ನು ಕಲಿಸಿಕೊಡುವ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಪ್ರಶಾಂತತೆಯನ್ನು ನಮ್ಮ ಬದುಕಿನ ಭಾಗವಾಗಿಸಿಕೊಂಡು ಜೀವನದಲ್ಲಿ ಮತ್ತಷ್ಟು ಹೆಚ್ಚಿನ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸಬೇಕು.
ಸಹನೆಯನ್ನು ತಮ್ಮದಾಗಿಸಿಕೊಂಡು ಸದಾಕಾಲ ಶಾಂತಿಯಿಂದ ಬದುಕಲು ಪಾಲಕರು ಮಾಡಬೇಕಾದದ್ದು ಇಷ್ಟೇ. ಸಿಟ್ಟು ನಮಗೆ ವೈರಿಯಾದರೆ ಶಾಂತಿ ನಮಗೆ ಸ್ನೇಹಿತ. ಅದೆಷ್ಟೇ ಕೋಪ ತರಿಸುವ ಸನ್ನಿವೇಶವೇ ಆದರೂ ಅದನ್ನು ಶಾಂತಿಯಿಂದ ನಿರ್ವಹಿಸುವ, ಸಮಾಧಾನದಿಂದ ವರ್ತಿಸಬೇಕಾದದ್ದು ಅತ್ಯವಶ್ಯಕ.
ಮುಂಜಾನೆ ಬೇಗನೆ ಎದ್ದು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಯುದ್ಧ ಎಂಬಂತೆ ಆಗಿದೆ. ತಯಾರು ಮಾಡುವ ಪಾಲಕರಿಗೆ ಸಮಯದ ಅಭಾವವೇ ಶತ್ರು.

ಈ ಹಿಂದೆ ಮಕ್ಕಳು ತಮ್ಮ ಪಾಲಕರಿಗೆ ಫೀ ಕಟ್ಟಲು ಹಣವನ್ನು ಕೇಳಿದಾಗ ಪಾಲಕರು ಅವರಿಗೆ ಚೆಕ್ ನೀಡಿ ಮರುದಿನ ಆ ಚೆಕ್ ನ್ನು ಕೈಯಲ್ಲಿ ಹಿಡಿದು ಬ್ಯಾಂಕಿಗೆ ಬಂದು ಅಲ್ಲಿ ಟೋಕನ್ ಪಡೆದು ಪಾಳಿಯಲ್ಲಿ ನಿಂತು ಹಣ ಬಿಡಿಸಿಕೊಳ್ಳುವ ಹೊತ್ತಿಗೆ ಅರ್ಧ ದಿನ ಮುಗಿದು ಹೋಗುತ್ತಿತ್ತು ನಂತರ ಓಡೋಡಿ ಹೋಗಿ ಆ ಹಣದಿಂದ ತನ್ನ ಕಾಲೇಜ್ ಶುಲ್ಕವನ್ನು ತುಂಬಿದಾಗ ಅಬ್ಬ ಒಂದು ಹಂತ ಮುಗಿಯಿತು ಎಂಬಂತಹ ನಿರಾಳ ಭಾವ.. ಎಲ್ಲ ಕೆಲಸ ಪೂರೈಸಲು ಸರಿಸುಮಾರು ಒಂದಿಡೀ ದಿನವೇ ಬೇಕಾಗುತ್ತಿತ್ತು. ಇದನ್ನು ಡಿಲೇಡ್ ಗ್ರ್ಯಾಟಿಫಿಕೇಶನ್ ಎನ್ನುತ್ತಾರೆ.
ಆದರೆ ಈಗಿನ ಮಕ್ಕಳಿಗೆ 10 ಸಾವಿರ ರೂ ಹಣ ಬೇಕೆಂದರೂ ಕೂಡ ಕ್ಷಣಮಾತ್ರದಲ್ಲಿ ಅವರ ಅಕೌಂಟಿಗೆ ಹಣ ಸಂದಾಯವಾಗುತ್ತದೆ. ಮಕ್ಕಳು ಕೇಳಿದ ಕೆಲವೇ ನಿಮಿಷಗಳಲ್ಲಿ ಪಾಲಕರು ಆ ಹಣವನ್ನು ಮಕ್ಕಳಿಗೆ ಆನ್ಲೈನ್ ನಲ್ಲಿ ಕಳುಹಿಸದೆ ಹೋದರೆ ಮತ್ತೊಂದು ಕರೆ ಮಕ್ಕಳಿಂದ ಪಾಲಕರಿಗೆ ಹೋಗುತ್ತದೆ. ಇಂದಿನ ಮಕ್ಕಳಲ್ಲಿ ಆತುರ ಮತ್ತು ಕಾತರತೆ ಹೆಚ್ಚು.
ಮಕ್ಕಳಲ್ಲಿನ ಈ ಕಾತುರತೆಯನ್ನು ಹತ್ತಿಕ್ಕಲು ನಾವು ಅವರಿಗೆ ಕೆಲ ಉದಾಹರಣೆಗಳನ್ನು ಕೊಡಬೇಕು. ಇಂದು ತಗ್ಗು ತೋಡಿ ಹಚ್ಚಿದ ತೆಂಗಿನ ಮರ ನಾಳೆಯೇ ಕಾಯಿ ಬಿಡುವುದಿಲ್ಲ. ಅದಕ್ಕೆ ತನ್ನದೇ ಆದ ಕಾಲಾವಕಾಶ ಬೇಕು ಸುಮಾರು ನಾಲ್ಕೈದು ವರ್ಷಗಳ ಕಾಲ ಬೆಳೆದ ತೆಂಗಿನ ಮರ ನಂತರವೇ ಕಾಯಿಯನ್ನು ಕೊಡುತ್ತದೆ. ನಾಲ್ಕೈದು ವರ್ಷಗಳ ನಿರಂತರ ಶ್ರಮ ತಾಳ್ಮೆಯ ಅನಂತರವೇ ನಮಗೆ ಫಲ ದೊರೆಯುತ್ತದೆ, ಆದ್ದರಿಂದ ನಾವು ಮಕ್ಕಳಿಗೆ ಕಲಿಸಿಕೊಡುವ ಮುನ್ನ ನಮ್ಮಲ್ಲಿ ಆ ಶಾಂತಿಯನ್ನು ಸಹನೆಯನ್ನು ಕಾಯ್ದುಕೊಳ್ಳಬೇಕು ಎಂಬುದು ಇದರ ತಾತ್ಪರ್ಯ. ದೂರ ದೃಷ್ಟಿಯ ಅವಶ್ಯಕತೆ ಕೂಡ ಪಾಲಕರಲ್ಲಿ ಇರಬೇಕು. ಮುಂದೆ ಏನಾಗುತ್ತದೆ ಎಂಬುದನ್ನು ಕಲ್ಪಿಸಿ ಕೊಳ್ಳುವ ಜ್ಞಾನ ಪಾಲಕರಿಗೆ ಇರಬೇಕು. ಹೀಗೆ ಪಾಲಕರು ಶಾಂತಿ, ಸಹನೆ ಮತ್ತು ತಾಳ್ಮೆಯಿಂದ ತಾವು ಕೈಗೊಳ್ಳುವ ಕಾರ್ಯಗಳಲ್ಲಿ ವರ್ತಿಸಿದರೆ ಇದನ್ನು ನೋಡಿ ಬೆಳೆಯುವ ಮಕ್ಕಳು ತಾವು ಕೂಡ ಈ ದಿಸೆಯಲ್ಲಿ ಅಗೋಚರವಾಗಿ ಕಲಿಯುತ್ತಾರೆ. ಇದು ಶಾಂತಿಗೆ ಕಾರಣವಾಗುತ್ತದೆ.

ಪಾಲಕರು ಇಂದು ಶಾಂತಿಯಿಂದ ಇದ್ದರೆ ಮಕ್ಕಳ ಭವಿಷ್ಯ ಉನ್ನತವಾಗುತ್ತದೆ ಮತ್ತು ಮಕ್ಕಳ ಭವಿಷ್ಯ ಉನ್ನತವಾಗಲು ಪಾಲಕರು ಶಾಂತಿಯಿಂದ ಇರಲೇಬೇಕು ಎಂಬುದು ನಮಗೆ ಗೊತ್ತಾಗುತ್ತದೆ. ಶಾಂತಿ ಮತ್ತು ಭವಿಷ್ಯ ಪರಸ್ಪರ ಒಂದಕ್ಕೊಂದು ಪೂರಕವಾಗಿರುತ್ತವೆ. ಇಂದು ಕುಡಿಯೊಡೆದ ಸಸಿಗಳು ಮುಂದೆ ಹೆಮ್ಮರವಾಗಿ ಬೆಳೆಯಲು ಸಹಾಯವಾಗುವಂತೆ ಪಾಲಕರು ಇಂದಿನ ಶಾಂತಿ ಮತ್ತು ಸಹನೆಯ ವರ್ತನೆ ಮುಂದೊಂದು ದಿನ ಮಕ್ಕಳು ಯಶಸ್ವಿ ವ್ಯಕ್ತಿಯಾಗಲು ಸಹಾಯಕ. ತಮ್ಮ ಮನಸ್ಸಿನಲ್ಲಿ ಪಾಲಕರು ಶಾಂತ ವ್ಯಕ್ತಿತ್ವವನ್ನು ಹೊಂದಿದರೆ ಅದರ ಉತ್ತಮ ಪರಿಣಾಮಗಳನ್ನು ನಾವು ಕಾಣಬಹುದು.
ಯಾವುದೇ ಶಾಲೆ ಕಾಲೇಜುಗಳಲ್ಲಾಗಲಿ, ಕಚೇರಿಗಳಲ್ಲಾಗಲಿ ಗೋಡೆಯ ಮೇಲೆ ತೂಗು ಹಾಕಿರುವ ಮಹನೀಯರ ಚಿತ್ರಗಳನ್ನು ನೋಡಿದಾಗ ನಮಗೆ ಹೆಮ್ಮೆಯ ಭಾವ ಮೂಡುತ್ತದೆ ಅಲ್ಲವೇ. ಈ ಎಲ್ಲ ಮಹನೀಯರು ತಮ್ಮ ಬದುಕಿನಲ್ಲಿ ತಾವು ಶಾಂತವಾಗಿ ಕಾರ್ಯನಿರ್ವಹಿಸಿದ್ದರಿಂದಲೇ ಇಂದು ದೇಶವೇ ಹೆಮ್ಮೆ ಪಡುವಂತಹ ಯಶಸ್ವಿ ವ್ಯಕ್ತಿಗಳಾಗಿದ್ದು ಎಲ್ಲರ ಮನೆ ಮನೆಗಳಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದಾರೆ.
ಪ್ರಸ್ತುತ ದಿನಮಾನಗಳಲ್ಲಿ ಸಮಾಜವನ್ನು ಅತಿಯಾಗಿ ಕಾಡುತ್ತಿರುವ ಪ್ರಮುಖ ಅಂಶವೆಂದರೆ ಜನರಲ್ಲಿ ಇರುವ ಅಸಹನೆ, ಅಶಾಂತಿ ಮತ್ತು ಒತ್ತಡಗಳು. ಅಶಾಂತಿ ಮತ್ತು ಒತ್ತಡಗಳ ಕಾರಣದಿಂದಾಗಿ ಮನುಷ್ಯ ಅಸಹನೆಗೆ ಒಳಗಾಗುತ್ತಾನೆ ಈ ಅಸಹನೆಯು ಆತನಿಗೆ ದೈಹಿಕ ಮತ್ತು ಮಾನಸಿಕ ಕಾಯಿಲೆಗಳನ್ನು ಬಳುವಳಿಯಾಗಿ ನೀಡುತ್ತದೆ, ಚಿಕ್ಕ ವಯಸ್ಸಿನ ಮಕ್ಕಳು ಕೂಡ ಇದಕ್ಕೆ ಹೊರತಲ್ಲ ಸರಿಯಾದ ಆಹಾರ,ವಿಹಾರ ಮತ್ತು ವ್ಯಾಯಾಮ ರಹಿತ ಕೇವಲ ಆಲಸ್ಯತನವೇ ಜೀವನ ಶೈಲಿಯನ್ನಾಗಿ ಹೊಂದಿರುವ ಜನರು ಎಲ್ಲವೂ ತುರ್ತಿನಲ್ಲಿಯೇ ದೊರೆಯಲಿ ಎಂದು ಬಯಸುವ ಜನರು ಅನವಶ್ಯಕ ಒತ್ತಡಕ್ಕೊಳ್ಳಗಾಗಿ ರಕ್ತದ ಒತ್ತಡ, ಮಧುಮೇಹ, ಥೈರಾಯಿಡ್ ನಂತಹ ಕಾಯಿಲೆಗಳಿಗೆ ಒಳಗಾಗುತ್ತಾರೆ.
ಹೃದಯದ ತೊಂದರೆಗೆ ಒಳಗಾಗುವ ವ್ಯಕ್ತಿಗೆ ವೈದ್ಯರು ವಿಶ್ರಾಂತಿಯನ್ನು ಸೂಚಿಸುತ್ತಾರೆ. ಹಾಗೆ ನಿಗದಿತ ಸಮಯದವರೆಗೆ ವಿಶ್ರಾಂತಿಯನ್ನು ಪಡೆದ ಆ ವ್ಯಕ್ತಿಗೆ ತಾನು ಒತ್ತಡದಿಂದ ಕಾರ್ಯನಿರ್ವಹಿಸಿ ವಿಶ್ರಾಂತಿಯನ್ನು ತೆಗೆದುಕೊಳ್ಳದೆ ಇದ್ದದ್ದೇ ಕಾರಣವಾಗಿತ್ತು ಎಂದು ಅರಿವಾಗುವುದು.
ಬದುಕಿನಲ್ಲಿ ಎಲ್ಲವನ್ನು ಬದಲಿಸಲು ಸಾಧ್ಯವಿದೆ, ನಾವು ನಮ್ಮ ಮನಸ್ಥಿತಿಯನ್ನು ಒತ್ತಡ ರಹಿತವಾಗಿ ಇಟ್ಟುಕೊಳ್ಳಲು ಅತ್ತ್ಯವಶ್ಯಕವಾದ ಎಲ್ಲಾ ಕ್ರಿಯೆಗಳನ್ನು ನಮ್ಮದಾಗಿಸಿಕೊಂಡು ಮಾನಸಿಕ ಸಂತುಲನವನ್ನು ಕಾಯ್ದುಕೊಳ್ಳಬೇಕು. ಇಂತಹ ಪರಿಸರದಲ್ಲಿ ನಾವುಗಳು ಇದ್ದರೆ ಮುಂದೆ ನಮ್ಮ ಮಕ್ಕಳು ಕೂಡ ಇದೇ ಪರಿಸರವನ್ನು ತನ್ನದಾಗಿಸಿಕೊಳ್ಳುತ್ತಾರೆ ಮತ್ತು ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಆತುರತೆ ನಮಗೆ ಉಚಿತವಾಗಿ ದೊರೆಯುತ್ತದೆ ನಿಜ ಆದರೆ ಶಾಂತಿಯನ್ನು ನಾವು ನಮ್ಮೆಲ್ಲ ಭಾವಗಳನ್ನು ಬೆಲೆಯನ್ನು ತೆತ್ತು ಮನೆಗೆ ಕರೆತರಬೇಕು. ನಾವು ಶಾಂತಿಯನ್ನು ನಮ್ಮದಾಗಿಸಿಕೊಂಡು ನಮ್ಮ ಮನಸ್ಸಿನ ಮೇಲೆ ಶಾಂತಿಯ ಪ್ರಭುತ್ವವನ್ನು ಸಾಧಿಸಬೇಕು ಆಗ ಮಾತ್ರ ನಮ್ಮ ಬದುಕು ಸುಂದರವಾಗುತ್ತದೆ. ಯಶಸ್ವಿ ಬದುಕಿನ ಸೂತ್ರಗಳಲ್ಲಿ ಮಾನಸಿಕ ಶಾಂತಿಯನ್ನು ಕಾಯ್ದುಕೊಳ್ಳುವುದು ಕೂಡ ಒಂದು ಎಂಬುದನ್ನು ಅರಿತು ನಮ್ಮ ಬದುಕಿನಲ್ಲಿ ಶಾಂತಿ ಮತ್ತು ಸಮಾಧಾನವನ್ನು ಅಳವಡಿಸಿಕೊಳ್ಳಬೇಕು.


