ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಿಂದಗಿ-ಆಹೇರಿ ಹಳೆಯ ರಸ್ತೆಗೆ ರೂ.೧ಕೋಟಿ ೫೦ಲಕ್ಷ, ಸಿಂದಗಿ-ಬಂಕಲಗಿ ರಸ್ತೆಗೆ ರೂ.೧ಕೋಟಿ ಅನುದಾನ ಮಂಜೂರಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದಲ್ಲಿ ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ ಇಂಜಿನಿಯರ್ ಉಪ ವಿಭಾಗ ಇಲಾಖೆಯ ೨೦೨೪-೨೫ನೇ ಸಾಲಿನ ಮಳೆ ಪರಿಹಾರದ ಕಾರ್ಯಕ್ರಮದಡಿಯಲ್ಲಿ ರೂ.೧ಕೋಟಿ ವೆಚ್ಚದ ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಹಳೆ ಬ್ಯಾಕೋಡ-ಸಿಂದಗಿ ಕೂಡುವ ರಸ್ತೆ ಡಾಂಬರಿಕರಣ ಹಾಗೂ ಸಿಸಿ ಚರಂಡಿ ಸೇತುವೆ ನಿರ್ಮಾಣ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ರೈತರ ಜಮೀನು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವ ದಿಸೆಯಲ್ಲಿ ಹಳೆಯ ರಸ್ತೆಗಳನ್ನು ಸುಧಾರಣೆ ಮಾಡುವ ಕಾರ್ಯವನ್ನು ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಮಾಡಲಾಗುತ್ತಿದೆ. ಕೆರೆಯ ಪಕ್ಕದ ಶಾಂತವೀರ ಪಟ್ಟಾಧ್ಯಕ್ಷರ ಉದ್ಯಾನವನದಲ್ಲಿ ತೊಂಟದ ಲಿಂ.ಸಿದ್ದಲಿಂಗ ಶ್ರೀಗಳ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಇಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಜೊತೆಗೆ ರಾಣಿ ಚನ್ನಮ್ಮ ವೃತ್ತದ ಹತ್ತಿರವಿರುವ ಹಳೆಯ ಕೊಕಟನೂರ ರಸ್ತೆಯ ಸುಧಾರಣೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಿಂದಗಿ-ರಾಂಪುರ, ಬೆನಕೋಟಗಿ ಸೇರಿದಂತೆ ನಗರದ ಎಲ್ಲ ಹಳೆಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ವೇಳೆ ಉದ್ದಿಮೆದಾರ ವೆಂಕಟೇಶ ಗುತ್ತೇದಾರ, ಗುತ್ತಿಗೆದಾರ, ಮುತ್ತು ಮುಂಡೇವಾಡಗಿ, ರಮೇಶ ಹೂಗಾರ, ಪ್ರಕಾಶ ಗುಣಾರಿ, ಚನ್ನಪ್ಪ ಗೋಣಿ, ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ಶರಣು ಉಪ್ಪಿನ, ಶಾಂತು ರಾಣಾಗೋಳ, ಸಾದಿಕ್ ಸುಂಬಡ, ಶ್ರೀಮಂತ ಮಲ್ಲೇದ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಭೀಮು ವಾಲಿಕಾರ ಸೇರಿದಂತೆ ಇತರರು ಇದ್ದರು.

