ಸಿಂದಗಿಯಲ್ಲಿ ಉನ್ನತೀಕರಿಸಿದ ಪ್ರೌಢಶಾಲೆಗಳ ಉದ್ಘಾಟನೆ ನೆರವೇರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕನ್ನಡಶಾಲೆಗಳನ್ನು ಸರ್ಕಾರ ಯಾವುದೇ ಕಾಲಕ್ಕೂ ಮುಚ್ಚುವದಿಲ್ಲ. ಸರ್ಕಾರ ನಿರಂತರ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಕನ್ನಡ ಶಾಲೆಗಳ ಉಳಿವಿಗಾಗಿ ಸದಾ ಸಿದ್ದವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಪಂಚಾಯತ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯ ಅಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ೨೦೨೫-೨೬ ನೇ ಸಾಲಿನ ಉನ್ನತೀಕರಿಸಿ ಪ್ರೌಢಶಾಲೆಗಳ ಉದ್ಘಾಟನೆ ಹಾಗೂ ಮುಖ್ಯಮಂತ್ರಿಗಳ ಅಮೃತ ನಗರೋತ್ತಾನ ಯೋಜನೆ(ಹಂತ೦೪) ವಿವೇಚನಾ ಅನುದಾನದಡಿ ರೂ ೫೦ ಲಕ್ಷ ಅನುದಾನದಲ್ಲಿ ಗುರುಭವನ ಕಟ್ಟಡದ ಪ್ರಥಮ ಹಂತದ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಬರುವ ಬಜೆಟ್ನಲ್ಲಿ ಶಿಕ್ಷಣ ಇಲಾಖೆಯ ಅಭಿವೃದ್ದಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಲಾಗಿದೆ. ಶಿಕ್ಷಕರು ಮಕ್ಕಳ ಏಳಿಗ್ಗೆಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆಗಳು ನೂರೆಂಟು ಅವುಗಳನ್ನು ಹಂತ ಹಂತವಾಗಿ ಪರಿಹರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಕೇವ ಕಾನೂನು ತೊಡಕುಗಳನ್ನು ವಿಚಾರಿಸಿ ಶಿಕ್ಷಕರ ಕಲ್ಯಾಣ ನಿಧಿಯಿಂದ ಗುರುಭವನಕ್ಕೆ ರೂ ೫೦ ಲಕ್ಷ ಅನುದಾನ ನೀಡಲು ಮುಂದಾಗುತ್ತೇನೆ. ಪರೀಕ್ಷೆಗಳಲ್ಲಿ ಮಕ್ಕಳು ಅನುತ್ತಿರ್ಣವಾಗುವುದು ಅದು ಮಕ್ಕಳ ತಪ್ಪಲ್ಲ. ಅದು ಶಿಕ್ಷಕರ ಹಾಗೂ ಪಾಲಕರ ತಪ್ಪು ಮಕ್ಕಳ ಪ್ರಗತಿ ಶಿಕ್ಷಕರ ಮೇಲಿದೆ . ಫಲಿತಾಂಶ ಸುಧಾರಣೆಗೆ ಶಿಕ್ಷಕರು ಕಲಿಕೆಯನ್ನು ಘಟ್ಟಿಗೊಳಿಸಬೇಕು ಎಂದ ಅವರು, ಶಿಕ್ಷಕರ ಸಂಘಟನೆ ಸೃಜನಾತ್ಮಕವಾಗಿ ಕಾರ್ಯಮಾಡುತ್ತಿದೆ ಸಂಘಟನೆಗೆ ದೊಡ್ಡ ಶಕ್ತಿಯಿದೆ ಎಂದರು.
ಈ ವೇಳೆ ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಿಂದಗಿಯಲ್ಲಿ ಹಳೆಯದಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯವಿದೆ. ಸಿಂದಗಿ ತಾಲೂಕು ವಿಭಜನೆಯಾದ ಬಳಿಕ ಆಲಮೇಲ, ದೇವರಹಿಪ್ಪರಗಿ ತಾಲೂಕುಗಳಾಗಿ ನಿರ್ಮಾಣಗೊಂಡಿವೆ ಹೀಗಾಗಿ ಒಟ್ಟು ೩ ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಮಂಜೂರಾತಿಗೆ ಸಚಿವರು ಕ್ರಮ ಜರುಗಿಸಬೇಕು. ಗುರುಭವನಕ್ಕೆ ೧.೫ ಕೋಟಿಗಳ ಅನುದಾನವನ್ನು ನೀಡಿದರೆ ಇಲ್ಲಿ ಸುಮಾರು ೨೦೦೦ ಕ್ಕೂ ಅಧಿಕ ಶಿಕ್ಷಕರ ಶೈಕ್ಷಣಿಕ ಚಟುವಟಿಕೆ ನಡೆಯಲು ಅನುಕೂಲವಾಗುತ್ತದೆ ಎಂದರು.
ಈ ವೇಳೆ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು ೧ ಲಕ್ಷ ಶಿಕ್ಷಕರಿಗೆ ಸರ್ಕಾರ ಹಿಂಬಡ್ತಿ ಮಾಡಿದೆ ಅದನ್ನು ಸಚಿವರು ಗಂಭೀರವಾಗಿ ಪರಿಗಣಿಸಿ ಅವರಿಗೆ ಮುಂಬಡ್ತಿ ನೀಡಬೇಕು. ಇಂದಿರಾ ಕಿಟ್ ನೀಡುವ ಹಾಗೆ ಮಕ್ಕಳಿಗೆ ಸ್ಕೂಲ್ ಬ್ಯಾಗ ಸಮೇತ ವಿದ್ಯಾಕಿಟ್ ಗಳನ್ನು ವಿತರಿಸುವ ಯೋಜನೆ ಆದಷ್ಟು ಬೇಗನೆ ರೂಪಿಸಬೇಕು. ೨೦೦೩ ರಿಂದ ಗ್ರಾಮೀಣ ಕೃಪಾಂಕದಿಂದ ವಂಚಿತರಾದವರಿಗೆ ಸೂಕ್ತ ನ್ಯಾಯ ನೀಡುವಲ್ಲಿ ಸರ್ಕಾರ ಮುಂದಾಗಬೇಕು ಎಂದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ.ಯಡ್ರಾಮಿ ಪ್ರಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ಡಿಡಿಪಿಓ ವ್ಹಿ.ವ್ಹಿ.ಸಾಲಿಮಠ, ಡಾ.ಸಿ.ಕೆ.ಹೊಸಮನಿ, ಉಮಾದೇವಿ ಸೊನ್ನದ, ಸುರೇಶ ಶೇಡಶ್ಯಾಳ, ಅಶೋಕ ತೆಲ್ಲೂರ, ಆನಂದ ಭೂಸನೂರ, ಶ್ರೀಶೈಲ ಕವಲಗಿ, ಅಶೋಕ ಕೊಳಾರಿ, ಅರ್ಜುನ ಲಮಾಣಿ, ಎ.ಎಚ್.ವಾಲಿಕಾರ, ಆರ್.ಎಚ್.ಬಿರಾದಾರ, ಶಿವರಾಜ ಬಿರಾದಾರ, ಅಲ್ಲಾಭಕ್ಷ ವಾಲಿಕಾರ ಸೇರಿದಂತೆ ಇತರರು ಇದ್ದರು.
ಡಾ.ರವಿ ಗೋಲಾ ನಿರೂಪಿಸಿದರು.
ಮಾಜಿ ಶಾಸಕ ಭೂಸನೂರಗೆ ಶಾಸಕ ಮನಗೂಳಿ ಟಾಂಗ್
ಈ ಹಿಂದೆ ಗುರುಭವನಕ್ಕೆ ಮಾಜಿ ಶಾಸಕರು ಭೂಮಿ ಪೂಜೆ ನೆರವೆರಿಸಿದ್ದರು. ಅದರ ವಿಸ್ತೀರ್ಣ ಅತ್ಯಂತ ಕಡಿಮೆ ಇರುವುದರಿಂದ ಸುಮಾರು ೨೦೦೦ ಕ್ಕೂ ಹೆಚ್ಚು ಶಿಕ್ಷಕರು ಇಲ್ಲಿ ಕಾರ್ಯ ಮಾಡುವುದರಿಂದ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಬಾರದು ಎಂಬ ಭಾವನೆಯಿಂದ ಅದು ಸೂಕ್ತ ಜಾಗೆ ಅಲ್ಲ ಎಂದು ಮನಗಂಡು ನಾನು ೪೦*೧೦೦ ಪ್ರದೇಶದಲ್ಲಿ ಗುರುಭವನ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದೇನೆ ಹೊರತು ಯಾವ ರಾಜಕೀಯ ಉದ್ದೇಶದಿಂದ ಅಲ್ಲ ಎಂದು ಶಾಸಕ ಅಶೋಕ ಮನಗೂಳಿ ಅವರು ಮಾಜಿ ಶಾಸಕ ರಮೇಶ ಭೂಸನೂರ ಅವರಿಗೆ ಟಾಂಗ್ ನೀಡಿದರು.

