ವಿಜಯಪುರ ಜಿಲ್ಲೆಯ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಜ.9ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆ-ಶಂಕುಸ್ಥಾಪನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇದೇ ಜ.9 ರಂದು ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಜಿಲ್ಲೆಗೆ ಆಗಮಿಸುತ್ತಿದ್ದು, ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರತಿಮೆ ಅನಾವರಣ, ಬಸ್ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ ನಾಮಕರಣ, ನಗರದಲ್ಲಿ ವೆಲೋಡ್ರೊಮ ಉದ್ಘಾಟನಾ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆ, ಉದ್ಘಾಟನೆ, ಶಿಲಾನ್ಯಾಸ ಕಾಮಗಾರಿಯ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸುಸೂತ್ರವಾಗಿ ನಿರ್ವಹಿಸುವಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಹೇಳಿದರು.
ಮುಖ್ಯಮಂತ್ರಿ ಅವರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು, ಕಾರ್ಯಕ್ರಮಗಳನ್ನು ಕೈಗೊಂಡಿರುವ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಕಾರ್ಯಕ್ರಮದಲ್ಲಿ ಯಾವುದೆ ರೀತಿಯ ಲೋಪವಾಗದಂತೆ ಮುಂಜಾಗ್ರತೆ ವಹಿಸಬೇಕೆಂದು ಅವರು ಸೂಚಿಸಿದರು.
ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹಾಗೂ ವಿವಿಧ ಇಲಾಖೆಯ ಸಚಿವರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದ ಸಿದ್ಧತಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ದರಬಾರ ಶಾಲಾ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ವ್ಯವಸ್ಥಿತವಾಗಿ ಯಾವುದೇ ಲೋಪಗಳಿಲ್ಲದಂತೆ ಕಾರ್ಯಕ್ರಮವನ್ನು ಆಯೋಜಿಸಿ, ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ವೇದಿಕೆ ನಿರ್ವಹಣೆ, ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ ಮಾತನಾಡಿ, ಈಗಾಗಲೇ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಣ ಹಾಗೂ ಸಕಾಲದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ವೇದಿಕೆ, ಶಾಮಿಯಾನಾ, ಆಸನ ವ್ಯವಸ್ಥೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಜನಪ್ರತಿನಿಧಿಗಳು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ವೈದ್ಯರನ್ನು ಹಾಗೂ ಸಿಬ್ಬಂದಿ ಇರುವಂತೆ, ಅಗ್ನಿಶಾಮಕ ವಾಹನ ಸೇರಿದಂತೆ ಸಂಬಂಧಿಸಿದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅಧಿಕಾರಿಗಳು ತಮಗೆ ವಹಿಸಿದ ಯಾವುದೇ ಜವಾಬ್ದಾರಿಯನ್ನು ಲೋಪವಾಗದಂತೆ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಕಾರ್ಯಕ್ರಮದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಾರ್ಯಕ್ರಮಕ್ಕೆ ಸೂಕ್ತ ಬಂದೊಬಸ್ತ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮವಹಿಸಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ ನಿಗಮದ ಅಧ್ಯಕ್ಷರಾದ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ, ಶಾಸಕರುಗಳಾದ ವಿಠ್ಠಲ ಕಟಕಧೋಂಡ, ಅಶೋಕ ಮನಗೂಳಿ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ, ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಅಕ್ಕ ಮಹಾದೇವಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೋ. ವಿಜಯಾ ಬಿ ಕೋರಿಶೆಟ್ಟಿ, ಕುಲಸಚಿವರಾದ ಶಂಕರಗೌಡ ಸೋಮನಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಗುಣಾರಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಿಂ ಬಾಬಾ ಮುದ್ದೇಬಿಹಾಳ, ಸಮಾಜ ಕಲ್ಯಾಣ ಉಪ ನಿರ್ದೇಶಕರಾದ ಮಹೇಶ ಪೋತದಾರ, ಪ್ರವಾಸೋಧ್ಯಮ ಇಲಾಖೆಯ ಉಪ ನಿರ್ದೇಶಕರಾದ ಅರವಿಂದ ಹೂಗಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ, ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಾಂತೇಶ ಬಿರಾದಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕಿತ್ತೂರಾಣಿ ಚೆನ್ನಮ್ಮ ಸಮಿತಿ ಸದಸ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

ನನ್ನ ನಿಲುವು ಸರ್ಕಾರಿ ಮೆಡಿಕಲ್ ಕಾಲೇಜ್ ಪರ :ಸಚಿವ ಎಂ.ಬಿ.ಪಾಟೀಲ
ವಿಜಯಪುರ: ಪಿಪಿಪಿ ಮಾಡುವುದಿಲ್ಲ, ಅನುದಾನ ಲಭ್ಯತೆ ನೋಡಿಕೊಂಡು ಸರ್ಕಾರಿ ಮೆಡಿಕಲ್ ಕಾಲೇಜು ಮಾಡ್ತೇವೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ, ಇದಾದರೆ ಆಯ್ತಲ್ಲವೇ? ರೈಟಿಂಗ್ನಲ್ಲಿ ಕೊಡಬೇಕು ಎಂದರೆ ಅದು ಆಗದ ಮಾತು, ಹೋರಾಟಗಾರರ ಬಗ್ಗೆ ಈಗಲೂ ನನಗೆ ಗೌರವವಿದೆ, ಆದರೆ ಸ್ವಾಮೀಜಿಗಳು ಕಪಾಳಮೋಕ್ಷ ಮಾಡಿದ್ದು ಸರಿಯಲ್ಲ, ಯಾರೇ ಇರಲಿ ಕಪಾಳಮೋಕ್ಷ ಮಾಡಿದರೆ ಸಿಟ್ಟು ಬರುವುದು ಸ್ವಾಭಾವಿಕ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಸರ್ಕಾರಿ ಮೆಡಿಕಲ್ ಕಾಲೇಜ್ ಪರವಾಗಿ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಪಪಡಿಸಿದರು.
ಆರಕ್ಷಕ ಅಧಿಕಾರಿಗಳ ಮೇಲೆ ಕಪಾಳಮೋಕ್ಷ ಮಾಡಿದ ಸ್ವಾಮೀಜಿಗಳ ಕ್ರಮವನ್ನು ಖಂಡಿಸುವ ಜೊತೆ ಜೊತೆಗೆ ಸರ್ಕಾರಿ ವೈದ್ಯಕೀಯ ಕಾಲೇಜ್ಗೆ ನಾನು ಈಗಲೂ ಬೆಂಬಲವಾಗಿಯೇ ಇರುವೆ, ಮುಖ್ಯಮಂತ್ರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಹೇಳಿದರೆ ಸಾಕಲ್ಲವೇ? ಆದರೆ ಲಿಖಿತವಾಗಿ ಉತ್ತರ ಕೊಡಿ ಎಂದರೆ ಆಗದ ಮಾತು, ದಿನ ೧ ಸಾವಿರಕ್ಕೂ ಹೆಚ್ಚು ಪ್ರತಿಭಟನೆ ಆಗುತ್ತವೆ, ಎಲ್ಲದಕ್ಕೂ ಸರ್ಕಾರ ಲಿಖಿತವಾಗಿ ಉತ್ತರ ನೀಡಲು ಹೇಗೆ ಸಾಧ್ಯ, ಮುಖ್ಯಮಂತ್ರಿಗಳು ಸರ್ಕಾರಿ ಮೆಡಿಕಲ್ ಕಾಲೇಜ್ ಬಗ್ಗೆ ಸಕಾರಾತ್ಮಕವಾಗಿ ಸ್ಪಂದನೆ ಮಾಡುತ್ತಾರೆ ನಮ್ಮ ಮೇಲೆ ನಂಬಿಕೆ ಇರಬೇಕು ಎಂದರು.

ಹೋರಾಟಗಾರರ ಬಗ್ಗೆ ನನಗೆ ಗೌರವ ಇದೆ
ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟಗಾರರ ಬಗ್ಗೆ ನನಗೆ ಗೌರವ ಇದೆ. ಆದರಿಲ್ಲಿ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗಿದೆ.
ಸ್ವಾಮೀಜಿಗಳು ಕಪಾಳಮೋಕ್ಷ ಮಾಡಿದ್ದು ಸರಿಯಲ್ಲ, ಯಾರೇ ಇರಲಿ ಅವರು ಕಪಾಳಮೋಕ್ಷ ಮಾಡುವುದು ಸರಿಯಲ್ಲ, ಯಾರಾದರೂ ಕಪಾಳಮೋಕ್ಷ ಮಾಡಿಸಿಕೊಂಡರೆ ಸಿಟ್ಟು ಬರುವುದಿಲ್ಲವೇ?
ನಾನು ಸರ್ಕಾರಿ ಮೆಡಿಕಲ್ ಕಾಲೇಜ್ ಪರವಾಗಿ ಗಟ್ಟಿಯಾದ ನಿಲುವು ವ್ಯಕ್ತಪಡಿಸಿರುವೆ, ಹೋರಾಟಗಾರರನ್ನು ಸಿ.ಎಂ ಅವರಿಗೆ ಭೇಟಿ ಮಾಡಿಸಿರುವೆ, ಇನ್ನೊಮ್ಮೆಯೂ ಭೆಟ್ಟಿ ಮಾಡಿಸುವುದಾಗಿ ಭರವಸೆ ನೀಡಿದ್ದೆ, ನನ್ನಲ್ಲಿ ಸ್ಪಷ್ಟತೆ ಇದೆ, ಇಷ್ಟೆಲ್ಲಾ ಭರವಸೆ ನೀಡಿದರೂ ಹೋರಾಟ ಮುಂದುವರೆಸಿದರ ಬಗ್ಗೆ ಉದ್ದೇಶ ಅರ್ಥವಾಗುತ್ತಿಲ್ಲ, ಪ್ರತಿಭಟನಾಕಾರರ ಬಂಧನ ಬಗ್ಗೆ ನಾನು ಯಾವ ಪ್ರತಿಕ್ರಿಯೆ ನೀಡುವುದಿಲ್ಲ, ಅದಕ್ಕೆ ಇಲಾಖೆ ಇದೆ ಎಂದರು.

ಸಿಎಂ ಕಾರ್ಯವೈಖರಿಗೆ ೧೦ ಕ್ಕೆ ೧೧ ಅಂಕ ಕೊಡುವೆ
ಸಿ.ಎಂ. ಸಿದ್ದರಾಮಯ್ಯ ಸೈದ್ಧಾಂತಿಕ ಹೋರಾಟ ಮಾಡುತ್ತ ಬಂದವರು, ಕೃಷಿ ಕುಟುಂಬದಲ್ಲಿ ಜನಸಿ ಹಿಂದುಳಿದ, ಅಲ್ಪಸಂಖ್ಯಾತ, ದಲಿತ, ಕೃಷಿಕರ ಬಗ್ಗೆ ಅಪಾರ ಕಾಳಜಿ ಬದ್ಧತೆ ಹೊಂದಿದವರು, ಸಮಾಜವಾದಿ ಹಿನ್ನೆಲೆಯಿಂದ ಬಂದ ನಾಯಕರು ಎಂದು ಎಂ.ಬಿ. ಪಾಟೀಲ ಸಿದ್ಧರಾಮಯ್ಯ ಅವರ ದಾಖಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಪಂಚ ಗ್ಯಾರಂಟಿ ಮೂಲಕ ಸಿಎಂ ದಾಖಲೆ ನಿರ್ಮಿಸಿದ್ದಾರೆ, ಈ ದಾಖಲೆ ನಮಗೆಲ್ಲ ಹೆಮ್ಮೆ ಇದೆ, ದೇವರಾಜ್ ಅರಸು, ಸಿದ್ದರಾಮಯ್ಯ ಶ್ರೇಷ್ಠ ನಾಯಕರು. ಸಿಎಂ ಆಡಳಿತಕ್ಕೆ ೧೦ ರ ಪೈಕಿ ೧೧ ಅಂಕ ಕೊಡುವೆ ಎಂದರು.
ಸಿಎಂ ದಾಖಲೆಗೆ ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಏನ್ ಮಾಡೋಕೆ ಆಗುತ್ತೆ? ಅವರ ಅವಧಿಯಲ್ಲಿ ನಾಲ್ಕು ವರ್ಷ ಏನ್ ಸಾಧನೆ ಮಾಡಿದರು? ಯಡಿಯೂರಪ್ಪರನ್ನ ಒಂದೇ ಅವಧಿಗೆ ಮುಖ್ಯಮಂತ್ರಿಯಾಗೋಕೆ ಬಿಜೆಪಿಗರು ಬಿಡಲಿಲ್ಲ, ಎರಡೂ ಬಾರಿ ಪಾಪ ಅವಧಿಗು ಮುನ್ನವೇ ರಾಜಿನಾಮೆ ನೀಡುವಂತೆ ಮಾಡಿದರು. ಯಡಿಯೂರಪ್ಪ ಅವರನ್ನು ಎರಡು ಬಾರಿ ಅವಧಿ ಪೂರ್ಣಗೊಳಿಸದಂತೆ ಮಾಡಿದ್ದೇ ಬಿಜೆಪಿ ಸಾಧನೆ ಎಂದರು.
ರಾಣಿ ಚೆನ್ನಮ್ಮ ದೇಶದ ಆಸ್ತಿ
ಸಿಎಂ ಅವರಿಂದ ರಾಣಿ ಚೆನ್ನಮ್ಮ ಮೂರ್ತಿ ಉದ್ಘಾಟನೆಗೆ ಪಂಚಮಸಾಲಿ ಮುಖಂಡರ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ.ಪಾಟೀಲ ಅವರು, ಉದ್ಘಾಟನೆಗೆ ಯಾವುದೇ ವಿರೋಧ, ಗೊಂದಲವಿಲ್ಲ, ರಾಣಿ ಚೆನ್ನಮ್ಮ ಮೂರ್ತಿ ಉದ್ಘಾಟನೆಗೆ ಪಂಚಮಸಾಲಿ ಸಮುದಾಯ ವಿರೋಧ ಅನ್ನೋದು ಮುಗಿದು ಹೋದ ಅಧ್ಯಾಯ. ಈಗಾಗಲೇ ಪಂಚಮಸಾಲಿ ಜಗದ್ಗುರುಗಳು ಹೇಳಿದ್ದಾರೆ, ಪಂಚಮಸಾಲಿ ೨ ಎ ಮೀಸಲಾತಿ ಹೋರಾಟಕ್ಕೂ ಹಾಗೂ ಈ ಸಮಾರಂಭಕ್ಕೂ ಸಂಬಂಧವೇ ಇಲ್ಲ, ರಾಣಿ ಚೆನ್ನಮ್ಮ ದೇಶದ ಆಸ್ತಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಕನ್ನಡ ನಾಡಿನ ಶ್ರೇಷ್ಠ ಮಹಿಳೆ ಎಂದರು.

